ವಾಕ್‌ ಸ್ವಾತಂತ್ರ್ಯಕ್ಕೆ ಬೆಲೆ ಕೊಡದವರಿಂದ ಜೈಲುಪಾಲಾಗುತ್ತಿದ್ದೆವೆ: ಪಿ.ಸಾಯಿನಾಥ್‌

ದಾವಣಗೆರೆ: ಪ್ರಸ್ತುತ ದಿನಮಾನದಲ್ಲಿ ಮಾಧ್ಯಮದವರಿಗೆ ನಿಜಾಂಶಗಳನ್ನ ವ್ಯಕ್ತಪಡಿಸುವ ಸ್ವಾತಂತ್ಯ ಇಲ್ಲದಂತಾಗಿದೆ. ಒಂದು ವೇಳೆ ಇರುವುದನ್ನ ಹೇಳಿದರೆ ಜೈಲು ಪಾಲಾಗುವ ಹಲವಾರು ಉದಾಹರಣೆಗಳು ಇವೆ. ಅದರಲ್ಲಿ  ಒಂದನ್ನ ಹೇಳುವುದಾದರೆ ಝುಬೆರ್ ಅಹಮ್ಮದ್ ಒಬ್ಬ ಪತ್ರಕರ್ತ. ಅವರು ಕೋವಿಡ್ ಸಮಯದಲ್ಲಿ ತನ್ನ ಕುಟುಂಬದ ಬಗ್ಗೆ ಹೇಳಿದ್ದಕ್ಕೆ ಅವನನ್ನ ಜೈಲಿಗೆ ಹಾಕಿದ್ದಾರೆ. ಇಂತಹ ಹಲವು ಘಟನೆಗಳನ್ನು ಉಲ್ಲೇಖಿಸಿ ಪ್ರಸ್ತುತ ದಿನಮಾನದಲ್ಲಿ ನಡೆಯುವ ಅನ್ಯಾಯಗಳನ್ನು ಹೇಳಬಹುದು ಎಂದು ಹಿರಿಯ ಪತ್ರಕರ್ತ ಪಿ ಸಾಯಿನಾಥ್‌ ಹೇಳಿದ್ದಾರೆ.

2022-23ನೇ ಸಾಲಿನ  8ನೇ ಮೇ ಸಾಹಿತ್ಯ ಮೇಳವು ದಾವಣಗೆರೆಯ ತಾಜ್ ಪ್ಯಾಲೇಸ್ ನಲ್ಲಿ ನಡೆಯಿತು. ಈ ಸಾಹಿತ್ಯ ಮೇಳದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಪಿ ಸಾಯಿನಾಥ್ ಅವರು. ಪ್ರಸ್ತುತ ದಿನಮಾನದ ವಾಕ್ ಸ್ವಾತಂತ್ರ್ಯದ ಮೇಲೆ ಎಸಗಲಾಗುತ್ತಿರುವ ದಬ್ಬಾಳಿಕೆಯ ಬಗ್ಗೆ ವಿವರಿಸಿದರು. ಅವರ ಸಂಪೂರ್ಣ ಭಾಷಣವನ್ನು ಇಲ್ಲಿ ನೀಡಲಾಗಿದೆ….

ಸಂಘಟಕರಿಗೆ ಅಭಿನಂದನೆಗಳನ್ನು ತಿಳಿಸುತ್ತಾ, ಇಷ್ಟು ಅದ್ಭುತ ವ್ಯಕ್ತಿಗಳೊಂದಿಗೆ ಸೇರಿರುವುದಕ್ಕೆ ಧನ್ಯವಾದ ಅರ್ಪಿಸಿದ ಪಿ. ಸಾಯಿನಾಥ್‌ ಅವರು, ಭಾರತದಲ್ಲಿ ವಾಕ್‌ ಸ್ವಾತಂತ್ರ್ಯವಿದೆ ಹಾಗಾಗಿ ಮಾತನಾಡಬಹುದು ಅಷ್ಟೇ…  ಮಾತನಾಡಿದ ಬಳಿಕ  ಆ ಸ್ವಾತಂತ್ರ್ಯ ಜಾರಿಯಲ್ಲಿರುವುದಿಲ್ಲ. ರೈತರ ಅನ್ಯಾಯದ ಕೂಗು, ಸಮಾಜದಲ್ಲಿ ಆಗುತ್ತಿರುವ ಅನ್ಯಾಯದ ಬಗ್ಗೆ ಯಾವುದೇ ಮಾಧ್ಯಮಗಳು ತೋರಿಸುತ್ತಿಲ್ಲ. ಬದಲಿಗೆ ಕವಿಗಳು, ಬರಹಗಾರರು ಬರಹದ ಮೂಲಕ, ಈಗಿನ ಯುವಕರು ಧ್ವನಿ ಎತ್ತುವುದರ ಮುಖಾಂತರ ಅನ್ಯಾಯವನ್ನು ಮೆಟ್ಟಿ ನಿಲ್ಲುವ ಪ್ರಯತ್ನ ಮಾಡುತ್ತಿದ್ದೀರಿ ಎಂದರು.

ಕರ್ನಾಟಕದ ಬರಹಗಾರರಾದ ನಿಮ್ಮ ಈ ಕೆಲಸಗಳು ಹೆಚ್ಚೂ ಪರಿಣಾಮವನ್ನು ಬೀರುವಂತಹದ್ದು, ಇದರ ಅರಿವಿನಿಂದಲೇ ನೀವು ಇಂತಹ ಅರ್ಥಪೂರ್ಣವಾದ ಕಾರ್ಯಕ್ರಮವನ್ನು ಆಯೋಜಿಸಿದ್ದೀರಿ.

ನನ್ನ ಅಜ್ಜಿ ಬಳ್ಳಾರಿಯವರು ಕನ್ನಡದಲ್ಲಿ ಕವಿತೆಗಳನ್ನು ಬರೆಯುತ್ತಿದ್ದರು. ನಾನು ಸಾಹಿತ್ಯ ಸಭೆಗಳಿಗೆ ಹೋಗುವುದಿಲ್ಲ, ನನಗೆ ಸಾಹಿತ್ಯಿಕ ಸಾಧನೆಗಳಿಲ್ಲ, ಆದರೂ ನನ್ನ ಬರಹಗಳ ಪುಸ್ತಕಗಳು ಬಂದಿವೆ. ಆದರೆ, ಈ ಸಾಹಿತ್ಯಿಕ ಸಭೆಗೆ ನಾನು ಬರಲೇಬೇಕಿತ್ತು. ಏಕೆಂದರೆ ಕರ್ನಾಟಕದ ಬರಹಗಾರರು ಮತ್ತು ಕವಿಗಳು ಅಭಿವ್ಯಕ್ತಿಯ ಹಕ್ಕಿನ ರಕ್ಷಣೆಗಾಗಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ. ಅವರು ದ್ವೇಷ ಬಿತ್ತುವ ಪ್ರಯತ್ನದ ವಿರುದ್ಧ ಹೋರಾಡುತ್ತಿದ್ದಾರೆ. ಈಗಾಗಲೇ ಎಂ ಎಂ ಕಲಬುರ್ಗಿ ಮತ್ತು ಗೌರಿ ಲಂಕೇಶ್ ಅಂಥವರನ್ನು ನಾವು ಕಳೆದುಕೊಂಡಿದ್ದೇವೆ.

ಆದರೆ ನಾನು ಇಲ್ಲಿಗೆ ಬರಲೇಬೇಕು ಎಂದು ನನಗೆ ಖಚಿತವಾಗಿ ಗೊತ್ತಾದದ್ದು ನೀವು ನಬೀಸಾಬ್, ಕಲ್ಲಂಗಡಿ ಮಾರಾಟಗಾರರನ್ನು ಕರೆದಿದ್ದೀರೆಂದು ಗೊತ್ತಾದಾಗ. ನೀವು ಘನತೆ ಮತ್ತು ಮಾನವತೆಯನ್ನು ಎತ್ತಿಹಿಡಿಯುವ ಮೂಲಕ ನಮ್ಮೆಲ್ಲರಿಗೂ ಗೌರವ ತಂದಿದ್ದೀರಿ. ನೀವು ಅವರಿಗೆ ಅವರ ಕಥೆಯನ್ನು ಹೇಳಲು ಆವಕಾಶ ಕೊಡುವ ಮೂಲಕ ನಾನು ಇಲ್ಲಿಗೆ ಬರುವಂತೆ ಮಾಡಿದ್ದೀರಿ.

ಫ್ರಾನ್ಸ್‌ನ ದೊಡ್ಡ ಬರಹಗಾರ ಎಲಿನ್ ಝೋಲಾ ಅಲ್ಲಿನ ದುರಂತಕ್ಕೊಳಗಾದವರ ಪರವಾಗಿ ದನಿಯೆತ್ತುವ ಕಾರ್ಯಗಳನ್ನು ಮಾಡುತ್ತಿದ್ದರು. ‘ನಾನು ಆರೋಪಿಸುತ್ತೇನೆ’ ಎಂದು ಅಧ್ಯಕ್ಷರಿಗೆ ಬರೆದಿದ್ದ ಬಹಿರಂಗ ಪತ್ರವು ಪತ್ರಿಕೆಗಳ ಮುಖಪುಟದಲ್ಲಿ ಬಂದಿತು. ಇದು ಕುಲೀನ ಫ್ರಾನ್ಸ್‌ನ ಆಳ್ವಿಕೆಗೆ ಸವಾಲೊಡ್ಡಿತ್ತು.

ಒಬ್ಬ ಮುಗ್ಧ ನಿರಪರಾಧಿ ಸೈನಿಕ ಮತ್ತು ಮಿಲಿಟರಿ ಅಧಿಕಾರಿ ಡ್ರೇಫಸ್‌ನ ನಿರಪರಾಧಿತ್ವದ ಪರವಾಗಿ ಅವನ ಜೀವಾವಧಿ ಶಿಕ್ಷೆಯ ವಿರುದ್ಧವಾಗಿ ಝೋಲಾ ಬರೆಯುತ್ತಾನೆ. ಅದೂ ಕೂಡ 1894ರಲ್ಲಿ ನರಕದಂತಿರುವ ಡೆವಿಲ್ ದ್ವೀಪಗಳಿಗೆ ಆ ಸೈನಿಕನನ್ನು ಕಳಿಸುವುದನ್ನು ಖಂಡಿಸಿ ಆತ ಬರೆಯುತ್ತಾನೆ.

ಈ ಬರಹಗಾರನ ಸಾವಿಲ್ಲದ ಬರಹವು ಇವೆಲ್ಲದರ ನಂತರವೂ ನಿಲ್ಲದೆ ಮುಂದುವರೆಯಿತು. 1906ರಲ್ಲಿ ಡ್ರೇಫಸ್‌ನನ್ನು ಆರೋಪಮುಕ್ತಗೊಳಿಸಿ ಒಂದು ನಾಗರೀಕ ನ್ಯಾಯಾಲಯ ಆದೇಶ ನೀಡಿದರೂ ಸೈನ್ಯ ಇದನ್ನು ನೂರು ವರ್ಷಗಳ ನಂತರ ಒಪ್ಪಿಕೊಂಡಿತು. ಆದರೆ ಝೋಲಾ ತನ್ನ ಪ್ರತಿರೋಧಕ್ಕಾಗಿ ಫ್ರಾನ್ಸ್‌ನಿಂದ ಪಲಾಯನ ಮಾಡಬೇಕಾಯಿತು. ಆತನಿಗೆ ನೀಡಲಾಗಿದ್ದ ಎಲ್ಲ ಪದವಿಗಳನ್ನೂ ವಾಪಸ್ಸು ಪಡೆದು ಅವಮಾನಿಸಲಾಯಿತು, ದೇಶ ಭ್ರಷ್ಟನನ್ನಾಗಿ ಮಾಡಲಾಯಿತು. 1903ರಲ್ಲಿ ಲಂಡನ್‌ನ ತನ್ನ ಮನೆಯ ಚಿಮಣಿಯ ಕಾರ್ಯನಿರ್ವಹಣೆಯ ಸಮಸ್ಯೆಯಿಂದ ಉಸಿರುಕಟ್ಟಿ ಸಾವಿಗೀಡಾದರು ಝೋಲಾ.

4 ದಶಕಗಳ ನಂತರ ಅಂದು ಚಿಮಣಿಯನ್ನು ಬೇಕೆಂದೇ ಬಂದು ಮಾಡಿದ್ದಾಗಿ ಚಿಮಣಿ ಸ್ವಚ್ಛಗೊಳಿಸುವ ಕೆಲಸಗಾರ ಒಪ್ಪಿಕೊಂಡ. ಝೋಲಾನ ಅಂತ್ಯಕ್ರಿಯೆಯಲ್ಲಿ ಡ್ರೆಫಸ್‌ನ ಮೇಲೆ ಬಲಪಂಥೀಯ ಕೊಲೆಗಾರ ದಾಳಿ ಮಾಡಿ ಗುಂಡು ಹಾರಿಸಿ ಗಾಯಗೊಳಿಸಿದರೂ ನ್ಯಾಯಾಂಗ ಗಂಭೀರವಾಗಿ ಪರಿಗಣಿಸಲಿಲ್ಲ.  ಇದು ಇಂದಿಗೂ ನಮಗೆ ಏನನ್ನು ನೆನಪಿಸುತ್ತದೆ. ಕರ್ನಾಟಕದ ಬರಹಗಾರರು ಝೋಲಾನ ರೀತಿಯಲ್ಲಿ ಕೆಲಸ ಮಾಡುತ್ತಿದ್ದೀರಿ, ಈ ನಬೀಸಾಬ್ ನಿಮ್ಮ ಡ್ರೆಫಸ್, ಇದು ನನ್ನ ಪ್ರಮುಖ ಸಂದೇಶವಾಗಿದೆ.

ಕರ್ನಾಟಕದ ಬರಹಗಾರರು ತಮ್ಮ ಪದವಿಗಳನ್ನು ಕಳೆದುಕೊಳ್ಳುವ ಬಗ್ಗೆ ಚಿಂತಿಸಲಿಲ್ಲ, ತಾವೇ ಅದನ್ನು ಪ್ರತಿರೋಧವಾಗಿ ಮರಳಿಸಿ ದೊಡ್ಡತನ ಮೆರೆದರು. ಈಗ ಇತಿಹಾಸವನ್ನು ಕೋಟ್ಯಾಂತರ ರೂ.ಗಳನ್ನು ಖರ್ಚುಮಾಡಿ ಮರುಮುದ್ರಿಸಲಾಗುತ್ತಿದೆ. ಅವರದೇ ಆದ  ಇತಿಹಾಸವನ್ನು ಬರೆಯಲು ಪಠ್ಯಗಳನ್ನು ತಿರುಚಲಾಗುತ್ತಿದೆ.

1926ರಲ್ಲಿ ನಿಷೇಧಿಸಲ್ಪಟ್ಟು ನಂತರ 40ರಲ್ಲಿ ಮತ್ತೆ ಪ್ರಕಟಗೊಂಡು ಸಂಘಪರಿವಾರದಿಂದ ಮುಂದೊತ್ತಲ್ಪಟ್ಟ ಸಾವರ್ಕರ್ ಕುರಿತ ಪುಸ್ತಕವೊಂದನ್ನು ಚಿತ್ರಗುಪ್ತ ಎಂಬ ಬರಹಗಾರ ಬರೆದಿದ್ದರು. 1911ರವರೆಗೆ ಸಾವರ್ಕರ್ ಅವರು ಕ್ರಾಂತಿಕಾರಿಯಾಗಿದ್ದರು, ಆ ನಂತರ ಜೈಲಿಗೆ ಹೋದ ಮೇಲೆ ಅವರ ಧೋರಣೆ ಬದಲಾಯಿತು ಎಂದು ಹೇಳುತ್ತಾರೆ. ಸಾವರ್ಕರ್ ಬಗ್ಗೆ ಬರೆದಿದ್ದ ಚಿತ್ರಗುಪ್ತ ಎಂಬವರು ಬೇರೆ ಯಾರೂ ಅಲ್ಲ ಸ್ವತಃ ಸಾವರ್ಕರ್ ಅವರೇ ಎಂದು ಅವರ ಸಹೋದರನಿಂದ ನಂತರ ತಿಳಿಯಿತು.

ಹಲವರು ಹೇಳಿದಂತೆ ಭಾರತದಲ್ಲಿ ವಾಕ್ ಸ್ವಾತಂತ್ರ್ಯ ಇದೆ. ಮಾತಿನ ಸ್ವಾತಂತ್ರ್ಯ ಇದೆ. ಮಾತಿನ ನಂತರ ಸ್ವಾತಂತ್ರ್ಯ ಇಲ್ಲ. ಅದಕ್ಕೆ ನನ್ನನ್ನು ದೂಷಿಸಬೇಡಿ. ಜಾಗತಿಕ ಪತ್ರಿಕಾ ಸಂಸ್ಥೆಯ ಅಧ್ಯಯನದ ಪ್ರಕಾರ ಭಾರತ 105ನೇ ಸ್ಥಾನದಿಂದ ಈಗ ಅದು 142ಕ್ಕೆ ಬಂದಿದೆ. ಯುಎಪಿಎ ಕಾಲದಲ್ಲಿ ನಾವು ವಾಕ್ ಸ್ವಾತಂತ್ರ್ಯ ಬಗ್ಗೆ ಮಾತಾಡುತ್ತಿದ್ದೇವೆ. ಸಿದ್ಧಿಕಿ ಕಪ್ಪನ್ ಎಂಬ ಪತ್ರಕರ್ತ ಜೈಲಿನಲ್ಲಿ ಕಾರಣವಿಲ್ಲದೇ ನರಳುತ್ತಿದ್ದನು. ಕೋವಿಡ್ ಸಂದರ್ಭದಲ್ಲಿ ಆತನನ್ನು ಆಸ್ಪತ್ರೆಗೆ ದಾಖಲಿಸಿ ಮಂಚಕ್ಕೆ ಸರಪಣಿಯಿಂದ ಬಿಗಿದು, ಬಾಟಲಿಯಲ್ಲಿ ಮೂತ್ರ ವಿಸರ್ಜನೆ ಮಾಡು ಎಂದಾತನಿಗೆ ಹೇಳಿದ್ದರು. ಆತನ ಸಾವಿನ ಪ್ರಕರಣ ಹೀಗೆ ಮುಗಿಯಿತು.

ಕೇಂದ್ರ ಸಂಪುಟ ದರ್ಜೆ ಸಚಿವರೊಬ್ಬ ಸಚಿವ ವಾರ್ತಾ ಪ್ರಸಾರ ಇಲಾಖೆಗೆ ಪತ್ರ ಬರೆದು ಮಾಧ್ಯಮದ ಮೇಲೆ ನಿಗರಾಣಿ ಇಡುವ ಒಂದು ಸಮಿತಿ ರಚಿಸಬೇಕು ಎಂದು ಆದೇಶಿಸಿತು. 13 ಜನ ಅಧಿಕಾರಶಾಹಿಗಳನ್ನು ಆ ಸಮಿತಿಗೆ ನೇಮಿಸಲಾಯಿತು. ನಂತರದ ದಿನಗಳಲ್ಲಿ ಕೊನೆಗೆ ಅವರಿಗೆ ಯಾರೋ ಸಲಹೆ ಕೊಟ್ಟಂತೆ ಅವರು ನನ್ನನ್ನು ಸಂಪರ್ಕಿಸಿದರು, ನನ್ನೊಂದಿಗಿದ್ದ ಇನ್ನೊಬ್ಬ ಪತ್ರಕರ್ತ ರಜತ್ ಶರ್ಮಾ ಸೇರ್ಪಡೆಗೊಂಡರು.

ಭಾರತದ ಸರ್ಕಾರ ವಿದೇಶೀಯರ ಅಭಿಪ್ರಾಯವನ್ನು ಹೆಚ್ಚು ಗೌರವಿಸುವುದರಿಂದ ಪತ್ರಿಕಾ ಸ್ವಾತಂತ್ರ್ಯದ ರಕ್ಷಣೆಗೆ ಸರ್ಕಾರ ಮುಂದಾಯಿತು. ಅಂತರಾಷ್ಟ್ರೀಯ ಸಮಿತಿಗಾಗಿ ಅಲ್ಲ, ನಮ್ಮ ಪತ್ರಕರ್ತರ ಪರಿಸ್ಥಿತಿಯನ್ನು ಅರಿತುಕೊಳ್ಳಲು ಕೆಲಸ ಮಾಡೋಣ ಎಂದು ಸಲಹೆ ಕೊಟ್ಟೆ. ಅದರಂತೆ ಪತ್ರಕರ್ತರ ಪರಿಸ್ಥಿತಿಗಳು ಹೊರಬಂದವು. ವಿಪತ್ತು ನಿಯಂತ್ರಣ ಕಾಯ್ದೆಯ ಕೆಳಗೂ ಅನೇಕ ಪತ್ರಕರ್ತರನ್ನು ಎನ್‌ಡಿಎ ಸರ್ಕಾರ ಬಂಧಿಸಿದೆ ಎಂದು ಗೊತ್ತಾಯಿತು. 1861ರಲ್ಲಿ ಬಾಲಗಂಗಾಧರ ತಿಲಕರನ್ನೂ ಇದೇ ಕಾಯ್ದೆಯ ಅಡಿಯಲ್ಲಿ ಬಂಧಿಸಲಾಗಿತ್ತು. ತಮಿಳುನಾಡಿದ ಒಬ್ಬ ಪತ್ರಕರ್ತರನ್ನೂ ಕೋವಿಡ್ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಸೂಕ್ತ ಉಪಕರಣಗಳಿಲ್ಲ ಎಂದು ಬರೆದಿದ್ದಕ್ಕೆ ಬಂಧಿಸಲಾಯಿತು. ಅಂಡಮಾನ್‌ನಲ್ಲಿ ಕ್ವಾರಂಟೈನ್‌ ನಲ್ಲಿ ಇದ್ದ ಕುಟುಂಬವನ್ನು ಮಾತಾಡಿಸಿದ್ದಕ್ಕೆ ಒಬ್ಬ ಪತ್ರಕರ್ತ ಝುಬೇರ್ ನನ್ನು ಬಂಧಿಸಲಾಯಿತು.

ಈ ಸಮಿತಿಯಲ್ಲಿ ನಾನು ಕಂಡ ವಿಚಿತ್ರವೆಂದರೆ, ಸಮಿತಿಯ ಸಭೆಗಳಲ್ಲಿ ಮಾತಾಡುತ್ತಿದ್ದ ಏಕೈಕ ವ್ಯಕ್ತಿ ನಾನು. ರಜತ್ ಶರ್ಮಾ ನನ್ನ ಹಳೇ ಸಹೋದ್ಯೋಗಿ, ಅವರಿಗೆ ವಾಕ್ ಸ್ವಾತಂತ್ರ್ಯದ ಬಗ್ಗೆ ಏನು ಅಭಿಪ್ರಾಯ ಇತ್ತೋ ಗೊತ್ತಿಲ್ಲ, ಅವರು ಮಾತಾಡಲೇ ಇಲ್ಲ, ಎರಡನೇ ಸಭೆಯಲ್ಲಿ ತನಗೆ ಬಿಡುವಿಲ್ಲದ ಕಾರಣ ಸಮಿತಿಯಿಂದ ಹೊರಗುಳಿಯುವುದಾಗಿ ಹೇಳಿದರು. ಅವರ ಬದಲಿಗೆ ಬಂದ ಇಬ್ಬರು ಪತ್ರಕರ್ತರು ಮುಂದಿನ ಸಭೆಗಳಲ್ಲಿ ಒಂದೂ ಮಾತಾಡಲಿಲ್ಲ.

ವರದಿಯ ಕರಡು ಬರಲು ಕಾಯುತ್ತಿದೆ. ಈ ಕರಡಿನ ಆಸಕ್ತಿದಾಯಕ ಸಂಗತಿಯೆಂದರೆ, ಇದನ್ನು ‘ವರದಿ’ ಎಂದು ಕರೆಯಲಾಗಿತ್ತೇ ಹೊರತು ‘ಕರಡು’ ಎಂದಲ್ಲ.

ನನ್ನನ್ನು ಆಕಾಶದೆತ್ತರಕ್ಕೆ ಹೊಗಳಲಾಗಿತ್ತು. ನಾನು ನನ್ನನ್ನು ನಾನು ಗುರುತಿಸಲಾಗಲಿಲ್ಲ ಅಲ್ಲಿ. ಆದರೆ, ನಂತರ ಒಳಭಾಗದಲ್ಲಿ ನಾನು ಚರ್ಚಿಸಿದ್ದ ಒಂದೂ ಮಾತು ಇರಲಿಲ್ಲ. ಜಮ್ಮು ಖಾಶ್ಮೀರದ ಉಲ್ಲಂಘನೆಗಳ ಬಗ್ಗೆ ನಾನು ಹೇಳಿದ್ದೆ ಆದರೆ, ‘ಜಮ್ಮು-ಕಾಶ್ಮೀರದಲ್ಲಿ ಮಿಲಿಟರಿಯು ಪತ್ರಕರ್ತರನ್ನು ಕಾಪಾಡಲು ಸಾಹಸದ ಪಾತ್ರ ವಹಿಸುತ್ತಿದೆ’ ಎಂದು ಬದಲಾಗಿತ್ತು. ನನ್ನ ಮಾತುಗಳು ಎಲ್ಲೂ ಇರಲಿಲ್ಲ. ಕರಡು ಅಥವಾ ವರದಿ ಎನ್ನಬಹುದಾದ ಅದರಲ್ಲಿ 17 ಅನುಬಂಧಗಳಿದ್ದವು, ಈ ಅಧ್ಯಯನವು 18 ಮಂದಿ ಪತ್ರಿಕಾ ಅಧ್ಯಯನ ನಡೆಸುತ್ತಿದ್ದ ಹೊರ ದೇಶಗಳ (ಆಫ್ರಿಕಾ ಇತ್ಯಾದಿ ದೇಶಗಳ) ಸಂಶೋಧನಾರ್ಥಿಗಳನ್ನು ಮಾತಾಡಿಸಿ, ಭಾರತದ ವಾಕ್ ಸ್ವಾತಂತ್ರಯ ಮತ್ತು ಪತ್ರಕರ್ತರ ಪರಿಸ್ಥಿತಿ ಅದ್ಭುತ ಎಂದು ಮಾಹಿತಿ ನೀಡಲಾಗಿದೆ.

ನಾನು ಇದನ್ನು ವಿರೋಧಿಸಿ ಟಿಪ್ಪಣಿಯನ್ನು ಕಳಿಸಿದೆ. ಮೂರು ಬಾರಿ ಕಳಿಸಿದರೂ ಪ್ರತಿಕ್ರಿಯೆ ಬರಲಿಲ್ಲ. ನಂತರ ನಾನೇ ಸಂಪರ್ಕಿಸಿದೆ. ಅದರ ಮರುದಿನ ಆ ಕಮಿಷನ್‌ನ ಇ ಮೇಲ್ ಐಡಿ ಕೆಲಸ ಮಾಡುವುದು ನಿಲ್ಲಿಸಿತು. ನಂತರ ಕಮಿಷನ್ ಕೂಡಾ. ಸಂಪುಟ ಕಾರ್ಯದರ್ಶಿ, ಕೇವಲ ಮೋದಿ ಮತ್ತು ಅಮಿತ್‌ ಶಾ ಇಬ್ಬರಿಂದ ಮಾತ್ರವೇ ಆದೇಶ ಪಡೆಯುವ ವ್ಯಕ್ತಿ ನೇಮಿಸಿದ ಸಮಿತಿಯೂ ಕಾಣೆಯಾಯಿತು. ಅಂತಹ ಸ್ಥಿತಿ ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ್ದು.

ಈ ವರದಿ ಬೇಕೆಂದು ಸ್ನೇಹಿತರು ಆರ್‌ಟಿಐ ಅರ್ಜಿಯನ್ನು ಸಲ್ಲಿಸಿದರು. ಅದಕ್ಕೆ ಉತ್ತರವೂ ಬಂತು, ʻಹೌದು ಅಂತಹ ಸಮಿತಿ ಇತ್ತು, ಅದು 4 ಸಭೆ ನಡೆಸಿತು. ಅಷ್ಟೇ…….

ಭಾರತದ ಅಸಮಾನತೆಗಳು ಮಾಧ್ಯಮದಲ್ಲಿ ಮತ್ತು ನ್ಯಾಯಾಂಗದಲ್ಲಿ ಪ್ರತಿಫಲಿಸಬೇಕು. ಯಾರಿದ್ದಾರೆ ಈಗ ಭಾರತದ ಮಾಧ್ಯಮಗಳ ದೊಡ್ಡ ಮಾಲೀಕರು?- ಮುಖೇಶ್ ಅಂಬಾನಿ. ಯಾರು ಏಶ್ಯಾದ ಬಿಲಿಯನೇರ್? – ಅಂಬಾನಿ. ಈಗ ಅಧಾನಿ ಕೂಡಾ.

1992ರಲ್ಲಿ ಡಾಲರ್ ಕೋಟ್ಯಾಧಿಪತಿಗಳಾಗಿ ಭಾರತದಲ್ಲಿ ಒಬ್ಬರೂ ಇರಲಿಲ್ಲ. 2012-13ರಲ್ಲಿ 15 ಮಂದಿ ಆದರು. ಈ ವರ್ಷವನ್ನೇ ಯಾಕೆ ಆರಿಸಬೇಕು? ಅಂದರೆ, ದೇಶದಲ್ಲಿ 18 ಕೋಟಿ ಗ್ರಾಮೀಣ ಕುಟುಂಬಗಳಿವೆ, ಅದರಲ್ಲಿ ಮೂರನೇ ಎರಡು ಭಾಗದಲ್ಲಿ ಮುಖ್ಯ ಆದಾಯ ಗಳಿಸುವವರು 10,000ಕ್ಕಿಂತ ಕಡಿಮೆ ಆದಾಯ ಗಳಿಸುತ್ತಿದ್ದರು. ದಲಿತರು ಮತ್ತು ಆದಿವಾಸಿಗಳು ಇದರಲ್ಲಿ ಶೇ. 4ರಷ್ಟು ಮಾತ್ರ ಆದಾಯ ಗಳಿಸುತ್ತಿದ್ದರು.

2019ರಲ್ಲಿ ಜಾಗತಿಕ ಸಾಂಕ್ರಾಂಮಿಕ ಆರಂಭವಾದಾಗ ದೇಶದ ಸಂಪತ್ತು ಧರೆಗಿಳಿಯಿತು, ಆದರೆ ಅಂಬಾನಿ ಮತ್ತು ಅದಾನಿಗಳ ಖಾಸಗಿ ಆದಾಯ 400 ಪಟ್ಟಿಗಿಂತ ಹೆಚ್ಚು ಹೆಚ್ಚಾಯಿತು. ಆರೋಗ್ಯ ಕ್ಷೇತ್ರ, ಆನ್‌ಲೈನ್ ಶಿಕ್ಷಣ ಇತ್ಯಾದಿ ಎಲ್ಲದರ ಲಾಭ ಯಾರಿಗೆ ಹೋಗಿರಬಹದು ಎಂದು ಎಲ್ಲರೂ ಊಹಿಸಬಹುದು. ಬೈಜು ಆಪ್ ಇತ್ಯಾದಿಗಳ ಉದಾಹರಣೆಯನ್ನು ನೀಡಬಹುದು.

ಆದಿವಾಸಿ ಮತ್ತು ಗ್ರಾಮೀಣ ಶಿಕ್ಷಣದ ಕತೆ ಮತ್ತಷ್ಟು ಭಯನಕವಾಯಿತು? ನಿಮಗೆ ತಿಳಿದಿರಲಿ… ತನ್ನದೇ ಆದ ಸ್ವಂತ ಸ್ಮಾರ್ಟ್ ಫೋನ್ ಇರುವ ಒಬ್ಬ ದಲಿತ ಆದಿವಾಸಿ ಹುಡುಗಿಯರು ಎಷ್ಟು ಮಂದಿ ಗೊತ್ತಿದಾರೆ? ಹೇಳಬಹುದಾ… ಅದೇ ರೀತಿ ಸಾಂಕ್ರಾಮಿಕದ 12 ತಿಂಗಳಿನಲ್ಲಿ 102ರಿಂದ 166ಕ್ಕೆ ಡಾಲರ್ ಕೋಟ್ಯಾಧಿಪತಿಗಳ ಸಂಖ್ಯೆ ಹೆಚ್ಚಿತು. ಜಿಡಿಪಿಯ ನಾಲ್ಕು ಪಟ್ಟು ಸಂಪತ್ತು ಜನಸಂಖ್ಯೆಯ ನಾಲ್ಕರಲ್ಲಿ ಒಂದು ಭಾಗ ಇರುವ ಕೋಟ್ಯಾಧಿಪತಿಗಳು ಪ್ರತಿನಿಧಿಸುತ್ತಾರೆ. ಇಂತಹ ಚಿತ್ರಣಗಳೂ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಬರುವುದಿಲ್ಲ.

ರೈತರು ದೆಹಲಿಯಲ್ಲಿ ಆಂದೋಲನದಲ್ಲಿ ತೊಡಗಿದ್ದಾಗ, ಪ್ರತಿ ಎರಡನೇ ಘೋಷಣೆಯು ಅಂಬಾನಿ ಅದಾನಿಗೆ ಧಿಕ್ಕಾರ ಇತ್ತು. ಆದರೆ ಅದನ್ನು ಮಾಧ್ಯಮಗಳು ವರದಿ ಮಾಡಲೇ ಇಲ್ಲ. ಈ ನಿಜಚಿತ್ರಗಳನ್ನು ನಿಮ್ಮಂತಹ ಬರಹಗಾರರು ಕವಿಗಳು ವಿದ್ಯಾರ್ಥಿಗಳು ಹೊರತರುತ್ತೀರಿ.

ಬಂಗಾಳದ ಬರದ ಸಮಯದಲ್ಲಿ, ಜಲಿಯನ್ ವಾಲಾ ಬಾಗ್ ಸಮಯದಲ್ಲಿ ಹೀಗೆ ಇತಿಹಾಸದಲ್ಲಿ ಅನೇಕ ಬಾರಿ ಸತ್ಯವನ್ನು ಹೊರತಂದವರು ಇಂತಹ ಬರಹಗಾರರೇ, ಅವರೇ ತಮ್ಮ ಪತ್ರಿಕೆಗಳನ್ನು ಆರಂಭಿಸಿದರು. ನಬೀಸಾಬ್ ಕಿಲ್ಲೇದಾರ್ ಕಥೆ ಏನು ಎಂಬುದನ್ನು ತೋರ್ಪಡಿಸಲು ನಿಮ್ಮ ಸೃಜನಶೀಲತೆಯನ್ನು ಬಳಸಿ. ಈ ಐತಿಹಾಸಿಕ ಜವಾಬ್ದಾರಿಯನ್ನು ಈಡೇರಿಸಲು ಮುಂದಾಗಬೇಕೆಂದು ನಾನು ಕರ್ನಾಟಕದ ಬರಹಗಾರರು, ಚಿಂತಕರು, ಕವಿಗಳನ್ನು ಕೇಳಿಕೊಳ್ಳುತ್ತೇನೆ. ಇಡೀ ಭಾರತಕ್ಕೆ ತೋರಿಸಿಕೊಡಿ-ನಾವು ಹೋರಾಡುತ್ತೇವೆ, ನಾವು ಗೆಲ್ಲುತ್ತೇವೆ – ಎಂದು!!

Donate Janashakthi Media

Leave a Reply

Your email address will not be published. Required fields are marked *