ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಸಿಬಿಐ ಕೋರ್ಟ್ ತೀರ್ಪು ಅಚ್ಚರಿ ಎಂದ ಮಾಜಿ ಗೃಹ ಕಾರ್ಯದರ್ಶಿ

  • ಸುಪ್ರೀಂಕೋರ್ಟ್‍ ಕ್ರಿಮಿನಲ್‍ ಕೃತ್ಯ ಎಂದು ಹೇಳಿದ ಘಟನೆಗೆ ಸಾಕ್ಷಿ ಸಿಕ್ಕಿಲ್ಲ ಎನ್ನುವುದೇ ಅಚ್ಚರಿ

ನವದೆಹಲಿ: ಬಾಬ್ರಿ ಮಸೀದಿ ಕೆಡವಲು ಕ್ರಿಮಿನಲ್ ಸಂಚು ರೂಪಿಸಿದ್ದಕ್ಕೆ ಪ್ರಬಲ ಸಾಕ್ಷ್ಯಾಧಾರ ಇಲ್ಲವೆಂದು ಹೇಳಿ ಎಲ್ಲಾ 32 ಆರೋಪಿಗಳನ್ನ ಖುಲಾಸೆಗೊಳಿಸಿ ಸಿಬಿಐ ವಿಶೇಷ ನ್ಯಾಯಪೀಠದ ತೀರ್ಪಿಗೆ ಮಾಜಿ ಗೃಹ ಕಾರ್ಯದರ್ಶಿಯೊಬ್ಬರು ಅಚ್ಚರಿಪಟ್ಟಿದ್ದಾರೆ.

1992ರಲ್ಲಿ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿಯನ್ನು ಕರಸೇವಕರು ಕೆಡವಿದ ಸಂದರ್ಭದಲ್ಲಿ ಅಂದಿನ ಗೃಹ ಇಲಾಖೆ ಕಾರ್ಯದರ್ಶಿಯಾಗಿದ್ದ ಮಾಧವ್ ಗೋಡ್ಬೋಲೆ ಅವರು ತೀರ್ಪು ನಮ್ಮ ಅಪರಾಧ ನ್ಯಾಯಾಲಯ ವ್ಯವಸ್ಥೆಯ ಪರಿಸ್ಥಿತಿಗೆ ಕನ್ನಡಿ ಹಿಡಿದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಿಬಿಐ ನ್ಯಾಯಾಲಯದ ತೀರ್ಪಿನ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಗೋಡ್ಬೋಲೆ, ಬಾಬರಿ ಮಸೀದಿ ಕೆಡವಲು ಯಾವುದೇ ಸಂಚು ನಡೆದಿಲ್ಲ ಎಂದು ಹೇಳಿದರೆ ನಂಬಲು ಬಹಳ ಕಷ್ಟವಾಗುತ್ತದೆ. ನ್ಯಾಯಾಲಯ ಸುಮಾರು 500 ಸಾಕ್ಷಿಗಳನ್ನು ವಿಚಾರಣೆ ನಡೆಸಿದರೂ ಸಂಚು ನಡೆದಿದ್ದರ ಸುಳಿವು ಸಿಕ್ಕಿಲ್ಲ ಎಂದು ಹೇಳಿರುವುದು ನಿಜಕ್ಕೂ ದೊಡ್ಡ ಅಚ್ಚರಿ. ಅಷ್ಟು ದೊಡ್ಡ ಗುಂಪು ತನ್ನಂತಾನೆ ಮಸೀದಿ ಸ್ಥಳಕ್ಕೆ ಬಂದು ಸೇರಲು ನನ್ನ ಪ್ರಕಾರ ಅಸಾಧ್ಯ. ಆ ಘಟನೆಯಾಗಿ 28 ವರ್ಷಗಳ ನಂತರ ಈ ತೀರ್ಪು ಬಂದಿದೆ ಎಂದರೆ ಅದು ನಮ್ಮ ಕ್ರಿಮಿನಲ್ ನ್ಯಾಯ ವ್ಯವಸ್ಥೆಗೆ ಹಿಡಿದ ಕನ್ನಡಿ ಆಗಿದೆ. ಬಾಬ್ರಿ ಕಟ್ಟಡ ಕೆಡವಿದ್ದು ಕ್ರಿಮಿನಲ್ ಕೃತ್ಯ ಎಂದು ಸುಪ್ರೀಂ ಕೋರ್ಟ್ ಹೇಳಿ ಆಗಿದೆ. ಆದರೆ, ಇದಕ್ಕೆ ಸಾಕ್ಷ್ಯ ಸಿಕ್ಕಿಲ್ಲ ಎಂದರೆ ನಂಬಲು ಕಷ್ಟ ಎಂದು ನಿವೃತ್ತ ಐಎಎಸ್ ಅಧಿಕಾರಿಯಾದ ಮಾಧವ್ ಗೋಡ್ಬೋಲೆ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಬಾಬ್ರಿ ಮಸೀದಿ ಧ್ವಂಸ ಪೂರ್ವನಿಯೋಜಿತವಲ್ಲ:; 32 ಆರೋಪಿಗಳಿಗೂ ಕ್ಲೀನ್ ಚಿಟ್

  ಪಿವಿ ನರಸಿಂಹರಾವ್ ಪ್ರಧಾನಿಯಾಗಿದ್ಧಾಗ ಗೃಹ ಇಲಾಖೆ ಕಾರ್ಯದರ್ಶಿಯಾಗಿದ್ದ ಮಾಧವ್ ಗೋಡ್ಬೊಲೆ ಅವರು ತಮ್ಮ ನಿವೃತ್ತಿಯ ನಂತರ ಬರೆದ ಪುಸ್ತಕದಲ್ಲಿ ಬಾಬ್ರಿ ಮಸೀದಿ ಕೆಡವಿದ ಸಂದರ್ಭಗಳನ್ನ ಮೆಲಕು ಹಾಕಿದ್ಧಾರೆ. 1992ರಲ್ಲಿ ಬಾಬ್ರಿ ಮಸೀದಿ ಕೆಡವುವ ಸಂಚು ರೂಪಿಸಿದ್ದು ಗೊತ್ತಾಗಿ ಅವರು ಅದನ್ನು ಉಳಿಸಲು ಮಾಧವ್ ಅವರು ಪ್ರಯತ್ನಿಸಿದ್ದರು. ಮುನ್ನೆಚ್ಚರಿಕೆಯಾಗಿ ಸಂವಿಧಾನದ 356ನೇ ವಿಧಿಯನ್ನು ಬಳಕೆ ಮಾಡಿ ಬಾಬ್ರಿ ಕಟ್ಟಡವನ್ನು ಕೇಂದ್ರ ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕೆಂದು ಎರಡು ದಿನಗಳ ಮುಂಚೆಯೇ ಗೃಹ ಸಚಿವಾಲಯವು ಆಗಿನ ಪ್ರಧಾನಿ ಪಿವಿ ನರಸಿಂಹ ರಾವ್ ಅವರನ್ನ ಕೇಳಿತು. ಆದರೆ, ಈ ಪಿವಿಎನ್ ರಾವ್ ತಮ್ಮದೇ ಕಾರಣವೊಡ್ಡಿ ಈ ಪ್ರಸ್ತಾವವನ್ನು ಒಪ್ಪಲಿಲ್ಲ ಎಂದು ಗೋಡ್ಬೋಲೆ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

 ಪ್ರಧಾನಿ ನರಸಿಂಹ ರಾವ್ ಅವರು ಒಂದು ಸ್ಪಷ್ಟ ನಿರ್ಧಾರಕ್ಕೆ ಬರುವ ಸ್ಥಿತಿಯಲ್ಲಿದ್ದಂತೆ ತೋರಲಿಲ್ಲ. ಆರ್ಟಿಕಲ್ 356 ಅನ್ನು ಬಳಕೆ ಮಾಡಲು ರಾಜಕೀಯವಾಗಿ ಅವರಿಗೆ ಸಮ್ಮತವಾಗಿರಲಿಲ್ಲ. ಆ ವಿಚಾರದ ಬಗ್ಗೆ ಈಗ ಇಷ್ಟು ಮಾತ್ರ ಹೇಳಬಹುದು. ಅಂದಿನ ಸಂದರ್ಭದ ಬಗ್ಗೆ ಹೇಗಾದರೂ ಅರ್ಥೈಸಿಕೊಳ್ಳಬಹುದು. 

– ಮಾಧವ್ ಗೋಡ್ಬೊಲೆ

ಲಕ್ನೋನ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸುರೇಂದ್ರ ಕುಮಾರ್ ಯಾದವ್ ಅವರು ಇವತ್ತು ನೀಡಿದ ತೀರ್ಪಿನಲ್ಲಿ ಎಲ್ಲಾ 32 ಆರೋಪಿಗಳನ್ನ ಖುಲಾಸೆಗೊಳಿಸಿದ್ದಾರೆ. ಕೋರ್ಟ್​ಗೆ ಹಾಜರುಪಡಿಸಿದ ಯಾವ ಸಾಕ್ಷಿಗಳೂ ಗಟ್ಟಿ ಆಗಿಲ್ಲ. ಆರೋಪಿಗಳು ಸಂಚು ರೂಪಿಸಿದ್ದರು ಎನ್ನುವುದಕ್ಕೆ ಪೂರಕವಾಗಿ ಸಮರ್ಪಕ ಸಾಕ್ಷ್ಯಾಧಾರ ಇಲ್ಲ ಎಂದು ತಮ್ಮ 2 ಸಾವಿರ ಪುಟಗಳ ತೀರ್ಪಿನಲ್ಲಿ ನ್ಯಾ| ಎಸ್.ಕೆ. ಯಾದವ್ ಅಭಿಪ್ರಾಯಪಟ್ಟಿದ್ದಾರೆ.

Donate Janashakthi Media

One thought on “ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಸಿಬಿಐ ಕೋರ್ಟ್ ತೀರ್ಪು ಅಚ್ಚರಿ ಎಂದ ಮಾಜಿ ಗೃಹ ಕಾರ್ಯದರ್ಶಿ

Leave a Reply

Your email address will not be published. Required fields are marked *