ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ವಿವಾದಕ್ಕೆ ಕಾರಣವಾಗಿದ್ದ ಬಾಸ್ಕ್ ಬೇಕರಿ ಮತ್ತೆ ಹೊಸ ಗಲಾಟೆಯಲ್ಲಿ ಸಿಲುಕಿದೆ. ಗ್ರಾಹಕಿಯೊಬ್ಬರ ಅಸಮಾಧಾನಕಾರಿ ಅನುಭವದ ಕುರಿತು ಹಂಚಿಕೊಂಡ ವಿಡಿಯೋಗೆ ತೀವ್ರ ಪ್ರತಿಕ್ರಿಯೆ ನೀಡಿದ ಬೇಕರಿ, ಆಕೆಯನ್ನು “ಇಲಿಜೆಟಿಮೇಟ್ ಇನ್ಫ್ಲುವೆನ್ಸರ್” ಎಂದು ಕರೆದಿರುವುದು ಚರ್ಚೆಗೆ ಕಾರಣವಾಗಿದೆ. ಬೆಲೆ
ಇನ್ಸ್ಟಾಗ್ರಾಂನಲ್ಲಿ “my__p.o.v__” ಎಂಬ ಹೆಸರಿನಲ್ಲಿ ಇರುವ ವ್ಲಾಗರ್, ಬಾಸ್ಕ್ ಬೇಕರಿಯನ್ನು ಟ್ಯಾಗ್ ಮಾಡಿ ವಿಡಿಯೋ ಹಂಚಿಕೊಂಡಿದ್ದರು. ಇನ್ಸ್ಟಾಗ್ರಾಂನಲ್ಲಿ ಕಂಡ ವಿಡಿಯೋಗಳ ಪ್ರಭಾವದಿಂದ ಕ್ಯಾಫೆಗೆ ಭೇಟಿ ನೀಡಿದ್ದಾಗಿ ಹೇಳಿದ ಅವರು, ಕೊರಮಂಗಲದಲ್ಲಿರುವ ಈ ಸ್ಥಳದಲ್ಲಿ ತಮ್ಮ ಅನುಭವ “ನಿರಾಶಾದಾಯಕ”ವಾಗಿತ್ತು ಎಂದು ಆರೋಪಿಸಿದರು.
ಅವರು ಎರಡು ಡೆಸರ್ಟ್ ತುಂಡುಗಳಿಗೆ ₹5,250 ಪಾವತಿಸಿದ್ದಾಗಿ ಹೇಳಿ, ಹೆಚ್ಚಿನ ಬೆಲೆ, ಕಡಿಮೆ ಪ್ರಮಾಣ ಮತ್ತು ಆಹಾರದ ಗುಣಮಟ್ಟದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಜೊತೆಗೆ ₹1,000 ರಿಜಿಸ್ಟ್ರೇಷನ್ ಶುಲ್ಕ ಹಾಗೂ ಬೆಲೆ ವಿವರಗಳ ಪಾರದರ್ಶಕತೆ ಇಲ್ಲದಿರುವುದನ್ನೂ ಪ್ರಶ್ನಿಸಿದರು. ಬಿಲ್ ಬಂದ ನಂತರ ಮಾತ್ರ ಖರ್ಚಿನ ವಿವರ ತಿಳಿದುಬಂದಿತು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: SIR ನೆಪದಲ್ಲಿ ಜಿಬಿಎ ಚುನಾವಣೆ ಮುಂದೂಡಿಕೆ? ಡಿಸೆಂಬರ್ವರೆಗೆ ಕಾಲಾವಕಾಶ ಕೋರಿದ ಸರ್ಕಾರ
ಈ ಆರೋಪಗಳಿಗೆ ಪ್ರತಿಯಾಗಿ ಬಸಕ್ ಬೇಕರಿ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿವರವಾದ ಹೇಳಿಕೆ ಬಿಡುಗಡೆ ಮಾಡಿತು. ಗ್ರಾಹಕರು ಆರ್ಡರ್ ಮಾಡುವ ಮೊದಲು ಡಿಜಿಟಲ್ ಮೆನು ಸ್ಕ್ಯಾನ್ ಮಾಡಲು ಆಹ್ವಾನಿಸಲಾಗುತ್ತದೆ, ಅಲ್ಲಿ ಪ್ರತಿಯೊಂದು ಡೆಸರ್ಟ್ನ ಚಿತ್ರ, ವಿವರಣೆ ಮತ್ತು ಬೆಲೆ ಸ್ಪಷ್ಟವಾಗಿ ನೀಡಲಾಗುತ್ತದೆ ಎಂದು ತಿಳಿಸಿದೆ.
ಮೆನು ಹಾಗೂ ಇನ್ಸ್ಟಾಗ್ರಾಂ ವಿಡಿಯೋಗಳಲ್ಲಿ ತೋರಿಸಿದ ಪ್ರಮಾಣವೇ ಗ್ರಾಹಕರಿಗೆ ನೀಡಲಾಗುತ್ತದೆ ಎಂದು ಹೇಳಿದ ಬೇಕರಿ, ಪ್ರತಿಯೊಂದು ಸರ್ವಿಂಗ್ ಅನ್ನು ವೈಜ್ಞಾನಿಕವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

₹1,000 ರಿಜಿಸ್ಟ್ರೇಷನ್ ಶುಲ್ಕವನ್ನು ಪಾರದರ್ಶಕತೆಯ ದೃಷ್ಟಿಯಿಂದ ವಿಧಿಸಲಾಗುತ್ತದೆ ಮತ್ತು ಅದು ಅಂತಿಮ ಬಿಲ್ಲಿನಲ್ಲಿ ಕಡಿತವಾಗುತ್ತದೆ ಎಂದು ತಿಳಿಸಿದೆ. ಕ್ಯಾಫೆಯ ಮೆನು ₹1,250ರಿಂದ ಆರಂಭವಾಗುವುದರಿಂದ ಗ್ರಾಹಕರಿಗೆ ಮುಂಚಿತವಾಗಿ ಮಾಹಿತಿ ನೀಡಲಾಗುತ್ತದೆ ಎಂದೂ ಹೇಳಿದೆ.
ಈ ವಿಡಿಯೋ ತಪ್ಪು ಮಾಹಿತಿ ನೀಡುತ್ತಿದೆ ಮತ್ತು ತಮ್ಮ ಪಾರದರ್ಶಕತೆಗೆ ಧಕ್ಕೆಯಾಗಿದೆ ಎಂದು ಬೇಕರಿ ಆರೋಪಿಸಿದೆ. ಯಾವುದೇ ತಪ್ಪು ತಿಳಿವಳಿಕೆ ಇದ್ದರೆ ನೇರವಾಗಿ ಸಂಪರ್ಕಿಸಲು ಆಹ್ವಾನಿಸಿದೆ.
ಇದಲ್ಲದೆ, ಬೇಕರಿ “ಡಿಫಮೇಶನ್ ಟ್ರೆಂಡ್” ನಡೆಯುತ್ತಿದೆ ಎಂದು ಆರೋಪಿಸಿದೆ. ಕೆಲವರು ಕೇವಲ ವ್ಯೂಸ್ಗಾಗಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಮತ್ತು ಗೂಗಲ್ ವಿಮರ್ಶೆಗಳಲ್ಲಿಯೂ ತಪ್ಪು ಮಾಹಿತಿಯನ್ನು ಹಂಚಲಾಗುತ್ತಿದೆ ಎಂದು ತಿಳಿಸಿದೆ.
ಈ ವಿವಾದವು ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದ್ದು, ಗ್ರಾಹಕರ ಅನುಭವ ಹಾಗೂ ವ್ಯವಹಾರಗಳ ಪಾರದರ್ಶಕತೆ ಕುರಿತ ಚರ್ಚೆಯನ್ನು ಮತ್ತೆ ಜೀವಂತಗೊಳಿಸಿದೆ.
ಇದನ್ನೂ ನೋಡಿ: ರಾಮ ಮಂದಿರ ಟ್ರಸ್ಟ್ ಹಗರಣ: ಭಕ್ತಿಯ ಹೆಸರಿನಲ್ಲಿ ಭ್ರಷ್ಟಾಚಾರ? ಹೊಣೆ ಹೊರುವರೇ ಮೋದಿ? MG ಹೆಗಡೆ | ಗುರುರಾಜ ದೇಸಾಯಿ
