ಶಿಕ್ಷಣದ ಅಭಿವೃದ್ಧಿಗಾಗಿ ರಾಜ್ಯ ಬಜೆಟ್ ನ 30% ಹಣವನ್ನು ಮೀಸಲಿಡಿ – ಬಸವರಾಜ ಎಸ್

ಎಸ್ಎಫ್ಐ ನೇತೃತ್ವದಲ್ಲಿ ಶಾಸಕರ ಕಚೇರಿ ಎದುರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು
ಹಾವೇರಿ: ಶಿಕ್ಷಣದ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಬಜೆಟ್ ನ 30% ಹಣವನ್ನು ಮೀಸಲಿಡಲು‌ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಬೇಡಿಕೆಗಳನ್ನು ಪೂರೈಸಲು ಒತ್ತಾಯಿಸಿ ನಗರದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿರುವ ರುದ್ರಪ್ಪ ಲಮಾಣಿ ಶಾಸಕರ ಕಚೇರಿ ಎದುರು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಶಾಸಕರ ಅಪ್ತ ಸಹಾಯಕರಾದ ರಾಮು ಪಾಟೀಲ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಮಾತನಾಡಿ,  ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಮಾರ್ಚ್ – 06 ರಂದು ಮಂಡನೆಯಾಗಲಿರುವ  ರಾಜ್ಯ ಬಜೆಟ್ ನಲ್ಲಿ ವಿದ್ಯಾರ್ಥಿಗಳ ಬೇಡಿಕೆಗಳನ್ನು ಈಡೇರಿಸಬೇಕು.

ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಶಿಕ್ಷಣತಜ್ಞ ಕೊಠಾರಿ ಆಯೋಗದ ಶಿಫಾರಸಿನಂತೆ ರಾಜ್ಯ ಸರ್ಕಾರ ಬಜೆಟ್ ನಲ್ಲಿ ಕನಿಷ್ಠ 30% ಹಣ ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡಬೇಕು ಎಂದು ಹಲವು ವರ್ಷಗಳಿಂದ ಹೋರಾಟ ಮುಂದುವರಿಯುತ್ತಿದ್ದರು ಶಿಕ್ಷಣ ಕ್ಷೇತ್ರಕ್ಕೆ ಪ್ರತಿ ಬಜೆಟ್ ನಲ್ಲಿ ಹಣ ಕಡಿತ ಮಾಡಿ  ಸರಾಸರಿ ಕೇವಲ 11% ಹಣ ನೀಡುತ್ತಿರುವುದು ಖಂಡನೀಯ.

ಇದನ್ನೂ ಓದಿ: ಬ್ರಹ್ಮರ ಕೂಟ್ಲು ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಸಮಾಲೋಚನಾ ಸಭೆ, ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು ಹೋರಾಟ ಸಮಿತಿ ಅಸ್ಥಿತ್ವಕ್ಕೆ

ಇಡೀ ದೇಶದಲ್ಲಿ ಉತ್ತಮ ಗುಣಮಟ್ಟದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಹೊಂದಿರುವ ಕೇರಳ ರಾಜ್ಯ 27% ಹಣ ನೀಡುತ್ತಿರುವುದು ಶ್ಲಾಘನೀಯ. ಸರ್ಕಾರಿ ಶಾಲಾ ಕಾಲೇಜು ಹಾಸ್ಟೆಲ್, ವಿಶ್ವ ವಿದ್ಯಾಲಗಳ ಸಮಗ್ರ ಅಭಿವೃದ್ಧಿಗಾಗಿ ಕನಿಷ್ಠ 30% ಹಣವನ್ನು ಈ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡಬೇಕು. ಆ ಮೂಲಕ ಗ್ಯಾರಂಟಿ ಪಟ್ಟಿಗೆ ಶಿಕ್ಷಣವನ್ನು ಸೇರಿಸಬೇಕು.

ಶೇ.46ರಷ್ಟು ಸರ್ಕಾರಿ ಶಾಲಾ-ಕಾಲೇಜುಗಳು ಕನಿಷ್ಠ ಮೂಲಭೂತ ಸೌಲಭ್ಯಗಳಿಲ್ಲದೆ ನರಳುತ್ತಿವೆ. ಶೇ.38ರಷ್ಟು ಪ್ರೌಡ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯಗಳಿಲ್ಲ. ಸರ್ಕಾರಿ ಶಾಲಾ ಸುಮಾರು ಕೊಠಡಿಗಳಿಗೆ ದುರಸ್ತಿಯ ಅಗತ್ಯವಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ  ರಾಜ್ಯದಲ್ಲಿ ಪ್ರೌಢಶಾಲೆ ವಿದ್ಯಾರ್ಥಿಗಳು ಶೇ14.6 ರಷ್ಟು ವಂಚಿತರಾಗಿದ್ದಾರೆ.

ಶಾಲೆಯಿಂದ ವಂಚಿತರಾಗುವುದನ್ನು ತಪ್ಪಿಸುವುದಕ್ಕಾಗಿ ಜಾರಿಯಾದ ಶಿಕ್ಷಣ ಹಕ್ಕು ಕಾಯ್ದೆ (ಆರ್.ಟಿ.ಇ) ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಪಾಲಕರಿಂದ ಮನಸೋ ಇಚ್ಛೆ ಹಣ ಪಡೆಯುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಕ್ರಮ ಜರುಗಿಸಲು ಮುಂದಾಗಬೇಕಿದೆ.

ಉನ್ನತ ಶಿಕ್ಷಣ ಓದುತ್ತಿದ್ದ 37 ಲಕ್ಷ ವಿದ್ಯಾರ್ಥಿಗಳು ಶಿಕ್ಷಣವನ್ನು ತೊರೆದಿದ್ದಾರೆ. 46% ಸರ್ಕಾರಿ ಪದವಿ ಕಾಲೇಜುಗಳು ಉಪನ್ಯಾಸಕರ ಕೊರತೆಯನ್ನು ಎದುರಿಸುತ್ತಿವೆ.  ಪರೀಕ್ಷೆ ವಿಧಾನ, ಅಂಕಪಟ್ಟಿ ದೋಷದಿಂದ 51 ಲಕ್ಷ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡಬೇಕು , ಶುಲ್ಕ ಏರಿಕೆ ಸೆಮಿಸ್ಟರ್ ಪದ್ಧತಿಯ ಸಮಸ್ಯೆಗಳು ವಿದ್ಯಾರ್ಥಿಗಳನ್ನು ಭಾದಿಸುತ್ತಿವೆ ಎಂದರು.

“ಸರ್ಕಾರಿ ಇಂಜಿನಿಯರಿಂಗ್, ಮೆಡಿಕಲ್, ಪ್ಯಾರಮೆಡಿಕಲ್, ನರ್ಸಿಂಗ್, ಹಾವೇರಿ ವಿಶ್ವವಿದ್ಯಾಲಯ, ಶಿಗ್ಗಾಂವಿ ಜಾನಪದ ವಿವಿ, ಹನುಮನಮಟ್ಟಿ ಕೃಷಿ ವಿವಿಗಳು ಸೇರಿದಂತೆ ಜಿಲ್ಲೆಯ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಅನುದಾನ ಬಿಡುಗಡೆ ಮಾಡಬೇಕು ಎಲ್ಲಾ ಮೂಲ ಸೌಲಭ್ಯಗಳನ್ನು ಒದಗಿಸಬೇಕು. ಸರ್ಕಾರಿ ಕಾನೂನು ವಿದ್ಯಾಲಯ ಶೀಘ್ರವಾಗಿ 3 ಮತ್ತು 5 ವರ್ಷ ಕೋರ್ಸ್ ಗಳನ್ನು ಪ್ರಾರಂಭಿಸಬೇಕು. ಜಿಲ್ಲೆಯ ಪ್ರತಿ ತಾಲ್ಲೂಕಿಗೊಂದು ಸರ್ಕಾರಿ ನರ್ಸಿಂಗ್, ಪ್ಯಾರಮೆಡಿಕಲ್, ಬಿ ಫಾರ್ಮ್ ಸೇರಿದಂತೆ ವಿವಿಧ ಕೋರ್ಸಿನ ಕಾಲೇಜು, ಸರ್ಕಾರಿ ಡಿಪ್ಲೊಮಾ ಕಾಲೇಜ್, ಸರ್ಕಾರಿ ಬಿಎಡ್, ಡಿಎಡ್ ಕಾಲೇಜ್ ಗಳನ್ನು ಹಾಗೂ ಪ್ರತ್ಯೇಕ ವೃತ್ತಿಪರ ಸೇರಿದಂತೆ ಕನಿಷ್ಟ 10 ಹಾಸ್ಟೆಲ್ ಗಳು ಮಂಜೂರು ಮಾಡಬೇಕೆಂದು ಎಸ್ಎಫ್ಐ ಒತ್ತಾಯಿಸುತ್ತದೆ.”

ವಿದ್ಯಾರ್ಥಿಗಳ ಎಲ್ಲ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸಬೇಕು ಎಂದು ಎಸ್ಎಫ್ಐ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗುತ್ತಿದೆ. ಈ ಬೇಡಿಕೆಗಳ ಈಡೇರಿಕೆಗಾಗಿ ಎಲ್ಲ ಶಾಸಕರು ವಿಧಾನ ಸಭಾ ಬಜೆಟ್ ಅಧಿವೇಶನದಲ್ಲಿ ಧ್ವನಿ ಎತ್ತಬೇಕೆಂದೂ ಒತ್ತಾಯಿಸುತ್ತೇವೆ. ಇಲ್ಲದಿದ್ದರೆ ರಾಜ್ಯಾದ್ಯಂತ ವಿದ್ಯಾರ್ಥಿಗಳ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಸ್‌ಎಫ್‌ಐ ಜಿಲ್ಲಾ ಮುಖಂಡ ಅರುಣ್ ನಾಗವತ್ ಮಾತನಾಡಿ, ಹಾಸ್ಟೆಲ್ ವಿದ್ಯಾರ್ಥಿಗಳ ಮಾಸಿಕ ಆಹಾರ ಭತ್ಯೆ ಯನ್ನು ಕನಿಷ್ಠ 4.500ರೂ ಗಳಿಗೆ ಹೆಚ್ಚಿಸಬೇಕು : ರಾಜ್ಯದಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಪ್ರತಿದಿನದ ಮೂರೊತ್ತಿನ ಊಟಕ್ಕೆ ಕೇವಲ 50-60ರೂ ಗಳಂತೆ ತಿಂಗಳಿಗೆ 1850/ರೂಗಳನ್ನು ಮಾತ್ರ ನೀಡಲಾಗುತ್ತಿದೆ. ಎಲ್ಲ ಆಹಾರ ಪದಾರ್ಥಗಳು, ಗ್ಯಾಸ್, ಬೆಲೆ ಏರಿಕೆ ಆಗಿದೆ. ಆದರೂ ಹಾಸ್ಟೆಲ್ ವಿದ್ಯಾರ್ಥಿಗಳ ಆಹಾರ ಭತ್ಯೆಯನ್ನು ಸರ್ಕಾರ ಹೆಚ್ಚಿಸಿಲ್ಲ.

ಇದರಿಂದ ರಾಜ್ಯದ ವಿದ್ಯಾರ್ಥಿಗಳು ಪೌಷ್ಠಿಕ ಆಹಾರದಿಂದ ವಂಚಿತರಾಗುತ್ತಿದ್ದಾರೆ. ಜೈಲಿನಲ್ಲಿರುವ ಕೈದಿಗಳಿಗಳ ಆಹಾರಕ್ಕೆ ಪ್ರತಿದಿನ ನೂರಾರು ರೂಪಾಯಿ ಖರ್ಚು ಮಾಡುತ್ತಿದೆ.  ಸರ್ಕಾರವು ನಮ್ಮ ಹೋರಾಟದ ನಂತರ ಪ್ರತಿ ವರ್ಷ ಕೇವಲ 100 ರೂ ಮಾತ್ರ ಏರಿಕೆ ಮಾಡುವುದನ್ನು ಬಿಟ್ಟು ಹಾಸ್ಟೆಲ್ ವಿದ್ಯಾರ್ಥಿಗಳ ಆಹಾರ ಭತ್ಯೆಯನ್ನು ಕನಿಷ್ಠ ಮಾಸಿಕ 4500/ರೂಗಳಿಗೆ ಹೆಚ್ಚಿಸಬೇಕು. ಬಹುತೇಕ  ಹಾಸ್ಟೆಲ್ ಗಳು ಖಾಸಗಿ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿದ್ದು ಇಲ್ಲಿ ಕನಿಷ್ಠ ಮೂಲ ಸೌಕರ್ಯಗಳನ್ನು ಒದಗಿಸಲು ಬಜೆಟ್ ನಲ್ಲಿ ಹಣ ಮೀಸಲಿಡಬೇಕು. ಹಾಸ್ಟೆಲ್ ಬಯಸಿ ಅರ್ಜಿ ಹಾಕಿದ ಎಲ್ಲಾ ವಿದ್ಯಾರ್ಥಿಗಳಿಗೂ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಬೇಕು.

ರಾಜ್ಯದಲ್ಲಿ  ಶಿಕ್ಷಣದ ಶುಲ್ಕ ಕಟ್ಟಲು ಶೈಕ್ಷಣಿಕ ಸಾಲ ಮಾಡಿಕೊಂಡಿರುವ ಎಲ್ಲ ವರ್ಗದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಸಾಲ ಮನ್ನಾ ಮಾಡಬೇಕು. ಈ ಹಿಂದೆ ಕೇರಳ ರಾಜ್ಯ ಸರ್ಕಾರ ಬಜೆಟ್ ನಲ್ಲಿ 900 ಕೋಟಿ ಶೈಕ್ಷಣಿಕ ಸಾಲ ಮನ್ನಾ ಮಾಡಿದೆ. ಇದೆ ಮಾದರಿಯಲ್ಲಿ ರಾಜ್ಯ ಸರ್ಕಾರ ಮಾನ್ನಾ ಮಾಡಬೇಕು ಎಂದರು.

ಎಸ್‌ಎಫ್‌ಐ ಜಿಲ್ಲಾ ಮುಖಂಡ ಭರತ ಮಡಿವಾಳ ಮಾತನಾಡಿ, ಎಲ್ಲ ಇಂಜಿನಿಯರಿಂಗ್ ಹಾಗೂ ಪದವಿ  ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ನೀಡಬೇಕು : ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗಳಲ್ಲಿ ಮೊದಲ ವರ್ಷದ ಪದವಿಗೆ ದಾಖಲಾತಿ ಪಡೆದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ನೀಡುವ ವಿದ್ಯಾರ್ಥಿ ಸ್ನೇಹಿ ಯೋಜನೆಯನ್ನು ಮಾನ್ಯ ಸಿದ್ದರಾಮಯ್ಯ ರವರು ಮುಖ್ಯಮಂತ್ರಿಯಾಗಿದ್ದಾಗ 2016-17 ಶೈಕ್ಷಣಿಕ ವರ್ಷದಲ್ಲಿ ಜಾರಿಗೆ ತಂದರು. ಇದು ಒಂದು ವರ್ಷ ಮಾತ್ರ ಜಾರಿಯಾಯಿತು ಆದರೆ ನಂತರ  ವರ್ಷದಲ್ಲಿ ಮೊದಲ ವರ್ಷದ ಪದವಿಗೆ ದಾಖಲಾತಿ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ರಾಜ್ಯ ಸರ್ಕಾರ ನೀಡಿಲ್ಲ. ಯಾವುದೇ ಷರತ್ತು ಹಾಕದೇ ಈ ಬಜೆಟ್ ನಲ್ಲಿ ಎಲ್ಲಾ ಪದವಿ ವಿದ್ಯಾರ್ಥಿಗಳಿಗೂ ಉಚಿತ ಲ್ಯಾಪ್ಟಾಪ್ ಯೋಜನೆಯನ್ನು ಮರು ಜಾರಿ ತರಲು ಘೋಷಿಸಬೇಕು.

ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಬೇಕು : ಕೇರಳ, ತಮಿಳುನಾಡು ಮಾದರಿಯಲ್ಲಿ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಬೇಕು ಎಂದು ಕಳೆದ ಹಲವು ವರ್ಷಗಳಿಂದ ರಾಜ್ಯದ ವಿದ್ಯಾರ್ಥಿಗಳು ಹಲವು ಹಂತಗಳಲ್ಲಿ ಹೋರಾಟ ನಡೆಸಿದ್ದರು ರಾಜ್ಯ ಸರ್ಕಾರ ಉಚಿತ ಬಸ್ ಪಾಸ್ ನೀಡುವ ಬದಲು ಕೆಎಸ್ಸಾರ್ಟಿಸಿ ಬಸ್ ಟಿಕೆಟ್ ದರವನ್ನು ಹೆಚ್ಚಳ ಮಾಡಿರೋದು ಖಂಡನೀಯ. ಈ ಕೂಡಲೇ ರಾಜ್ಯ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವ ಮೂಲಕ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕು ಎಂದು ಆಗ್ರಹಿಸಿದರು.

ಬೇಡಿಕೆಗಳು:

1. ಜಿಲ್ಲೆಯಾದ್ಯಂತ ಪ್ರತಿ ತಾಲೂಕಿಗೂ ಸರ್ಕಾರಿ ಡಿಪ್ಲೋಮಾ ಕಾಲೇಜು, ಸರ್ಕಾರಿ ಐಟಿಐ ಕಾಲೇಜು, ಸರ್ಕಾರಿ ಜಿಟಿಟಿಸಿ ಕಾಲೇಜುಗಳನ್ನು ಮಂಜೂರು ಮಾಡಬೇಕು.

2. ಜಿಲ್ಲೆಯಾದ್ಯಂತ ಇರುವ ಸರ್ಕಾರಿ ಐಟಿಐ ಕಾಲೇಜಿಗೆ ಸ್ವಂತ ಕಟ್ಟಡ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು.

3. ವೃತಿಪರ ಶಿಕ್ಷಣ ಪಡೆದ ಯುವಕರಿಗೆ ಉದ್ಯೋಗಗಳನ್ನು ಒದಗಿಸಬೇಕು.

4. ಜಿಲ್ಲೆಯಾದ್ಯಂತ ಇರುವ ಸರಕಾರಿ ವಸತಿ ನಿಲಯಗಳನ್ನು ಬಲಪಡಿಸಬೇಕು. ಹಾಗೂ ಹೆಚ್ಚುವರಿಯಾಗಿ ಕನಿಷ್ಟ 10 ಹಾಸ್ಟೆಲ್ ಮಂಜೂರು ಮಾಡಬೇಕು.

5. ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸಲು ಹಾಗೂ ಉನ್ನತ ಶಿಕ್ಷಣದವರೆಗೂ(ಎಲ್.ಕೆ.ಜಿ ಯಿಂದ ಪಿಎಚ್.ಡಿವರೆಗೆ) ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಬೇಕು.

6. ರಾಜ್ಯ ಬಜೆಟ್‌ನಲ್ಲಿ ಶಿಕ್ಷಣಕ್ಕಾಗಿ ಕೋಥಾರಿ ಆಯೋಗದ ಶಿಫಾರಸ್ಸಿನಂತೆ ಶೇ.30ರಷ್ಟು ಹಣ ಮೀಸಲಿಡಬೇಕು.

7. ರಾಜ್ಯದಲ್ಲಿರುವ ಸರ್ಕಾರಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ (ಪ್ರಸ್ತುತದಲ್ಲಿ ಮೆಟ್ರಿಕ್ ಪೂರ್ವ 1970ರೂ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ 1850ರೂ ಮಾಸಿಕವಾಗಿ ನಿಗದಿಯಾಗಿದೆ) 4.500ಕ್ಕೆ ಹೆಚ್ಚಿಸಬೇಕು. ಮತ್ತು ಆರೋಗ್ಯದ ಭದ್ರತೆ ಒದಗಿಸಬೇಕು.

8. ಹಾವೇರಿ ವಿಶ್ವವಿದ್ಯಾಲಯ, ಜಾನಪದ ವಿಶ್ವವಿದ್ಯಾಲಯ, ಹನುಮನಮಟ್ಟಿ ಕೃಷಿ ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಿಗೆ ಅನುದಾನ ಬಿಡುಗಡೆ ಮಾಡಿ ಬಲಗೊಳ್ಳಿಸಬೇಕು.

9. ಸರ್ಕಾರಿ ಶಾಲಾ/ಕಾಲೇಜುಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಖಾಲಿ ಇರುವ ಶಿಕ್ಷಕರ, ಉಪನ್ಯಾಸಕ, ತಾಂತ್ರಿಕ ಹುದ್ದೆಗಳು ಹಾಗೂ ಬೋಧಕೇತರ ಹುದ್ದೆಗಳನ್ನು ಭರ್ತಿಮಾಡಬೇಕು.

10. ಶಾಲಾ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯ(ಶೌಚಾಲಯ, ಶುದ್ಧ ಕುಡಿಯುವ ನೀರು, ಗ್ರಂಥಾಲಯ, ಕ್ರೀಡಾಂಗಣ, ಕಂಪ್ಯೂಟರ್ ಇತರೆ) ಒದಗಿಸಬೇಕು. ಮತ್ತು ಸರ್ಕಾರ ಮುಚ್ಚಲು ಮುಂದಾಗಿರುವ ಸರ್ಕಾರಿ ಶಾಲೆಗಳನ್ನು ಮುಚ್ಚದಂತೆ ಕ್ರಮವಹಿಸಿ ಶಾಲಾ/ಕಾಲೇಜುಗಳನ್ನು ಬಲಪಡಿಸಬೇಕು.

11. ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ಕಿರುಕುಳ ತಡೆಯಲು “ಎಲ್ಲ ಶಾಲಾ-ಕಾಲೇಜುಗಳಲ್ಲಿ ಲೈಂಗಿಕ ಕಿರುಕುಳ ತಡೆ ಸಮಿತಿ” ರಚಿಸಬೇಕು.

12. ನ್ಯಾಯಮೂರ್ತಿ ಲಿಂಗ್ ಸಮಿತಿಯ ಶಿಫಾರಸ್ಸಿನಂತೆ ವಿದ್ಯಾರ್ಥಿ ಸಂಘದ ಚುನಾವಣೆಗಳನ್ನು ನಡೆಸಬೇಕು.

13. 2006-07ರಿಂದ ಗ್ರಾಮೀಣ ಪ್ರದೇಶದ 8ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ನೀಡುವ ಯೋಜನೆಯನ್ನು 2018ರಿಂದ ನಿಲ್ಲಿಸಲಾಗಿದೆ. ಅದನ್ನು ಮರುಜಾರಿ ಮಾಡಿ. 8ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ನೀಡಬೇಕು.

14. ರಾಜ್ಯದಲ್ಲಿ ಸಂಶೋಧನೆ(Phd) ಮಾಡುತ್ತಿರುವ ವಿದ್ಯಾರ್ಥಿಗಳಿಗೆ 30,000 ಮಾಸಿಕ ಆರ್ಥಿಕ ಸಹಾಯ ಧನ ನೀಡಬೇಕು.

15. ರಾಜ್ಯದ ಎಲ್ಲಾ ಇಂಜಿನಿಯರಿಂಗ್, ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆಧುನಿತ ತಂತ್ರಜ್ಞಾನದ ಲ್ಯಾಪ್‌ಟ್ಯಾಪ್ ವಿತರಣೆ ಮಾಡಬೇಕು.

16. ರಾಜ್ಯದಲ್ಲಿ ಖಾಸಗಿ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಪೈಕಿ ಮ್ಯಾನೇಜ್ಮೆಂಟ್ನ ಶೀಟುಗಳ ಪಡೆದು ಅಧ್ಯಯನ ಮಾಡುವ ವೃತ್ತಿಪರ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ(ಸ್ಕಾಲರ್ಷಿಪ್) ನೀಡುತ್ತಿಲ್ಲ,  ಆದರಿಂದ ರಾಜ್ಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶಿಷ್ಯವೇತನ(ಸ್ಕಾಲರ್ಷಿಪ್) ನೀಡಬೇಕು.

17. ವಿದ್ಯಾರ್ಥಿಗಳಿಗೆ ನೀಡಬೇಕಾದ ಸ್ಟೇಟ್ ಸ್ಕಾಲರ್‌ಶಿಪ್ ಪೋರ್ಟಲ್ (SSP) ಸರಿಯಾಗಿ ಎಲ್ಲಾ ವಿದ್ಯಾರ್ಥಿಗಳಿಗೆ ಸಿಗಬೇಕು, ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸಹಾಯಧನ, ರೈತ ವಿದ್ಯಾನಿಧಿ ಸ್ಕಾಲರ್ಶಿಪ್ ಮರು ಪ್ರಾರಂಭಿಸಬೇಕು.

18. ಖಾಲಿ ಇರುವ ಶಿಕ್ಷಕ-ಉಪನ್ಯಾಸಕ ಮತ್ತು ಬೋಧಕೇತರ ಹುದ್ದೆಗ ಳನ್ನು ಭರ್ತಿಮಾಡಿ.

19. ಎಲ್ಲಾ ವಿಭಾಗದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್, ಇಗ್ರಂಥಲಾಯ, ಗ್ರಂಥಲಯಗಳಲ್ಲಿ ಪುಸ್ತಕಗಳು, ವಿದ್ಯಾರ್ಥಿ ವೇತನ ಹೆಚ್ಚಿಸಬೇಕು.

20. ಸರಕಾರಿ ಶಾಲಾ-ಕಾಲೇಜ್‌ಗಳಲ್ಲಿ ಸ್ವಚತಾ ಸಿಬ್ಬಂದಿ ನೇಮಕ ಮಾಡಬೇಕು.

21. ಪ್ರತಿ ತಾಲ್ಲೂಕಿಗೊಂದು ಸರ್ಕಾರಿ ನರ್ಸಿಂಗ್, ಪ್ಯಾರಮೆಡಿಕಲ್, ಬಿ ಫಾರ್ಮ್ ಸೇರಿದಂತೆ ವಿವಿಧ ರೀತಿಯ ಕೋರ್ಸಿನ ಕಾಲೇಜ್ ಗಳನ್ನು ಮಂಜೂರು ಮಾಡಬೇಕು.

ಈ ಸಂದರ್ಭದಲ್ಲಿ ಕಾಲೇಜ್ ಘಟಕದ ಉಪಾಧ್ಯಕ್ಷೆ ತನ್ಮಯಿ ನಾಯ್ಕ, ಐಶ್ವರ್ಯ ಎಸ್, ರಿಹಾನ್  ಪಿ, ನಿಶಾ  ಎ, ಮಾಳವ್ವ, ದೀಪಾ, ಸಾವಿತ್ರಿ ಕೆ, ಸೌಮ್ಯ, ನಾಗಮ್ಮ ವಿ, ದೀಪ ವಡ್ಡರ, ಮಹೇಶ್ ಕೊಂಡಜ್ಜಿ, ಪ್ರಭು  ಗೌಡ, ಮಲ್ಲಿಕಾರ್ಜುನ್, ಫಕ್ಕಿರೇಶ್, ಮನೋಜ್ ಗಡ್ಡಿ, ನಂಜುಂಡ ಬಳಿಗಾರ, ಸಿದ್ದಪ್ಪ ಪೂಜಾರ್, ಸುದೀಪ್ ಗಾಲಿ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಇದನ್ನೂ ನೋಡಿ: ದಲಿತ ನೋವಿನ ಧ್ವನಿ – ಸಂಬಳಿಗೋಲು | ಪುಸ್ತಕ ಬಿಡುಗಡೆ Janashakthi Media

Donate Janashakthi Media

Leave a Reply

Your email address will not be published. Required fields are marked *