ಆನೇಕಲ್ |ಪಟಾಕಿ‌ ಮಳಿಗೆಯಲ್ಲಿ ಬೆಂಕಿ ಅವಘಡ :10 ಮಂದಿ ಕಾರ್ಮಿಕರ ಸಜೀವ ದಹನ

ಬೆಂಗಳೂರು:ಬೆಂಗಳೂರು ಹೊರವಲಯದ ಆನೇಕಲ್‌ನ ಅತ್ತಿಬೆಲೆಯಲ್ಲಿ ಪಟಾಕಿ ಮಳಿಗೆಯೊಂದರಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಈ ದುರ್ಘಟನೆಯಲ್ಲಿ 10 ಮಂದಿ ಸಜೀವ ದಹನವಾಗಿದ್ದಾರೆ. ಇನ್ನೂ ಹಲವರು ಒಳಗೆ ಸಿಲುಕಿ ಸಾವನ್ನಪ್ಪಿರಬಹುದು ಎಂದು ಪಟಾಕಿ ಮಳಿಗೆ ಸಿಬ್ಬಂದಿ ತಿಳಿಸಿದ್ದಾರೆ.

ಅತ್ತಿಬೆಲೆಯಲ್ಲಿ ಪಟಾಕಿ ಮಳಿಗೆಗೆ ಬೆಂಕಿ ತಗುಲಿದ್ದು, ಬೆಂಕಿಯ ಕೆನ್ನಾಲಿಗೆಗೆ ಪಟಾಕಿ ಮಳಿಗೆ ಹೊತ್ತಿ ಉರಿದಿದೆ. ಬಾನೆತ್ತರಕ್ಕೆ ಬೆಂಕಿಯ ಜ್ವಾಲೆ ಹಾಗೂ ಹೊಗೆ ಆವರಿಸಿದ್ದು, ಕೆಲಕಾಲ ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಕ್ಕಪಕ್ಕದ ಅಂಗಡಿಗಳಿಗೂ ಬೆಂಕಿ ವ್ಯಾಪಿಸಿತ್ತು. ಜೊತೆಗೆ, ಪಟಾಕಿ ಲಾರಿಗಳು, ಗೂಡ್ಸ್‌ ವಾಹನಗಳು ಹಾಗೂ ಬೈಕ್‌ಗಳು ಕೂಡ ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಈಗ ಬೆಂಕಿಯನ್ನು ನಂದಿಸಿದ್ದು, ಮೃತ ದೇಹಗಳನ್ನು ಹೊರಗೆ ತೆಗೆಯಲಾಗುತ್ತಿದೆ.

ಮಳಿಗೆಯಲ್ಲಿ ಸುಮಾರು ಐದು ಕೋಟಿ ಮೌಲ್ಯದ ಪಟಾಕಿಗಳ ಸಂಗ್ರಹ ಇತ್ತು ಎನ್ನಲಾಗಿದೆ. ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಪಟಾಕಿ ಮಳಿಗೆಯಲ್ಲಿ 30-40 ಮಂದಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಹಿಂಬಾಗಿಲಿನಿಂದ ಹೊರಬಂದಿದ್ದರಿಂದ ಕೆಲವರು ಪ್ರಾಣಾಪಾಯದಿಂದ ಪಾರಾಗಿದ್ದಾರೆನ್ನಲಾಗಿದೆ.

10 ಮಂದಿ ಸಜೀವ ದಹನ, ಬೂದಿಯಲ್ಲಿ ಶವಕ್ಕಾಗಿ ಹುಡುಕಾಟ: ಇನ್ನು ಪಟಾಕಿ ಮಳಿಗೆಗೆ ಬೆಂಕಿ ಹತ್ತಿರುವುದನ್ನು ಹತೋಟಿಗೆ ತರಲಾಗಿದೆ. ಈ ವೇಳೆ ಮಳಿಗೆಯಲ್ಲಿ ಐವರ ಮೃತದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬೆಂಕಿ ಹಾಗೂ ಪಟಾಕಿಯ ಬೂದಿಯಲ್ಲಿ ಶವಗಳನ್ನು ಹುಡುಕಲಾಗುತ್ತಿದೆ. ಒಟ್ಟು ಮಳಿಗೆಯಲ್ಲಿ 10 ಜನರು ಒಳಗೆ ಕೆಲಸ ಮಾಡುತ್ತಿದ್ದು, ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಮಳಿಗೆಯ ಹೊರ ಭಾಗದಲ್ಲಿ ಕೆಲಸ ಮಾಡುತ್ತಿದ್ದ ಮಾಲೀಕ ಬೆಂಕಿ ಬಿದ್ದ ಕೂಡಲೇ ಅಲ್ಲಿಂದ ಹೊರಗೆ ಓಡಿ ಬಂದಿದ್ದಾನೆ. ಮಾಲೀಕನಿಗೂ ಸುಟ್ಟ ಗಾಯಗಳಾಗಿವೆ. ಇನ್ನು ಅಗ್ನಿ ಅವಘಡದಿಂದಾಗಿ ಹೊಸೂರು ಹೆದ್ದಾರಿಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪಟಾಕಿ ಮಳಿಗೆಗೆ ಬೆಂಕಿ ಹಿನ್ನೆಲೆ ಟ್ರಾಫಿಕ್ ಜಾಮ್ ಹೆಚ್ಚಾಗಿದ್ದು, ಇದರಲ್ಲಿ ಅಗ್ನಿಶಾಮಕ ದಳ ವಾಹನ ಕೂಡ ಸಿಲುಕಿತ್ತು.

ಈ ವಿಡಿಯೋ ನೋಡಿಜೀವ ಜಗತ್ತಿನ ಓಟದಲ್ಲಿ ಗೆದ್ದ ಆಮೆಯೆಂಬ ಅದ್ಭುತ ಪ್ರಾಣಿ

Donate Janashakthi Media

One thought on “ಆನೇಕಲ್ |ಪಟಾಕಿ‌ ಮಳಿಗೆಯಲ್ಲಿ ಬೆಂಕಿ ಅವಘಡ :10 ಮಂದಿ ಕಾರ್ಮಿಕರ ಸಜೀವ ದಹನ

Leave a Reply

Your email address will not be published. Required fields are marked *