ನಾಥೂರಾಮ್​ ಗೋಡ್ಸೆ ಕುರಿತ ಸಿನಿಮಾ ನಿಷೇಧಿಸಲು ಆಗ್ರಹ: ಪ್ರಧಾನಿಗೆ ಪತ್ರ

ಮುಂಬಯಿ: ʻನಾನೇಕೆ ಗಾಂಧಿಯನ್ನು ಕೊಂದೆʼ ಸಿನಿಮಾವನ್ನು ನಿಷೇಧ ಮಾಡಬೇಕು ಎಂದು ಒತ್ತಾಯ ಕೇಳಿ ಬರುತ್ತಿದೆ. ಮಹಾರಾಷ್ಟ್ರದಲ್ಲಿ ಈ ಚಿತ್ರದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್​ ಪಕ್ಷದ ಮುಖಂಡರು ಸಿನಿಮಾ ಬಿಡುಗಡೆಗೊಳಿಸಬಾರದೆಂದು ಆಗ್ರಹಿಸಿದ್ದಾರೆ.

ಆಲ್ ಇಂಡಿಯಾ ಸಿನಿ ವರ್ಕರ್ಸ್​ ಅಸೋಯೇಷನ್​ ವತಿಯಿಂದ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆಯಲಾಗಿದೆ. ಈ ಸಿನಿಮಾವನ್ನು ನಿಷೇಧ ಮಾಡಬೇಕು ಎಂದು ಮನವಿ ಮಾಡಲಾಗಿದೆ. ಸಿನಿಮಾವನ್ನು ಒಟಿಟಿ ಮೂಲಕ ಬಿಡುಗಡೆ​ ಮಾಡಲು ನಿರ್ಧರಿಸಲಾಗಿದೆ. ಈ ಚಿತ್ರಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿದೆ. ಕೆಲವರು ಈ ಸಿನಿಮಾದ ಪರವಾಗಿ ಮಾತನಾಡಿದರೆ, ಇನ್ನೂ ಕೆಲವರು ಈ ಚಿತ್ರವನ್ನು ನಿಷೇಧಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.

ನಾಥೂರಾಮ್​ ಗೋಡ್ಸೆಯ ಪಾತ್ರ ಮಾಡಿರುವ ನ್ಯಾಷನಲಿಸ್ಟ್​ ಕಾಂಗ್ರೆಸ್​ ಪಾರ್ಟಿ ಸಂಸದ ಅಮೋಲ್​ ಕೋಹ್ಲೆ ಅವರಿಗೂ ಪಾತ್ರ ಮಾಡಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಮರಾಠಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಅವರು. ನ್ಯಾಷನಲಿಸ್ಟ್​ ಕಾಂಗ್ರೆಸ್​ ಪಾರ್ಟಿಯ ಹಿರಿಯ ಮುಂಖಡರು ಸಹ ಆಗಿದ್ದಾರೆ.

‘ಗಾಂಧೀಜಿ ಅವರನ್ನು ಇಡೀ ದೇಶ ಮತ್ತು ಪ್ರಪಂಚವೇ ಗೌರವಿಸುತ್ತದೆ. ಅವರ ಆದರ್ಶಗಳು ಪ್ರೀತಿ ಮತ್ತು ತ್ಯಾಗದ ಪ್ರತೀಕಗಳಾಗಿವೆ. ಅಂಥವರನ್ನು ಕೊಂದ ಗೋಡ್ಸೆಯನ್ನು ಹೀರೋ ರೀತಿಯಲ್ಲಿ ಬಿಂಬಿಸುವ ಈ ಸಿನಿಮಾವನ್ನು ನಿಷೇಧಿಸಬೇಕು. ಈ ದೇಶದಲ್ಲಿ ಗೋಡ್ಸೆಗೆ ಕಿಂಚಿತ್ತೂ ಗೌರವ ಸಲ್ಲಬೇಕಾಗಿಲ್ಲ. ಸಂವಿಧಾನದ ಪ್ರತಿಜ್ಞೆ ಮಾಡಿ ಸಂಸದ ಆಗಿರುವ ವ್ಯಕ್ತಿಯೇ ನಾಥೂರಾಮ್​ ಗೋಡ್ಸೆಯ ಪಾತ್ರ ಮಾಡಿದ್ದಾರೆ. ಒಂದು ವೇಳೆ ಈ ಸಿನಿಮಾ ಬಿಡುಗಡೆಯಾದರೆ ಇಡೀ ದೇಶಕ್ಕೆ ಆಘಾತ ಆಗಲಿದೆ’ ಎಂದು ಆಲ್ ಇಂಡಿಯಾ ಸಿನಿ ವರ್ಕರ್ಸ್​ ಅಸೋಯೇಷನ್ ಕಡೆಯಿಂದ ಪ್ರಧಾನಿಗೆ ಬರೆಯಲಾದ ಪತ್ರದಲ್ಲಿ ಉಲ್ಲೇಖಿಸಿದೆ.

ಮಹಾರಾಷ್ಟ್ರದಲ್ಲಿ ಚಿತ್ರಕ್ಕೆ ಹೆಚ್ಚು ವಿರೋಧ ವ್ಯಕ್ತವಾಗಿದೆ. ಈ ಸಿನಿಮಾವನ್ನು ನಿಷೇಧಿಸಬೇಕೆಂದು ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರಿಗೆ ಮನವಿ ಸಲ್ಲಿಸುವುದಾಗಿ ಪ್ರದೇಶ ಕಾಂಗ್ರೆಸ್​ ಅಧ್ಯಕ್ಷ ನಾನಾ ಪಟೋಲೆ ಹೇಳಿದ್ದಾರೆ.

1948ರ ಜನವರಿ 30ರಂದು ಗಾಂಧೀಜಿ ಅವರನ್ನು ನಾಥೂರಾಮ್​ ಗೋಡ್ಸೆ ಹತ್ಯೆ ಮಾಡಿದರು. ಆ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಗೋಡ್ಸೆ ನೀಡಿದ ಹೇಳಿಕೆ ಆಧರಿಸಿ ಈ ಸಿನಿಮಾ ತಯಾರಿಸಲಾಗಿದೆ. ‘ಗಾಂಧಿಯನ್ನು ಕೊಂದಿದ್ದು ನಾಥೂರಾಮ್​ ಗೋಡ್ಸೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ಹತ್ಯೆ ಮಾಡಿದ್ದಕ್ಕೆ ಕಾರಣ ಏನೆಂಬದು ಅನೇಕರಿಗೆ ತಿಳಿದಿಲ್ಲ. ಆ ಕುರಿತು ಈ ಸಿನಿಮಾದಲ್ಲಿ ಹೇಳಲಾಗಿದೆ’ ಎಂದು ಚಿತ್ರತಂಡ ಹೇಳಿಕೊಂಡಿದೆ.

Donate Janashakthi Media

Leave a Reply

Your email address will not be published. Required fields are marked *