ಪುತ್ತೂರು: ಯುವತಿಯೋರ್ವಳನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿ ಆಕೆಯನ್ನು ಗರ್ಭಿಣಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ನಾಪತ್ತೆಯಾಗಿದ್ದ ಆರೋಪಿ ಪುತ್ತೂರಿನ ಕೃಷ್ಣ ಜೆ ರಾವ್ ನನ್ನು ಜುಲೈ 5ರಂದು ಬಂಧಿಸಿದ್ದಾರೆ.
ತನಿಖೆ ಚುರುಕುಗೊಳಿಸಿದ ಮಂಗಳೂರಿನ ಎಸ್ಪಿ, ಪೊಲೀಸರ ಶೀಘ್ರ ಕಾರ್ಯಚರಣೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಪುತ್ತೂರಿನಿಂದ ತೆರಳಿರುವ ಪೊಲೀಸರ ತಂಡವೊಂದು ಆರೋಪಿಯನ್ನು ಪತ್ತೆ ಮಾಡಿ ಅಲ್ಲಿಂದ ವಶಕ್ಕೆ ಪಡೆದುಕೊಂಡು ಆಗಮಿಸುತ್ತಿರುವುದಾಗಿ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ವೃತ್ತಿಪರ ತರಬೇತಿ ಕೋರ್ಸುಗಳಿಗೆ ಶಿಷ್ಯವೇತನದಲ್ಲಿ ಅರ್ಜಿ ಆಹ್ವಾನ
‘ಮದುವೆಯಾಗುವುದಾಗಿ ನಂಬಿಸಿ, ದೈಹಿಕ ಸಂಪರ್ಕ ಬೆಳೆಸಿದ್ದ ಸಹಪಾಠಿ ಯುವಕ, ನಾನು ಗರ್ಭಿಣಿ ಎಂದು ಗೊತ್ತಾದ ಮೇಲೆ ಮದುವೆಯಾಗಲು ನಿರಾಕರಿಸಿದ್ದು, ನ್ಯಾಯ ಒದಗಿಸಬೇಕು’ ಎಂದು ಪುತ್ತೂರಿನ ಸಂತ್ರಸ್ತ ಯುವತಿ ಮಹಿಳಾ ಠಾಣೆಗೆ ಜೂನ್ 24ರಂದು ದೂರು ನೀಡಿದ್ದರು. ಜೂನ್ 27 ರಂದು ಈ ಯುವತಿ ಪುತ್ತೂರಿನ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಎಫ್ಐಆರ್ ದಾಖಲಾದ ಬೆನ್ನಲ್ಲೇ ಆರೋಪಿ ನಾಪತ್ತೆಯಾಗಿದ್ದ.
ನಂತರದ ಬೆಳವಣಿಗೆಯಲ್ಲಿ, ಸಂತ್ರಸ್ತ ಯುವತಿಯ ತಾಯಿ, ಪುತ್ತೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ‘ನನ್ನ ಮಗಳಿಗೆ ಅನ್ಯಾಯವಾಗಿದೆ. ಸ್ಥಳೀಯ ಶಾಸಕರು, ಹಿಂದುತ್ವ ಸಂಘಟನೆಯ ಮುಖಂಡರು ಯಾರೂ ಸಹಾಯಕ್ಕೆ ಬರುತ್ತಿಲ್ಲ’ ಎಂದು ನೋವು ಹೇಳಿಕೊಂಡಿದ್ದರು.
‘ಈ ವಿಷಯಕ್ಕೆ ಸಂಬಂಧಿಸಿ ಎರಡು ತಿಂಗಳುಗಳ ಹಿಂದೆ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ, ಆರೋಪಿ ಯುವಕನ ಪಾಲಕರು ಬಂದು, ತಮ್ಮ ಮಗನಿಗೆ 21 ವರ್ಷ ಆದ ಕೂಡಲೇ ಮದುವೆ ಮಾಡಿಸುವುದಾಗಿ ಭರವಸೆ ನೀಡಿ, ಮುಚ್ಚಳಿಕೆ ಬರೆದುಕೊಟ್ಟಿದ್ದರು. ಸ್ಥಳೀಯ ಶಾಸಕ ಅಶೋಕ ಕುಮಾರ್ ರೈ, ಕರೆ ಮಾಡಿ, ದೂರು ದಾಖಲಿಸದಂತೆ ಮತ್ತು ಎಲ್ಲವನ್ನೂ ಸೌಹಾರ್ದದಿಂದ ಬಗೆಹರಿಸುವುದಾಗಿ ತಿಳಿಸಿದ್ದರು. ಆದರೆ, ಈಗ ಯಾರೂ ಸಹಾಯಕ್ಕೆ ಬರುತ್ತಿಲ್ಲ’ ಎಂದು ದೂರಿದ್ದರು.
ಈ ಪ್ರಕರಣ ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಂತ್ರಸ್ತ ಯುವತಿಗೆ ಹಲವರು ಬೆಂಬಲ ಸೂಚಿಸಿದ್ದಾರೆ.
ಇದನ್ನೂ ನೋಡಿ: ವಿಶೇಷ ವಿವಾಹ ಕಾಯಿದೆ, 1954: ನೀವು ತಿಳಿದುಕೊಳ್ಳಬೇಕಾದ ಮಾಹಿತಿಗಳು – ಅಶ್ವಿನಿ ಓಬುಳೇಶ್ ಅವರ ವಿಶ್ಲೇಷಣೆ
