ಕಂಪ್ಲಿ: ರಾಜ್ಯ ಒಂಟಿ ಮಹಿಳೆಯರ ಸಂಕರಕ್ಷಣಾ ಸಂಘವು ತಾಲ್ಲೂಕು ಘಟಕದ ಪದಾಧಿಕಾರಿಗಳು, ಸಾಮಾಜಿಕ ಬಹಿಷ್ಕಾರಕ್ಕೊಳಗಾದ ಒಂಟಿ ಮಹಿಳೆಯರ ಪುನರ್ವಸತಿ, ಸಂರಕ್ಷಣೆಗೆ ಕ್ರಮಕೈಗೊಳ್ಳುವಂತೆ ತಹಶೀಲ್ದಾರ್ ಜೂಗಲ ಮಂಜುನಾಯಕ ಅವರಿಗೆ ಫೆಬ್ರವರಿ 23ರಂದು ಮನವಿ ಸಲ್ಲಿಸಿದರು.
ಬಳಿಕ ರಾಜ್ಯ ಒಂಟಿ ಮಹಿಳೆಯರ ಸಂಕರಕ್ಷಣಾ ಸಂಘ ತಾಲ್ಲೂಕು ಘಟಕದ ಸಂಚಾಲಕ ಎ. ಸ್ವಾಮಿ ಮಾತನಾಡಿ, ವಿಮುಕ್ತ ದೇವದಾಸಿಯೇತರ ಒಂಟಿ ಮಹಿಳೆಯರ ಗಣತಿ ಮಾಡಿ ಪುನರ್ವಸತಿ ಕಲ್ಪಿಸಬೇಕು. ಮಾಸಿಕ ಕನಿಷ್ಠ ಪಿಂಚಣಿ ₹ 6,000 ನೀಡಬೇಕು. ಒಂಟಿ ಮಹಿಳೆಯರು, ಪತಿ ತ್ಯಜಿಸಿದ, ಯುವ ವಿಧವೆ, 50ವರ್ಷದೊಳಗಿನ ಮಹಿಳೆಯರ ಸಾಮಾಜಿಕ ಬಹಿಷ್ಕಾರ ಪರಿಹಾರವಾಗಿ ₹ 10ಲಕ್ಷ ಇಡುಗಂಟು ಸರ್ಕಾರ ಘೋಷಿಸಬೇಕು.
ಇದನ್ನೂ ಓದಿ: ಭದ್ರತಾ ಸಿಬ್ಬಂದಿ; ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ ಎಬಿವಿಪಿ ಗೂಂಡಾಗಳನ್ನು ಬಂಧಿಸಿ: ಎಸ್ಎಫ್ಐ
ಬಹಿಷ್ಕೃತ ವಿದ್ಯಾವಂತ ಮಹಿಳೆಗೆ ಉದ್ಯೋಗ ಇಲ್ಲವೇ ನಿರುದ್ಯೋಗ ಭತ್ಯೆ ಮಾಸಿಕ ₹ 10,000 ನೀಡಬೇಕು. ದೌರ್ಜನ್ಯಕ್ಕೊಳಗಾದ ಗರ್ಭಿಣಿ, ಬಾಣಂತಿ ಒಂಟಿ ಮಹಿಳೆಯರಿಗೆ 18ತಿಂಗಳ ಕಾಲ ಮಾಸಿಕ ₹ 10,000 ಪರಿಹಾರ, ವೈದ್ಯಕೀಯ ನೆರವು ಒದಗಿಸಬೇಕು ಎಂದು ಒತ್ತಾಯಿಸಿದರು.
ಒಂಟಿ ಮಹಿಳೆಯರ ಸಾಮಾಜಿಕ ಬಹಿಷ್ಕಾರ ನಿಷೇಧ ಕಾಯ್ದೆ ರೂಪಿಸಬೇಕು. ಮಹಿಳಾ ಉದ್ಯೋಗ, ರಾಜಕೀಯ ಮೀಸಲಾತಿಯಲ್ಲಿ ಒಂಟಿ ಮಹಿಳೆಯರಿಗೆ ಆದ್ಯತೆ ನೀಡಬೇಕು. ರಾಜ್ಯ ಬಜೆಟ್ನಲ್ಲಿ ಸೂಕ್ತ ಅನುದಾನ ಒದಗಿಸಿ ಇದರಲ್ಲಿ ಶೇ 33ರಷ್ಟು ಹಣವನ್ನು ಒಂಟಿ ಮಹಿಳೆಯರ ಪುನರ್ವಸತಿಗೆ ಮೀಸಲಿರಿಸಬೇಕು ಎಂದು ಮನವಿ ಮಾಡಿದರು.
ಪದಾಧಿಕಾರಿಗಳಾದ ಅಂಬಮ್ಮ, ದುರುಗಮ್ಮ, ಕಮಲಮ್ಮ, ಜ್ಯೋತಿ, ಪಾರ್ವತಿ, ಕೊಲ್ಲಮ್ಮ, ಮಾರಮ್ಮ, ಹನುಮಂತಮ್ಮ, ಪುಷ್ಪಾವತಿ, ಕವಿತಾ, ಲಕ್ಷ್ಮಿ, ಮಸ್ತಾನಮ್ಮ, ರುದ್ರಮ್ಮ ಹಾಜರಿದ್ದರು.
ಇದನ್ನೂ ನೋಡಿ: ಧಾರವಾಡ | ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ: ಕಾಂಗ್ರೆಸ್–ಬಿಜೆಪಿಗೆ ಎಚ್ಚರಿಕೆಯ ಸಂಕೇತ! Janashakthi Media
