ಗ್ಯಾರೆಂಟಿ ಯೋಜನೆ ಬಂದ್ ಮಾಡಿ ಎನ್ನುವವರು ಜನವಿರೋಧಿಗಳು; ಪ್ರಿಯಾಂಕ್ ಖರ್ಗೆ

ಕಲಬುರಗಿ : ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಜೂಜು, ಮಟ್ಕಾ, ಕ್ರಿಕೆಟ್ ಬೆಟ್ಟಿಂಗ್ ಸೇರಿದಂತೆ ಹಲವು ಅಕ್ರಮ ಚಟುವಟಿಕೆ ಗಳಲ್ಲಿ ಆರೋಪಿಯಾಗಿದ್ದ ಕ್ರಿಮಿನಲ್‌ಗಳಿಗೆ ಕೂಡಾ ಮತಚಲಾವಣೆಯಾಗಿವೆ ಎಂದರೆ ಅಚ್ಚರಿಯಾಗುತ್ತದೆ. ನೀವೆಲ್ಲ ನನ್ನನ್ನು ಗೆಲ್ಲಿಸಿದಿರಿ. ಒಂದು ವೇಳೆ ಅಂತಹ ವ್ಯಕ್ತಿ ಗೆದ್ದಿದ್ದರೆ, ಗ್ರಾಮೀಣ ಭಾಗದ ಜನರ, ಯುವಕರ ಹಾಗೂ ಮಹಿಳೆಯರ ಗತಿ ಏನಾಗುತ್ತಿತ್ತು ಎಂದು ಕಳವಳ ವ್ಯಕ್ತಪಡಿಸಿದರು. ಜನವಿರೋಧಿಗಳು

ಹೆಬ್ಬಾಳ ಗ್ರಾಮದಲ್ಲಿ ನಡೆದ ಚುನಾವಣೆ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಪರ ಮತಯಾಚಿಸಿ ಪ್ರಿಯಾಂಕ ಖರ್ಗೆ ಮಾತನಾಡಿದರು.

ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ನಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ಅದಕ್ಕೆ ಈಗ ಮತ್ತೆ ಮತ ಕೇಳಲು ಬಂದಿದ್ದೇವೆ. ನಾವು ಮಾಡಿದ ಕೆಲಸಕ್ಕೆ ಕೂಲಿ ಕೊಡಿ ಎಂದು ಮನವಿ ಮಾಡುತ್ತಿದ್ದೇವೆ. ಆದರೆ ಬಿಜೆಪಿಯವರ ಈ ಎಲ್ಲಾ ಯೋಜನೆಗಳನ್ನು ಬಿಟ್ಟಿ ಭಾಗ್ಯ ಎಂದು ಟೀಕಿಸಿ ಬಂದ್ ಮಾಡಿ ಎನ್ನುತ್ತಿದ್ದಾರೆ. ಅವರು ಜನರ ವಿರೋಧಿಗಳು ಅವರು ಮತ್ತೆ ಅಧಿಕಾರಕ್ಕೆ ಬರದಂತೆ ತಡೆಯಲು ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಅವರಿಗೆ ಮತ ಹಾಕುವಂತೆ ಮನವಿ ಮಾಡಿದರು. ಜನವಿರೋಧಿಗಳು

ಮಾಜಿ ಜಿಪಂ ಸದಸ್ಯ ರಮೇಶ್ ಮರಗೋಳ ಮಾತನಾಡಿ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಳೆದ ಚುನಾವಣೆಯಲ್ಲಿ ಸೋಲಾಯಿತು. ಹಿರಿಯ ಜೀವ ಬಹಳ ನೊಂದಿದ್ದಾರೆ. ನಿನ್ನೆ ಅಫಜಲ್ ಪುರದಲ್ಲಿ ಭಾವುಕರಾಗಿ ನೊಂದು ಮಾತನಾಡಿದ್ದಾರೆ. 9 ಸಲ ಗೆದ್ದಿದ್ದ ಸೋಲಿಲ್ಲದ ಸರದಾರರು ನೊಂದರೆ ಶಾಪ ತಟ್ಟುತ್ತದೆ ಎಂದು ಹೇಳಿದರು.

ಸರ್ಕಾರದ ಯೋಜನೆಗಳ ಲಾಭ ಪಡೆದಿರುವ ಮಹಿಳೆಯರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ಅವರಿಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.

ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು ಮಾತನಾಡಿ ವಿಶ್ವನಾಥ ಪಾಟೀಲ ಹೆಬ್ಬಾಳ ತ್ಯಾಗಮಯಿ ತನಗೆ ಒದಗಿ ಬಂದ ರಾಜಕೀಯ ಅವಕಾಶವನ್ನು ಮತ್ತೊಬ್ಬರಿಗೆ ನೀಡುವಂತೆ ಅಂದಿನ ಸಿಎಂ ರಾಮಕೃಷ್ಣ ಹೆಗಡೆ ಯವರಿಗೆ ಮನವಿ ಮಾಡಿದ್ದರು. ಅಂತಹ ನಾಯಕನ ಗ್ರಾಮದವರಾದ ನೀವೆಲ್ಲ ಸೇರಿ ರಾಧಾಕೃಷ್ಣ ಅವರಿಗೆ ಮತ ಹಾಕಿ ಎಂದರು. ಜನವಿರೋಧಿಗಳು

ಇದನ್ನು ಓದಿ : ಬಿಜೆಪಿ ಪ್ರಣಾಳಿಕೆಯಲ್ಲಿ ಶಾಲಾ ಶಿಕ್ಷಣದ ಬಲವರ್ಧನೆಯ ಗ್ಯಾರಂಟಿ ಶೂನ್ಯ; ಬಸವರಾಜ ಗುರಿಕಾರ

ಖರ್ಗೆ ಸಾಹೇಬರಿಗೆ ಮುಂದಿನ ಪ್ರಧಾನಿ ಆಗುವ ಅವಕಾಶ ಇದೆ. ನೀವು ರಾಧಾಕೃಷ್ಣ ಅವರಿಗೆ ಬೆಂಬಲಿಸಿದರೆ ಇದು ಸಾಧ್ಯ. ಬಿಜೆಪಿಯವರಿಗೆ ಸೋಲು ಪಕ್ಕಾ ಅನಿಸಿದೆ. ಹಾಗಾಗಿ, ಮೋದಿ ಮತ್ತೊಮ್ಮೆ ಕಲಬುರಗಿ ಗೆ ಬರುತ್ತಿದ್ದಾರೆ. ಮೋದಿ ಅಲ್ಲ ಅವರ ಅಪ್ಪ ಬಂದರೂ ಈ ಸಲ ಕಲಬುರಗಿ ಫಲಿತಾಂಶ ಬದಲಾಯಿಸಲು ಸಾಧ್ಯವಿಲ್ಲ ಎಂದರು.

ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾಳ ಮಾತನಾಡಿ,ಸಂಸದ ಉಮೇಶ ಜಾಧವ್ ನನ್ನು ಬಿಜೆಪಿಗೆ ತರಲು ಪ್ರಮುಖ ಪಾತ್ರವಹಿಸಿದ್ದೆ. ಆದರೆ, ಅವನು ಸಾರ್ವಜನಿಕ ಜೀವನದಲ್ಲಿ ಇರಲು ಯೋಗ್ಯ ವ್ಯಕ್ತಿ ಅಲ್ಲ. ಅವನ ಬಗ್ಗೆ ಜಾಸ್ತಿ ಹೇಳಿದರೆ ನನ್ನ ಗೌರವ ಕಡಿಮೆಯಾಗುತ್ತದೆ. ಬಿಜೆಪಿಯಂತ ಭ್ರಷ್ಟ ಪಕ್ಷ ಮತ್ತೊಂದಿಲ್ಲ. ಹಾಗಾಗಿ ನಾನು ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿದೆ. ಪ್ರಜಾಪ್ರಭುತ್ವ ಬೇಕಿದ್ದರೆ ನೀವೆಲ್ಲ ಕಾಂಗ್ರೆಸ್ ಗೆ ಮತ ನೀಡಿ, ಇಲ್ಲದಿದ್ದರೆ ಸರ್ವಾಧಿಕಾರದ ಸರ್ಕಾರ ಬರುತ್ತದೆ ಎಂದು ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾಳ ಎಚ್ಚರಿಸಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅರ್ಹ ವ್ಯಕ್ತಿಗೆ ಟಿಕೇಟು ನೀಡಿ ಎಂದು ಬಿಜೆಪಿಯವರಿಗೆ ಹೇಳಿದ್ದೆ. ಆದರೆ ಮಣಿಕಂಠ ರಾಠೋಡನಿಗೆ ಟಿಕೇಟ್ ಕೊಟ್ಟರು. ಅವನು ಆಶೀರ್ವಾದ ಬೇಡಲು ನನ್ನ ಮನೆಗೆ ಬಂದಿದ್ದ. ನಿನ್ನಂತ ಕ್ರಿಮಿನಲ್ ಗಳು ನನ್ನ ಮನೆಗೆ ಬರಬಾರದು ಎಂದು ಹೇಳಿ ಹೊರಗೆ ಕಳಿಸಿದ್ದೆ ಎಂದು ಪಾಟೀಲ್ ಹೇಳಿದರು.

ವೇದಿಕೆಯ ಮೇಲೆ ಭೀಮಣ್ಣ ಸಾಲಿ, ರಮೇಶ್ ಮರಗೋಳ, ರಾಜೇಶ್ ಗುತ್ತೇದಾರ, ಸುನೀಲ್ ದೊಡ್ಡಮನಿ, ಡಾ ಕಾಂತಾ , ಶಂಭುಲಿಂಗ ಗುಂಡಗುರ್ತಿ,ಜಯಪ್ರಕಾಶ ಕಮಕನೂರು, ನಬೀ ಸಾಬ್ ಕೋಡ್ಲಿ, ಪವನ್ ಪಾಟೀಲ್ ಇದ್ದರು. ಜನವಿರೋಧಿಗಳು

ಇದನ್ನು ನೋಡಿ : ಚಾಮರಾಜನಗರ ಲೋಕಸಭಾ ಕ್ಷೇತ್ರ: ಬಿಜೆಪಿ ಎರಡನೇ ಬಾರಿ ಗೆಲ್ಲುತ್ತಾ ? ಮರಳಿ ಅಧಿಕಾರ ಸ್ಥಾಪಿಸುತ್ತಾ ಕಾಂಗ್ರೆಸ್?!

Donate Janashakthi Media

Leave a Reply

Your email address will not be published. Required fields are marked *