ಅಂತರರಾಜ್ಯ ಜಲವಿವಾದ ಕಾಯ್ದೆ ತಿದ್ದುಪಡಿ ಅಗತ್ಯವಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಅಂತರರಾಜ್ಯ ಜಲವಿವಾದ ಕಾಯ್ದೆಯನ್ನು ಸಂಪೂರ್ಣವಾಗಿ ತಿದ್ದುಪಡಿ ಮಾಡುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜಲ ಜೀವನ್ ಮಿಷನ್ ಹಾಗೂ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಗಳ ಕುರಿತಂತೆ ದಕ್ಷಿಣ ಭಾರತದ ರಾಜ್ಯಗಳ ಪ್ರಾದೇಶಿಕ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಲ ವಿವಾದಗಳಿಗೆ ಸಂಬಂಧಿಸಿದಂತೆ ಸಂಕುಚಿತ ರಾಜಕಾರಣದ ಬದಲಿಗೆ ಹೆಚ್ಚು ಜನರಿಗೆ ನೀರು ಲಭ್ಯವಾಗಲು ಕಾಯ್ದೆಯಲ್ಲಿ ತಿದ್ದುಪಡಿ ತರಬೇಕು. ನದಿ ಪಾತ್ರಗಳ ನಿರ್ವಹಣೆ ಮಾತ್ರ ಇದಕ್ಕೆ ಪರಿಹಾರ ಎಂದಿದ್ದಾರೆ.

ನೀರಿನಿಂದ ಸುಸ್ಥಿರ ಜೀವನೋಪಾಯ

ಜನರಿಗೆ ನೀರು ಒದಗಿಸುವುದು ಸರ್ಕಾರದ ಕರ್ತವ್ಯ. ನೀರಿನ ವಿಚಾರದಲ್ಲಿ ಎಲ್ಲರೂ ಒಮ್ಮತದಿಂದ ಕಾರ್ಯನಿರ್ವಹಿಸಬೇಕು. ನೀರು ಸರಬರಾಜಿನ ಮೂಲಕ ಸುಸ್ಥಿರ ಜೀವನೋಪಾಯವನ್ನು ಕಲ್ಪಿಸಲು ಸಾಧ್ಯ ಎನ್ನುವುದು  ಪ್ರಧಾನಿಗಳ ಗುರಿಯಾಗಿದೆ. ಇದನ್ನು ಈಡೇರಿಸುವ ನಿಟ್ಟಿನಲ್ಲಿ ಶ್ರಮಿಸಬೇಕಿದೆ ಎಂದು ತಿಳಿಸಿದರು.

ನೀರಿನ ದುರ್ಬಳಕೆಗೆ ಕ್ರಮ

ನೀರಾವರಿಯಲ್ಲಿ ಉನ್ನತ ಗುಣಮಟ್ಟದ ದಕ್ಷತೆಯನ್ನು ತರಲು ಪ್ರಯತ್ನ ಮಾಡಬೇಕು. ನೀರಾವರಿಯಲ್ಲಿ ಸಾಕಷ್ಟು ಜಲಮಾರ್ಗಗಳಲ್ಲಿ ನೀರು ದುರುಪಯೋಗವಾಗುತ್ತಿದೆ. ರಾಷ್ಟ್ರ ಮಟ್ಟದಲ್ಲಿ ನಮ್ಮ ಕಾಲುವೆಗಳ ಸಾಮರ್ಥ್ಯ ಶೇಕಡ 45 ರಷ್ಟಿದೆ. ಕಾಲುವೆಗಳಲ್ಲಿ ನೀರು ಹರಿಸುವ ಸಾಮರ್ಥ್ಯದಲ್ಲಿ ಶೇಕಡ 55ರಷ್ಟು ಅಂತರವಿದೆ. ಇವುಗಳನ್ನು ಸರಿಪಡಿಸಿದರೆ ಹೆಚ್ಚಿನ ನೀರು ಲಭ್ಯವಾಗಲಿದೆ ಎಂದರು.

ಜಲಾನಯನ ಯೋಜನೆಗಳು

ನೀರಿನ ಝರಿಗಳನ್ನು ಜೀವಂತವಾಗಿಡುವ ಜಲಾನಯನ ಯೋಜನೆಗಳು ಸೂಕ್ತವಾಗಿ ಯೋಜಿಸಲ್ಪಡದೆ, ನೀರಿನ ಹರಿವಿಗೆ ತಡೆಯೊಡ್ಡುತ್ತಿವೆ. ನೀರು ವ್ಯರ್ಥ ವಾಗಿ ಸಮುದ್ರ ಸೇರುತ್ತದೆ ಎನ್ನುತ್ತೇವೆ. ಆದರೆ ನಾವು ವಿಜ್ಞಾನ ವನ್ನು ಮರೆಯುತ್ತಿದ್ದೇವೆ. ಕನಿಷ್ಠ ಶೇ 30 ರಷ್ಟು ಸಿಹಿ ನೀರು ಸಮುದ್ರ ಸೇರಿದರೆ ಮಾತ್ರ ಶೇ 60 ರಷ್ಟು ಉಪ್ಪು ನೀರು ಆವಿಯಾಗಳು ಸಾಧ್ಯವಾಗಿ ಮಳೆಯಾಗುತ್ತದೆ. ಈ ಸರಳ ಸತ್ಯದ ಅರಿವು ಯೋಜನೆ ರೂಪಿಸುವ ಎಲ್ಲರಿಗೂ ಅರಿವಾಗಬೇಕು.

ಪರಿಸರದ ಸವಾಲುಗಳನ್ನು ನಾವು ಎದುರಿಸಬೇಕಿದೆ. ನದಿಗಳು ಈಗ ಋತುಕಾಲಿಕವಾಗಿವೆ. ಸದಾ ಹರಿಯುವ ನದಿಗಳು ಈಗಿಲ್ಲದಂತಾಗಿದೆ. ನದಿಗಳು ಸಮುದ್ರವನ್ನೇ ಸೇರುತ್ತಿಲ್ಲ. ಮಧ್ಯದಲ್ಲಿಯೇ ಒಣಗುತ್ತಿವೆ. ಈ ರೀತಿಯ ಸವಾಲುಗಳಿವೆ.

ಜಲಜೀವನ್ ಮಿಷನ್: ಕಾಲಮಿತಿಯಲ್ಲಿ ಗುರಿ ಮುಟ್ಟಲು ಶ್ರಮ

ಕರ್ನಾಟಕದಲ್ಲಿ ಜಲಜೀವನ್ ಮಿಷನ್ ಯೋಜನೆಯನ್ನು ಅನುಷ್ಠಾನ ಮಾಡಲು ಅವಿರತವಾಗಿ ಶ್ರಮಿಸಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು. 97.91 ಲಕ್ಷ ಗ್ರಾಮೀಣ ಮನೆಗಳಿವೆ. ಪ್ರಾರಂಭದಲ್ಲಿ 25 ಲಕ್ಷ ಮನೆಗಳಿಗೆ ನಲ್ಲಿ ಅಳವಡಿಸಲು ಯೋಜಿಸಲಾಗಿತ್ತು. ಸಾಧನೆ 18 ಲಕ್ಷವಾಗಿದೆ. ಕೆಲವೇ ತಿಂಗಳುಗಳಲ್ಲಿ ಗುರಿ ಮುಟ್ಟಲಾಗುವುದು. ಜಲಜೀವನ್ ಮಿಷನ್ ಪ್ರಾರಂಭಗೊಂಡ ನಂತರ 22 ಲಕ್ಷ ಮನೆಗಳಿಗೆ ನೀರಿನ ಸಂಪರ್ಕ ಒದಗಿಸಲಾಗಿದೆ. 46.2 ಲಕ್ಷ ಒಟ್ಟು ವ್ಯಾಪ್ತಿ ಇದ್ದು, ಉಳಿದ 50 ಲಕ್ಷ ಮನೆಗಳಿಗೆ ಸಂಪರ್ಕ ಒಡಗಿಸಬೇಕಿದೆ. ಮುಂದಿನ ವರ್ಷ ಇದರ ಅನುಷ್ಠಾನಕ್ಕೆ ಆಯವ್ಯಯ ದಲ್ಲಿ ಅನುದಾನವನ್ನು ಮೀಸಲಿರಿಸಿದೆ. ಅನುಷ್ಠಾನದಲ್ಲಿ ಕೆಲವು ತೊಡಕುಗಳಿದ್ದು, ಅವುಗಳನ್ನು ನಿವಾರಿಸಲಾಗಿದೆ. ಈ ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಕ್ಕೆ ತರಲು ತಾವು ಖುದ್ದು ಯೋಜನೆಯ ಪ್ರಗತಿಯ ಮೇಲ್ವಿಚಾರಣೆ ಮಾಡುತ್ತಿರುವುದಾಗಿ ತಿಳಿಸಿದರು.

ನಿಗದಿತ ಸಮಯದಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲು ವೇಗವನ್ನು ಹೆಚ್ಚಿಸಿ 25 ಲಕ್ಷ ಮನೆಗಳಿಗೆ ಸಂಪರ್ಕ ಒದಗಿಸುವ ಗುರಿಯನ್ನು 2-3 ತಿಂಗಳೂಳಗೆ ಸಾಧಿಸಲಾಗುವುದು ಎಂದರು. ಮುಂದಿನ ವರ್ಷದ ಗುರಿಯನ್ನು ಶೇ 100 ರಷ್ಟು ಮುಟ್ಟಲು ಸಹ ಈಗಾಗಲೇ ಕಾರ್ಯತಂತ್ರ ರೂಪಿಸಲಾಗಿದೆ ಎಂದರು.

ಪುನರ್ ಪರಿಶೀಲಿಸುವ ಅಗತ್ಯ

ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ನೀರು ಸರಬರಾಜಿಗೆ ಸೂಕ್ತ ವ್ಯವಸ್ಥೆಗಳಿಲ್ಲ. ಜಲ ನಿರ್ವಹಣೆಯನ್ನು ಪುನರ್ ಪರಿಶೀಲಿಸುವ ಅಗತ್ಯವಿದೆ. ನಮ್ಮ ನೆಚ್ಚಿನ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಿರುವ ಪ್ರಥಮ ಪ್ರಧಾನಿಗಳು. ಜಲಜೀವನ್ ಮಿಷನ್ ಯೋಜನೆಯಲ್ಲ. ಇದೊಂದು ಗುರಿ. ಈ ಗುರಿಯನ್ನು ಮುಟ್ಟಲು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು. ಇತರೆ ಯೋಜನೆಗಳ ಅನುಷ್ಠಾನಕ್ಕೆ ತನ್ನದೇ ನಿಯಮಗಳಿವೆ. ಮಿಷನ್ ಮಾದರಿಯಲ್ಲಿ ಕಟ್ಟಕಡೆಯ ವ್ಯಕ್ತಿಗೆ ನೀರು ತಲುಪಿಸುವ ಹೊಣೆ ನಮ್ಮ ಮೇಲಿದೆ ಎಂದರು.

ಜಲಯೋಜನೆಗಳನ್ನು ಸಮಗ್ರವಾಗಿ ರೂಪಿಸಬೇಕು

ಜಲ ಸಂಪನ್ಮೂಲಗಳು ರಾಜ್ಯಗಳಿಗೆ ಸೇರಲ್ಪಟ್ಟಿವೆ ಎನ್ನುವುದನ್ನು ಎಲ್ಲರೂ ಒಪ್ಪಿಕೊಂಡು ಕಾರ್ಯನಿರ್ವಹಿಸಬೇಕಾದ ಅಗತ್ಯವಿದೆ. ನೀರು ಸ್ಥಳೀಯ ಹಾಗೂ ಜಾಗತಿಕ ಮಟ್ಟದ ಸಮಸ್ಯೆಯಾಗಿದೆ. ಸ್ಥಳೀಯವಾಗಿ ಸಮಸ್ಯೆ ಗಳನ್ನು ಬಗೆಹರಿಸಿಕೊಳ್ಳಬೇಕಿದೆ. ಅಭಿವೃದ್ಧಿಶೀಲ ರಾಷ್ಟ್ರವಾದ ನಮ್ಮಲ್ಲಿ, ವಿಭಿನ್ನ ಆರ್ಥಿಕ ಸ್ಥರಗಳಿವೆ. ಇವೆಲ್ಲವನ್ನೂ ಪರಿಗಣಿಸಿ ಜಲ ಯೋಜನೆಗಳನ್ನು ನಾವು ಸಮಗ್ರವಾಗಿ ರೂಪಿಸಬೇಕು ಎಂದರು.

ನೀರಿನೊಂದಿಗೆ ಭಾವನಾತ್ಮಕ ಸಂಬಂಧ ನಮ್ಮದಾಗಿದ್ದು, ಜಲಮೂಲಗಳು ಬಳಕೆಗೆ ವಿವಿಧ ಭಾಗೀದಾರರ ಸಮನ್ವಯವೂ ಅತ್ಯಗತ್ಯ ಎಂದರು.

Donate Janashakthi Media

Leave a Reply

Your email address will not be published. Required fields are marked *