ಬಂಧನದ ಊಹಾಪೋಹ | ಕೇಜ್ರಿವಾಲ್ ನಿವಾಸದ ಹೊರಗೆ ಪೊಲೀಸ್ ಭದ್ರತೆ ಹೆಚ್ಚಳ

ನವದೆಹಲಿ: ಆಪಾದಿತ ಅಬಕಾರಿ ಹಗರಣದಲ್ಲಿ ದೆಹಲಿ ಸಿಎಂ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಗುರುವಾರ ಬಂಧಿಸುವ ಸಾಧ್ಯತೆಯಿದೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಹೇಳಿಕೆ ನೀಡಿದ ನಂತರ ದೆಹಲಿ ಪೊಲೀಸರು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸಕ್ಕೆ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಕೇಜ್ರಿವಾಲ್ ಅವರ ಮನೆಗೆ ನಿಯೋಜಿಸಲಾದ ಪೊಲೀಸ್ ಸಿಬ್ಬಂದಿ ಸಂಖ್ಯೆಯನ್ನು ದ್ವಿಗುಣಗೊಳಿಸಲಾಗಿದೆ ಎಂದು ವರದಿಯಾಗಿದೆ.

ಪಕ್ಷದ ಕಾರ್ಯಕರ್ತರು ಸಿಎಂ ಮನೆಯ ಹೊರಗೆ ಜಮಾಯಿಸುವ ನಿರೀಕ್ಷೆಯಿದ್ದು, ಯಾವುದೇ ಕಾನೂನು ಸುವ್ಯವಸ್ಥೆ ಹದಗೆಡದಂತೆ ಇರಲು ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಮೂಲಗಳ ಹೇಳಿವೆ. ಜನವರಿ 3ರ ಬುಧವಾರ ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಮುಂದೆ ಹಾಜರಾಗಲು ಕೇಜ್ರಿವಾಲ್ ನಿರಾಕರಿಸಿದ್ದಾರೆ.

ಇದನ್ನೂ ಓದಿ: ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ವೇಳೆ ಮೃತಪಟ್ಟವರ ಕುಟುಂಬಕ್ಕೆ ಇನ್ನೂ ತಲುಪದ ಪರಿಹಾರ | ಗುಜರಾತ್ ಸರ್ಕಾರ ವಿರುದ್ಧ ಹೈಕೋರ್ಟ್‌ ಕಿಡಿ

ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಜನವರಿ 3 ರಂದು ಕೇಜ್ರಿವಾಲ್ ಅವರಿಗೆ ಸಮನ್ಸ್ ನೀಡಿತ್ತು. ಆದರೆ ಅವರು ತನಿಖಾ ಸಂಸ್ಥೆಯ ಮುಂದೆ ಹಾಜರಾಗಲು ಸಿದ್ಧವಾಗಿಲ್ಲ ಎಂದು ಹೇಳಿದ್ದರು. ಈ ಹಿಂದೆ ನವೆಂಬರ್ 2 ಮತ್ತು ಡಿಸೆಂಬರ್ 22 ರಂದು ಇಡಿ ಕಳುಹಿಸಿದ್ದ ಎರಡು ಸಮನ್ಸ್‌ಗಳನ್ನು ಕೂಡಾ ಸಿಎಂ ಅವರು  ನಿರ್ಲಕ್ಷಿಸಿದ್ದರು. ಅವುಗಳನ್ನು “ಕಾನೂನುಬಾಹಿರ ಮತ್ತು ರಾಜಕೀಯ ಪ್ರೇರಿತ” ಎಂದು ಅವರು ಕರೆದಿದ್ದರು.

ಬುಧವಾರ ಜಾರಿ ನಿರ್ದೇಶನಾಲಯ ಹೊರಡಿಸಿದ ಸಮನ್ಸ್‌ಗೆ ಹಾಜರಾದ ಬಗ್ಗೆ ಗುರುವಾರ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯಮಂತ್ರಿ ಅವರು ತಾನು ಯಾವುದೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ ಎಂದು ಹೇಳಿದ್ದಾರೆ. “ಬಿಜೆಪಿ ನನ್ನ ವರ್ಚಸ್ಸಿಗೆ ಕಳಂಕ ತರಲು ಬಯಸುತ್ತಿದೆ. ಬಿಜೆಪಿಯ ಉದ್ದೇಶ ನನ್ನ ತನಿಖೆಯಲ್ಲ. ಬದಲಾಗಿ, ನಾನು  ಲೋಕಸಭೆ ಚುನಾವಣೆಗೆ ಪ್ರಚಾರ ಮಾಡದಂತೆ ತಡೆಯುವುದಾಗಿದೆ. ಭ್ರಷ್ಟಾಚಾರ ನಡೆದಿದ್ದರೆ ಹಣ ಎಲ್ಲಿಗೆ ಹೋಯಿತು” ಎಂದು ಹೇಳಿದ್ದಾರೆ.

ಬುಧವಾರದಂದು, ಸಿಎಂ ಅವರು ತನಿಖಾ ಸಂಸ್ಥೆಯ ನಡೆಯು “ಅಪಾರದರ್ಶಕ ಮತ್ತು ಅನಿಯಂತ್ರಿತ” ಎಂದು ಆರೋಪಿಸಿದ್ದರು. ಜಾರಿ ನಿರ್ದೇಶನಾಲಯ ನೀಡಿದ ಸಮನ್ಸ್‌ಗೆ ಪ್ರತಿಕ್ರಿಯೆಯಾಗಿ, ತನಿಖಾ ಸಂಸ್ಥೆಗೆ ಪತ್ರವೊಂದನ್ನು ಬರೆದಿದ್ದು, ಈ ಕ್ರಮವುದ ಉರುದ್ದೇಶಪೂರಿತ ಎಂದು ಖಂಡಿಸಿದ್ದರು.

ಇದನ್ನೂ ಓದಿ: ಅದಾನಿ ಪ್ರಕರಣದಲ್ಲಿ ಸುಪ್ರಿಂ ಕೋರ್ಟ್‍ ತೀರ್ಪು ನಿರಾಶಾದಾಯಕ-ಸಿಪಿಐ(ಎಂ)

ನನ್ನ ಹಿಂದಿನ ಪ್ರತಿಕ್ರಿಯೆಗಳಿಗೆ ಪ್ರತಿಕ್ರಿಯಿಸಿ ಎಂದು ಕೇಳಿರುವ ಕೇಜ್ರಿವಾಲ್ ಅವರು, ನನಗೆ ಸಮನ್ಸ್ ನೀಡಿರುವ ಉದ್ದೇಶಿತ ವಿಚಾರಣೆ/ತನಿಖೆಯ ನೈಜ ಉದ್ದೇಶ, ವ್ಯಾಪ್ತಿ, ಸ್ವರೂಪ ಮತ್ತು ವ್ಯಾಪ್ತಿಯನ್ನು ಅರ್ಥಮಾಡಿಕೊಳ್ಳಲು ನನಗೆ ಅನುವು ಮಾಡಿಕೊಡಿ ಎಂದು ಹೇಳಿದ್ದರು. 2023ರ ನವೆಂಬರ್ 2ರಂದು ಮತ್ತು 2023ರ ಡಿಸೆಂಬರ್ 20 ರಂದು ಅವರ ಹಿಂದಿನ ಉತ್ತರಗಳಿಗೆ ಪ್ರತಿಕ್ರಿಯೆಯನ್ನು ನೀಡದೆ ಜಾರಿ ನಿರ್ದೇಶನಾಲಯವು “ಹಿಂದಿನಂತೆಯೇ ಅದೇ ರೂಪದಲ್ಲಿ ಸಮನ್ಸ್ ಕಳುಹಿಸಿದೆ” ಎಂದು ಕೇಜ್ರಿವಾಲ್ ಹೇಳಿದ್ದು, “ಆದ್ದರಿಂದ, ಈ ಸಮನ್ಸ್‌ಗಳ ಜಾರಿಗಾಗಿ ನೀವು ಯಾವುದೇ ಮಾನ್ಯ ಕಾರಣ ಅಥವಾ ಸಮರ್ಥನೆಯನ್ನು ನೀಡಿಲ್ಲ ಎಂದು ನಾನು ಭಾವಿಸುತ್ತೇನೆ” ಅವರು ತಿಳಿಸಿದ್ದರು.

“ಜಾರಿ ನಿರ್ದೇಶನಾಲಯದ ಕಾರಣ ಬಹಿರಂಗಪಡಿಸದ ಮತ್ತು ಈ ಹಿಂದೆ ನೀಡಿದ್ದ ಉತ್ತರಗಳಿಗೆ ಪ್ರತಿಕ್ರಿಯಿಸದ ವಿಧಾನವು ಕಾನೂನಾತ್ಮಕವಾಗಿ ಅಥವಾ ನ್ಯಾಯಯುತವಾಗಿ ಇರಲು ಸಾಧ್ಯವಿಲ್ಲ. ನಿಮ್ಮ ಹಠಮಾರಿತನವು ನ್ಯಾಯಾಧೀಶರು, ತೀರ್ಪುಗಾರರು ಮತ್ತು ಮರಣದಂಡನೆಕಾರರ ಪಾತ್ರವನ್ನು ವಹಿಸುವುದಕ್ಕೆ ಸಮನಾಗಿರುತ್ತದೆ. ಇದು ಕಾನೂನು ಇರುವ ನಮ್ಮ ದೇಶದಲ್ಲಿ ಸ್ವೀಕಾರಾರ್ಹವಲ್ಲ” ಎಂದು ಅವರು ಹೇಳಿದ್ದರು.

ದೆಹಲಿಯ ಮೂರು ರಾಜ್ಯಸಭಾ ಸ್ಥಾನಗಳಿಗೆ ಜನವರಿ 19 ರಂದು ಚುನಾವಣೆ ನಡೆಯಲಿದೆ ಎಂದು ಸಿಎಂ ತನಿಖಾ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಆಮ್ ಆದ್ಮಿ ಪಕ್ಷದ ಸಂಚಾಲಕರಾಗಿ ಅವರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ತನಗೆ ಓಡಾಡಲು ಇವೆ ಎಂದು ಅವರು ಹೇಳಿದ್ದಾರೆ. ಜೊತೆಗೆ ಗಣರಾಜ್ಯೋತ್ಸವದ ತಯಾರಿಯನ್ನೂ ಕೂಡಾ ತನಗೆ ಮಾಡಬೇಕಿದೆ ಎಂದು ಅವರು ಹೇಳಿದ್ದು, ಜಾರಿ ನಿರ್ದೇಶನಾಯಲ ಈ ಹಿಂದೆ ಎತ್ತಿದ್ದ ಆಕ್ಷೇಪಣೆಗಳಿಗೆ ಪ್ರತಿಕ್ರಿಯೆ ನೀಡುವಂತೆ ಅದಕ್ಕೆ ಒತ್ತಾಯಿಸಿದ್ದಾರೆ.

ವಿಡಿಯೊ ನೋಡಿ: ಬರಗಾಲದಿಂದ ರೈತರು ಕಂಗಾಲು : ರಾಮ ಭಜನೆಯಲ್ಲಿ ಕೇಂದ್ರ ಸರ್ಕಾರ, ನಿದ್ದೆಗೆ ಜಾರಿದ ರಾಜ್ಯ ಸರ್ಕಾರ

Donate Janashakthi Media

Leave a Reply

Your email address will not be published. Required fields are marked *