ನವದೆಹಲಿ: ಭೂಗರ್ಭ ಜಲ ಬಳಕೆ ಕುರಿತು ಅಗತ್ಯ ಮಾಹಿತಿ ನೀಡದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ರಾಯ್ಪುರ, ಜೈಪುರ್ ಮತ್ತು ಮುಂಬೈಯ ಮೂರು ಪ್ರಮುಖ ಕ್ರೀಡಾಂಗಣಗಳಲ್ಲಿ ಕ್ರೀಡಾ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ. ಕೊರತೆ
ಎನ್ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಮತ್ತು ತಜ್ಞ ಸದಸ್ಯ ಅಫ್ರೋಜ್ ಅಹ್ಮದ್ ಅವರನ್ನೊಳಗೊಂಡ ಪೀಠವು, ಮುಂದಿನ ವಿಚಾರಣೆ ದಿನಾಂಕದವರೆಗೆ ನ್ಯಾಯಮಂಡಳಿಯ ಅನುಮತಿ ಇಲ್ಲದೆ ಯಾವುದೇ ಕ್ರೀಡಾ ಚಟುವಟಿಕೆಗಳನ್ನು ನಡೆಸಬಾರದು ಎಂದು ಮಧ್ಯಂತರ ಆದೇಶ ಹೊರಡಿಸಿದೆ.
ಈ ಆದೇಶವು ಜುಲೈ 2ರಂದು ಹೊರಬಂದಿದ್ದು, ಕೇಂದ್ರ ಭೂಗರ್ಭ ಜಲ ಪ್ರಾಧಿಕಾರ (ಸಿಜಿಡಬ್ಲ್ಯುಎ) ಹಾಗೂ ಎನ್ಜಿಟಿ ನೀಡಿದ ನೋಟಿಸ್ಗಳಿಗೆ ಈ ಕ್ರೀಡಾಂಗಣಗಳು ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ನ್ಯಾಯಮಂಡಳಿ ತಿಳಿಸಿದೆ.
ಇದನ್ನೂ ಓದಿ: ನೀರಿನ ಕೊರತೆ ಕಾರಣ, ನಿರಾಕರಣೆ ಅಲ್ಲ: ಕಾವೇರಿ ನೀರು ಬಿಡುಗಡೆ ಬಗ್ಗೆ ರಾಮಲಿಂಗಾ ರೆಡ್ಡಿ
ರಾಯ್ಪುರದ ಶಹೀದ್ ವೀರ್ ನರಾಯಣ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣ, ಜೈಪುರ್ನ ಸವಾಯಿ ಮಾನ್ಸಿಂಗ್ ಕ್ರೀಡಾಂಗಣ ಹಾಗೂ ಮುಂಬೈನ ಡಿ ವೈ ಪಾಟೀಲ್ ಕ್ರೀಡಾಂಗಣಗಳಲ್ಲಿ ಭೂಗರ್ಭ ಜಲ ಬಳಕೆ ಕುರಿತು ಸ್ಪಷ್ಟ ಮಾಹಿತಿ ಸಲ್ಲಿಸಲಾಗಿಲ್ಲ ಎಂದು ತಿಳಿದುಬಂದಿದೆ.
ಕ್ರಿಕೆಟ್ ಮೈದಾನಗಳ ನಿರ್ವಹಣೆಗೆ ಶುದ್ಧೀಕರಿಸಿದ ಮಲಿನಜಲ (ಎಸ್ಟಿಪಿ) ಬಳಸುವ ಬದಲು ತಾಜಾ ನೀರನ್ನು ಬಳಸುತ್ತಿರುವುದು ಹಾಗೂ ಮಳೆನೀರು ಸಂಗ್ರಹಣಾ ವ್ಯವಸ್ಥೆಗಳನ್ನು ಅಳವಡಿಸದಿರುವುದರ ಕುರಿತು ಈ ವಿಚಾರಣೆ ನಡೆಯುತ್ತಿದೆ.
ದೇಶದ ಹಲವು ಭಾಗಗಳಲ್ಲಿ ನೀರಿನ ಕೊರತೆ ತೀವ್ರವಾಗಿರುವ ಹಿನ್ನೆಲೆ, ಕ್ರೀಡಾಂಗಣಗಳು ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನ್ಯಾಯಮಂಡಳಿ ಸೂಚಿಸಿದೆ. ಆದರೆ, ಪುನಃ ಪುನಃ ನೋಟಿಸ್ ನೀಡಿದರೂ ಪ್ರತಿಕ್ರಿಯೆ ಇಲ್ಲದಿರುವುದರಿಂದ ಈ ತಾತ್ಕಾಲಿಕ ನಿಷೇಧ ವಿಧಿಸಲಾಗಿದೆ ಎಂದು ಹೇಳಲಾಗಿದೆ.
ಇದೇ ವೇಳೆ, ಎನ್ಜಿಟಿ ಇನ್ನೂ ಆರು ಕ್ರೀಡಾಂಗಣಗಳಿಗೆ ಏಪ್ರಿಲ್ನಲ್ಲಿ ನೋಟಿಸ್ ನೀಡಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ 17ಕ್ಕೆ ನಿಗದಿಪಡಿಸಲಾಗಿದೆ.
ಇದನ್ನೂ ನೋಡಿ: ಚೇಳುಗಳ ವಿಸ್ಮಯ ಜಗತ್ತು: ಗೊತ್ತಿಲ್ಲದ ಅಚ್ಚರಿಯ ಸತ್ಯಗಳು | ಡಾ: ಎನ್.ಬಿ.ಶ್ರೀಧರ Janashakthi Media
