ಕಲಬುರಗಿ: ಒಪ್ಪಂದದ ಪ್ರಕಾರ ತಾಲ್ಲೂಕಿನ ಕಿರಣಗಿ, ಸೋಮನಾಥ ಹಳ್ಳಿ, ಫಿರೋಜಾಬಾದ್ ಗ್ರಾಮದಲ್ಲಿ ಕೈಗಾರಿಕೆ ಸ್ಥಾಪಿಸುವ ಉದ್ದೇಶದಿಂದ 2013ರಲ್ಲಿ ಒಟ್ಟು 1821 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಈವರೆಗೆ ನಡೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿ ಗ್ರಾಮದ ರೈತರು ನಗರದಲ್ಲಿರುವ ಅಫಜಲಪುರ ಶಾಸಕ ಎಂ.ವೈ ಪಾಟೀಲ ಅವರ ನಿವಾಸದ ಎದುರು ಶನಿವಾರ ಧರಣಿ ನಡೆಸಿದರು.
ಗ್ರಾಮದ ರೈತರ ಮಕ್ಕಳಿಗೆ ಕಾರ್ಖಾನೆಯಲ್ಲಿ ಉದ್ಯೋಗ ನೀಡುವ ಭರವಸೆ ನೀಡಿ ವರ್ಷಗಳು ಕಳೆದರೂ ಈವರೆಗೆ ಈಡೇರಿಸದೇ, ಕಾರ್ಖಾನೆಯು ಆವರಣದ ಗೋಡೆ ನಿರ್ಮಿಸುತ್ತಿದೆ’ ಕಾರ್ಖಾನೆಯವರು ಎಕರೆಗೆ ₹16 ಲಕ್ಷ ನೀಡುವುದಾಗಿ ಹೇಳಿ ಕೇವಲ ₹12 ಲಕ್ಷ ನೀಡಿದ್ದು, ಬಾಕಿ ₹4 ಲಕ್ಷ ಉಳಿಸಿಕೊಂಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
‘ಭೂ ಸ್ವಾಧೀನ ಪಡಿಸಿಕೊಂಡ ಬಾಕಿ ಹಣ, ಪ್ರತಿಯೊಂದು ಕುಟುಂಬದ ಸದಸ್ಯರಿಗೆ ನೌಕರಿಗೆ ತೆಗೆದುಕೊಳ್ಳುವವರೆಗೆ ಯಾವುದೇ ಕಾರಣಕ್ಕೂ ನಾವು ನಮ್ಮ ಜಮೀನು ಬಿಟ್ಟು ಕೊಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು. ‘ರೈತರೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರಕಾರ ಸ್ವಾಧೀನ ಪಡಿಸಿಕೊಂಡಿದ್ದ ಭೂಮಿಯಲ್ಲಿ ಕಾರ್ಖಾನೆಯವರು 5 ವರ್ಷದೊಳಗೆ ಕೈಗಾರಿಕೆ ಸ್ಥಾಪಿಸಬೇಕಿತ್ತು. ಆದರೆ ಈವರೆಗೆ ಸ್ಥಾಪಿಸಿಲ್ಲ. ಕಾನೂನು ಪ್ರಕಾರ ನಮ್ಮ ಭೂಮಿಯನ್ನು ನಮಗೆ ಹಿಂದಿರುಗಿಸಬೇಕು’ ಎಂದು ಒತ್ತಾಯಿಸಿದರು.
ಇದನ್ನೂ ಓದಿ : ಒಳ ಮೀಸಲಾತಿ ವಿರೋಧಿಸಿ ಹಲವಾರು ಸಂಘಟನೆಗಳಿಂದ ಪ್ರತಿಭಟನೆ
‘ಕಾರ್ಖಾನೆಗಳಿಂದ ಬರಬೇಕಿರುವ ಬಾಕಿ ಹಣ ಕೊಡಿಸುವುದು ಹಾಗೂ ಭೂಮಿ ಕಳೆದುಕೊಂಡ ರೈತರ ಮಕ್ಕಳಿಗೆ ನೌಕರಿ ನೀಡುವ ಕುರಿತು ಚರ್ಚಿಸಲಾಗುವುದು’ ಧರಣಿ ಸ್ಥಳಕ್ಕೆ ಆಗಮಿಸಿದ ಶಾಸಕ ಎಂ.ವೈ ಪಾಟೀಲ ಅವರು ರೈತರ ಮನವಿ ಸ್ವೀಕರಿಸಿ, ಭರವಸೆ ನೀಡಿದರು.
ಧರಣಿ ಸ್ಥಳದಲ್ಲಿಂದ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಹಾಗೂ ಗುಲಬರ್ಗಾ ಸಿಮೆಂಟ್ ಲಿಮಿಟೆಡ್ ಕಂಪನಿಯ ಎಂ.ಡಿ ಜೊತೆಗೆ ದೂರವಾಣಿ ಮೂಲಕ ಮಾತನಾಡಿ, ಶೀಘ್ರದಲ್ಲಿಯೇ ರೈತ ಸಮ್ಮುಖದಲ್ಲಿ ಸಭೆ ನಡೆಸುವ ಕುರಿತು ಚರ್ಚಿಸಿದರು. ನಂತರ ಪ್ರತಿಭಟನಕಾರರು ಧರಣಿ ಹಿಂಪಡೆದರು.
ಮುಖಂಡರಾದ ಮಶಾಕ್ ಪಟೇಲ್, ಸಾಯಬಣ್ಣ, ರೈತರಾದ ಶರಣು ಉಳ್ಳಾಗಡ್ಡಿ, ಶರಣಬಸಪ್ಪ ಮಮಶೆಟ್ಟಿ, ಜಟ್ಟೆಪ್ಪ ಸೀತನೂರ, ಭಗವಂತ ಕಾಟಾ, ಪ್ರಭು ಬೈರಡಗಿ, ಬಸವರಾಜ, ಭೀಮರಾಯ, ಸುಭಾಷ, ಅಂಬಣ್ಣ ಭಜಂತ್ರಿ, ಶಂಕ್ರಪ್ಪ ಗಬ್ಬೂರ, ಈರಣ್ಣ ಉಳ್ಳಾಗಡ್ಡಿ, ಶಿವು ಸೇರಿದಂತೆ ಅನೇಕರಿದ್ದರು.
ರೈತರು ಬಾಕಿ ಹಣ ಹಾಗೂ ನೌಕರಿಗಾಗಿ ಚಾತಕ ಪಕ್ಷಿಯಂತೆ ಕಾದು ಕುಳಿತುಕೊಂಡಿದ್ದಾರೆ’ ರೈತರ ಭೂಮಿ ಸ್ವಾಧೀನ ಒಡಂಬಡಿಕೆ ಪ್ರಕಾರ ಕಾರ್ಖಾನೆಯವರು ನಡೆದುಕೊಂಡಿಲ್ಲ ಎಂದು ಶಾಸಕ ಎಂ.ವೈ ಪಾಟೀಲ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಈ ಕುರಿತು ಈಗಾಗಲೇ ಅಧಿವೇಶದನದಲ್ಲಿ ಧ್ವನಿ ಎತ್ತಿದ್ದೇನೆ. ನಾನೂ ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿ ಕಂಪನಿ ಅಧಿಕಾರಿಗಳು ಹಾಗೂ ರೈತರೊಂದಿಗೆ ಶೀಘ್ರದಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಸಲಾಗುವುದು ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ ಭರವಸೆ ನೀಡಿದ್ದಾರೆ’ ಎಂದರು.
‘ಸರ್ಕಾರ ಬಜೆಟ್ ಅಧಿವೇಶನಕ್ಕೂ ಮುನ್ನ ಮಾ.6 ಒಳಗಡೆ ಸಭೆ ಕರೆಯುವಂತೆ ನೋಡಿಕೊಳ್ಳಬೇಕು ಎಂದು ಈಗಾಗಲೇ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವರಿಕೆ ಮಾಡಲಾಗಿದೆ’ ಎಂದರು.
ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಪ್ರತಿ ಎಕರೆಗೆ ₹16 ಲಕ್ಷ ನಿರ್ಧಾರ ಮಾಡಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ಆದರೆ ಕಾರ್ಖಾನೆಯಿಂದ ಪ್ರತಿ ಎಕರೆಗೆ ₹12 ಲಕ್ಷ ನೀಡಲಾಗಿದೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ’ ಎಂದರು.
ಇದನ್ನೂ ನೋಡಿ : ಪುಸ್ತಕ ಬಿಡುಗಡೆ | ʻ ಭಾರತ ಮುಸ್ಲಿಂ ರಾಷ್ಟ್ರವಾಗುವುದೇ?ʼ | ಕ್ರಿಯಾ ಮಾಧ್ಯಮ | ಎಂ.ಜಿ. ಹೆಗಡೆ
