ಬೆಂಗಳೂರು: ಯಲಹಂಕ ಸಮೀಪದ ವಿನಾಯಕ ನಗರದಲ್ಲಿ ಅಮೆಜಾನ್ ಕಂಪನಿಯು ರ್ಮಿಸಿರುವ 11 ಲಕ್ಷ ಚದರ ಅಡಿ ವಿಸ್ತಾರದ ಸುಸಜ್ಜಿತ ಕಾರ್ಪೊರೇಟ್ ಪ್ರಧಾನ ಕಚೇರಿಯನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಇಂದು ಉದ್ಘಾಟಿಸಿದರು. ಬೆಂಗಳೂರು
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇದು ಅಮೆಜಾನ್ ಕಂಪನಿಯ 10ನೇಯ ಕಾರ್ಪೊರೇಟ್ ಕಚೇರಿಯಾಗಿದೆ. ರಾಜ್ಯದೊಂದಿಗೆ ಎರಡು ದಶಕಗಳ ಬಾಂಧವ್ಯ ಹೊಂದಿರುವ ಕಂಪನಿಯು ಮುಂದಿನ ನಾಲ್ಕು ವರ್ಷಗಳಲ್ಲಿ ಭಾರತದಲ್ಲಿ 35 ಬಿಲಿಯನ್ ಡಾಲರ್ ಬಂಡವಾಳ ಹೂಡಿಕೆ ಮಾಡಲಿದೆ. ಇದರಿಂದ 15 ಮಿಲಿಯನ್ ಸಣ್ಣ ಉದ್ಯಮಗಳಿಗೆ ನೆರವು ಸಿಗಲಿದ್ದು, ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗಲಿವೆ. ಇದರಲ್ಲಿ ರಾಜ್ಯಕ್ಕೆ ಗಮನಾರ್ಹ ಪಾಲು ಹರಿದು ಬರಲಿದೆ ಎಂದಿದ್ದಾರೆ.
ಇದನ್ನೂ ಓದಿ : ಸಾಮ್ರಾಜ್ಯಶಾಹಿ ತೊಲಗಿ, ಸಮಾಜವಾದ ಜಾರಿಯಾದರೆ ಶ್ರಮಿಕರಿಗೆ ತಮ್ಮ ಶ್ರಮದ ಪ್ರತಿಫಲ – ಬಸವರಾಜ ಪೂಜಾರ
ಜಾಗತಿಕ ನಾವೀನ್ಯತಾ ಸೂಚ್ಯಂಕದಲ್ಲಿ ಬೆಂಗಳೂರು ಜಾಗತಿಕ ಸ್ತರದಲ್ಲಿ 21ನೇ ಸ್ಥಾನಕ್ಕೆ ಜಿಗಿದಿದೆ. ಟೆಕ್-ಸಿಟಿ ಸೂಚ್ಯಂಕದಲ್ಲಿ ಮೊದಲ 30 ಸ್ಥಾನಗಳಲ್ಲಿ ಕಾಣಿಸಿಕೊಂಡಿರುವ ದೇಶದ ಏಕೈಕ ನಗರ ಬೆಂಗಳೂರಾಗಿದೆ. 3.80 ಲಕ್ಷ ರೂ.ಗಿಂತ ಹೆಚ್ಚು ತಲಾ ಆದಾಯ ಹೊಂದಿರುವ ಕರ್ನಾಟಕವು ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಜೊತೆಗೆ, ದೇಶದ ಬೊಕ್ಕಸಕ್ಕೆ ವಾರ್ಷಿಕ 1.6 ಲಕ್ಷ ಕೋಟಿ ರೂ. ಜಿಎಸ್ಟಿ ಪಾವತಿ ಮೂಲಕ ದ್ವಿತೀಯ ಸ್ಥಾನದಲ್ಲಿದ್ದೇವೆ. ಕಳೆದ ವರ್ಷ ಬೆಂಗಳೂರಿನಲ್ಲಿ 14.6 ಮಿಲಿಯನ್ ಚದರ ಅಡಿ ಜಾಗವನ್ನು ಕೈಗಾರಿಕಾ ವಹಿವಾಟು ಉದ್ದೇಶಕ್ಕೆ ಭೋಗ್ಯಕ್ಕೆ ನೀಡಿದ್ದು, ನಾವು ಪ್ರಥಮ ಸ್ಥಾನದಲ್ಲಿದ್ದೇವೆ ಎಂದು ಸಚಿವರು ವಿವರಿಸಿದ್ದಾರೆ.
ದೇಶದಲ್ಲಿ ಒಟ್ಟು 900 ಜಿಸಿಸಿ ಕೇಂದ್ರಗಳಿದ್ದು, ಇವುಗಳ ಪೈಕಿ ಶೇ.35ರಷ್ಟು ಕರ್ನಾಟಕದಲ್ಲೇ ಇವೆ. ಇ – ಕಾಮರ್ಸ್ ವಹಿವಾಟಿಗೆ ಬೇಕಾದ ಮೂಲಸೌಕರ್ಯದಲ್ಲೂ ರಾಜ್ಯವು ಮೊದಲ ಸ್ಥಾನದಲ್ಲಿದೆ. ನಮ್ಮಲ್ಲಿ 42.48 ಲಕ್ಷ ಟನ್ ದಾಸ್ತಾನು ಸಂಗ್ರಹಿಸುವಷ್ಟು ಉಗ್ರಾಣಗಳು ಮತ್ತು 233 ಶೀತಲಗೃಹಗಳಿವೆ. ಇದಕ್ಕೆ ತಕ್ಕಂತೆ ಇ-ಕಾಮರ್ಸ್ ವಹಿವಾಟು ಶೇ.11ರಷ್ಟು ಬೆಳವಣಿಗೆ ಸಾಧಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯವು ಕೈಗಾರಿಕಾ ಬೆಳವಣಿಗೆಗೆ ಅನುಕೂಲವಾಗುವಂತೆ ಸರಕು ಸಾಗಣೆಗೆ ಪ್ರತ್ಯೇಕ ರೈಲು ಕಾರಿಡಾರ್, ಮಲ್ಟಿಮೋಡಲ್ ಲಾಜಿಸ್ಟಿಕ್ಸ್ ಪಾರ್ಕುಗಳ ಅಭಿವೃದ್ಧಿ, ಡ್ರೈಪೋರ್ಟ್ ನಿರ್ಮಾಣ ಮತ್ತು ಟ್ರಕ್ ಟರ್ಮಿನಲ್ಲುಗಳ ನಿರ್ಮಾಣವನ್ನು ಸಮರೋಪಾದಿಯಲ್ಲಿ ಕೈಗೆತ್ತಿಕೊಂಡಿದೆ. ಅಮೆಜಾನ್ ಮತ್ತು ಜಾಗತಿಕ ಮಟ್ಟದ ಇತರ ಕಂಪನಿಗಳು ರಾಜ್ಯದಲ್ಲಿರುವ ಈ ಕೈಗಾರಿಕಾ ಸ್ನೇಹಿ ಕಾರ್ಯಪರಿಸರದ ಲಾಭವನ್ನು ಪಡೆದುಕೊಳ್ಳಲು ನಮ್ಮಲ್ಲಿ ಹೆಚ್ಚುಹೆಚ್ಚು ಹೂಡಿಕೆ ಮಾಡಬೇಕು. ಜತೆಗೆ ಇಲ್ಲೇ ಉತ್ಪಾದನೆ ಮಾಡಿ, ಜಗತ್ತಿನ ಉಳಿದ ಭಾಗಗಳಿಗೆ ಇಲ್ಲಿಂದ ರಫ್ತು ಮಾಡಬೇಕು ಎಂದು ಪಾಟೀಲ ಪ್ರತಿಪಾದಿಸಿದ್ದಾರೆ.
ಕಾರ್ಯಕ್ರಮದಲ್ಲಿ ಅಮೆಜಾನ್ ಕಂಪನಿಯ ಜಾಗತಿಕ ವ್ಯವಹಾರಗಳ ವಿಭಾಗದ ಮುಖ್ಯಸ್ಥ ಡೇವಿಡ್ ಝಪೊಲೋಸ್ಕಿ, ಉಪಾಧ್ಯಕ್ಷ ಚೇತನ್ ಕೃಷ್ಣಸ್ವಾಮಿ, ಮತ್ತೋರ್ವ ಉಪಾಧ್ಯಕ್ಷ ಸಮೀರ್ ಕುಮಾರ್, ಜಾಗತಿಕ ಆಸ್ತಿಪಾಸ್ತಿಗಳ ವಿಭಾಗದ ಉಪಾಧ್ಯಕ್ಷ ಸೀನ್ ಲೀ ಮುಂತಾದವರು ಉಪಸ್ಥಿತರಿದ್ದರು.
ಇದನ್ನೂ ನೋಡಿ : “ಯು.ಎಸ್ ಸಾಮ್ರಾಜ್ಯಶಾಹಿ : ಭಾರತ ಜನತೆಯ ಶತ್ರು” | ಹಿನ್ನೆಲೆ ಧ್ವನಿ : ಗುರುರಾಜ ದೇಸಾಯಿ Janashakthi Media
