ಎಚ್‌ಯುಎಫ್‌ ಏಕರೂಪತೆಗೆ ಒಂದು ಲೋಪ

ಮೂಲ : ದುಷ್ಯಂತ್‌ ಅರೋರಾ

ಅನುವಾದ  : ನಾ ದಿವಾಕರ

ಹಿಂದೂ ಕಾನೂನಿನ ಅಡಿಯಲ್ಲಿ ಒಂದು ವಿಶಿಷ್ಟ ವ್ಯವಸ್ಥೆಯಾದ ಎಚ್‌ಯುಎಫ್ ಸಾಮಾನ್ಯ ಪುರುಷ ಪೂರ್ವಜರಿಂದ ಬಂದ ಎಲ್ಲಾ ವ್ಯಕ್ತಿಗಳನ್ನು ಒಳಗೊಂಡಿರುತ್ತದೆ. ಈ ಸಂಸ್ಥೆಯನ್ನು ನೋಂದಾಯಿಸಬೇಕು ಮತ್ತು ತನ್ನದೇ ಆದ ಶಾಶ್ವತ ಖಾತೆ ಸಂಖ್ಯೆಯನ್ನು ಹೊಂದಿರಬೇಕು ಮತ್ತು ತೆರಿಗೆ ಉದ್ದೇಶಗಳಿಗಾಗಿ ಪ್ರತ್ಯೇಕ ವ್ಯಕ್ತಿಯಂತೆ ಪರಿಗಣಿಸಲಾಗುತ್ತದೆ.

ಎಲ್ಲ ಧರ್ಮಗಳ ವೈಯುಕ್ತಿಕ ಕಾನೂನುಗಳ ಬದಲು ಏಕರೂಪದ ಕಾನೂನು ತರುವುದು ಏನಾಸಂ ಧ್ಯೇಯ

ಅಕ್ಟೋಬರ್ 2017 ರಲ್ಲಿ ನೀಲಾಂಜನ ರಾಯ್, ಟಿ ಎಂ ಕೃಷ್ಣ, ಮೇಜರ್ ಜನರಲ್ ವೊಂಬತ್ಕೆರೆ, ಗುಲ್ ಪನಾಗ್, ಬೆಜವಾಡಾ ವಿಲ್ಸನ್, ಮುಕುಲ್ ಕೇಶವನ್ ಮತ್ತು ನನ್ನನ್ನೂ ಒಳಗೊಂಡಂತೆ ಒಂದು ಉನ್ನತ ನಾಗರಿಕರ ಗುಂಪು ಪ್ರಗತಿಪರ ಏಕರೂಪ ನಾಗರಿಕ ಸಂಹಿತೆಯ (ಏನಾಸಂ) ಕರಡನ್ನು ಮಾಜಿ ಅಟಾರ್ನಿ ಜನರಲ್ ಸೋಲಿ ಸೊರಾಬ್ಜಿ ಅನುಮೋದಿಸಿದ ಅಂದಿನ ಭಾರತೀಯ ಕಾನೂನು ಆಯೋಗದ ಅಧ್ಯಕ್ಷರಿಗೆ ಸಲ್ಲಿಸಿದ್ದೇವೆ. ಪ್ರಾಥಮಿಕವಾಗಿ ಅವರು “ಹಿಂದೂ ಅವಿಭಜಿತ ಕುಟುಂಬವನ್ನು(ಎಚ್‌ಯುಎಫ್)‌ ರದ್ದುಗೊಳಿಸುವ ಬಗ್ಗೆ ಈ ಉಪಬಂಧವನ್ನು ಸೇರಿಸುವ ಅಗತ್ಯವಿದೆಯೇ ? ಇದು ಬಹಳಷ್ಟು ಸಮಸ್ಯೆಗಳನ್ನು ಉಂಟುಮಾಡುತ್ತದೆ ” ಎಂಬ ಅಭಿಪ್ರಾಯವನ್ನು  ವ್ಯಕ್ತಪಡಿಸಿದ್ದರು. ಏನಾಸಂ ಮೂಲಭೂತ ಪ್ರಮೇಯವೆಂದರೆ ಅನೇಕ ವಿಭಿನ್ನ ಧಾರ್ಮಿಕ ವೈಯಕ್ತಿಕ ಕಾನೂನುಗಳನ್ನು ಒಂದೇ ಏಕರೂಪದ ಕಾನೂನಿನಿಂದ ಬದಲಾಯಿಸಬೇಕು ಎನ್ನುವುದು. ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಸಮಾನತೆಯ ವಿಭಿನ್ನ ಪರಿಕಲ್ಪನೆಗಳು ಇರುವುದರಿಂದ ಸಮಾನತೆಗೆ ಹೋಲಿಸಿದರೆ ಏಕರೂಪತೆಯನ್ನು ಜಾರಿಗೆ ತರುವುದು ತುಲನಾತ್ಮಕವಾಗಿ ಸುಲಭವಾಗಿದೆ.

ಗೋವಾದಲ್ಲಿ ಜಾರಿಯಲ್ಲಿರುವ ಏಕರೂಪದ ನಾಗರಿಕ ಸಂಹಿತೆಯನ್ನು ಆದರ್ಶ ಮಾದರಿ ಎಂದು ಕೆಲವರು ಸೂಚಿಸುತ್ತಾರೆ. ಈ ಸಂಹಿತೆಯು ಏಕರೂಪವಾಗಿಲ್ಲ. ಹಿಂದೂಗಳಿಗೆ ದ್ವಿಪತ್ನಿತ್ವವನ್ನು ಅನುಮತಿಸಲಾಗಿದೆ ಆದರೆ ಇತರರಿಗೆ ಅವಕಾಶ ಇರುವುದಿಲ್ಲ. ಅಷ್ಟೇ ಅಲ್ಲದೆ ವಿವಾದಾತ್ಮಕ ಕೆಲವು ನಿಯಮಗಳಿದ್ದು ಎಲ್ಲಾ ಧರ್ಮಗಳ ವಿರೋಧವನ್ನು ಎದುರಿಸುವಂತಹ ನಿಬಂಧನೆಗಳಿವೆ. ವಿವಾಹಪೂರ್ವ ಒಪ್ಪಂದಗಳು ಕಾನೂನುಬದ್ಧವಾಗಿವೆ. ಯಾವುದೇ ವ್ಯಕ್ತಿ ತನ್ನ ವಾರಸುದಾರರನ್ನು ಹೊರತುಪಡಿಸಿ ಇತರರಿಗೆ ಆಸ್ತಿಗಳನ್ನು ಹಂಚಿಕೆ ಮಾಡಲು ಶೇಕಡಾವಾರು ಮಿತಿಗಳಿವೆ.  ಹಿಂದೂ ಕಾನೂನಿನಲ್ಲಿಯೂ ವಿರೋಧಾಭಾಸಗಳಿವೆ. ಹಿಂದೂ ವಿವಾಹ ಕಾಯ್ದೆಯು ಕೆಲವು ಸಂಬಂಧಿಕರ ನಡುವಿನ ಮದುವೆಯನ್ನು ನಿಷೇಧಿಸುತ್ತದೆ; ಸೋದರಸಂಬಂಧಿಗಳನ್ನು ಮದುವೆಯಾಗುವುದು ದಕ್ಷಿಣ ಭಾರತದ ವಿವಿಧ ಭಾಗಗಳಲ್ಲಿ ಹಿಂದೂಗಳಲ್ಲಿ ಸಾಮಾನ್ಯವಾಗಿದೆ.

ಎನ್ಎಫ್ಎಚ್ಎಸ್-5 (ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ) ದತ್ತಾಂಶವನ್ನು ಆಧರಿಸಿ ಮುಂಬೈ ಮೂಲದ ಇಂಟರ್‌ನ್ಯಾಷನಲ್ ಇನ್ಸ್‌ಟಿಟ್ಯೂಟ್ ಫಾರ್ ಪಾಪ್ಯುಲೇಷನ್ ಸೈನ್ಸಸ್ (ಐಐಪಿಎಸ್) ಪ್ರಕಟಿಸಿದ ಅಧ್ಯಯನವು ಬಹುಪತ್ನಿತ್ವದ ಅಭ್ಯಾಸವು ಎಲ್ಲ ಧರ್ಮಗಳಲ್ಲಿ ಪ್ರಚಲಿತವಾಗಿದೆ ಮತ್ತು ಕಾಲಕ್ರಮೇಣ ಕಡಿಮೆಯಾಗುತ್ತಿದೆ ಎಂದು ಬಹಿರಂಗಪಡಿಸಿದೆ. ಈ ವರದಿಯ ಪ್ರಕಾರ, ಸಮೀಕ್ಷೆ ನಡೆಸಿದ 1.9% ಮುಸ್ಲಿಂ ಮಹಿಳೆಯರು ತಮ್ಮ ಗಂಡಂದಿರಿಗೆ ಇನ್ನೂ ಒಬ್ಬ ಹೆಂಡತಿ ಇದ್ದಾರೆ ಎಂದು ಹೇಳಿದರೆ, 1.3% ಹಿಂದೂ ಮಹಿಳೆಯರು ಅದೇ ರೀತಿ ಹೇಳಿದ್ದಾರೆ. ವಿವಿಧ ಪ್ರದೇಶಗಳ ನಡುವೆಯೂ ವ್ಯತ್ಯಾಸವಿದೆ. ತೆಲಂಗಾಣದಲ್ಲಿ ಬಹುಪತ್ನಿತ್ವವನ್ನು ಆಚರಿಸುವ ಹಿಂದೂಗಳ ಸಂಖ್ಯೆ ಮುಸ್ಲಿಮರಿಗಿಂತ ಹೆಚ್ಚಾಗಿದೆ, ಆದರೆ ಅಸ್ಸಾಂನಲ್ಲಿ ಇದು ವಿರುದ್ಧವಾಗಿದೆ. ಬಹುಪತ್ನಿತ್ವವನ್ನು ರದ್ದುಗೊಳಿಸುವುದಾದರೆ ಎಲ್ಲ ಸಮುದಾಯಗಳಲ್ಲೂ ಜಾರಿಗೊಳಿಸಬೇಕಾಗುತ್ತದೆ. ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಬಾಲ್ಯವಿವಾಹವನ್ನು ಆಚರಿಸುವುದು ಭಾರತದಲ್ಲಿ ಕಾನೂನುಬಾಹಿರವಾಗಿದ್ದರೂ, ಹಿಂದೂ ವಿವಾಹ ಕಾಯ್ದೆಯು ಬಾಲ್ಯ ವಿವಾಹವನ್ನು ಅನೂರ್ಜಿತಗೊಳಿಸುವುದಿಲ್ಲ. ಪ್ರಾಪ್ತ ವಯಸ್ಸನ್ನು ದಾಟಿದ ನಂತರ ನಿರ್ದಿಷ್ಟ ಅವಧಿಯೊಳಗೆ ಅಂತಹ ಮದುವೆಯನ್ನು ರದ್ದುಗೊಳಿಸಲು ಕೋರುವ ಹೊರೆ ಬಾಲ್ಯ ವಿವಾಹವಾದ ವ್ಯಕ್ತಿಯ ಮೇಲಿರುತ್ತದೆ.

ಇದನ್ನೂ ಓದಿ:ಏಕರೂಪ ನಾಗರಿಕ ಸಂಹಿತೆ- ಸಾಮಾಜಿಕ ಸಾಂಸ್ಕೃತಿಕ ವಾಸ್ತವಗಳು

ಹಿಂದೂ ವಿವಾಹ ಕಾಯ್ದೆಯಡಿ, ಸಪ್ತಪದಿ (ಏಳು ಹೆಜ್ಜೆಗಳ ಆಚರಣೆ) ಬಂಧಿಸುವಂತಹ ಸಂಪೂರ್ಣ ವಿವಾಹವನ್ನು ರೂಪಿಸಲು ಸಾಕಾಗುತ್ತದೆ. ವೈವಾಹಿಕ ಹಕ್ಕುಗಳ ಮರುಸ್ಥಾಪನೆ ಎಂಬ ನಿಬಂಧನೆಯೂ ಕಾಯ್ದೆಯಲ್ಲಿದೆ. ಈ ನಿಬಂಧನೆಯ ಆಚರಣೆಯಲ್ಲಿ ಪತಿಯು ತನ್ನ ಹೆಂಡತಿಯನ್ನು ತನ್ನೊಂದಿಗೆ ವಾಸಿಸಲು ಒತ್ತಾಯಿಸಲು ನ್ಯಾಯಾಲಯಕ್ಕೆ ಹೋಗುವ ಹಕ್ಕನ್ನು ಪಡೆಯುತ್ತಾನೆ. ಈ ನಿಬಂಧನೆ ಸಾಕಷ್ಟು ಟೀಕೆಗೆ ಒಳಗಾಗಿದೆ ಮತ್ತು ಮಹಿಳೆಯರ ಸುರಕ್ಷತೆಗೆ ಹಾನಿಕಾರಕವೆಂದು ಪರಿಗಣಿಸಲಾಗಿದೆ. ಅಂತಿಮವಾಗಿ, ಹಿಂದೂ ಅವಿಭಜಿತ ಕುಟುಂಬ (ಎಚ್‌ಯುಎಫ್) ಇದೆ.

ಹಿಂದೂ ಕಾನೂನಿನ ಅಡಿಯಲ್ಲಿ ಒಂದು ವಿಶಿಷ್ಟ ವ್ಯವಸ್ಥೆಯಾದ ಎಚ್‌ಯುಎಫ್ ಸಾಮಾನ್ಯ ಪುರುಷ ಪೂರ್ವಜರಿಂದ ಬಂದ ಎಲ್ಲಾ ವ್ಯಕ್ತಿಗಳನ್ನು ಒಳಗೊಂಡಿರುತ್ತದೆ. ಈ ಸಂಸ್ಥೆಯನ್ನು ನೋಂದಾಯಿಸಬೇಕು ಮತ್ತು ತನ್ನದೇ ಆದ ಶಾಶ್ವತ ಖಾತೆ ಸಂಖ್ಯೆಯನ್ನು ಹೊಂದಿರಬೇಕು ಮತ್ತು ತೆರಿಗೆ ಉದ್ದೇಶಗಳಿಗಾಗಿ ಪ್ರತ್ಯೇಕ ವ್ಯಕ್ತಿಯಂತೆ ಪರಿಗಣಿಸಲಾಗುತ್ತದೆ. ಉದಾಹರಣೆಗಾಗಿ ಹೇಳುವುದಾದರೆ ಕುಟುಂಬದ ಒಡೆತನದ ಕೆಲವು ಆಸ್ತಿಯಿಂದ ಬಾಡಿಗೆಯು ಎಚ್‌ಯುಎಫ್‌ ಖಾತೆಗೆ ಜಮಾ ಆಗುತ್ತದೆ ಎಂದು ಭಾವಿಸೋಣ. ತೆರಿಗೆ ಚೌಕಟ್ಟುಗಳ ವಿಷಯದಲ್ಲಿ, ಈ ಆದಾಯವನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುತ್ತದೆ ಮತ್ತು ಇದರ ಪರಿಣಾಮವಾಗಿ ಕುಟುಂಬ ಸದಸ್ಯರು ಸಾಕಷ್ಟು ತೆರಿಗೆಯನ್ನು ಉಳಿಸಲು ಸಾಧ್ಯವಾಗುತ್ತದೆ. ಕಾನೂನು ಆಯೋಗವು ತನ್ನ ವರದಿಯಲ್ಲಿ, ಎಚ್‌ಯುಎಫ್‌ಗಳನ್ನು  ರದ್ದುಗೊಳಿಸಬೇಕು ಮತ್ತು “…ದೇಶದ ಆದಾಯವನ್ನು ಬಲಿಕೊಟ್ಟು ಆಳವಾಗಿ ಬೇರೂರಿರುವ ಭಾವನೆಗಳ ಆಧಾರದ ಮೇಲೆ ಈ ಸಂಸ್ಥೆಯನ್ನು ಸಮರ್ಥಿಸುವುದು ನ್ಯಾಯಯುತವಲ್ಲ ಎಂದು ಅರ್ಥಮಾಡಿಕೊಳ್ಳುವ ಸಮಯ ಬಂದಿದೆ ”ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಎಚ್‌ಯುಎಫ್‌ಗಳ ಸಂಖ್ಯೆಯಲ್ಲಿನ ಹೆಚ್ಚಳವನ್ನೂ ನಗಣ್ಯ ಎಂದು ಪರಿಗಣಿಸುವ ಹಾಗಿಲ್ಲ. ಹಣಕಾಸು ಸಚಿವಾಲಯ ಪ್ರಕಟಿತ ಅಂಕಿಅಂಶಗಳ ಪ್ರಕಾರ, 2013-14ರಲ್ಲಿ ನೋಂದಾಯಿತ ಎಚ್‌ಯುಎಫ್‌ಗಳ ಸಂಖ್ಯೆ 9,60,004 ಆಗಿತ್ತು ಮತ್ತು 2018-19ರ ವೇಳೆಗೆ ಈ ಸಂಖ್ಯೆ 11,87,180ಕ್ಕೆ ಏರಿದೆ. ಎಚ್‌ಯುಎಫ್‌ಗಳು ಅಂತರ್ಗತವಾಗಿ ಮಹಿಳೆಯರ ವಿರುದ್ಧ ಅನ್ಯಾಯ ಮತ್ತು ತಾರತಮ್ಯದಿಂದ ಕೂಡಿವೆ ಇತರ ಪುರುಷೇತರ ಲಿಂಗತ್ವ ವ್ಯಕ್ತಿಗಳ ಬಗ್ಗೆ ಏನನ್ನೂ ಹೇಳುವುದಿಲ್ಲ. 2005 ರಲ್ಲಿ ತಿದ್ದುಪಡಿಯಾಗುವವರೆಗೂ, ಹೆಣ್ಣುಮಕ್ಕಳಿಗೆ ಎಚ್‌ಯುಎಫ್‌ನ ಸದಸ್ಯರಾಗಲು ಸಹ ಅವಕಾಶವಿರಲಿಲ್ಲ. 2005 ರಲ್ಲಿ ತಿದ್ದುಪಡಿಯ ನಂತರವೂ, ಅವರು ಇನ್ನೂ ಎಚ್‌ಯುಎಫ್ನ ಕರ್ತಾ ಆಗಲು ಸಾಧ್ಯವಾಗಲಿಲ್ಲ, ಈ ಸ್ಥಾನವನ್ನು ಅವಿಭಕ್ತ ಕುಟುಂಬದ ಹಿರಿಯ ವ್ಯಕ್ತಿಗೆ ಮಾತ್ರ ಮೀಸಲಿಡಲಾಗಿತ್ತು. 2016 ರಲ್ಲಿ, ದೆಹಲಿ ಹೈಕೋರ್ಟ್ ಮಹಿಳೆಯರಿಗೆ ಎಚ್‌ಯುಎಫ್‌ನ ಕರ್ತಾ ಆಗಲು ದಾರಿ ಮಾಡಿಕೊಟ್ಟಿತು. ಆದಾಗ್ಯೂ, ಇದನ್ನು ಜಾರಿಗೆ ತರಲು ತೆರಿಗೆ ಶಾಸನಗಳಿಗೆ ಇಲ್ಲಿಯವರೆಗೆ ಯಾವುದೇ ತಿದ್ದುಪಡಿಗಳನ್ನು ಮಾಡಲಾಗಿಲ್ಲ.

ಎಚ್‌ಯುಎಫ್ ಅನ್ನು ರದ್ದುಗೊಳಿಸುವ ಯಾವುದೇ ಪ್ರಯತ್ನವು ಖಂಡಿತವಾಗಿಯೂ ಪೀಡಿತರಿಂದ ಭಾರಿ ಪ್ರತಿಭಟನೆ ಮತ್ತು ಹಿನ್ನಡೆಗೆ ಕಾರಣವಾಗುತ್ತದೆ. ಇದು ಹೆಚ್ಚಾಗಿ ಆಡಳಿತ ಪಕ್ಷದ ಪ್ರಮುಖ ಮತ ಬ್ಯಾಂಕ್ ಎಂದು ನಂಬಲಾದ ವ್ಯಾಪಾರ ಮತ್ತು ವ್ಯಾಪಾರಿ ಸಮುದಾಯವಾಗಿದೆ. ಆಶ್ಚರ್ಯಕರವಾಗಿ, ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ನಾಯಕ ಅಸಾದುದ್ದೀನ್ ಒವೈಸಿ, ಬಿಜೆಪಿ ನಿಜವಾಗಿಯೂ ಪ್ರಾಮಾಣಿಕವಾಗಿದ್ದರೆ ಎಚ್‌ಯುಎಫ್ ಅನ್ನು ರದ್ದುಗೊಳಿಸಲಿ ಎಂದು ಸವಾಲು ಹಾಕಿದ್ದಾರೆ.

ಸರ್ಕಾರದ ಮುಂದಿರುವ ಆಯ್ಕೆಗಳು ಯಾವುವು? ಮೊದಲನೆಯದಾಗಿ, ಅದು ಎಚ್‌ಯುಎಫ್ ಅನ್ನು ರದ್ದುಗೊಳಿಸಬಹುದು ಮತ್ತು ರಾಜಕೀಯ ಹಿನ್ನಡೆಯನ್ನು ನಿರ್ವಹಿಸಲು ಪ್ರಯತ್ನಿಸಬಹುದು. ಕೇರಳ ಅವಿಭಕ್ತ ಹಿಂದೂ ಕುಟುಂಬ ವ್ಯವಸ್ಥೆ (ನಿರ್ಮೂಲನೆ) ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಕೇರಳವು 1975 ರಲ್ಲೇ ಎಚ್‌ಯುಎಫ್‌ಗಳನ್ನು ಯಶಸ್ವಿಯಾಗಿ ತೆಗೆದುಹಾಕಿದೆ. ಎರಡನೆಯದಾಗಿ, ಅದು ಎಚ್‌ಯುಎಫ್‌ ಅನ್ನು ನಿರ್ಲಕ್ಷಿಸಬಹುದು ಮತ್ತು ಇದರಿಂದಾಗಿ ದುರುದ್ದೇಶ ಮತ್ತು ತಾರತಮ್ಯದ ಆರೋಪಗಳನ್ನು ಎದುರಿಸಬಹುದು. ಎಚ್‌ಯುಎಫ್‌ ಅನ್ನು ರದ್ದುಗೊಳಿಸದೆ, ಯಾವುದೇ ಸಂಹಿತೆಯು ಏಕರೂಪವಾಗಿರುವುದಿಲ್ಲ. ಮೂರನೆಯದಾಗಿ, ಅವಿಭಕ್ತ ಕುಟುಂಬಗಳು ಹಿಂದೂಗಳಿಗೆ ಮಾತ್ರ ಸೀಮಿತವಲ್ಲದ ಕಾರಣ ಈ ತೆರಿಗೆ ಉಳಿಸುವ ಘಟಕದ ಆಯ್ಕೆಯನ್ನು ಅದು ಎಲ್ಲಾ ಧರ್ಮಗಳಿಗೆ ನೀಡಬಹುದು. ನಾಲ್ಕನೆಯ ಆಯ್ಕೆ ಯಾವುದೂ ಇಲ್ಲ.

ಮೊದಲ ಅವಕಾಶದಲ್ಲೇ ಎಚ್‌ಯುಎಫ್‌ ಅನ್ನು ಕೈಬಿಡಬೇಕು. ಭಾರತದ ವಸಾಹತುಶಾಹಿ ಗತಕಾಲದ ಅವಶೇಷವಾಗಿದ್ದ ಅದಕ್ಕೆ ಯಾವುದೇ ಧಾರ್ಮಿಕ ಆಧಾರವಿರಲಿಲ್ಲ. ಅವಿಭಕ್ತ ಕುಟುಂಬ ವ್ಯವಹಾರ ವ್ಯವಸ್ಥೆಯು ಇಂಗ್ಲಿಷರಿಗೆ ಅರ್ಥವಾಗುತ್ತಿರಲಿಲ್ಲ. ಇದು ರಾಜ್ಯದ ಬೊಕ್ಕಸಕ್ಕೆ ನಷ್ಟಕ್ಕೂ ಕಾರಣವಾಗಿದೆ. ಉಳಿದವುಗಳಿಗೆ ಸಂಬಂಧಿಸಿದಂತೆ, ನಿಜವಾಗಿಯೂ ಪ್ರಗತಿಪರ ಮತ್ತು ಆಧುನಿಕ ಏಕರೂಪ ನಾಗರಿಕ ಸಂಹಿತೆಯು ಸರ್ಕಾರವು ಸಲಿಂಗ ವಿವಾಹಕ್ಕೆ ತನ್ನ ವಿರೋಧವನ್ನು ಸುಪ್ರೀಂ ಕೋರ್ಟ್ ಮುಂದೆ ಕೈಬಿಡಬೇಕಾಗುತ್ತದೆ. ಅಂತರ್ ಧರ್ಮೀಯ ದಂಪತಿಗಳಿಗೆ ಕಿರುಕುಳ ನೀಡಲು ಬಳಸಲಾಗುವ ಲವ್ ಜಿಹಾದ್ ಬೋಗಿಯನ್ನು ಬಿಜೆಪಿ ಕೈಬಿಡಬೇಕು. ಭಾರತಕ್ಕೆ ಪ್ರತಿಗಾಮಿ ಏಕರೂಪತೆಯ ಅಗತ್ಯವಿಲ್ಲ. ಆದಾಗ್ಯೂ, ಭಾರತ ಪ್ರಗತಿಪರ ವೈವಿಧ್ಯತೆಯೊಂದಿಗೆ ಬದುಕಬಹುದು.

Donate Janashakthi Media

Leave a Reply

Your email address will not be published. Required fields are marked *