ಬಡವರ ಸಾಗುವಳಿ ಭೂಮಿ ಕಿತ್ತುಕೊಳ್ಳುತ್ತಿರುವ ಬಿಜೆಪಿ ಸರ್ಕಾರ: ಬಿ.ಕೆ. ಹರಿಪ್ರಸಾದ್‌

ಕಾರವಾರ: ಭೂಮಿ ಇಲ್ಲದವರಿಗೆ ಭೂಮಿ ನೀಡುವುದರ ಬದಲಾಗಿ, ಬಡವರ ಬಳಿ ಇರುವ ಸಾಗುವಳಿ ಭೂಮಿಯನ್ನು ಬಿಜೆಪಿ ಸರ್ಕಾರ ಕಿತ್ತುಕೊಳ್ಳುತ್ತಿದೆ‌. ಅರಣ್ಯವಾಸಿಗಳಿಗೆ ಭೂ ಒಡೆತನದ ಹಕ್ಕನ್ನು ನೀಡದೆ, ಯುಪಿಎ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತಂದಂತಹ ಕ್ರಾಂತಿಕಾರಿಕ ಅರಣ್ಯ ಹಕ್ಕು ಕಾಯ್ದೆಗಳನ್ನು ದುರ್ಬಲಗೊಳಿಸಲಾಗಿದೆ ಎಂದು ಪರಿಷತ್‌ ವಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್‌ ಆರೋಪಿಸಿದರು.

ಕಾರವಾರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುಪಿಎ ಸರ್ಕಾರದಲ್ಲಿ ಉಳುವವನೆ ಭೂಮಿಯ ಒಡೆಯ ನೀತಿಗಳಿದ್ದವು. ಆದರೆ ಈಗ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಉಳ್ಳವರು ಮಾತ್ರ ಭೂಮಿಯ ಒಡೆಯರು ಎಂಬ ನೀತಿಗಳು ಜಾರಿಗೊಂಡಿವೆ. ಇರುವ ಸಾಗುವಳಿ ಭೂಮಿಯನ್ನು ಸಹ ವಶಕ್ಕೆ ಕಿತ್ತುಕೊಳ್ಳುತ್ತಿದೆ ಎಂದರು.

2006ರ ಅರಣ್ಯ ಹಕ್ಕುಗಳ ಕಾಯ್ದೆಯ ಪ್ರಕಾರ ಬಡ ಜನರಿಗೆ, ಅರಣ್ಯವಾಸಿಗಳಿಗೆ, ಬುಡಕಟ್ಟು ಸಮುದಾಯಗಳಿಗೆ ಭೂಮಿಯ ಹಕ್ಕನ್ನು ಹೊಂದುವ ಹಕ್ಕುಗಳಿದ್ದವು. ಯುಪಿಎ ಕಾಂಗ್ರೆಸ್ ಅವಧಿಯಲ್ಲಿ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಎಫ್‌ಆರ್‌ಎ(ಅರಣ್ಯ ಹಕ್ಕು ಕಾಯ್ದೆ)ಯನ್ನು ಜಾರಿಗೆ ತರಲಾಗಿತ್ತು. ಆದಿವಾಸಿಗಳು ಮತ್ತು 75 ವರ್ಷಗಳಿಗಿಂತ ಹೆಚ್ಚು ಅಥವಾ ಮೂರು ತಲೆಮಾರಿಗಿಂತ ಹೆಚ್ಚು ಅರಣ್ಯದಲ್ಲಿ ವಾಸಿಸುತ್ತಿರುವ ಬುಡಕಟ್ಟು ಮತ್ತು ಬುಡಕಟ್ಟುಯೇತರ ಅರಣ್ಯವಾಸಿಗಳ ಅರಣ್ಯ ಹಕ್ಕುಗಳನ್ನು ಈ ಕಾಯ್ದೆ ಎತ್ತಿಹಿಡಿದಿದೆ. ಆದರೆ ಮೋದಿ ಸರ್ಕಾರ ಕಾಯ್ದೆಗಳನ್ನ ತಿದ್ದುಪಡಿ ಮಾಡಿ, ದುರ್ಬಲಗೊಳಿಸುವ ಮೂಲಕ ಬಾಬಾ ರಾಮದೇವ್, ಅದಾನಿ, ಅಂಬಾನಿಯಂತವರಿಗೆ ಸಾವಿರಾರು ಎಕರೆ ಅರಣ್ಯ ಭೂಮಿಯನ್ನು ನೀಡಲು ಮುಂದಾಗುತ್ತಿದೆ ಎಂದು ಆರೋಪಿಸಿದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯವಾಸಿಗಳು, ಬುಡಕಟ್ಟು ಸಮುದಾಯಗಳು ಅರಣ್ಯಭೂಮಿಯ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಸುಮಾರು ವರ್ಷಗಳಿಂದ ಹೋರಾಟ ನಡೆಯುತ್ತಿದ್ದರು ಬಿಜೆಪಿ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಈ ಬಾರಿ ಅಧಿವೇಶನದಲ್ಲಿ ಅರಣ್ಯ ಭೂ ಒತ್ತುವಳಿದಾರರ ಸಮಸ್ಯೆಯನ್ನ ಚರ್ಚೆ ಮಾಡಲಾಗುತ್ತದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ವಿಶೇಷವಾಗಿ ಈ ಭಾಗದ ಜನರಿಗೆ ನ್ಯಾಯ ದೊರಕಿಸುವ, ಹಕ್ಕುಗಳನ್ನು ನೀಡುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.

ಭಯೋತ್ಪಾದನೆ ವಿರುದ್ಧ ಕಾಂಗ್ರೆಸ್ ನಿರಂತರ ಹೋರಾಟ ನಡೆಸಿರುವ ಪಕ್ಷ. ಉಗ್ರ ಚಟುವಟಿಕೆ ಎಂದಿಗೂ ಬೆಂಬಲಿಸಿಲ್ಲ. ದೇಶದ್ರೋಹಿಗಳ ವಿರುದ್ಧ ಹೋರಾಡಿದ್ದಕ್ಕೆ ಮಹಾತ್ಮ ಗಾಂಧೀಜಿ ಅವರನ್ನು ಕಳೆದುಕೊಂಡೆವು. ಭಯೋತ್ಪಾದನೆ ವಿರುದ್ದ ಹೋರಾಡಿದ್ದಕ್ಕಾಗಿಯೇ ಇಂದಿರಾ ಗಾಂಧಿ ಹಾಗೂ ಐಕ್ಯತೆಗಾಗಿ ರಾಜೀವ್‌ ಗಾಂಧಿ ಜೀವ ತೆತ್ತಿದ್ದಾರೆ. ಆದರೂ ಕಾಂಗ್ರೆಸ್ ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸುತ್ತಿದೆ ಎಂದರು.

ಬ್ರಿಟಿಷರ ಬೂಟು ನೆಕ್ಕಿದ ಜನರಿಂದ ನಾವು ಪಾಠ ಕಲಿಯಬೇಕಿಲ್ಲ. ಕಂದಹಾರ ವಿಮಾನ ಅಪಹರಣದಲ್ಲಿ ನಡೆದ ಭಯೋತ್ಪಾದನಾ ಘಟನೆಯ ಆರೋಪಿಗೆ ಎಲ್ ಕೆ ಅಡ್ವಾಣಿ ಕ್ಲೀನ್ ಚೀಟ್ ನೀಡಿದರು. ಭಯೋತ್ಪಾದಕರಿಗೆ ಪರವಾಗಿ ಯಾರಿದ್ದರೂ ಎಂದು ದೇಶದ ಜನ ಮರೆತಿಲ್ಲ ಎಂದು ಆರೋಪಿಸಿದರು.

ಪೊಲೀಸರ ತನಿಖೆಗೂ ಮೊದಲೇ ನಾಗಪುರ ಯುನಿವರ್ಸಿಟಿಯಲ್ಲಿ ಸರ್ಟಿಫಿಕೇಟ್ ಬರುತ್ತೆ. ಮಂಗಳೂರು ಪೊಲೀಸರು ಘಟನೆಗೆ ಬಗ್ಗೆ ತನಿಖೆಯೇ ಪ್ರಾರಂಭ ಮಾಡಿರಲಿಲ್ಲ, ಆಗಲೇ ಬಿಜೆಪಿ ನಾಯಕರು ಹೇಳಿಕೆ ನೀಡುತ್ತಾರೆ. ಕಾಂಗ್ರೆಸ್ ಪಕ್ಷವನ್ನು ನಿಷೇಧ ಮಾಡಲು ಈಶ್ವರಪ್ಪನವರ ವಂಶಪೂರ್ತಿ ಹತ್ತು ಸಲ ಹುಟ್ಟಿದರೂ ಸಾಧ್ಯವಿಲ್ಲ.ಕಾಂಗ್ರೆಸ್ ಪಕ್ಷ ಜನರು ಕಟ್ಟಿರುವಂತದ್ದು, ನಾಗಪುರದವರಲ್ಲ. ಕಳ್ಳತನದಿಂದ ಬಿಜೆಪಿಯವರು ಶಾಸಕರನ್ನು ಖರೀದಿ ಮಾಡಿದೆ. ಈಗ ಅವರಿಗೆಲ್ಲಾ ಭ್ರಮನಿರಸನವಾಗಿ ವಾಪಾಸ್ಸು ಬರುತ್ತಿದ್ದಾರೆ ಎಂದರು.

ಕರ್ನಾಟಕಕಕ್ಕೆ ನರೇಂದ್ರ ಮೋದಿ ಎಷ್ಟೇ ಬಾರಿ ಬಂದರೂ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲವಾಗುತ್ತೆ. ಗಡಿಪಾರದ ಗೃಹ ಸಚಿವ ಅಮಿತ್ ಶಾ ಬಂದಷ್ಟು ಕಾಂಗ್ರೆಸ್ ಪಕ್ಷಕ್ಕೆ ಅನುಕೂಲ. ಬಿಜೆಪಿಯವರು ಗುಜರಾತ್ ಮಾದರಿಯೇ ಚುನಾವಣೆ ಎದುರಿಸಲಿ, ನಾವೂ ಸಿದ್ದರಾಗಿದ್ದೇವೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡ ಮಂಜುನಾಥ್ ನಾಯ್ಕ್, ವಕೀಲರಾದ ರವೀಂದ್ರ ನಾಯ್ಕ, ಎಸ್.ಕೆ.ಭಾಗವತ, ಪುಷ್ಪಾ ನಾಯ್ಕ ಇದ್ದರು.

Donate Janashakthi Media

Leave a Reply

Your email address will not be published. Required fields are marked *