ಬಸವಣ್ಣ ಹಾಗೂ ಅಂಬೇಡ್ಕರ್ ಅವರ ಆಶಯಗಳಿಗೆ ಧಕ್ಕೆ- ಎಐಡಿಎಸ್‌ಒ ಖಂಡನೆ

ಬೆಂಗಳೂರು : ಮರು ಪರಿಷ್ಕರಣೆ ಹೆಸರಿನಲ್ಲಿ ಪಠ್ಯದಲ್ಲಿ ಬಸವಣ್ಣ, ಅಂಬೇಡ್ಕರ್ ವಿಚಾರಗಳಿಗೆ ಅವಮಾನ ಮಾಡಲಾಗಿದೆ ಎಂದು ಎಐಡಿಎಸ್ಓ ಆರೋಪಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಆಕ್ರೋಶ ಹೊರಹಾಕಿದ್ದು, ಪಠ್ಯ ಪುಸ್ತಕಗಳ ಮರು ಪರಿಷ್ಕರಣೆ ಕುರಿತು ರಾಜ್ಯದ ಹಲವು ಗಣ್ಯ ಸಾಹಿತಿಗಳು, ಬರಹಗಾರರು, ಶಿಕ್ಷಣ ತಜ್ಞರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯದ ಜನತೆ ಮತ್ತು ಬಹು ಮುಖ್ಯವಾಗಿ ವಿದ್ಯಾರ್ಥಿಗಳು ಜಾತಿ, ಧರ್ಮಗಳ ಗಡಿಯನ್ನು ಮೀರಿ ಒಂದಾಗಿ, ಈ ಶಿಕ್ಷಣ ವಿರೋಧಿ ಮರು ಪರಿಷ್ಕರಣೆ ವಿರುದ್ಧ ತಮ್ಮ ಆಕ್ರೋಶದ ಧ್ವನಿಯೆತ್ತಿದ್ದಾರೆ.  ಪಠ್ಯದಲ್ಲಿ ಕೈ ಬಿಡಲಾಗಿದ್ದ ಮಹಾನ್ ಕ್ರಾಂತಿಕಾರಿ ಭಗತ್ ಸಿಂಗ್ ಅವರ ಕುರಿತ ಪಾಠವನ್ನು ಜನ ಚಳುವಳಿಯ ಒತ್ತಾಯದಿಂದ, ಸರ್ಕಾರವು ಮರು ಸೇರ್ಪಡೆ ಮಾಡಿದ್ದರೂ, ಮರು ಪರಿಷ್ಕೃತ ಪಠ್ಯದಲ್ಲಿ ಹಲವು ಮೂಲಭೂತ ದೋಷಗಳು ಕಂಡು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ ಎಂದಿದ್ದಾರೆ.

ಇದೀಗ ಬೆಳಕಿಗೆ ಬಂದಿರುವಂತೆ, ಬಸವಣ್ಣ ಹಾಗೂ ಅಂಬೇಡ್ಕರ್ ಅವರ ಕುರಿತ ಪಾಠಗಳನ್ನು ತಿದ್ದುಪಡಿ ಮಾಡಲಾಗಿದೆ. ಬದಲಾಯಿಸಿರುವ ಪಾಠದಲ್ಲಿ, ಬಸವಣ್ಣನವರ ಐತಿಹಾಸಿಕ ಹಿನ್ನಲೆ ಕುರಿತು ತಪ್ಪಾಗಿ ಉಲ್ಲೇಖಿಸಲಾಗಿದೆ. ಹಿಂದೂ ಧರ್ಮದಲ್ಲಿ ಇದ್ದ ಜಾತಿ ಸಮಸ್ಯೆಯನ್ನು ಪ್ರತಿಭಟಿಸುತ್ತಾ ಅಂಬೇಡ್ಕರರು ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದ್ದರು ಎಂಬ ಬಹು ಮುಖ್ಯ ಸತ್ಯವನ್ನೇ ಮರೆಮಾಚಲಾಗಿದೆ.  ಜಾತಿ ಶ್ರೇಣಿಯನ್ನು ವಿರೋಧಿಸಿದ್ದ ಇಬ್ಬರು ಧೀಮಂತರ ಚಾರಿತ್ರ್ಯಕ್ಕೆ ಭಂಗ ತರಲಾಗಿದೆ. ಅದೇ ರೀತಿಯಲ್ಲಿ ಭಾರತೀಯತೆ ಹಾಗೂ ಮಹಿಳೆಯರ ಘನತೆಗಳಿಗೆ ವಿರುದ್ಧವಾಗಿದ್ದ ಪಾಠಗಳಿಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅವುಗಳಲ್ಲೇ ಕೆಲವು ಮಾರ್ಪಾಡು ಮಾಡಿ ಪುನರ್ ಜಾರಿಗೊಳಿಸಲಾಗಿದೆ. ಇವೆರಡೂ ಅನೈತಿಕ ಕ್ರಮಗಳನ್ನೂ ಖಂಡಿಸಿದ್ದಾರೆ.

ಈಗಿನ ಬಿಜೆಪಿ ಸರ್ಕಾರವು ಸಂಘ ಪರಿವಾರದ ವಿಚಾರಗಳನ್ನು ಹೇರುತ್ತಿದೆ. ಇದು ವೈಚಾರಿಕ ದಾಳಿ ಎಂಬುದು ಬಹಳ ಸ್ಪಷ್ಟವಾಗಿ ಕಾಣುತ್ತದೆ. ಬಸವಣ್ಣ, ಅಂಬೇಡ್ಕರ್, ಭಗತ್ ಸಿಂಗ್, ವಿವೇಕಾನಂದ, ಗಾಂಧೀಜಿ – ಈ ಎಲ್ಲಾ ಮಹಾನ್ ವ್ಯಕ್ತಿಗಳ ಆಶಯಕ್ಕೆ ತಿಲಾಂಜಲಿ ಇಟ್ಟು, ಒಂದೆಡೆ ಶಿಕ್ಷಣವನ್ನು ಕೇಸರೀಕರಣಗೊಳಿಸುವುದು ಇನ್ನೊಂದೆಡೆ ವಿದ್ಯಾರ್ಥಿಗಳಿಗೆ ಇರುವ ಆದರ್ಶಗಳನ್ನು ಧ್ವಂಸ ಮಾಡುವುದೆ ಇದರ ಹಿಂದಿರುವ ಹುನ್ನಾರವಾಗಿದೆ ಎಂದು ಅಜಯ್ ಕಾಮತ್ ಆರೋಪಿಸಿದ್ದಾರೆ.

ಸರ್ಕಾರವು ಆಳುವ ವರ್ಗದ ಕೊಳಕು ರಾಜಕಾರಣದ ಹಿತಕ್ಕಾಗಿ ಹಾಗೂ ಜನತೆಯ ಹಿತಕ್ಕೆ ವಿರುದ್ಧವಾಗಿ ಮಕ್ಕಳ ಮನಸ್ಸಿನ ಮೇಲೆ ದಾಳಿ ನಡೆಸುತ್ತಿದೆ. ಮಕ್ಕಳಲ್ಲಿ ಜಾತಿ ತಾರತಮ್ಯ ಇರುವುದಿಲ್ಲ. ಅವು ಮುಗ್ಧ ಮನಸ್ಸುಗಳು. ಆದರೆ ಈಗ ಅದನ್ನೇ ಕೆಡವಲು ಸರ್ಕಾರ ಮುಂದಾಗಿದೆ. ಈ ದಾಳಿಯ ವಿರುದ್ಧ ಶಿಕ್ಷಣ ಪ್ರೇಮಿ ಜನತೆ, ಜೀವ ಪ್ರೇಮಿ ಜನತೆ ಸೇರಿ ಪ್ರತಿಭಟಿಸಬೇಕು. ಈ ವೈಚಾರಿಕ ದಾಳಿಯ ವಿರುದ್ಧ ಹೋರಾಡುತ್ತಾ ಮರು ಪರಿಷ್ಕರಣೆಯನ್ನು ಖಂಡಿಸಿ, ಹಲವು ಗಣ್ಯ ಸಾಹಿತಿಗಳು, ಬರಹಗಾರರು, ಕವಿಗಳು ಹಾಗೂ ಶಿಕ್ಷಣ ತಜ್ಞರು ಪ್ರತಿರೋಧಿಸುತ್ತಿದ್ದಾರೆ. ಪಠ್ಯಕ್ಕೆ ತಮ್ಮ ಲೇಖನ ಮತ್ತು ಕವಿತೆಯನ್ನು ಸೇರಿಸಲು ನೀಡಿದ್ದ ಅನುಮತಿಯನ್ನು ಹಿಂಪಡೆಯುತ್ತಿದ್ದಾರೆ. ಇವರ ಹೋರಾಟವನ್ನು ಶ್ಲಾಘಿಸುತ್ತಾ, ಈ ಹೋರಾಟದಲ್ಲಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೇಳಲು ಎಐಡಿಎಸ್‌ಒ ವಿಧ್ಯಾರ್ಥಿ ಸಂಘಟನೆ ಬಯಸುತ್ತದೆ ಎಂದು ಹೇಳಿಕೆಯಲ್ಲಿ ವಿವರಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *