ಬಿಡಿಎ ವಾಣಿಜ್ಯ ಸಂಕೀರ್ಣಗಳನ್ನು ಭೂಮಾಫಿಯಾಗಳ ಕೈಗೆ ನೀಡುತ್ತಿರುವ ಬಿಡಿಎ ನಿರ್ಧಾರಕ್ಕೆ ಆಮ್ ಆದ್ಮಿ ಪಾರ್ಟಿ ತೀವ್ರ ವಿರೋಧ

ಬೆಂಗಳೂರು: ಆರು ವರ್ಷಗಳ ಹಿಂದೆ ಅಂತಿಮಗೊಂಡಿದ್ದ ವಿವಾದಾದತ್ಮಕ ಒಪ್ಪಂದಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮರುಜೀವ ನೀಡಲು ಮುಂದಾಗಿದ್ದು, ಏಳು ಬಿಡಿಎ ಕಾಂಪ್ಲೆಕ್ಸ್‌ಗಳನ್ನು ಶಾಪಿಂಗ್ ಮಾಲ್‌ಗಳನ್ನಾಗಿ ಪರಿವರ್ತಿಸಲಿದೆ. ಸಾವಿರಾರು ಕೋಟಿ ಬೆಲೆಬಾಳುವ ಬಿಡಿಎ ವಾಣಿಜ್ಯ ಸಂಕೀರ್ಣಗಳನ್ನು ಭೂ ಮಾಫಿಯಾಗಳ ಕೈಗೆ ನೀಡುತ್ತಿರುವ ಬಿಡಿಎ ನೀತಿ ವಿರೋಧಿಸಿ ಆಮ್ ಆದ್ಮಿ ಪಾರ್ಟಿ ತೀವ್ರ ಪ್ರತಿಭಟನೆ ನಡೆಸಿದೆ. ವಾಣಿಜ್ಯ

ಇದೇ ವೇಳೆ ಇಂದಿರಾನಗರದ ಬಿಡಿಎ ಕಾಂಪ್ಲೆಕ್ಸ್‌ಗೆ ಭೇಟಿ ನೀಡಿ ಮಾತನಾಡಿದ ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ, ಇಂದಿರಾ ನಗರದ ಕಾಂಪ್ಲೆಕ್ಸ್ ಅನ್ನು ದೊಡ್ಡ ದೊಡ್ಡ ಭೂಗಳ್ಳರಲ್ಲಿ ಒಬ್ಬರಾದ ಕೆಜೆ ಜಾರ್ಜ್ ಒಡೆತನದ ಎಂಬೆಸ್ಸಿ ಗ್ರೂಪ್‌ಗೆ ನೀಡಲಾಗುತ್ತಿದೆ. ಇಂದಿರಾನಗರ ಈಗಾಗಲೇ ವ್ಯಾಪಕ ವಾಣಿಜ್ಯೀಕರಣವಾಗಿ ಮಾರ್ಪಟ್ಟಿದೆ. ಮತ್ತೆ ಇಲ್ಲಿ ಕಮರ್ಷಿಯಲ್ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಲಾಗುತ್ತಿದೆ. ಬ್ರಾಂಡ್ ಬೆಂಗಳೂರು ಅಂದ್ರೆ ಜನರ ಜೀವನ ಅಭಿವೃದ್ಧಿಯಾಗುವ ರೀತಿ ಇರಬೇಕು. ಡಿಕೆ ಶಿವಕುಮಾರ್ ಹೇಳುತ್ತಿರುವ ರೀತಿಯಲ್ಲ. ಇಷ್ಟು ಹಳೆಯ ಇಂದಿರಾನಗರ ಬಿಡಿಎ ಕಾಂಪ್ಲೆಕ್ಸ್‌ನಲ್ಲಿ ಮರಗಳನ್ನು ಬೆಳೆಸಿ, ಪ್ಲೇಗ್ರೌಂಡ್, ಲೈಬ್ರೆರಿಯನ್ನು ಮಾಡಬಹುದು. ಇದರಿಂದ ಸ್ಥಳೀಯ ಜನರಿಗೆ ಸಹಾಯವಾಗುತ್ತದೆ ಎಂದರು.

49 ಕೋಟಿ ರೂ. ಲಾಭಕ್ಕಾಗಿ ಬಿಡಿಎ ಸಾವಿರಾರು ಕೋಟಿ ರೂ. ಬೆಲೆಬಾಳುವ ಕಾಂಪ್ಲೆಕ್ಸ್ ಅನ್ನು ಭೂಗಳ್ಳರಿಗೆ ನೀಡುತ್ತಿರುವುದು ನಿಜಕ್ಕೂ ಹೇಸಿಗೆ ಕೆಲಸ. ಬೆಂಗಳೂರನ್ನ ಕಾಂಕ್ರಿಟ್ ಕಾಡನ್ನಾಗಿ ಮಾಡಬೇಡಿ. ಭೂಗಳ್ಳರಿಗೆ ಇಂದಿರಾ ನಗರ ಅಥವಾ ಬೆಂಗಳೂರಿನ ಬೇರೆ ಯಾವುದೇ ಬಿಡಿಎ ಕಾಂಪ್ಲೆಕ್ಸ್‌ಗಳನ್ನು ನೀಡಲು ಆಮ್ ಆದ್ಮಿ ಪಕ್ಷ ಬಿಡುವುದಿಲ್ಲ. ಇದು ನಿಲ್ಲುವವರೆಗೂ ಹೋರಾಟ ಮುಂದುವರಿಯಲಿದೆ. ಬೆಂಗಳೂರಿನಲ್ಲಿ ಅತಿಹೆಚ್ಚು ಪಬ್ ಮತ್ತು ಬಾರ್‌ಗಳಿರುವುದು ಇಂದಿರಾನಗರದಲ್ಲಿ. ಸಾರ್ವಜನಿಕರಿಗೆ ಉಪಯೋಗವಾಗುವಂತಹ ಕೆಲಸಗಳನ್ನು ಮಾಡಿ. ಕಾಂಪ್ಲೆಕ್ಸ್ ಅನ್ನು ಶಾಪಿಂಗ್ ಮಾಲ್ ಅನ್ನಾಗಿ ಮಾಡಿ ಜನರಿಗೆ ತೊಂದರೆ ಕೊಡಬೇಡಿ ಎಂದು ಹೇಳಿದರು.

ಭೂಗಳ್ಳರ ಆಸೆಗಾಗಿ ಜನರ ಜೀವನವನ್ನು ಒತ್ತೆ ಇಡಬೇಡಿ. ಪ್ರತಿಯೊಂದು  ಕಾಂಪ್ಲೆಕ್ಸ್‌ಗೆ ತೆರಳಿ ಈ ಬಗ್ಗೆ ಹೋರಾಡಲಾಗುವುದು. ಯಾವುದೇ ಕಾರಣಕ್ಕೂ ಆಮ್ ಆದ್ಮಿ ಪಾರ್ಟಿ ಇದಕ್ಕೆ ಅವಕಾಶ ನೀಡುವುದಿಲ್ಲ. 30 ರಿಂದ 40 ವರ್ಷದ ಮರಗಳು ಇಲ್ಲಿವೆ. ಸಾರ್ವಜನಿಕರ ಆಸ್ತಿ ಸಾರ್ವಜನಿಕರಿಗೆ ಉಪಯೋಗವಾಗುವಂತೆ ಮಾಡಿ. ಇದೀಗ ಶಾಪಿಂಗ್ ಮಾಲ್ ಆಗಿ ಪರಿವರ್ತಿಸಲು ನಾವು ಬಿಡುವುದಿಲ್ಲ ಎಂದರು.

ಇದನ್ನು ಓದಿ : ಚುನಾವಣಾ ಹರಟೆ : ಮಲ್ಲಣ್ಣ – ಬಸ್ಸಣ್ಣ ಏನ್‌ ಹೇಳ್ತಾರ ಕೇಳ್ರಿ

ಬೆಂಗಳೂರು ನಗರ ಸಂಘಟನಾ ಕಾರ್ಯದರ್ಶಿ ಅಶೋಕ್ ಮೃತ್ಯುಂಜಯ ಮಾತನಾಡಿ, ಸರ್ಕಾರಿ ಆಸ್ತಿಯಲ್ಲಿ ಶಾಪಿಂಗ್ ಮಾಲ್‌ಗಳನ್ನು ಮಾಡಿದಾಗ ಅದು ಶ್ರೀಮಂತರಿಗಷ್ಟೇ ಉಪಯೋಗವಾಗುತ್ತದೆ. ಸಾರ್ವಜನಿಕ ಆಸ್ತಿ ಇದ್ದಾಗ ಮಾತ್ರ ಬಡವರಿಗೆ ಉಪಯೋಗವಾಗುತ್ತದೆ. ಸಿದ್ದರಾಮಯ್ಯ ಅವರೇ ಬಡವರ ವಿರೋಧಿ ಸರ್ಕಾರವನ್ನಾಗಿ ಮಾಡಬೇಡಿ. ಪಾರ್ಕ್, ಆಟದ ಮೈದಾನವನ್ನಾಗಿ ಮಾಡಿ, ಮರಗಳನ್ನು ನೆಡುವುದರಿಂದ ಹಲವು ಸಮಸ್ಯೆ ನಿವಾರಣೆಯಾಗುತ್ತದೆ. ಇಲ್ಲಿ ಮಾಲ್ ನಿರ್ಮಾಣವಾದರೆ ಮತ್ತಷ್ಟು ಟ್ರಾಫಿಕ್ ಉಂಟಾಗುತ್ತದೆ. ಅದನ್ನ ತಡೆಯಲು ನಿಮ್ಮ ಬಳಿಯಿರುವ ಯೋಜನೆಯೇನು. ಕೋರಮಂಗಲ ಮತ್ತು ಇಂದಿರಾನಗರದಲ್ಲಿ ಈಗಾಗಲೇ ಟ್ರಾಫಿಕ್ ಜಾಸ್ತಿಯಿದೆ. 7 ಕಾಂಪ್ಲೆಕ್ಸ್‌ಗಳನ್ನು ಶಾಪಿಂಗ್ ಮಾಲ್‌ಗಳನ್ನಾಗಿ ಪರಿವರ್ತಿಸುವ ಅಗತ್ಯವಿಲ್ಲ. ನರೇಂದ್ರ ಮೋದಿ ಮತ್ತು ನಿಮಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ದೂರಿದರು. ವಾಣಿಜ್ಯ

ಸಾರ್ವಜನಿಕರಿಂದಲೂ ತೀವ್ರ ವಿರೋಧ:-

ಇಂದಿರಾನಗರದ ಬಿಡಿಎಸ್ ಕಾಂಪ್ಲೆಕ್ಸ್ ಸುತ್ತಮುತ್ತಲ ಜನರನ್ನು ಮತ್ತು ವ್ಯಾಪಾರಸ್ಥರನ್ನು ಮಾತನಾಡಿಸಿದಾಗ ಅವರು ಬಿಡಿಎನ ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇಂದಿರಾನಗರದಲ್ಲಿರುವ ಕಾಂಪ್ಲೆಕ್ಸ್‌ನಲ್ಲಿ ನಾಗರಿಕರಿಗೆ ಅಗತ್ಯವಾದ ಕಚೇರಿಗಳಿವೆ. ಈ ಕಾಂಪ್ಲೆಕ್ಸ್ ಸಂಪೂರ್ಣವಾಗಿ ಸಾರ್ವಜನಿಕರಿಗೆ ಅಗತ್ಯ ಸೌಕರ್ಯಗಳನ್ನು ಮಾತ್ರ ಹೊಂದಿರಬೇಕು. ಬಿಡಿಎ ಇದೀಗ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಇಳಿದಿದೆ. ಇದು ಕಾನೂನುಬಾಹಿರ ಕೆಲಸ ಮಾಡಲು ಮುಂದಾಗಿದೆ. ಇದನ್ನು ಯಾವುದೇ ಕಾರಣಕ್ಕೂ ನಾವು ಒಪ್ಪುವುದಿಲ್ಲ ಎಂದರು.

ಸರ್ಕಾರದಿಂದ ಯೋಜನೆಗೆ ಒಪ್ಪಿಗೆ:-

ಕಾಂಪ್ಲೆಕ್ಸ್‌ಗಳನ್ನು ಶಾಪಿಂಗ್ ಮಾಲ್‌ಗಳನ್ನಾಗಿ ಪರಿವರ್ತಿಸಲು 60 ವರ್ಷಗಳಿಗೆ ಒಪ್ಪಂದ ಮಾಡಿಕೊಂಡಿದ್ದು, ಪ್ರತಿವರ್ಷ ಇದಕ್ಕೆ 40 ಕೋಟಿ ರೂ.ಗೂ ಅಧಿಕ ಆದಾಯ ಬರಲಿದೆ ಎನ್ನಲಾಗಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಈ ಯೋಜನೆಯ ಒಪ್ಪಂದಕ್ಕೆ ರಾಜ್ಯ ಸರ್ಕಾರ ಸಮ್ಮತಿ ನೀಡಿದೆ. ಕೋರಮಂಗಲ, ಎಚ್‌ಎಸ್‌ಆರ್ ಲೇಔಟ್, ಆರ್‌ಟಿ ನಗರ ಮತ್ತು ಸದಾಶಿವನಗರದಲ್ಲಿರುವ  ಕಾಂಪ್ಲೆಕ್ಸ್‌ಗಳನ್ನು ಎಂ-ಎಫ್‌ಎಆರ್ ಡೆವಲಪರ್ಸ್‌ಗೆ ಬಿಡಿಎ ಗುತ್ತಿಗೆ ನೀಡಿದ್ದು, ಇಂದಿರಾನಗರದಲ್ಲಿರುವ ಕಾಂಪ್ಲೆಕ್ಸ್ ಅನ್ನು ಎಂಬೆಸ್ಸಿ ಗ್ರೂಪ್ ಮರುಅಭಿವೃದ್ಧಿಗೊಳಿಸಲಿದೆ.

ಭೂಗಳ್ಳ ಕೆಜೆ ಜಾರ್ಜ್‌ಗೆ ಧಿಕ್ಕಾರ, ಭೂಗಳ್ಳ ಎನ್ಎ ಹ್ಯಾರಿಸ್‌ಗೆ ಧಿಕ್ಕಾರ, ಬೆಂಗಳೂರಿನ ಬಿಡಿಎ ಕಾಂಪ್ಲೆಕ್ಸ್‌ಗಳನ್ನು ಉಳಿಸಿ ಎಂದು ಘೋಷಣೆ ಕೂಗಿದ ಆಮ್ ಆದ್ಮಿ ಪಕ್ಷದ ಹಲವಾರು ಕಾರ್ಯಕರ್ತರು ಮತ್ತು ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ವಾಣಿಜ್ಯ

ಇದನ್ನು ನೋಡಿ : ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ ಧರೆ ಹತ್ತಿ ಉರಿದಡೆ ನಿಲಲುಬಾರದು – ಡಾ. ಜಯದೇವಿ ಜಂಗಮಶೆಟ್ಟಿ ಸಂಗೀತದಲ್ಲಿ

Donate Janashakthi Media

Leave a Reply

Your email address will not be published. Required fields are marked *