ಪಾಟ್ನಾ: ಬಿಹಾರದ ಹೆಣ್ಣುಮಕ್ಕಳು ಕೇವಲ 25 ಸಾವಿರ ರೂಪಾಯಿಗೆ ಮದುವೆಗೆ ಸಿಗುತ್ತಾರೆ ಎಂದು ಬಿಹಾರದ ಯುವತಿಯರ ಬಗ್ಗೆ ಉತ್ತರಾಖಂಡದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ರೇಖಾ ಆರ್ಯ ರ ಪತಿ ಗಿರ್ಧಾರಿ ಲಾಲ್ ಸಾಹು ನೀಡಿರುವ ಅತ್ಯಂತ ಕೀಳುಮಟ್ಟದ ಹೇಳಿಕೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ನಡೆದಿದ್ದೇನು?
ಉತ್ತರಾಖಂಡದ ಹರಿದ್ವಾರದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಗಿರ್ಧಾರಿ ಲಾಲ್ ಸಾಹು, ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. “ನಮ್ಮ ಭಾಗದಲ್ಲಿ ಹೆಣ್ಣುಮಕ್ಕಳ ಕೊರತೆಯಿದೆ. ಈ ಕಾರಣಕ್ಕೆ ನಮ್ಮ ಹುಡುಗರು ಮದುವೆಗಾಗಿ ಬಿಹಾರಕ್ಕೆ ಹೋಗುತ್ತಿದ್ದಾರೆ. ಅಲ್ಲಿ ಕೇವಲ 25,000 ರೂಪಾಯಿ ನೀಡಿದರೆ ಸಾಕು, ಮದುವೆಯಾಗಲು ಯುವತಿಯರು ಸಿಗುತ್ತಾರೆ” ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ.
ಈ ಹೇಳಿಕೆಯು ಬಿಹಾರದ ಮಹಿಳೆಯರನ್ನು ಕೇವಲ ಹಣಕ್ಕೆ ಮಾರಾಟವಾಗುವ ವಸ್ತುಗಳಂತೆ ಬಿಂಬಿಸಿದೆ ಎಂದು ಮಹಿಳಾ ಹಕ್ಕುಗಳ ಹೋರಾಟಗಾರರು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಬ್ಯಾನರ್ ವಿವಾದದ ಪ್ರಕರಣ: ಶಾಸಕ ನಾರಾ ಭರತ್ ರೆಡ್ಡಿ ಸೇರಿ 40 ಮಂದಿಯ ವಿರುದ್ದ ಎಫ್ಐಆರ್
ರೇಖಾ ಆರ್ಯ ಅವರು ಉತ್ತರಾಖಂಡದ ಬಿಜೆಪಿ ಸರ್ಕಾರದಲ್ಲಿ ಪ್ರಭಾವಿ ಸಚಿವೆಯಾಗಿದ್ದಾರೆ. ಅವರ ಪತಿಯೇ ಇಂತಹ ಹೇಳಿಕೆ ನೀಡಿರುವುದು ಪಕ್ಷಕ್ಕೆ ದೊಡ್ಡ ಮಟ್ಟದ ಮುಜುಗುರ ತಂದಿದೆ.
ರಾಜಕೀಯ ಪ್ರತಿಭಟನೆ
ರಾಷ್ಟ್ರೀಯ ಜನತಾ ದಳ (RJD) ಈ ಬಗ್ಗೆ ಕಠಿಣ ನಿಲುವು ತಳೆದಿದ್ದು, “ಇದು ಬಿಜೆಪಿಯ ಮಹಿಳಾ ವಿರೋಧಿ ಮತ್ತು ಬಿಹಾರ ವಿರೋಧಿ ಮನಸ್ಥಿತಿಯನ್ನು ತೋರಿಸುತ್ತದೆ” ಎಂದು ಟೀಕಿಸಿದೆ. ಬಿಹಾರದ ನಾಯಕರು ತಕ್ಷಣವೇ ಸಾಹು ಅವರ ಬಂಧನಕ್ಕೆ ಮತ್ತು ಸಚಿವೆ ರೇಖಾ ಆರ್ಯ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಬಿಹಾರದ ಉಪಮುಖ್ಯಮಂತ್ರಿ ಸೇರಿದಂತೆ ಹಲವು ಹಿರಿಯ ನಾಯಕರು ಈ ಹೇಳಿಕೆಯನ್ನು ಖಂಡಿಸಿದ್ದು, ಒಬ್ಬ ಸಚಿವರ ಜವಾಬ್ದಾರಿಯುತ ಸ್ಥಾನದಲ್ಲಿರುವವರ ಕುಟುಂಬ ಸದಸ್ಯರಿಂದ ಇಂತಹ ಬೇಜವಾಬ್ದಾರಿ ಮಾತುಗಳನ್ನು ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ. ಬಿಹಾರದಾದ್ಯಂತ ಹಲವೆಡೆ ಬಿಜೆಪಿ ಮತ್ತು ಗಿರ್ಧಾರಿ ಲಾಲ್ ಸಾಹು ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ.
ಈ ವಿವಾದದ ಬಗ್ಗೆ ಸಚಿವೆ ರೇಖಾ ಆರ್ಯ ಅವರಿಂದ ಇನ್ನೂ ಯಾವುದೇ ಅಧಿಕೃತ ಸ್ಪಷ್ಟನೆ ಬಂದಿಲ್ಲವಾದರೂ, ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿರುದ್ಧ ದೊಡ್ಡ ಮಟ್ಟದ ಅಭಿಯಾನ ಶುರುವಾಗಿದೆ. ಸ್ವತಃ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿರುವ ರೇಖಾ ಆರ್ಯ ಅವರು ತಮ್ಮ ಪತಿಯ ಈ ಸ್ತ್ರೀವಿರೋಧಿ ಹೇಳಿಕೆಯನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎಂಬುದು ಈಗ ಕುತೂಹಲ ಮೂಡಿಸಿದೆ.
ಇದನ್ನೂ ನೋಡಿ: ಅಖ್ಲಾಕ್ ಗುಂಪು ಹತ್ಯೆ ಪ್ರಕರಣ & ಸೇಂಗಾರ್ಗೆ ವಿಧಿಸಲಾದ ಶಿಕ್ಷೆ ಅಮಾನತು ಏನು ಹೇಳುತ್ತಿವೆ? Janashakthi Media
