ಮೈಸೂರು | ‘ಬಂಡವಾಳಶಾಹಿ ವ್ಯವಸ್ಥೆ ವಿರುದ್ಧ ಹೋರಾಡಲು ಮಾರ್ಕ್ಸ್‌ ಜೊತೆಗೆ ಅಂಬೇಡ್ಕರ್ ಬೇಕು -ರತಿರಾವ್

ಮೈಸೂರು: ನಗರದ ಕಿರುರಂಗಮಂದಿರದಲ್ಲಿ ಭಾನುವಾರ ಮುಕ್ತಾಯಗೊಂಡ ‘ಸಮುದಾಯ ಮೈಸೂರು ರಂಗೋತ್ಸವ’ದಲ್ಲಿ  ಮಾತನಾಡಿದ ಅಖಿಲ ಭಾರತ ಪ್ರಗತಿಪರ ಮಹಿಳಾ ವೇದಿಕೆ ಅಧ್ಯಕ್ಷೆ ರತಿರಾವ್  ಅವರು ಬಂಡವಾಳಶಾಹಿ ವ್ಯವಸ್ಥೆ ತೀವ್ರವಾಗಿ ಬೆಳೆಯುತ್ತಿದ್ದು, ಅದರ ವಿರುದ್ಧ ಹೋರಾಡಲು ಸಮಾಜವಾದಿಗಳು, ಕಮ್ಯುನಿಸ್ಟರು, ರೈತರು, ಪ್ರಗತಿಪರರು ಅಂಬೇಡ್ಕರ್‌ ಅವರನ್ನು ಒಳಗೊಳ್ಳಬೇಕಿದೆ. ಮಾರ್ಕ್ಸ್‌ವಾದಿಗಳು ಅಂಬೇಡ್ಕರ್‌ವಾದಿಗಳೂ ಆಗಬೇಕಿದೆ’ ಎಂದು  ಪ್ರತಿಪಾದಿಸಿದರು.  ಮೈಸೂರು

ಇದನ್ನೂ ಓದಿ : ಚೆನ್ನೈ | ಬಿಜೆಪಿ–ಎಐಎಡಿಎಂಕೆ ಎಸ್‌ಐಆರ್ ಬಳಸಿ ಚುನಾವಣೆ ಗೆಲ್ಲಲು ಯೋಜನೆ : ಸ್ಟಾಲಿನ್

‘ಕಾರ್ಲ್‌ಮಾರ್ಕ್ಸ್, ಫೆಡ್ರಿಕ್‌ ಏಂಗೆಲ್ಸ್, ವ್ಲಾಡಿಮಿರ್ ಲೆನಿನ್‌ ತತ್ವಗಳ ಜೊತೆಗೆ ದೇಶದ ಬುದ್ಧ, ಬಸವ, ಅಂಬೇಡ್ಕರ್‌ ತತ್ವ ಹಾಗೂ ಹೋರಾಟದ ಮಾದರಿನ್ನೂ ಅನುಸರಿಸಬೇಕಿದೆ’ ಎಂದರು.  ‘ಸ್ವಾತಂತ್ರ್ಯ ನಂತರ ದೇಶದ್ದು ಸಮಾಜವಾದಿ ಆರ್ಥಿಕತೆಯಾಗಿತ್ತು. ಶೇ 52ರಷ್ಟು ಸಾರ್ವಜನಿಕ ಉದ್ಯಮಗಳಿದ್ದವು. ಈಗ ಲಾಭದಾಯಕವಲ್ಲವೆಂದು ಎಲ್ಲವನ್ನೂ ಖಾಸಗೀಕರಣ ಮಾಡಲಾಗುತ್ತಿದೆ. ಸರ್ಕಾರಿ ನೌಕರಿಗಳು ಇಲ್ಲವಾಗುತ್ತಿವೆ. ಎಲ್ಲ ಕ್ಷೇತ್ರಗಳೂ ಖಾಸಗಿಯವರ ಪಾಲಾಗುತ್ತಿವೆ. ಅದರಿಂದ ಶೋಷಣೆ ಮತ್ತಷ್ಟು ಹೆಚ್ಚಾಗಿದೆ’ ಎಂದು ಅಭಿಪ್ರಾಯಪಟ್ಟರು.  ಮೈಸೂರು

ಶೋಷಿಸುತ್ತಿದ್ದಾರೆ: ‘ಶೇ 1ರಷ್ಟಿರುವ ಬಂಡವಾಳಶಾಹಿಗಳು ಶೇ 90ಕ್ಕೂ ಹೆಚ್ಚಿರುವ ಬಡವರು, ಜನಸಾಮಾನ್ಯರನ್ನು ಶೋಷಿಸುತ್ತಿದ್ದಾರೆ. ಸಮಾಜವು ಮತ್ತಷ್ಟು ಸಂಪ್ರದಾಯವಾದಿಯಾಗಿದ್ದು, ಮರ್ಯಾದೆಗೇಡು ಹತ್ಯೆ, ದಲಿತರು– ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ಸವಾಲುಗಳನ್ನು ಎದುರಿಸಲು ಅಂಬೇಡ್ಕರ್ ಮಾರ್ಗ ಅಗತ್ಯವಾಗಿದೆ’ ಎಂದರು.

ರಂಗಕರ್ಮಿಗಳಾದ ಪ್ರಕಾಶ್‌ ಶೆಣೈ, ಪ್ರೊ.ಎಸ್‌.ಆರ್‌.ರಮೇಶ್‌, ನಂದಾ ಹಳೆಮನೆ ಅವರನ್ನು ಸನ್ಮಾನಿಸಲಾಯಿತು. ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಮೈಮ್‌ ರಮೇಶ್‌ ಅವರನ್ನು ಅಭಿನಂದಿಸಲಾಯಿತು.

ವಿಮರ್ಶಕ ಪ್ರೊ.ಕಾಳೇಗೌಡ ನಾಗವಾರ, ಸಾಮಾಜಿಕ ಹೋರಾಟಗಾರ ಅಹಿಂದ  ಜವರಪ್ಪ, ಸುಶೀಲಾ ಬಸು, ಸಮುದಾಯ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಮನೋಜ್‌ ವಾಮಂಜೂರು, ರಂಗಾಯಣ ನಿರ್ದೇಶಕ ಸತೀಶ್‌ ತಿ‍ಪಟೂರು ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ಮಹಾಲಿಂಗು, ಅಮ್ಮ ರಾಮಚಂದ್ರ, ಭವತಾರಿಣಿ, ರಮೇಶ್‌ ತಾಯೂರು ತಂಡವರು ‘ಜನಾಶಯ ಗೀತ ಗಾಯನ’ ನಡೆಸಿಕೊಟ್ಟರು. ನಂತರ ಪಿ.ಲಂಕೇಶ್‌ ಅವರ ‘ಕಲ್ಲು ಕರಗುವ ಸಮಯ’ ಕಥೆ ಆಧರಿತ ನಾಟಕವನ್ನು ಕೆ.ಆರ್.ಸುಮತಿ ನಿರ್ದೇಶನದಲ್ಲಿ ‘ಜನಮನ ಸಾಂಸ್ಕೃತಿಕ ಸಂಘಟನೆ’ ಕಲಾವಿದರು ಅಭಿನಯಿಸಿದರು.

‘ಶಾಲೆಗಳಲ್ಲಿ ವಿಜ್ಞಾನವನ್ನು ನಾಟಕಗಳ ಮೂಲಕವೇ ಕಲಿಸಬೇಕು. ವಿಜ್ಞಾನವನ್ನು ಕಥನ ಶೈಲಿಯಲ್ಲಿ ಹೇಳುವ ಬಗೆಯೇ ನಾಟಕವಾಗಿ ಬಿಡುತ್ತದೆ. ವಿಜ್ಞಾನ ಸಂವಹನ ಏರ್ಪಡುತ್ತದೆ. ವೈಚಾರಿಕತೆಯೂ ಮೂಡುತ್ತದೆ’ ಎಂದು ವಿಜ್ಞಾನಿ ಸಬ್ಯಸಾಚಿ ಚಟರ್ಜಿ ಹೇಳಿದರು.  ವಿಚಾರಸಂಕಿರಣದಲ್ಲಿ ‘ರಂಗಭೂಮಿಯಲ್ಲಿ ವಿಜ್ಞಾನ ಸಂವಹನ’ ಕುರಿತು ಮಾತನಾಡಿ ‘ವಿಜ್ಞಾನವನ್ನು ಸಂಭ್ರಮಿಸಬೇಕು ಎಂದರೆ ಅದು ಜನರನ್ನು ತಲುಪಬೇಕು. ಕಥನ ನಾಟಕಗಳು ಉತ್ತಮ ಮಾದರಿಗಳಾಗಿವೆ’ ಎಂದರು.  ‘ದಶಕಗಳ ಕಾಲ ಪ್ರಯೋಗಾಲಯದಲ್ಲಿ ಶ್ರಮಿಸಿ ಆವಿಷ್ಕರಿಸಿದ ವಿಜ್ಞಾನಿಯ ಸಾಧನೆಯನ್ನು ಒಂದು ಗಂಟೆಯಲ್ಲಿ ಜನರಿಗೆ ನಾಟಕದ ಮೂಲಕ ತಲು‍ಪಿಸಬಿಡಬಹುದು. ಅದಕ್ಕೆ ಯಂತ್ರಗಳು ಬೇಕಿಲ್ಲ. ಗೆಲಿಲಿಯೊ ಬದುಕನ್ನು ನಾಟಕ ಮಾಡಿದರೆ ಎಷ್ಟೊಂದು ವಿಷಯವನ್ನು ಪರಿಣಾಮಕಾರಿಯಾಗಿ ಜನರಿಗೆ ಹೇಳಬಹುದು’ ಎಂದು ಉದಾಹರಿಸಿದರು.  ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಟಿ.ಗುರುರಾಜ್ ವಿಚಾರಸಂಕಿರಣ ಉದ್ಘಾಟಿಸಿದರು.  ವಿಮರ್ಶಕ ಪ್ರೊ.ಓ.ಎಲ್.ನಾಗಭೂಷಣಸ್ವಾಮಿ ರಂಗಕರ್ಮಿ ಪ್ರೊ.ಎಚ್‌.ಎಸ್‌.ಉಮೇಶ್‌ ಸಮುದಾಯ ಕರ್ನಾಟಕದ ಪ್ರೊ.ಕೆ.‍ಪಿ.ವಾಸುದೇವನ್ ಪಾಲ್ಗೊಂಡಿದ್ದರು.

ಇದನ್ನೂ ನೋಡಿ : ದ್ವೇಷ ಬಿತ್ತುವ ಪಥಸಂಚಲನ ಬೇಡ – ಸಂವಿಧಾನ ದೀವಿಗೆ ಬೆಳಗುವ ಸೌಹಾರ್ದ ನಡಿಗೆ ಬೇಕು Janashakthi Media

Donate Janashakthi Media

Leave a Reply

Your email address will not be published. Required fields are marked *