ರಾಂಚಿ: ಧನಬಾದ್ನ ಜಾರಿಯಾ ಪ್ರದೇಶದಲ್ಲಿ ದಶಕಗಳಿಂದ ಹೊತ್ತಿ ಉರಿಯುತ್ತಿರುವ ಭೂಗರ್ಭ ಅಗ್ನಿಯನ್ನು ನಿಯಂತ್ರಿಸಲು ಇದೀಗ ಕೃತಕ ಬುದ್ಧಿಮತ್ತೆ (AI), ಯಂತ್ರ ಕಲಿಕೆ (ML) ಮತ್ತು ಪ್ರಿಡಿಕ್ಟಿವ್ ಅನಾಲಿಟಿಕ್ಸ್ ತಂತ್ರಜ್ಞಾನಗಳನ್ನು ಬಳಸಲು ನಿರ್ಧರಿಸಲಾಗಿದೆ.
ಈ ಅಗ್ನಿಯನ್ನು ನಿಗಾ ವಹಿಸಲು ಸುಧಾರಿತ ತಂತ್ರಜ್ಞಾನವನ್ನು ಬಳಸುವ ಉದ್ದೇಶದಿಂದ, ಕೋಲ್ ಇಂಡಿಯಾ ಲಿಮಿಟೆಡ್ (CIL) ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ (ISRO)ಯ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ (NRSC) ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ.
ಈ ಒಪ್ಪಂದದಡಿ ದೇಶದಾದ್ಯಂತ ಇರುವ ಕಲ್ಲಿದ್ದಲು ಗಣಿಗಳ ಮೇಲ್ವಿಚಾರಣೆಗೆ AI ಆಧಾರಿತ ಉಪಗ್ರಹ ಮಾನಿಟರಿಂಗ್ ಡ್ಯಾಶ್ಬೋರ್ಡ್ ಅಭಿವೃದ್ಧಿಪಡಿಸಲಾಗುತ್ತದೆ.
ಇದನ್ನೂ ಓದಿ: ಅಮೇರಿಕದಲ್ಲಿ ಅಡಾನಿ ಪ್ರಕರಣದ ವಜಾ ಪ್ರಕರಣ
ಜಾರಿಯಾ ಪ್ರದೇಶದ ಅಗ್ನಿ ಪೀಡಿತ ಭಾಗಗಳಿಗೆ ಈ ವ್ಯವಸ್ಥೆಯಿಂದ ಹೆಚ್ಚಿನ ಪ್ರಯೋಜನ ದೊರೆಯಲಿದೆ. ಭೂಗರ್ಭ ಕಲ್ಲಿದ್ದಲು ಅಗ್ನಿಯನ್ನು ಪತ್ತೆಹಚ್ಚುವುದು, ಅದರ ವಿಸ್ತರಣೆಯನ್ನು ಅಂದಾಜಿಸುವುದು ಮತ್ತು ಅಪಾಯದ ಪ್ರದೇಶಗಳ ಮೇಲೆ ನಿರಂತರ ನಿಗಾವಹಿಸುವುದಕ್ಕೆ ಇದು ಸಹಕಾರಿಯಾಗಲಿದೆ.
ಈ ವೇದಿಕೆ AI, ML ಮತ್ತು ಪ್ರಿಡಿಕ್ಟಿವ್ ಅನಾಲಿಟಿಕ್ಸ್ಗಳನ್ನು ಬಳಸಿಕೊಂಡು ಗಣಿಗಳ ಮೇಲ್ವಿಚಾರಣೆಯ ನಿಖರತೆ, ಕಾರ್ಯಕ್ಷಮತೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಲಿದೆ.
ಈ ಒಪ್ಪಂದದ ಬಗ್ಗೆ ಮಾಹಿತಿ ನೀಡಿದ ಕೋಲ್ ಇಂಡಿಯಾ ಲಿಮಿಟೆಡ್, “ದೇಶದಾದ್ಯಂತ ಗಣಿಗಾರಿಕೆ ಚಟುವಟಿಕೆಗಳ ಮಾನಿಟರಿಂಗ್ ಮತ್ತು ದೃಶ್ಯೀಕರಣಕ್ಕೆ ಉಪಗ್ರಹ ಆಧಾರಿತ ಜಿಯೊಸ್ಪೇಷಿಯಲ್ ಡ್ಯಾಶ್ಬೋರ್ಡ್ ಅಭಿವೃದ್ಧಿಪಡಿಸಲು ಇಸ್ರೋನ ಎನ್ಆರ್ಎಸ್ಸಿ ಜೊತೆ ಒಪ್ಪಂದಕ್ಕೆ ಸಹಿ ಹಾಕಿರುವುದಕ್ಕೆ ಸಂತೋಷವಾಗುತ್ತಿದೆ” ಎಂದು ಸಾಮಾಜಿಕ ಜಾಲತಾಣ X ನಲ್ಲಿ ತಿಳಿಸಿದೆ.
ಹೈದರಾಬಾದ್ನ ಎನ್ಆರ್ಎಸ್ಸಿ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆನ್ಲೈನ್ ಮೂಲಕ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಕೋಲ್ ಇಂಡಿಯಾ ತಂಡ ಕೊಲ್ಕತ್ತಾದ ಕಚೇರಿಯಿಂದ ಭಾಗವಹಿಸಿದೆ ಎಂದು ತಿಳಿಸಿದೆ.
ಇದನ್ನೂ ನೋಡಿ: ಚೇಳುಗಳ ವಿಸ್ಮಯ ಜಗತ್ತು: ಗೊತ್ತಿಲ್ಲದ ಅಚ್ಚರಿಯ ಸತ್ಯಗಳು | ಡಾ: ಎನ್.ಬಿ.ಶ್ರೀಧರ Janashakthi Media
