ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ಗೆ ಆಡಳಿತಾಧಿಕಾರಿ ನೇಮಕವನ್ನು ಪ್ರಶ್ನಿಸಿ ನಿರ್ಗಮಿತ(ನಿಕಟಪೂರ್ವ) ಅಧ್ಯಕ್ಷ ಮಹೇಶ್ ಜೋಶಿ ಹೈಕೋರ್ಟ್ ಮೊರೆ ಹೋಗಿದ್ದರು. ಇಂದು ನಡೆದ ವಿಚಾರಣೆಯಲ್ಲಿ ಅವರ ಅರ್ಜಿಯನ್ನು ವಜಾಗೊಳಿಸಿ, ಆಡಳಿತಾಧಿಕಾರಿಯನ್ನು ಮುಂದುವರೆಸಿ ತನಿಖೆಯನ್ನು ನಡೆಸಲು ನ್ಯಾಯಾಲಯ ಆದೇಶಿಸಿದೆ. ಮುಂದಿನ ವಿಚಾರಣೆಯನ್ನು ಡಿಸೆಂಬರ್ 8ಕ್ಕೆ ಮುಂದೂಡಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಮಹೇಶ್ ಜೋಶಿ ಅವರ ದುರಾಡಳಿತ ಮತ್ತು ಆರ್ಥಿಕ ಅಶಿಸ್ತಿನ ಕುರಿತು ಸರ್ಕಾರವು ತನಿಖೆಗೆ ಆದೇಶಿಸಿತ್ತು. ತನಿಖೆಗೆ ಸಹಕರಿಸದ ಕಾರಣ ಸರ್ಕಾರವು ಆಡಳಿತಾಧಿಕಾರಿಯನ್ನು ನೇಮಿಸಿತು. ಈ ನೇಮಕವನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅಧಿಕಾರ ದುರುಪಯೋಗ ಮತ್ತು ಹಣಕಾಸು ದುರ್ಬಳಕೆ ಸೇರಿದಂತೆ 17 ಆರೋಪಗಳನ್ನು ಮಹೇಶ್ ಜೋಶಿ ವಿರುದ್ಧ ಮಾಡಲಾಗಿತ್ತು. ಜೋಷಿ ವಿರುದ್ಧದ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ಆಡಳಿತಾಧಿಕಾರಿಯನ್ನು ಏಕೆ ನೇಮಿಸಬಾರದು ಎಂದು ನೋಟೀಸ್ ಜಾರಿಗೊಳಿಸಲಾಗಿತ್ತು. ನಿಗದಿತ ಕಾಲಾವಧಿಯಲ್ಲಿ ಜೋಷಿ ಹಾಜರಾಗದಿರುವುದು ಮತ್ತು ಅಗತ್ಯ ದಾಖಲಾತಿಗಳನ್ನು ಒದಗಿಸದಿರುವ ಕಾರಣ ಆಡಳಿತಾಧಿಕಾರಿ ನೇಮಕ ಮಾಡುವಂತೆ ಇಲಾಖೆ ಶಿಫಾರಸ್ಸು ಮಾಡಿತ್ತು.
