ಭಾವನೆ ಹಂಚಿಕೊಳ್ಳಲು ಶಾಸಕರ ಸಭೆ: ಸುನಿಲ್ ಕುಮಾರ್ ಪತ್ರ

  • ಬೆಳವಣಿಗಳು ,ಬಹಿರಂಗ ಹೇಳಿಕೆಗಳು ಮನಸ್ಸಿಗೆ ನೋವುಂಟು ಮಾಡಿದೆ: ಸುನಿಲ್‌ ಕುಮಾರ್

ಬೆಂಗಳೂರು: ಪಕ್ಷದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ತಕ್ಷಣವೇ ಶಾಸಕರ ಸಭೆಯನ್ನು ಕರೆಯಬೇಕು ಎಂದು ಸರ್ಕಾರದ ಮುಖ್ಯ ಸಚೇತಕರೂ ಆಗಿರುವ ಶಾಸಕ ವಿ.ಸುನಿಲ್‌ ಕುಮಾರ್‌ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್‌ ಕಟೀಲ್ ಅವರಿಗೆ ಪತ್ರ ಬರೆದಿದ್ದಾರೆ.

‘ಪಕ್ಷದಲ್ಲಿ ಇತ್ತೀಚಿನ ಕೆಲವು ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಪತ್ರ ಬರೆಯುವ ಅನಿವಾರ್ಯತೆ ಬಂದಿದೆ. ಕೆಲವು ದಿನಗಳಿಂದ ನಮ್ಮ ಮಂತ್ರಿಗಳು, ಕೆಲವು ಶಾಸಕ ಸ್ನೇಹಿತರು ಮತ್ತು ಪ್ರಮುಖರ ಬಹಿರಂಗ ಹೇಳಿಕೆಗಳು ಸಮಾಧಾನ ತರವಂತಹದ್ದಲ್ಲ’ ಎಂದು ಅವರು ಪತ್ರದಲ್ಲಿ ತಿಳಿಸಿರುವುದಾಗಿ ಮೂಲಗಳು ಹೇಳಿವೆ.

‘ಒಂದು ಸಿದ್ಧಾಂತದ ಅಡಿ ಶಿಸ್ತಿಗೆ ಮತ್ತು ಸ್ವಯಂ ನಿಯಂತ್ರಣದಡಿ ಕೆಲಸ ಮಾಡುತ್ತಿರುವ ಸಾವಿರಾರು ಕಾರ್ಯಕರ್ತರು ಮತ್ತು ಹಿತೈಷಿಗಳ ಮನಸ್ಸಿಗೆ ಈ ಬೆಳವಣಿಗಳು ಮತ್ತು ಬಹಿರಂಗ ಹೇಳಿಕೆಗಳು ಮನಸ್ಸಿಗೆ ನೋವುಂಟು ಮಾಡಿದೆ’ ಎಂದು ಸುನಿಲ್ ತಿಳಿಸಿದ್ದಾರೆ.

‘ಮೂಲ ಮತ್ತು ಹೊಸಬರು ಎನ್ನುವ ಭಾವನೆ ವ್ಯಕ್ತಮಾಡದೇ ಪಕ್ಷದ ಶಿಸ್ತಿನ ಚೌಕಟ್ಟನ್ನು ಎಲ್ಲರಿಗೂ ಗಟ್ಟಿಯಾಗಿ ಹೇಳಬೇಕು. ಅದನ್ನು ತಕ್ಷಣ ನೀವು ಮಾಡುತ್ತೀರಿ ಎಂದು ಭಾವಿಸಿದ್ದೇವೆ. ನಿಗಮ ಮಂಡಳಿಗಳ ನೇಮಕ, ಮಂತ್ರಿ ಮಂಡಲದ ವಿಸ್ತರಣೆ ಕುರಿತಂತೆ ಪಕ್ಷದ ಚೌಕಟ್ಟಿನಲ್ಲಿ ಎಲ್ಲ ಶಾಸಕರೂ ಹಂಚಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಎಲ್ಲ ಶಾಸಕರ ಅಭಿಪ್ರಾಯಗಳನ್ನು ಅಧ್ಯಕ್ಷರಾಗಿ ನೀವು ಆಲಿಸಬೇಕು’ ಎಂದು ಒತ್ತಾಯಿಸಿದ್ದಾರೆ.

‘ಪ್ರಧಾನಿ ಮೋದಿ ಮಾದರಿಯ ಸೈದ್ಧಾಂತಿಕ ನೆಲಗಟ್ಟಿನ ಆಡಳಿತ, ಅಂತ್ಯೋದಯ ಕಾರ್ಯಕ್ರಮಗಳು, ಜನ ಮೆಚ್ಚುವ ಯೋಜನೆಗಳು ನಮ್ಮ ಸರ್ಕಾರದ ಆಡಳಿತದಲ್ಲಿ ಮೂಡಿ ಬರಬೇಕು. ಇಂದಿನ ಸರ್ಕಾರದ ಬೆಳವಣಿಗೆಗಳು, ನಿರ್ಧಾರಗಳು ಮತ್ತು ಪಕ್ಷದಲ್ಲಿನ ಚಟುವಟಿಕೆಗಳ ಕುರಿತಂತೆ ನಿಮ್ಮ ಮುಂದೆ ವಿಚಾರಗಳನ್ನು ಹಂಚಿಕೊಳ್ಳಬೇಕಾಗಿದೆ. ನಮ್ಮ ಸಲಹೆಗಳು ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸುವ ಮತ್ತು ಸರ್ಕಾರದ ಆಡಳಿತವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಸಹಕಾರಿಯಾಗಲಿದೆ’ ಎಂದು ಅವರು ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *