ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ (SIR) ಕಾರ್ಯದ 12ನೇ ದಿನದ ವೇಳೆಗೆ ಒಟ್ಟು 5.04 ಕೋಟಿ ಗಣತಿ ನಮೂನೆಗಳನ್ನು (Enumeration Forms) ವಿತರಿಸಲಾಗಿದೆ.
ಜುಲೈ 11ರ ಸಂಜೆ 6 ಗಂಟೆಯವರೆಗೆ ರಾಜ್ಯಾದ್ಯಂತ 5,04,82,568 ಗಣತಿ ನಮೂನೆಗಳನ್ನು ಹಂಚಿಕೆ ಮಾಡಲಾಗಿದ್ದು, ನಂತರದ ಮಾಹಿತಿಯ ಸಂಗ್ರಹ ಪ್ರಕ್ರಿಯೆ ಮುಂದುವರಿದಿರುವುದರಿಂದ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ತಿಳಿಸಿದೆ.
SIR ಕಾರ್ಯದ 12ನೇ ದಿನದ ಒಟ್ಟಾರೆ ಪ್ರಗತಿ ಶೇ.91.07 ತಲುಪಿದೆ. ಈವರೆಗೆ ವಿತರಿಸಿದ ಗಣತಿ ನಮೂನೆಗಳಲ್ಲಿ 1.19 ಕೋಟಿ ನಮೂನೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ.
ಇದನ್ನೂ ಓದಿ: ಸಂಚಾರ ದಟ್ಟಣೆಯಷ್ಟೇ ರೈತರ ಬಗ್ಗೆಯೂ ಕಾಳಜಿ ವಹಿಸಿ: ಮಹಾರಾಷ್ಟ್ರ ಸರ್ಕಾರಕ್ಕೆ ಈರುಳ್ಳಿ ಬೆಳೆಗಾರರ ಒಕ್ಕೂಟ ಮನವಿ
ರಾಜ್ಯದ 34,554 ಮತಗಟ್ಟೆಗಳಲ್ಲಿ ಶೇ.100ರಷ್ಟು ಗಣತಿ ನಮೂನೆ ವಿತರಣೆ ಪೂರ್ಣಗೊಂಡಿದ್ದು, 11 ಸಾವಿರಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಶೇ.90ಕ್ಕಿಂತ ಹೆಚ್ಚಿನ ಪ್ರಗತಿ ದಾಖಲಾಗಿದೆ.
ಇದೇ ಅವಧಿಯಲ್ಲಿ 2.15 ಲಕ್ಷಕ್ಕೂ ಹೆಚ್ಚು ಮಂದಿ ಆನ್ಲೈನ್ ಮೂಲಕ ಗಣತಿ ನಮೂನೆಗಳನ್ನು ಭರ್ತಿ ಮಾಡಿದ್ದಾರೆ.
5 ಲಕ್ಷಕ್ಕೂ ಹೆಚ್ಚು ನಮೂನೆ ಮರುಸಂಗ್ರಹವಾಗಿಲ್ಲ
ಗೈರು, ಶಾಶ್ವತ ಸ್ಥಳಾಂತರ, ಮೃತಪಟ್ಟಿರುವವರು, ನಕಲಿ ನೋಂದಣಿ ಸೇರಿದಂತೆ ವಿವಿಧ ಕಾರಣಗಳಿಂದ 5.03 ಲಕ್ಷ ಗಣತಿ ನಮೂನೆಗಳನ್ನು ಮರುಸಂಗ್ರಹಿಸಲು ಸಾಧ್ಯವಾಗಿಲ್ಲ ಎಂದು ಚುನಾವಣಾಧಿಕಾರಿಗಳ ಕಚೇರಿ ಮಾಹಿತಿ ನೀಡಿದೆ.
ಇವುಗಳಲ್ಲಿ 40,446 ಗೈರು ವ್ಯಕ್ತಿಗಳ ನಮೂನೆಗಳು, ಶಾಶ್ವತ ಸ್ಥಳಾಂತರಗೊಂಡವರ 2.76 ಲಕ್ಷ ನಮೂನೆಗಳು, ಮೃತಪಟ್ಟವರ 1.58 ಲಕ್ಷ ನಮೂನೆಗಳು, ಈಗಾಗಲೇ ನೋಂದಣಿ ಆಗಿರುವ 96,971 ನಮೂನೆಗಳು ಹಾಗೂ ಇತರೆ 1,640 ನಮೂನೆಗಳು ಸೇರಿವೆ ಎಂದು ತಿಳಿಸಲಾಗಿದೆ.
ಇದನ್ನೂ ನೋಡಿ: SIR ಕರ್ತವ್ಯದಲ್ಲಿ ಮತ್ತೊಂದು ಆಘಾತ! ಬಿಎಲ್ಒಗೆ ಜಾತಿ ನಿಂದನೆ; ಎಫ್ಐಆರ್ ದಾಖಲು Janashakthi Media
