ಭೀಕರ ಅಪಘಾತದಲ್ಲಿ ಕಾರ್ಮಿಕರ ಸಾವು: ರೂ. 25 ಲಕ್ಷ  ಪರಿಹಾರಕ್ಕೆ ಸಿಡಬ್ಲ್ಯೂಎಫ್‌ಐ ಆಗ್ರಹ

ಬೆಂಗಳೂರು: ತುಮಕೂರ ಜಿಲ್ಲೆಯ ಕಳ್ಳಂಬೆಳ್ಳ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬಳಿ ಇಂದು(ಆಗಸ್ಟ್‌ 25) ಬೆಳಗಿನ ಜಾವ ಕ್ರೂಸರ್ ಮತ್ತು ಲಾರಿ ಮಧ್ಯೆ ಭೀಕರ ಅಪಘಾತ ಸಂಭವಿಸಿ ರಾಯಚೂರು ಜಿಲ್ಲೆಯ ದೇವದುರ್ಗ ಮತ್ತು ಲಿಂಗಸಗೂರು ಮೂಲದ 9 ಜನರ ದುರ್ಮರಣ ಸಂಭವಿಸಿರುವ ಘಟನೆ ಸಂಭವಿಸಿದೆ. ಈ ಘಟನೆಗೆ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಷನ್ (ಸಿಐಟಿಯು) ತೀವ್ರ ಆತಂಕ ಹಾಗೂ ಸಂತಾಪ ವ್ಯಕ್ತಪಡಿಸಿದೆ.

ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ ಅವರು ಕಾರ್ಮಿಕ ಸಚಿವ ಶ್ರೀ ಶಿವರಾಮ ಹೆಬ್ಬಾರ್ ಅವರು ಕೂಡಲೇ ಸಾವನಪ್ಪಿದ ಕಾರ್ಮಿಕರ ಕುಟುಂಬಗಳಿಗೆ ಭೇಟಿ ಸಾಂತ್ವಾನ ಹೇಳಬೇಕು ಮತ್ತು ಸಾವನಪ್ಪಿದ ಪ್ರತಿ ಕುಟುಂಬಕ್ಕೆ ರೂ 25 ಲಕ್ಷ ಪರಿಹಾರವನ್ನು ಸರ್ಕಾರ ಮತ್ತು ಕಲ್ಯಾಣ ಮಂಡಳಿಯಿಂದ ಘೋಷಿಸಬೇಕು ಮತ್ತು ಗಾಯಾಳುಗಳಿಗೂ ಸೂಕ್ತ ಪರಿಹಾರ ಹಾಗೂ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಬೇಕೆಂದು ಎಂದು ಆಗ್ರಹಿಸಿದ್ದಾರೆ.

ರಾಯಚೂರು ಜಿಲ್ಲೆಯ ಸಿರವಾರ, ಮಾನ್ವಿ, ಮತ್ತು ಸಿಂಧನೂರಿನಿಂದ ವಾಹನದಲ್ಲಿ 20 ಜನರು ಕೂಲಿ ಕೆಲಸಕ್ಕಾಗಿ ಬೆಂಗಳೂರಿಗೆ ದುಡಿಯಲು ಹೊರಟಿದ್ದಾಗ ಈ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಮೂರು ಮಹಿಳೆಯರು, ನಾಲ್ಕು ಜನ ಪುರುಷರು ಹಾಗೂ ಇಬ್ಬರು ಮಕ್ಕಳು ಸಾವನಪ್ಪಿದ್ದು, 11 ಜನರಿಗೆ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ನಾಲ್ವರ ಸ್ಥಿತಿ‌‌ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಕಳೆದ ಹಲವು ದಶಕಗಳಿಂದ ಕಲ್ಯಾಣ ಕರ್ನಾಟಕ ಜಿಲ್ಲೆಗಳ ಬಡವರು ಪ್ರತಿ ವರ್ಷ ಬೆಂಗಳೂರು ಮಹಾನಗರಕ್ಕೆ ನಿರ್ಮಾಣ ಕೆಲಸಗಳಿಗೆ ವಲಸೆ ಬರುತ್ತಿರುವುದು ನಡೆದೇ ಇದೆ. ಈ ಜಿಲ್ಲೆಗಳ ಅಭಿವೃದ್ದಿ ಹೆಸರಲ್ಲಿ ಪ್ರತಿ ವರ್ಷ ಸಾವಿರಾರು ಕೋಟಿ ಸರಕಾರದ ಹಣವು ನೀರಿನಂತೆ ಹರಿಯುತ್ತಿದ್ದರೂ ಅದು ಅಭಿವೃದ್ದಿ ಮತ್ತು ಬಡವರಿಗೆ ಉದ್ಯೋಗಕ್ಕೆ ಮತ್ತು ಅವರ ಬದುಕಿನ ಉನ್ನತಿಗೆ ಬಳಕೆಯಾಗದೇ ಭ್ರಷ್ಟಾಚಾರದ ಮೂಲಕ ರಾಜಕಾರಣಿಗಳು, ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಮನೆಯ ಬೊಕ್ಕಸ ತುಂಬುತ್ತಿರುವುದು ವಾಸ್ತವ.

ಹೀಗಾಗಿ ಇಂತಹ ವಲಸೆ ಕಾರ್ಮಿಕರು ಹಾಗೂ ಅಮಾಯಕರ ಸಾವಿಗೆ ಈ ಭಾಗದ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸರ್ಕಾರವೇ ನೇರ ಹೊಣೆ. ದುಡಿಯುವ ಕೈಗಳಿಗೆ ಕೆಲಸ, ಹೊಟ್ಟೆಗೆ ಹಿಟ್ಟನ್ನು ಕೊಡದ ಈ ಜನವಿರೋಧಿ, ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳು ಪ್ರತಿದಿನವೂ ಒಂದಲ್ಲ ಒಂದು ರೂಪದಲ್ಲಿ ಬಡವರ ಸಾವಿಗೆ ಕಾರಣವಾಗುತ್ತಿದ್ದಾರೆ ಎನ್ನುವುದಕ್ಕೆ ಇಂತಹ ಘಟನೆಗಳೇ ಪ್ರತ್ಯಕ್ಷ ಸಾಕ್ಷಿಯಾಗಿವೆ ಎಂದು ಸಂಘಟನೆಯು ವಿವರಿಸಿದೆ.

ಜನರು‌ ವಾಸಿಸುವ ತಾಲೂಕು ಜಿಲ್ಲೆಗಳಲ್ಲೇ ಉದ್ಯೋಗಾವಕಾಶಗಳನ್ನು ಸೃಷ್ಡಿಸಿದರೆ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದರೆ ಜನರು ವಲಸೆ ಬಂದು ಈ ರೀತಿ ಭೀಕರ ಸಾವಿಗೀಡಾಗುವ ಸಂಭವ ಇರುತ್ತಿರಲಿಲ್ಲ. ಆದರೆ, ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ ಅಭಿವೃದ್ಧಿಯ ಹೆಸರಲ್ಲಿ ಕೆಲವೇ ಜನರು ಕಲ್ಯಾಣಗೊಂಡು ಲಕ್ಷಾಂತರ ಜನರ ಬದುಕು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವುದು ಕಳೆದ 75 ವರ್ಷಗಳಿಂದ ನಡದೆ ಇದೆ. ಇಂತಹ ತಾರತಮ್ಯದ ವಿರುದ್ದ ಎಲ್ಲ ಜನಪರ ಸಂಘಟನೆಗಳು ಬೀದಿಗಿಳಿದು ಹೋರಾಡಬೇಕಿದೆ. ಇಂತಹ ಚಳವಳಿಯಲ್ಲಿ ಸಿಐಟಿಯು ಸಕ್ರಿಯವಾಗಿ ನೇತೃತ್ವವಹಿಸುತ್ತಾ ಬಂದಿದ್ದು, ಜನಪರ ಸಂಘಟನೆಗಳು ಕೈಜೋಡಿಸಬೇಕೆಂದು ಕರೆ ನೀಡಿದೆ.

ಇಂದು ಪ್ರಭುತ್ವದ ವೈಫಲ್ಯದಿಂದ ಉಂಟಾಗಿ ಸಾವನಪ್ಪಿರುವ ಕುಟುಂಬಗಳಿಗೆ ಪರಿಹಾರ ಮತ್ತು ಕುಟುಂಬಕ್ಕೊಂದು ಸರ್ಕಾರಿ ಉದ್ಯೋಗವನ್ನು ನೀಡಬೇಕು ಈ ಭಾಗದ ಜನರ ಗೂಳೆ ತಪ್ಪಿಸಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ವಿಶೇಷ ಪ್ರಯತ್ನ ಮಾಡಬೇಕು. ಜೊತೆಗೆ ಅನಧಿಕೃತ ಕ್ರೂಷರ್ ಓಡಾಟಕ್ಕೆ ಮತ್ತು ಇಂತಹ ಮೀತಿಮೀರಿದ ಓವರ್‌ಲೋಡ್ ಹಾಗೂ‌ ನಿರ್ಲಕ್ಷ್ಯದ ವಾಹನ ಓಡಿಸಲು ಕಾರಣವಾದ‌ ಸಾರಿಗೆ ಇಲಾಖೆ ಅಧಿಕಾರಗಳ ವಿರುದ್ಧ ಪ್ರಕರಣ ‌ದಾಖಲಿಸಬೇಕು ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್ (ಸಿಐಟಿಯು) ಮುಖ್ಯಮಂತ್ರಿಗಳನ್ನು ಒತ್ತಾಯಿಸಿದೆ.

Donate Janashakthi Media

Leave a Reply

Your email address will not be published. Required fields are marked *