ಅಲ್ಪಸಂಖ್ಯಾತರ ಮೇಲಿನ ದಾಳಿ ಖಂಡಿಸಿ ಸಿಪಿಐ(ಎಂ) ವತಿಯಿಂದ ಪ್ರತಿಭಟನಾ ಪ್ರದರ್ಶನ

ಮಂಗಳೂರು: ಅಲ್ಪಸಂಖ್ಯಾತರ ಮೇಲಿನ ದಾಳಿ ಖಂಡಿಸಿ,‌ ಸಂವಿಧಾನಬದ್ದ ರಕ್ಷಣೆ ನೀಡಲು ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಸಮಗ್ರ ಅಭಿವೃದ್ದಿಗೆ ಒತ್ತಾಯಿಸಿ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಕೇಂದ್ರ ಸಮಿತಿ ಕರೆಯ ಮೇರೆಗೆ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ನಗರದ ಕ್ಲಾಕ್ ಟವರ್ ಬಳಿಯಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಿದರು.

ನೂರಾರು ಸಂಖ್ಯೆಯಲ್ಲಿ ಸೇರಿದ್ದ ಸಿಪಿಐ(ಎಂ) ಪಕ್ಷದ ಕಾರ್ಯಕರ್ತರು, ಕೋಮುದ್ವೇಷ ಹಬ್ಬಿಸುವ ಬಿಜೆಪಿ  ಸಂಘಪರಿವಾರದ ವಿರುದ್ದ ಆಕ್ರೋಶಭರಿತರಾಗಿ ಘೋಷಣೆಗಳನ್ನು ಮೊಳಗಿಸಿದರು. ಬಳಿಕ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ ʻʻಸ್ವಾತಂತ್ರ್ಯ ಚಳುವಳಿಯ ಕಾಲಘಟ್ಟದಲ್ಲೇ ಕೋಮುದ್ವೇಷವನ್ನು ಹಬ್ಬಿಸಿ ತನ್ನ ನೀಚ ರಾಜಕೀಯವನ್ನು ಪ್ರದರ್ಶಿಸಿದ ಆರ್‌ಎಸ್‌ಎಸ್‌ಗೆ ದೇಶದ ಜನತೆ ಅಂದೇ ಸರಿಯಾದ ಪಾಠವನ್ನು ಕಲಿಸಿದ್ದರೂ ದೇಶ ವಿಭಜನೆಗೊಳ್ಳುವಲ್ಲಿ ಆರ್‌ಎಸ್‌ಎಸ್‌ನ ಕುತಂತ್ರವೂ ಅಡಗಿದೆ. ಕಳೆದ 3 ದಶಕಗಳಿಂದ ಸಂಘಪರಿವಾರವು ವ್ಯವಸ್ಥಿತ ಸಂಘಟನಾ ಜಾಲದಿಂದಾಗಿ ದೇಶದ ಜಾತ್ಯಾತೀತ ತತ್ವಕ್ಕೆ ತಿಲಾಂಜಲಿಯನ್ನಿಡಲು ಹೊರಟಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲುಗೊಳಿಸಿ ಸರ್ವಾಧಿಕಾರಿ ಫ್ಯಾಸಿಸ್ಟ್ ನಡೆಯತ್ತ ದೇಶ ಹೋಗುತ್ತಿರುವುದು ತೀರಾ ಗಂಭೀರ ಅಂಶವಾಗಿದೆ. ದೇಶದ ಪ್ರತಿಯೊಂದು ಸಮಸ್ಯೆಗಳಿಗೆ ಅಲ್ಪಸಂಖ್ಯಾತರೇ ಕಾರಣವೆಂಬ ಸುಳ್ಳನ್ನು ಸಾವಿರ ಸಾವಿರ ಬಾರಿ ಹೇಳಿ ಕೋಮುಭಾವನೆ ಕೆರಳಿಸಿ ಅಲ್ಪಸಂಖ್ಯಾತರ ಮೇಲೆ ಅವ್ಯಾಹತವಾಗಿ ದಾಳಿ ದಬ್ಬಾಳಿಕೆ ಹತ್ಯೆಗಳನ್ನು ನಡೆಸಲಾಗುತ್ತಿದೆ. ಇಂತಹ ದುಷ್ಕೃತ್ಯಗಳನ್ನು ತಡೆಯಲು ದೇಶದ ಜನತೆ ಒಂದಾಗಬೇಕಾಗಿದೆʼʼ ಎಂದು ಹೇಳಿದರು.

ಇದನ್ನು ಓದಿ: ಅಲ್ಪಸಂಖ್ಯಾತರ ಮೇಲೆ ದಾಳಿ ಖಂಡಿಸಿ-ಸಂವಿಧಾನ ಬದ್ಧ ರಕ್ಷಣೆ ನೀಡಲು ಸಿಪಿಐ(ಎಂ) ರಾಜ್ಯವ್ಯಾಪಿ ಪ್ರತಿಭಟನೆ

ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಮುನೀರ್ ಕಾಟಿಪಳ್ಳ ಮಾತನಾಡಿ ʻʻಮತಾಂತರದ ನೆಪ ಒಡ್ಡಿ,  ಕ್ರೈಸ್ತರ ಧಾರ್ಮಿಕ ಆರಾಧನಾ ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಗಳಲ್ಲಿ ಹಿಂಸೆಗೆ ಒಳಗಾದ ಬಹುತೇಕ ಜನರು ಆದಿವಾಸಿಗಳು ಮತ್ತು ದಲಿತರಾಗಿದ್ದಾರೆ. ಗೋರಕ್ಷಣೆ, ಲವ್ ಜಿಹಾದ್‌ಗಳೆಂಬ ದುಷ್ಕೃತ್ಯದ ಹೆಸರಲ್ಲಿ ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯದ ಸದಸ್ಯರ ಮೇಲಿನ ಹಿಂಸಾಚಾರ ಪ್ರಕರಣಗಳು ಮುಂದುವರಿಯುತ್ತಿವೆ. ಮಸೀದಿಗಳನ್ನು ಹಾಳುಗೆಡವುತ್ತಿದ್ದಾರೆ, ಬೀದಿಬದಿ ವ್ಯಾಪಾರಿಗಳನ್ನು ಬೆದರಿಸಲಾಗುತ್ತಿದೆ, ಶಿಕ್ಷಣ ಸಂಸ್ಥೆಗಳಲ್ಲಿ ಸಹ ಹೊಸ, ಹೊಸ ಸಮಸ್ಯೆಗಳನ್ನು ಬೇಕೆಂದೇ ಸೃಷ್ಟಿಸಲಾಗುತ್ತಿದೆ. ಅಲ್ಲದೇ ಸೌಹಾರ್ದತೆಯ ಕೇಂದ್ರಗಳಾಗಬೇಕಾದ ಇವುಗಳನ್ನು ಕೋಮು ವಿಭಜನೆ ತರುವ, ಪರಸ್ಪರ ನಂಬಿಕೆ, ವಿಶ್ವಾಸಗಳು ಇಲ್ಲದಂತೆ ಪರಿವರ್ತಿಸಿ ನಿರ್ಮಾಣ ಮಾಡುವ ಕೇಂದ್ರಗಳನ್ನಾಗಿಸುತ್ತಿವೆ. ಇಂತಹ ಪ್ರಯತ್ನಗಳನ್ನು ಸರ್ಕಾರ ನಿರ್ದಾಕ್ಷಿಣ್ಯವಾಗಿ ತಡೆಯಬೇಕಾಗಿದೆ.

ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್ ಕುಮಾರ್ ಬಜಾಲ್ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘ ಪರಿವಾರವು ಕಳೆದ ಕೆಲವು ದಶಕಗಳಿಂದ ನಡೆಸಿಕೊಂಡು ಬರುತ್ತಿರುವ ಕೊಮು ರಾಜಕೀಯವನ್ನು ಹಾಗೂ ಅಲ್ಪಸಂಖ್ಯಾತರ ಮೇಲಿನ ದಾಳಿಯನ್ನು ಎಳೆಎಳೆಯಾಗಿ ಬಿಡಿಸಿ ಹೇಳುತ್ತಾ ಕೋಮು ರಾಜಕಾರಣಕ್ಕೆ ಎದುರಾಗಿ ರಾಜಕೀಯವನ್ನು ಬೆಳೆಸಬೇಕಾಗಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಿಪಿಐ(ಎಂ) ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸಂತೋಷ್ ಬಜಾಲ್ ಅಲ್ಪಸಂಖ್ಯಾತರ ಮೇಲಿನ ದಾಳಿಗೆ ಕುಮ್ಮಕ್ಕು ನೀಡುತ್ತಿರುವ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕೋಮು ರಾಜಕಾರಣವನ್ಮು ಒತ್ತಿ ಹೇಳುತ್ತಾ, ಅಲ್ಪಸಂಖ್ಯಾತರ ಸಂವಿಧಾನಬದ್ದ ಹಕ್ಕುಗಳ ರಕ್ಷಣೆಗಾಗಿ ಕಟಿಬದ್ದರಾಗಬೇಕೆಂದು ಹೇಳಿದರು.

ಪ್ರತಿಭಟನೆಯಲ್ಲಿ ಸಿಪಿಐ(ಎಂ) ಮಂಗಳೂರು ನಗರ ದಕ್ಷಿಣ ಮತ್ತು ಉತ್ತರ ಸಮಿತಿಗಳ ಮುಖಂಡರಾದ ಬಶೀರ್ ಅಹಮ್ಮದ್, ದಯಾನಂದ ಶೆಟ್ಟಿ, ಬಿ.ಕೆ.ಇಮ್ತಿಯಾಜ್, ನವೀನ್ ಕೊಂಚಾಡಿ, ಅಶೋಕ್ ಶ್ರೀಯಾನ್, ಕೃಷ್ಣ ತಣ್ಣೀರುಬಾವಿ, ಪ್ರಮೀಳಾ ಶಕ್ತಿನಗರ, ಶ್ರೀನಾಥ್ ಕಾಟಿಪಳ್ಳ, ದಿನೇಶ್ ಶೆಟ್ಟಿ, ಭಾರತಿ ಬೋಳಾರ, ಮುಸ್ತಾಫ, ಇಕ್ಬಾಲ್, ಸಾಮಾಜಿಕ ಹೋರಾಟಗಾರರಾದ ಜೆರಾಲ್ಡ್ ಟವರ್ ಮುಂತಾದವರು ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *