ಜಮ್ಮು-ಕಾಶ್ಮೀರದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥರು

’ಪೀಪಲ್ಸ್ ಡೆಮಾಕ್ರಸಿ’ ಸಂಪಾದಕೀಯ

ಒಂದರ್ಥದಲ್ಲಿ, ಜಮ್ಮುವಿಗೆ ಮೋಹನ ಭಾಗವತ್ ರವರ ಇತ್ತೀಚಿನ ಭೇಟಿ ಒಂದು ವಿಜಯೋತ್ಸವದ ಪ್ರವಾಸವಾಗಿತ್ತು. ಆದರೆ ಅವರು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಕೊನೆಗೊಳಿಸಿದ್ದಕ್ಕೆ ಜುಮ್ಮವಿನಲ್ಲಾದರೂ ಜನತೆಯ ಮಂಜೂರಾತಿ ಬದಲು ಎರಡು ವರ್ಷಗಳ ನಂತರ ಎಷ್ಟು ಅಸಮಾಧಾನ ಬೆಳೆದಿದೆ ಎಂದು ಅಳೆಯಲೂ ಬಂದಿದ್ದರು. ಅಕ್ಟೋಬರ್ 5ರಂದು ಶ್ರೀನಗರದಲ್ಲಿ ನಡೆದ ಎರಡು ಕಗ್ಗೊಲೆಗಳು ವಿಭಜಕತೆ ಹೆಚ್ಚಿರುವುದನ್ನು ಮತ್ತು ಜಮ್ಮು ಮತ್ತು ಕಾಶ್ಮೀರದ ಸಾರವನ್ನೇ ಧ್ವಂಸ ಮಾಡುವ ಸಂಭವವನ್ನು ಸೂಚಿಸುತ್ತಿವೆ. ಆರ್‌ಎಸ್‌ಎಸ್ ಮುಖ್ಯಸ್ಥರ ಭೇಟಿ ಮುಂಬರಲಿರುವ ಅನಿಷ್ಟಗಳ  ಅಪಶಕುನವಾಗಿದೆ.

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಇತ್ತೀಚೆಗೆ ಜಮ್ಮುವಿಗೆ ನಾಲ್ಕು ದಿನಗಳ ಭೇಟಿ ನೀಡಿದರು. ಇದು ಸಂವಿಧಾನದ ವಿಧಿ 370 ಮತ್ತು 35ಎ ರದ್ದತಿ ನಂತರ ಜಮ್ಮು ಮತ್ತು ಕಾಶ್ಮೀರಕ್ಕೆ ಭಾಗವತ್‌ರವರ ಮೊದಲ ಭೇಟಿ. ಒಂದು ಅರ್ಥದಲ್ಲಿ, ಇದು ಆರ್‌ಎಸ್‌ಎಸ್ ಮುಖ್ಯಸ್ಥರ ಒಂದು ವಿಜಯೋತ್ಸವದ ಪ್ರವಾಸವಾಗಿತ್ತು. ಏಕೆಂದರೆ ಈ ಸಂಘ ಪಟ್ಟುಬಿಡದೆ 370ನೇ ವಿಧಿಯನ್ನು ವಿರೋಧಿಸಿತ್ತು ಮತ್ತು ಅದನ್ನು ತೆಗೆದುಹಾಕಬೆಕೆಂದು ಹೋರಾಡಿತ್ತು.

ಅದು ಜಮ್ಮುವಿನಲ್ಲಿ ಪ್ರಜಾ ಪರಿಷದ್ ಮೂಲಕ 370ನೇ ವಿಧಿಯನ್ನು ವಿರೋಧಿಸಿತು ಮತ್ತು ಜಮ್ಮುವನ್ನು ಭಾರತೀಯ ಒಕ್ಕೂಟದೊಂದಿಗೆ ಸಂಯೋಜಿಸಲು ಒಂದು ಚಳುವಳಿಯನ್ನು ಆರಂಭಿಸಿತು. ಜಮ್ಮು ಮೊದಲು ಆರ್‌ಎಸ್‌ಎಸ್ ಮತ್ತು ನಂತರ ಬಿಜೆಪಿಯ ಕೊತ್ತಳವಾಯಿತು. ಇದಕ್ಕೆ ಮೊದಲು, ಜನಸಂಘದ ಪೂರ್ವಜನಾದ ’ಅಖಿಲ ಜಮ್ಮು ಮತ್ತು ಕಾಶ್ಮೀರ ರಾಜೀಯ ಹಿಂದೂ ಪರಿಷತ್,  ಮೇ 1947ರಲ್ಲಿ ರಾಜ್ಯದ ಮಹಾರಾಜನಿಗೆ  ಬೆಂಬಲವನ್ನು ನೀಡುವ ಒಂದು ನಿರ್ಣಯವನ್ನು ಅಂಗೀಕರಿಸಿತು. ಮಹಾರಾಜ ಜಮ್ಮು ಮತ್ತು ಕಾಶ್ಮೀರವನ್ನು ದೇಶವಿಭಜನೆಯ ನಂತರದ ಎರಡು  ಡೊಮಿನಿಯನ್ ಗಳಲ್ಲಿ ಯಾವುದಕ್ಕೆ ಸೇರ್ಪಡೆ ಮಾಡಬೇಕು ಎಂದು ನಿರ್ಧರಿಸುವ ಸಾಂವಿಧಾನಿಕ ಅಧಿಕಾರ ಹೊಂದಿದ್ದರು. ಆ ಸಮಯದಲ್ಲಿ ಮಹಾರಾಜನಿಗೆ ಭಾರತದಲ್ಲಿ ಸೇರ್ಪಡೆಯಾಗಲು ಇಷ್ಟವಿರಲಿಲ್ಲ.

ಭಾಗವತ್ ಸಂಘದ ಸ್ವಯಂಸೇವಕರು ಮತ್ತು ಬಿಜೆಪಿ ಪದಾಧಿಕಾರಿಗಳೊಂದಿಗೆ ಬುದ್ಧಿಜೀವಿಗಳು ಮತ್ತು ಬೆಂಬಲಿಗರೊಂದಿಗೆ ಸಭೆಗಳನ್ನು ನಡೆಸಿದರು. ಸಂಘದ ಮುಖಂಡತ್ವದ ಎಂದಿನ  ಶೈಲಿಯಲ್ಲಿ, ಅಂದರೆ ನಿಜವಾದ ಅರ್ಥವನ್ನು ಮತ್ತು ಆಶಯವನ್ನು ಸಂದಿಗ್ಧಗೊಳಿಸಿಡುವ ರೀತಿಯಲ್ಲಿಯೇ ಮಾತನಾಡುತ್ತ, ವಿಶೇಷ ಸ್ಥಾನಮಾನದ ಅಂತ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ರಚನೆಯನ್ನು ಉಲ್ಲೇಖಿಸಿ ಈಗ ಬದಲಾಗಿರುವುದು ಆಳ್ವಿಕೆಯ ವ್ಯವಸ್ಥೆ ಎಂದರು. ಹಳೆಯ ಮನೋಸ್ಥಿತಿ ಮತ್ತು ನಿಲುವುಗಳು ಇನ್ನು ಬದಲಾಗಬೇಕಷ್ಟೇ ಎಂದು ಹೇಳಿದರು.

ಅವರು ನನ್ನ ತಂದೆಯ ದೇಹವನ್ನಷ್ಟೇ ಕೊಂದರು, ಅವರ ಚೈತನ್ಯವನ್ನಲ್ಲ ಎಂದಿದ್ದಾಳೆ ಶ್ರೀನಗರದಲ್ಲಿ ಉಗ್ರರು ಸಾಯಸಿದ ಕಾಶ್ಮೀರ ಪಂಡಿತ ಸಮುದಾಯದ ಬಿಂದ್ರೂರವರ ಮಗಳು. ಇತ್ತ ಲಖಿಮ್‌ಪುರದಲ್ಲಿ,  ಕೇಂದ್ರ ಮಂತ್ರಿಯಮಗನ ಕಾರು ಸಾಯಿಸಿದ ರೈತನ ಮಗಳೂ ಇದನ್ನು ಅನುಮೋದಿಸುತ್ತಾಳೆ!    ವ್ಯಂಗ್ಯಚಿತ್ರ: ಸಂದೀಪ ಅಧ್ವರ್ಯು  ಟೈಮ್ಸ್‌ ಆಫ್ ಇಂಡಿಯಾ

ಜಮ್ಮು ಮತ್ತು ಕಾಶ್ಮೀರದ ಮೂಲ ರಾಜ್ಯವನ್ನು ಕೋಮು ಆಧಾರದಲ್ಲಿ ಮೂರು ಭಾಗಗಳಾಗಿ ಮಾಡಬೇಕೆಂಬ ಸಂಘದ ಸ್ಪಷ್ಟ ತಿಳುವಳಿಕೆಯ ಪ್ರಕಾರ, ಭಾಗವತ್ ಹೇಳ ಬಯಸಿದ್ದು ಆಡಳಿತಾತ್ಮಕ ನಿರ್ಧಾರಗಳಿಗೆ ರಾಜಕೀಯ ಮತ್ತು ಸೈದ್ಧಾಂತಿಕ ವಿಭಜನೆಯ ಒತ್ತಾಸೆಯಿರಬೇಕಾಗಿದೆ ಎಂದು.

ಆರ್‌ಎಸ್‌ಎಸ್ 2002 ರಲ್ಲಿ ಒಂದು ನಿರ್ಣಯದಲ್ಲಿ, ಜಮ್ಮು, ಕಣಿವೆ ಮತ್ತು ಲಡಾಖ್ ಪ್ರತ್ಯೇಕ ಪ್ರದೇಶಗಳಾಗಿ ರಾಜ್ಯದ ತ್ರಿಭಜನೆಗೆ ಕರೆ ನೀಡಿತ್ತು. 2019ರಲ್ಲಿ ತಂದ ಬದಲಾವಣೆಗಳು ಈ ದಿಕ್ಕಿನಲ್ಲಿ  ಒಂದು ಹೆಜ್ಜೆಯಾಗಿತ್ತು. ಈಗ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿವೆ- ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್. ಭಾಗವತ್ ಹೇಳಬಯಸಿದ್ದು- ಜಮ್ಮು ಮತ್ತು ಕಾಶ್ಮೀರದ ನಡುವಿನ ವಿಭಜನೆಯನ್ನು ಹೆಚ್ಚಿಸಿ ಅವು ಎರಡು ಪ್ರತ್ಯೇಕ ಪ್ರದೇಶಗಳಾಗುವಂತೆ ಆರ್‌ಎಸ್‌ಎಸ್ ಕೆಲಸ ಮಾಡುತ್ತದೆ ಎಂದು. ಹಳೆಯ ಮನೋಸ್ಥಿತಿ ಬದಲಿಸುವುದು ಎಂಬ ಅವರ ಮಾತಿನ ಅರ್ಥ ಇದೇ.

ಭಾಗವತ್ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಕೊನೆಗೊಂಡ ಎರಡು ವರ್ಷಗಳ ನಂತರ ಬೆಳೆಯುತ್ತಿರುವ ಅಸಮಾಧಾನವನ್ನು ಅಳೆಯಲು ಕೂಡ ಬಂದಿದ್ದರು. ಜಮ್ಮುವಿನ ಜನರು ಹೊಸ ವ್ಯವಸ್ಥೆಯಲ್ಲಿ  ಪ್ರಯೋಜನ ಪಡೆಯುವ ಬದಲು ಇದ್ದುದನ್ನು ಕಳೆದುಕೊಂಡಿದ್ದೇವೆ ಎಂದು ಕಂಡುಕೊಂಡಿದ್ದಾರೆ ಉದ್ಯೋಗಾವಕಾಶಗಳ ಕೊರತೆ, ಸ್ಥಳೀಯ ನಿವಾಸ ಕುರಿತ ಅಂಶಗಳನ್ನು ಕೊನೆಗೊಳಿಸಿದ್ದರಿಂದ ಹೊರಗಿನವರು  ದೊಡ್ಡ ಪ್ರಮಾಣದಲ್ಲಿ ಬಂದು ತುಂಬಿಕೊಳ್ಳುವ ಬೆದರಿಕೆ ಮತ್ತು ದಿಲ್ಲಿಯಿಂದ ಆಳ್ವಿಕೆಯ ಅಸಮರ್ಪಕತೆ ಎಲ್ಲವೂ ಮೇಲಕ್ಕೆದ್ದು ಬಂದಿವೆ.

ವಿಶೇಷ ಸ್ಥಾನಮಾನವನ್ನು ಕೊನೆಗೊಳಿಸಿದ್ದಕ್ಕೆ ಜನರ ಮಂಜೂರಾತಿ, ವಿಶೇಷವಾಗಿ ಜಮ್ಮುವಿನಲ್ಲಾದರೂ  ಖಾತ್ರಿಪಡಿಸಲು ಆಗುತ್ತದೋ ಇಲ್ಲವೋ ಎಂಬ  ಬಗ್ಗೆ ಆತಂಕ ಅವರಲ್ಲಿದೆ.

ಇದರಾಚೆಗೆ, ಭಾಗವತ್ ಅನ್ವೇಷಿಸಿದ್ದು ಆರ್‌ಎಸ್‌ಎಸ್ ಶಾಖೆಗಳನ್ನು ಕಾಶ್ಮೀರ ಕಣಿವೆಗೆ ವಿಸ್ತರಿಸುವುದು ಹೇಗೆ ಎಂದು. ಮುಸ್ಲಿಮರು ಭಾರತೀಯರೇ, ಹಿಂದೂಗಳಂತಹ ಡಿಎನ್‌ಎಯನ್ನೇ ಹೊಂದಿದ್ದಾರೆ ಎಂಬ ಭಾಗವತ್‌ರ ಇತ್ತಿಚಿನ ಟಿಪ್ಪಣಿ ಸಂಘವನ್ನು ಮುಸ್ಲಿಮರಿಗೆ ಸ್ವೀಕಾರಾರ್ಹ ಗೊಳಿಸುವುದಕ್ಕಾಗಿಯೇ ಆಗಿತ್ತು. ನಿಜವಾದ ಗುರಿಯೆಂದರೆ ಮುಸ್ಲಿಮರನ್ನು ವಿಶಾಲ ಹಿಂದೂ ಸಮಾಜದಲ್ಲಿ ’ಸಮೀಕರಿಸುವುದು’. ಜಮ್ಮು ಮತ್ತು ಕಾಶ್ಮೀರದಾದ್ಯಂತ ಶಾಖೆಗಳ ಜಾಲವನ್ನು ವಿಸ್ತರಿಸುವ ಮಾತನ್ನು ಆಡಿರುವುದು ಈ ಸಮೀಕರಣ ಪ್ರಕ್ರಿಯೆಯನ್ನು ಮುಂದಕ್ಕೊಯ್ಯಬೇಕು ಎಂಬ ಸಂಘದ ಮಹತ್ವಾಕಾಂಕ್ಷೆಯನ್ನು ಸೂಚಿಸುತ್ತದೆ.

ಕೇಂದ್ರೀಯ ಆಡಳಿತದಲ್ಲಿ, ಈಗಾಗಲೇ ಕಾಶ್ಮೀರದವರಲ್ಲದವರನ್ನು, ಮಾಜಿ ಸೈನಿಕರು ಮತ್ತು ಕೈಗಾರಿಕಾ ಎಸ್ಟೇಟುಗಳ ಹೆಸರಿನಲ್ಲಿ ನೆಲೆಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಇದಕ್ಕಾಗಿ ವಾಸದ ನಿಯಮಗಳನ್ನು ಬದಲಿಸಲಾಗಿದೆ. ಈಗ ಕೈಗೆತ್ತಿಕೊಂಡಿರುವ ಕ್ಷೇತ್ರ ಮರುವಿಂಗಡಣೆ, ಭವಿಷ್ಯದ ವಿಧಾನಸಭೆಯಲ್ಲಿ ಕಾಶ್ಮೀರದ ರಾಜಕೀಯ ಪ್ರಾತಿನಿಧ್ಯದಲ್ಲಿ ಬದಲಾವಣೆ ತರುವ ನಿರೀಕ್ಷೆ ಅವರಲ್ಲಿದೆ.

ಕಣಿವೆಯಲ್ಲಿ ಮುಖ್ಯವಾಹಿನಿಯ ಪಕ್ಷಗಳನ್ನು ಇನ್ನೂ ದಮನ ಮಾಡುತ್ತಿರುವಾಗ ಪ್ರಜಾಸತ್ತಾತ್ಮಕ  ರಾಜಕೀಯಕ್ಕೆ ಹೆಚ್ಚೇನೂ ಅವಕಾಶವಿಲ್ಲದಾಗಿದೆ. ಇದು  ಉಗ್ರರು ವೈಯಕ್ತಿಕ ಹಿಂಸೆಯ ಕೃತ್ಯಗಳಿಗೆ ಇಳಿಯುವ ಪರಿಸ್ಥಿತಿಯತ್ತ ಒಯ್ದಿದೆ. ಅಕ್ಟೋಬರ್ 5ರಂದು ಶ್ರೀನಗರದಲ್ಲಿ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದ 70ವರ್ಷ ವಯಸ್ಸಿನ ಕಾಶ್ಮೀರಿ ಪಂಡಿತ ಔಷಧಿಗಾರ ಮತ್ತು ಒಬ್ಬ ಬಿಹಾರಿ ಬೀದಿ ಮಾರಾಟಗಾರರ ಕಗ್ಗೊಲೆಗಳು ಕೋಮು ವಿಭಜನೆಯನ್ನು ಸೃಷ್ಟಿಸಲಿಕ್ಕಾಗಿಯೇ ಎಸಗಿದವುಗಳು.

ಇವೆಲ್ಲವೂ ವಿಭಜಕತೆ ಹೆಚ್ಚಿರುವುದನ್ನು ಮತ್ತು ಜಮ್ಮು ಮತ್ತು ಕಾಶ್ಮೀರದ ಸಾರವನ್ನೇ ಧ್ವಂಸ ಮಾಡುವ ಸಂಭವವನ್ನು ಸೂಚಿಸುತ್ತಿವೆ. ಆರ್‌ಎಸ್‌ಎಸ್ ಮುಖ್ಯಸ್ಥರ ಭೇಟಿ ಮುಂಬರಲಿರುವ ಅನಿಷ್ಟಗಳ  ಅಪಶಕುನವಾಗಿದೆ.


ಎಂದಿನ ವರೆಗೆ ಹೀಗೆ..? : ಅಕ್ಟೋಬರ್ 6 ರಂದು ಶ್ರೀನಗರದ ಘಂಟಾಘರ್‌ನಲ್ಲಿ  ಶೋಕಸಭೆ

ಕಾಶ್ಮೀರ ಕಣಿವೆಯಲ್ಲಿ ಮುಖ್ಯವಾಹಿನಿಯ ಪಕ್ಷಗಳನ್ನು ಇನ್ನೂ ದಮನ ಮಾಡುತ್ತಿರುವಾಗ ಪ್ರಜಾಸತ್ತಾತ್ಮಕ  ರಾಜಕೀಯಕ್ಕೆ ಹೆಚ್ಚೇನೂ ಅವಕಾಶವಿಲ್ಲದಾಗಿದೆ. ಇದು  ಉಗ್ರರು ವೈಯಕ್ತಿಕ ಹಿಂಸೆಯ ಕೃತ್ಯಗಳಿಗೆ ಇಳಿಯುವ ಪರಿಸ್ಥಿತಿಯತ್ತ ಒಯ್ದಿದೆ. ಕಾಶ್ಮೀರ ಕಣಿವೆಯಲ್ಲಿ ಕಳೆದ ಐದು ದಿನಗಳಲ್ಲಿ ಏಳು ಮಂದಿಯನ್ನು ಉಗ್ರರು ಗುಂಡಿಟ್ಟು ಕೊಂದಿದ್ದಾರೆ.

ಶ್ರೀನಗರದಲ್ಲಿ ಔಷಧ ಅಂಗಡಿ ನಡೆಸುತ್ತಿದ್ದ ಮಖನ್‌ಲಾಲ್ ಬಿಂದ್ರೂ ಅವರನ್ನು ಮಂಗಳವಾರ ಸಂಜೆ ಗುಂಡಿಟ್ಟು ಕೊಲ್ಲಲಾಗಿದೆ. ಔಷಧ ಅಂಗಡಿಯ ಒಳಗೆ ಹತ್ತಿರದಿಂದ ಗುಂಡು ಹಾರಿಸಿ ಅವರ ಹತ್ಯೆ ಮಾಡಲಾಗಿದೆ. ಅದಾಗಿ, ಒಂದು ತಾಸಿನ ಬಳಿಕ ಬಿಹಾರದ ಬೀದಿಬದಿ ವ್ಯಾಪಾರಿ ಒಬ್ಬರನ್ನು ಲಾಲ್ ಬಝಾರ್ ಪ್ರದೇಶದಲ್ಲಿ ಕೊಲ್ಲಲಾಗಿದೆ. ಅದೇ ದಿನ ಬಂಡಿಪೊರಾ ಜಿಲ್ಲೆಯಲ್ಲಿಯೂ ಒಬ್ಬ ನಾಗರಿಕರ ಹತ್ಯೆ ಆಗಿದೆ.

ರಾಜ್ಯ ಹಿರಿಯ ಸಿಪಿಐ(ಎಂ) ಮುಖಂಡ ಮಹಮ್ಮದ್ ಯುಸುಫ್ ತರಿಗಾಮಿಯವರು ಬಿಂದ್ರೂರವರ ನಿವಾಸಕ್ಕೇ ಭೇಟಿ ನೀಡಿದರು. ಬಿಂದ್ರೂ ನೇರ ನಡೆಯ ವ್ಯಕ್ತಿ, ಎಲ್ಲ ಕಷ್ಟಗಳನ್ನು ಎದುರಿಸಿ ಅವರು ಕಾಶ್ಮೀರದಲ್ಲೇ ಉಳಿದರು. ತನ್ನ ಜನರ ನಡುವೆ ತಾನು ಸುರಕ್ಷಿತನಾಗಿದ್ದೇನೆ ಎಂದು ಅವರು ಅವರು ಎಂದು ನಂಬಿದ್ದ ಅವರು ಎಂದೂ ತನಗೆ ರಕ್ಷಣೆ ಬೇಕೆಂದು ಕೇಳಿರಲಿಲ್ಲ ಎಂದು ತರಿಗಾಮಿ ಹೇಳಿದರು.

ಈ ದುರದೃಷ್ಟಕರ ಕಗ್ಗೊಲೆಗಳು ನಿಲ್ಲಬೇಕು, ಇಂತಹ ಹೀನ ಕೃತ್ಯಗಳಿಗೆ ಯಾವುದೇ ಸಮರ‍್ಥನೆಯಿಲ್ಲ. ಇವು ಅಮಾನವೀಯ, ಇದನ್ನು ಎಸಗಿದವರು ಸಾಧಿಸಿರುವುದು ಏನೂಇಲ್ಲ, ಬಲಿಯಾದ ಕುಟುಂಬಗಳ ಸಂಕಟಗಳನ್ನು ಹೆಚ್ಚಿಸಿದ್ದಾರಷ್ಟೇ ಎಂದಿರುವ  ತರಿಗಾಮಿ ನಮ್ಮಲ್ಲಿ ಪ್ರತಿಯೊಬ್ಬರೂ ಮಾತನಾಡಬೇಕು, ಇಂತಹ ಬರ್ಬರ ಕಥ್ಯಗಳ ವಿರುದ್ಧ ದನಿಯೆತ್ತಬೇಕು ಎಂದು ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *