ಆಟೋರಿಕ್ಷಾ ರಹದಾರಿ ವಿತರಣೆಯಲ್ಲಿ ಭ್ರಷ್ಟಾಚಾರ-ದಲ್ಲಾಳಿಗಳ ಹಾವಳಿ: ಎಆರ್‌ಡಿಯು ಪ್ರತಿಭಟನೆ

ಬೆಂಗಳೂರು: ರಹದಾರಿ ಪತ್ರ ನೀಡಿಕೆಯಲ್ಲಿನ ಭ್ರಷ್ಟಾಚಾರ ಹಾಗೂ ದಲ್ಲಾಳಿಗಳ ಹಾವಳಿಯಿಂದ ತಿಂಗಳುಗಟ್ಟಲೆ ಅಲೆಯುವ ಪರಿಸ್ಥಿತಿ ಎದುರಾಗಿದೆ ಎಂದು ಆರೋಪಿಸಿ ಆಟೋರಿಕ್ಷಾ ಡ್ರೈವರ್ಸ್‌ ಯೂನಿಯನ್‌(ರಿ.),(ಸಿಐಟಿಯು ಸಂಯೋಜಿತ) ಸದಸ್ಯರು ಪ್ರತಿಭಟನಾ ಧರಣಿಯನ್ನು ನಡೆಸಿದರು.

ಬೆಂಗಳೂರು ನಗರದ ಶಾಂತಿನಗರ ಬಳಿಯಿರುವ ಸಾರಿಗೆ ಆಯುಕ್ತರ ಕಛೇರಿ ಮುಂಭಾಗ ನೂರಾರು ಆಟೋ ಚಾಲಕರು ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಘೋಷಣೆಗಳನ್ನು ಹಾಕುವ ಮೂಲಕ ಭ್ರಷ್ಟಾಚಾರ ಮತ್ತು ದಲ್ಲಾಳಿಗಳ ಹಾವಳಿಯ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರು.

ಬೆಂಗಳೂರು ನಗರದಲ್ಲಿ ಆಟೋರಿಕ್ಷಾಗಳ ಸಂಖ್ಯೆ ಸುಮಾರು 1.75 ಲಕ್ಷ ಇದ್ದು, ಈ ಹಿಂದೆ ರಹದಾರಿ ಪತ್ರಗಳನ್ನು ನೋಂದಣಿ ಕಛೇರಿಗಳು ನಿರ್ವಹಿಸುತ್ತಿದ್ದವು. ಆಗ ಭ್ರಷ್ಟಾಚಾರ ಮತ್ತು ದಲ್ಲಾಳಿಗಳ ಹಾವಳಿಯಿಂದ ಆಟೋ ಚಾಲಕರು ಬೇಸತ್ತಿದ್ದರು. ನಿರಂತರ ಪ್ರತಿಭಟನೆಯಿಂದ 2011ರಿಂದ ರಹದಾರಿ ನೀಡಲು ಐಎಂವಿ ಕಾಯ್ದೆ ಹಾಗೂ ಮಾನ್ಯ ಉಚ್ಚ ನ್ಯಾಯಾಲಯದ ಆದೇಶದಂತೆ ಏಕಗವಾಕ್ಷಿ ಸ್ಥಾಪಿಸಿದ ಸಾರಿಗೆ ಇಲಾಖೆಯು ಆ ಮೂಲಕ ರಹದಾರಿ ಪತ್ರಗಳನ್ನು ವಿತರಣೆ ಮಾಡಲು ಕ್ರಮವಹಿಸಿದೆ. ಆದರೂ ಸಹ ಕಛೇರಿಯಲ್ಲಿನ ಭ್ರಷ್ಟಾಚಾರದಿಂದಾಗಿ ಮತ್ತೆ ಚಾಲಕರಿಗೆ ತೊಂದರೆ ಎದುರಾಗಿದೆ. ಅಲ್ಲದೆ ದಲ್ಲಾಳಿ ಹಾವಳಿ ಮಿತಿ ಮೀರಿದೆ ಎಂದು ಎಆರ್‌ಡಿಯು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಎನ್.ಶ್ರೀನಿವಾಸ್‌ ಹೇಳಿದರು.

ಇದನ್ನು ಓದಿ: ಮುಷ್ಕರ ಸಂದರ್ಭ ಕಾರ್ಮಿಕರ ಮೇಲೆ ಹೂಡಲಾದ ಪ್ರಕರಣಗಳು ಕೈಬಿಡುವಂತೆ ಸಾರಿಗೆ ನೌಕರರ ಆಗ್ರಹ

ಈ ಕಛೇರಿ ಸ್ಥಾಪನೆಯಾಗಿದ್ದೇ, ಆಟೋರಿಕ್ಷಾ ರಹದಾರಿ ಪತ್ರಗಳಲ್ಲಿ ಆಗುತ್ತಿರುವ ಮೋಸ, ವಂಚನೆ, ನಕಲು, ಭ್ರಷ್ಟಾಚಾರ, ಕೆಲಸಗಳಲ್ಲಿ ವಿಳಂಬ ತಡೆಗಟ್ಟುವ ಉದ್ದೇಶವಾಗಿತ್ತು. ಆದರೆ ಈಗ ಮತ್ತೆ ಇನ್ನಷ್ಟು ಕೆಲಸ ಕಾರ್ಯಗಳಲ್ಲಿ ವಿಳಂಬ, ದಲ್ಲಾಳಿಗಳು ಹೆಚ್ಚಾಗಿದ್ದಾರೆ.

ಎಆರ್‌ಡಿಯು ಸಂಘದ ಖಜಾಂಚಿ ಸಂತೋಷ ಕುಮಾರ್‌ ಮಾತನಾಡಿ ʻಈ ಬಗ್ಗೆ ಕಛೇರಿಯಲ್ಲಿ ಕಾರಣ ಕೇಳಿದರೆ, ಈ ಕಛೇರಿಗೆ ಅಧಿಕಾರಿಯಾಗಿ ಬರುವ ವ್ಯಕ್ತಿಗಳು ನೇರವಾಗಿ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ. ಕಾರಣ ನಾವುಗಳು ಸಹ ಹಣಕೊಟ್ಟು ಈ ಕಛೇರಿಗೆ ಬಂದಿದ್ದೇವೆ ಎಂದು ಸುಮಾರು ಅಧಿಕಾರಿಗಳು ಹೇಳುತ್ತಾರೆ. ಸುಮಾರು 10 ವರ್ಷಗಳಲ್ಲಿ 10ಕ್ಕೂ ಹೆಚ್ಚು ಅಧಿಕಾರಿಗಳು ಬದಲಾವಣೆಯಾಗಿದ್ದಾರೆ. ಎಲ್ಲರೂ ಮದ್ಯವರ್ತಿಗಳನ್ನು ಪೋಷಿಸಿ ಹಣ ಮಾಡಿಕೊಂಡಿರುವವರೇ ಆಗಿದ್ದಾರೆʼ ಎಂದು ಆರೋಪ ಮಾಡಿದ್ದಾರೆ.

ರಹದಾರಿ ನೀಡುವಲ್ಲಿಯೂ ಸಾಕಷ್ಟು ಅವ್ಯವಹಾರಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಎಲ್ಲಾ ನಿಯಮಗಳನ್ನು ಉಲ್ಲಂಘನೆ ಮಾಡಿ ದ್ವಿಚಕ್ರ ವಾಹನ ಪರವಾನಿಗಿಗೂ ರಹದಾರಿ ವಿತರಣೆ ಮಾಡಿರುತ್ತಾರೆ. ಆಟೋರಿಕ್ಷಾ ಎನ್.ಟಿ. ಪರವಾನಿಗಿಗೂ ರಹದಾರಿ ವಿತರಣೆ ಮಾಡಿರುತ್ತಾರೆ. ಒಂದೇ ವಾಹನಕ್ಕೆ ಎರಡೆರಡು ರಹದಾರಿ ವಿತರಣೆ ಮಾಡಿರುವ ಉದಾಹರಣೆಗಳು ಸಾಕಷ್ಟು ಇವೆ. ಇಂತಹ ಕೆಟ್ಟ ವಾತಾವರಣದಲ್ಲಿ ಈ ಕಛೇರಿ ಭ್ರಷ್ಟಾಚಾರದ ಕೂಪವಾಗಿದೆ. ಸದ್ಯ 148 ವಾಹನಗಳು ಪರವಾನಗಿ ಬೋಗಸ್ ಆಗಿವೆ ಎಂದು ರಹದಾರಿ ಕಛೇರಿಯ ಸೂಚನ ಫಲಕದಲ್ಲಿಯೂ ಪ್ರದರ್ಶಿಸಿರುತ್ತಾರೆ ಎಂದರು.

ಅಲ್ಲದೆ, ಆರ್‌ಟಿಓ ಅಧಿಕಾರಿ ಮದ್ಯವರ್ತಿಗಳು, ಕೆಲವು ಪಟ್ಟಭದ್ರಾ ಹಿತಾಸಕ್ತಿಗಳ ಜೊತೆ ಶಾಮೀಲಾಗಿ ನೇರವಾಗಿ ಹಾಜರಾಗುವ ಚಾಲಕರಿಗೆ ಕಿರುಕುಳ ನೀಡುತ್ತಾ ಮದ್ಯವರ್ತಿಗಳ ಮೂಲಕವೇ ಕೆಲಸ ಮಾಡಿಕೊಳ್ಳುವಂತೆ ಮಾಡುತ್ತಿದ್ದಾರೆ. ಕಛೇರಿಯಲ್ಲಿ ಭ್ರಷ್ಟಾಚಾರದ ಬಗ್ಗೆ, ಹಲವಾರು ದೂರುಗಳು ಸಲ್ಲಿಕೆಯಾಗಿರುತ್ತದೆ. ಕೂಡಲೇ ಈ ಅಧಿಕಾರಿಯ ವಿರುದ್ಧ ಸೂಕ್ತ ತನಿಖಾ ಸಂಸ್ಥೆ ಮುಖಾಂತರ ತನಿಖೆ ಮಾಡಿಸಿ, ಈ ಅಧಿಕಾರಿಗೆ ತಕ್ಕ ಶಿಕ್ಷೆ ವಿಧಿಸಬೇಕೆಂದು ಆಟೋ ಚಾಲಕರ ಆಗ್ರಹವಾಗಿದೆ.

ಇದನ್ನು ಓದಿ: ಮೂರು ತಿಂಗಳು ಕನಿಷ್ಠ ರೂ.10 ಸಾವಿರ ಪರಿಹಾರಕ್ಕೆ ಚಾಲಕರ ಒತ್ತಾಯ

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಾರಿಗೆ ಇಲಾಖೆಯ ಜಂಟಿ ಆಯುಕ್ತ ನರೇಂದ್ರ ಹೋಳ್ಕರ್‌ ಮನವಿಯನ್ನು ಸ್ವೀಕರಿಸಿ “ಈಗಾಗಲೇ ನಮಗೂ ಸಾಕಷ್ಟು ದೂರುಗಳು ಬಂದಿವೆ. ಅದನ್ನು ಶೀಘ್ರದಲ್ಲಿ ಪರಿಶೀಲಿಸಲಾಗುವುದು. ಇನ್ನೂ ಹೆಚ್ಚಿನ ಅವ್ಯವಹಾರದ ಬಗ್ಗೆ ಮತ್ತಷ್ಟು ನಿಖರ ಮಾಹಿತಿಗಳನ್ನು ನೀಡಿ ಅವುಗಳ ಮೇಲೆ ಕ್ರಮಜರುಗಿಸಲಾಗುವುದು. ಈ ಬಗ್ಗೆ ಶೀಘ್ರದಲ್ಲಿ ಸಭೆಯನ್ನು ನಡೆಸಿ ಸೂಕ್ತ ಕ್ರಮವಹಿಸುತ್ತೇನೆ ಎಂದು ಹೇಳಿದರು.

ಚಾಲಕರ ಪ್ರಮುಖ ಬೇಡಿಕೆಗಳು

  1. ಆಟೋರಿಕ್ಷಾ ರಹದಾರಿ ಕಛೇರಿಯಲ್ಲಿ ನೇರವಾಗಿ ಹಾಜರಾಗುವ ಚಾಲಕರುಗಳಿಗೆ, ಸ್ಥಳದಲ್ಲೇ ನವೀಕರಣ, ಪ್ರೋಸಿಡಿಂಗ್ ಕಾಪಿಗಳನ್ನು ಮಾಡಿಕೊಡಬೇಕು. ಒಬ್ಬರಿಗೆ ಒಂದು ರಹದಾರಿ, ಹೆಬ್ಬೆಟ್ಟು ಗುರುತು (ಥಂಬ್ ಇಂಪ್ರೆಷನ್), ಡಿಜಿಟಲ್ ಸಹಿ, ಫೋಟೋ ತೆಗೆದು, ನವೀಕರಣ ಹಾಗೂ ವರ್ಗಾವಣೆ ಮಾಡಿಕೊಡಬೇಕು.
  2. ರಹದಾರಿ ಕಛೇರಿಯಲ್ಲಿ ನೆರೆದಿರುವ ಬೋಗಸ್ ರಹದಾರಿ ಪತ್ರಗಳ ಅವ್ಯವಹಾರದ ಬಗ್ಗೆ ಸಿ.ಓ.ಡಿ. ಅಥವಾ ಎ.ಸಿ.ಬಿ. ಯಿಂದ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು.
  3. ಇಂದಿರಾನಗರ, ಕೋರಮಂಗಲ ಕಛೇರಿಗಳಲ್ಲಿ ಅಕ್ರಮವಾಗಿ ನೋಂದಣಿ ಮಾಡಿ ಬೆಂಗಳೂರು ನಗರದಲ್ಲಿ ಸಂಚರಿಸುತ್ತಿರುವ ಆಟೋರಿಕ್ಷಾಗಳನ್ನು ಮುಟ್ಟುಗೋಲು ಹಾಕಬೇಕು. ಇದರಲ್ಲಿ ಶಾಮೀಲಾಗಿರುವ ಮದ್ಯವರ್ತಿಗಳು, ಅಧಿಕಾರಿಗಳು ಮತ್ತು ಕಂಪನಿ(ಡೀಲರ್)ಯವರ ಮೇಲೆ ಕಾನೂನು ಕ್ರಮತೆಗೆದುಕೊಳ್ಳಬೇಕು.
  4. ವಾಯಿದೆ ಮುಕ್ತಾಯಗೊಂಡು 5 ವರ್ಷ ಕಳೆದಿರುವ ರಹದಾರಿ ಪತ್ರಗಳನ್ನು ನವೀಕರಣ ಮಾಡಿಕೊಡಬೇಕು ಹಾಗೂ ಎಫ್.ಸಿ. ಇಲ್ಲದ 2 ಸ್ಟ್ರೋಕ್‌ ಆಟೋರಿಕ್ಷಾಗಳ ರಹದಾರಿ ಪತ್ರಗಳನ್ನು ವಾಹನ ಬದಲಾವಣೆ ಮಾಡಿಕೊಳ್ಳಲು ಕ್ರಮ ತೆಗೆದುಕೊಳ್ಳಬೇಕು.
  5. ರಹದಾರಿ ಕಛೇರಿಯಲ್ಲಿ ನೇರವಾಗಿ ಹಾಜರಾಗುವ ಚಾಲಕರುಗಳಿಗೆ ಕಿರುಕುಳ ನೀಡಿ, 6 ರಿಂದ 7 ಬಾರಿ ಸುತ್ತಾಡಿಸಿ, ಮದ್ಯವರ್ತಿಗಳ ಮುಖಾಂತರ ಹಾಜರಾಗುವಂತೆ ಪ್ರೇರೇಪಿಸಿ ಹಣ ಮಾಡುತ್ತಿರುವ ಆರ್‌ಟಿಓ ಅಧಿಕಾರಿಯನ್ನು ಕೂಡಲೇ ಅಮಾನತ್ತು ಮಾಡಿ, ಕಾನೂನು ರೀತಿ ಕ್ರಮಜರುಗಿಸಬೇಕು.
  6. ಆಟೋ ಮತ್ತು ಟ್ಯಾಕ್ಸಿ ಚಾಲಕರುಗಳಿಗೆ ಮಾರಕವಾಗಿರುವ ಬೈಕ್ ಟ್ಯಾಕ್ಸಿ, ಮೆಟ್ರೋ ಸ್ಟೇಷನ್‌ನಲ್ಲಿ ಎಲೆಕ್ಟಿçಕ್ ಆಟೋರಿಕ್ಷಾಗಳ ಶೇರ್ ಆಟೋ, ದ್ವಿಚಕ್ರ ವಾಹನ, ನಾಲ್ಕು ಚಕ್ರ ವಾಹನ ಬಾಡಿಗೆ ಆಧಾರವಾಗಿ ನೀಡುತ್ತಿರುವ ಆದೇಶಗಳನ್ನು ರದ್ದು ಮಾಡಬೇಕು.
  7. ಚಾಲಕರುಗಳು ತಮ್ಮ ತಮ್ಮ ಊರಿಗೆ ಕುಟುಂಬದವರನ್ನು ಕರೆದುಕೊಂಡು ಹೋಗಿಬರಲು ತಾತ್ಕಾಲಿಕ ರಹದಾರಿ ಪತ್ರ(ಟಿ.ಪಿ.) ನೀಡಬೇಕು.
  8. ಈ ಎಲ್ಲ ಭ್ರಷ್ಟಾಚಾರಗಳು ತನಿಖೆಯಾಗುವವರೆಗೂ 30 ಸಾವಿರ ಕೋಟಾ ಅಡಿಯಲ್ಲಿ ನೀಡುತ್ತಿರುವ ರಹದಾರಿ ಪತ್ರಗಳನ್ನು ತಡೆಹಿಡಿಯಬೇಕೆಂದು ಸಂಘಟನೆಯ ಬೇಡಿಕೆಯಾಗಿದೆ.

ಪ್ರತಿಭಟನೆಯಲ್ಲಿ ಎಆರ್‌ಡಿಯು ಉಪಾಧ್ಯಕ್ಷರುಗಳಾದ ಆರ್.ನವೀನ್ ಶೆಣೈ, ಬಸವರಾಜು ಸಿ., ಜಾವೀದ್‌ ಅಹಮ್ಮದ್‌, ಕಾರ್ಯದರ್ಶಿಗಳಾದ ಎನ್.ಶ್ರೀನಿವಾಸ್, ನಾಗರಾಜ್ ಎಸ್., ಚಂದ್ರಶೇಖರ್ ಡಿ. ಸೇರಿದಂತೆ ನಗರದ ವಿವಿಧ ವಲಯಗಳ ಆಟೋ ಚಾಲಕರು ಭಾಗವಹಿಸಿದ್ದರು.

Donate Janashakthi Media

One thought on “ಆಟೋರಿಕ್ಷಾ ರಹದಾರಿ ವಿತರಣೆಯಲ್ಲಿ ಭ್ರಷ್ಟಾಚಾರ-ದಲ್ಲಾಳಿಗಳ ಹಾವಳಿ: ಎಆರ್‌ಡಿಯು ಪ್ರತಿಭಟನೆ

Leave a Reply

Your email address will not be published. Required fields are marked *