ಟಿವಿಕೆ ರ್‍ಯಾಲಿ ವೇಳೆ ಕಾಲ್ತುಳಿತ: ಮೃತರ ಕುಟುಂಬಗಳಿಗೆ ₹20 ಲಕ್ಷ ಪರಿಹಾರ ಘೋಷಿಸಿದ ನಟ ವಿಜಯ್‌

ಚೆನ್ನೈ: ಸೆಪ್ಟೆಂಬರ್‌ 27ರಂದು ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ರ್‍ಯಾಲಿ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 39 ಜನರು ಮೃತಪಟ್ಟಿದ್ದೂ, ಅವರ ಕುಟುಂಬಗಳಿಗೆ ತಲಾ ₹20 ಲಕ್ಷ ಪರಿಹಾರವನ್ನು ಪಕ್ಷದ ಮುಖ್ಯಸ್ಥ, ನಟ ವಿಜಯ್‌ ಸೆಪ್ಟೆಂಬರ್‌ 28ರಂದು ಘೋಷಿಸಿದ್ದಾರೆ. ಟಿವಿಕೆ

‘ನಿನ್ನೆ ಕರೂರಿನಲ್ಲಿ ನಡೆದ ಘಟನೆಯ ಬಗ್ಗೆ ಯೋಚಿಸುವಾಗ ತುಂಬಾ ನೋವಾಗುತ್ತದೆ. ಯಾರು ಎಷ್ಟೇ ಸಾಂತ್ವನದ ಮಾತುಗಳನ್ನು ಆಡಿದರೂ ನಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡ ದುಃಖವನ್ನು ಮರೆಮಾಚಲು ಸಾಧ್ಯವಿಲ್ಲ. ಇದು ನಿಜಕ್ಕೂ ತುಂಬಲಾರದ ನಷ್ಟ’ ಎಂದು ವಿಜಯ್‌ ತಮ್ಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

‘ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ ₹20 ಲಕ್ಷ ಮತ್ತು ಗಾಯಗೊಂಡವರಿಗೆ ತಲಾ ₹2 ಲಕ್ಷ ಕೊಡಲು ನಾವು ಇಚ್ಛಿಸಿದ್ದೇವೆ. ಕುಟುಂಬ ಸದಸ್ಯನನ್ನು ಕಳೆದುಕೊಂಡ ನೋವಿನ ಎದುರು ಈ ಮೊತ್ತ ಏನು ಅಲ್ಲ ಎಂಬುದು ತಿಳಿದಿದೆ. ಆದರೂ, ಈ ಸಂದರ್ಭದಲ್ಲಿ ನಿಮ್ಮ ಕುಟುಂಬದ ಸದಸ್ಯನಾಗಿ ನಿಮ್ಮೊಂದಿಗೆ ನಿಲ್ಲುವುದು ನನ್ನ ಕರ್ತವ್ಯವಾಗಿದೆ’ ಎಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರು | ಮುಖ್ಯಮಂತ್ರಿ ನಗರ ಪ್ರದಕ್ಷಿಣೆ : ರಸ್ತೆಯಲ್ಲಿ ತ್ಯಾಜ್ಯ ಚೆಲ್ಲಿದ್ದಕ್ಕೆ ಗರಂ

‘ಕಾಲ್ತುಳಿತದಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರು ಆದಷ್ಟು ಶೀಘ್ರ ಗುಣಮುಖರಾಗಿ ಮನೆಗೆ ಮರಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಹೇಳಿದ್ದಾರೆ.

ಶನಿವಾರ ಕರೂರಿನಲ್ಲಿ ನಡೆದ ರ್‍ಯಾಲಿ ವೇಳೆ ನಡೆದ ಕಾಲ್ತುಳಿತದಲ್ಲಿ ಕನಿಷ್ಠ 39 ಜನರು ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ 16 ಮಹಿಳೆಯರು, 8 ಮಕ್ಕಳಿದ್ದಾರೆ.

ಘಟನೆಗೆ ನಿಖರ ಕಾರಣವೆನೆಂಬುವುದು ಇನ್ನಷ್ಟೆ ತಿಳಿದುಬರಬೇಕಿದೆ.

ಸರ್ಕಾರದಿಂದ ₹10 ಲಕ್ಷ ಪರಿಹಾರ:

ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ತಲಾ ₹10 ಲಕ್ಷ ಪರಿಹಾರ ಘೋಷಿಸಿದ್ದಾರೆ. ಗಾಯಗೊಂಡವರಿಗೆ ತಲಾ ₹1 ಲಕ್ಷ ನೀಡುವುದಾಗಿ ತಿಳಿಸಿದ್ದಾರೆ.

ಇದನ್ನೂ ನೋಡಿ: ಧರ್ಮಸ್ಥಳ ಪ್ರಕರಣ | ಕೊಂದವರು ಯಾರು ಎಂಬ ಸತ್ಯ ಸಧ್ಯದಲ್ಲೇ ಗೊತ್ತಾಗಲಿದೆ – ಕೆ.ನೀಲಾJanashakthi Media

Donate Janashakthi Media

Leave a Reply

Your email address will not be published. Required fields are marked *