ನವದೆಹಲಿ: ತಮಿಳುನಾಡಿನ ಕರಡು ಮತದಾರರ ಪಟ್ಟಿಯಿಂದ 97 ಲಕ್ಷಕ್ಕೂ ಹೆಚ್ಚು ಮತದಾರರನ್ನು ಎಸ್ಐಆರ್ ನಂತರ ತೆಗೆದುಹಾಕಲಾಗಿದೆ. ಪಟ್ಟಿಯಿಂದ ಡಿಲೀಟ್ ಮಾಡಲ್ಪಟ್ಟವರಲ್ಲಿ 66.4 ಲಕ್ಷ ಜನರು ಸ್ಥಳಾಂತರಗೊಂಡಿದ್ದಾರೆ ಅಥವಾ ಗೈರುಹಾಜರಾಗಿದ್ದರು ಎಂದು ವರದಿಯಾಗಿದೆ.
ಎಸ್ಐಆರ್ ಪ್ರಕ್ರಿಯೆಯಲ್ಲಿ ಚೆನ್ನೈನ ಮೂರನೇ ಒಂದು ಭಾಗದಷ್ಟು ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಎಸ್ಐಆರ್ ಭಾಗವಾಗಿ ತಮಿಳುನಾಡಿನ 15% ಕ್ಕೂ ಹೆಚ್ಚು ಮತದಾರರನ್ನು ಮತದಾರರ ಪಟ್ಟಿಯಿಂದ ಅಳಿಸಲಾಗಿದೆ ಎಂದು ವರದಿಯಾಗಿದೆ.
ಚೆನ್ನೈನಲ್ಲಿ ಮಾತ್ರವೇ 35% ಕ್ಕಿಂತ ಹೆಚ್ಚು ಮತದಾರರ ಹೆಸರುಗಳನ್ನು ಅಳಿಸಲಾಗಿದೆ. ಇದರೊಂದಿಗೆ, 97.3 ಲಕ್ಷಕ್ಕೂ ಹೆಚ್ಚು ಮತದಾರರನ್ನು ತಮಿಳುನಾಡಿನ ಕರಡು ಪಟ್ಟಿಯಿಂದ ತೆಗೆದುಹಾಕಲಾಗಿದ್ದು, ಇದು ದೇಶದಲ್ಲಿ ಅತಿ ಹೆಚ್ಚು ಅಳಿಸುವಿಕೆಗಳಲ್ಲಿ ಒಂದಾಗಿದೆ.
ಕಳೆದ ಅಕ್ಟೋಬರ್ 27 ರಂದು, ಚುನಾವಣಾ ಆಯೋಗ ತಮಿಳುನಾಡಿನಲ್ಲಿ ಮತದಾರರ ಪಟ್ಟಿ ಸ್ಥಗಿತಗೊಳಿಸಿದಾಗ, ರಾಜ್ಯದಲ್ಲಿ 6.41 ಕೋಟಿ ಮತದಾರರಿದ್ದರು. ಕರಡು ಮತದಾರರ ಪಟ್ಟಿಯ ಪ್ರಕಾರ, ರಾಜ್ಯದಲ್ಲಿ ಈಗ ಒಟ್ಟು ಮತದಾರರ ಸಂಖ್ಯೆ 5.43 ಕೋಟಿಗೆ ಇಳಿದಿದೆ.
ತಮಿಳುನಾಡಿನಲ್ಲಿ ತೆಗೆದುಹಾಕಲಾದ ಮತದಾರರಲ್ಲಿ 26.9 ಲಕ್ಷ ಜನರು ಮೃತಪಟ್ಟಿದ್ದಾರೆ. 66.4 ಲಕ್ಷ ಜನರು ಸ್ಥಳಾಂತರಗೊಂಡಿದ್ದಾರೆ ಅಥವಾ ಗೈರುಹಾಜರಾಗಿದ್ದಾರೆ ಮತ್ತು 3.98 ಲಕ್ಷ ಜನರು ನಕಲಿ ಎನ್ನಲಾಗಿದೆ. ಕರಡು ಮತದಾರರ ಪಟ್ಟಿಯನ್ನು ಪ್ರತಿ ಜಿಲ್ಲೆಯಲ್ಲಿ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ಎಸ್ಐಆರ್ ಸಂದರ್ಭದಲ್ಲಿ ತಮಿಳುನಾಡಿನಾದ್ಯಂತ ಅನೇಕ ಬೂತ್ ಗಳಲ್ಲಿ ಅನಿಯಂತ್ರಿತ ಅಳಿಸುವಿಕೆ ನಡೆದಿದೆ. ರಾಜ್ಯಾದ್ಯಂತ 1500 ಬೂತ್ ಗಳನ್ನು ವಿಶ್ಲೇಷಿಸಿರುವ The New Indian Express, ಈ ಸಾಮೂಹಿಕ ಮತದಾರರ ಅಳಿಸುವಿಕೆಯನ್ನು ಕಂಡುಕೊಂಡಿದೆ. ಈ ಇಡೀ ಕ್ರಮದಲ್ಲಿನ ತಪ್ಪುಗಳು ಅಧಿಕಾರಿಗಳ ಅಥವಾ ಯಾರೊಬ್ಬರ ಅಸಮರ್ಥತೆ ಎಂಬುದಕ್ಕಿಂತಲೂ ಅದು ವ್ಯವಸ್ಥಿತ ದೋಷ ಎಂಬುದನ್ನು ಗಮನಿಸಿದೆ.
ಸಮಯದ ಅವಧಿ, ತರಬೇತಿಯ ಕೊರತೆ ಮತ್ತು ಅದನ್ನು ಹೇಗೆ ಕಾರ್ಯಗತಗೊಳಿಸಲಾಯಿತು ಎಂಬ ಕಾರಣದಿಂದಾಗಿ ಪ್ರಕ್ರಿಯೆಯಲ್ಲಿಯೇ ಕೆಲವು ದೋಷಗಳಿವೆ. ಒಂದು ಬೂತ್ ನಲ್ಲಿ 100 ಮತದಾರರಿದ್ದರು ಮತ್ತು ಕಳೆದ ಸಲದ ಮತದಾನದ ಪ್ರಮಾಣ ಶೇ. 60 ಇದ್ದರೆ, ಈಗ 45 ಅಥವಾ 50 ಜನರನ್ನು ಅಳಿಸಲಾಗಿದೆ. ಅಂದರೆ ಅದು 100ಕ್ಕೆ ಹತ್ತಿರ ಬರುತ್ತದೆ ಅಥವಾ 100 ಕ್ಕಿಂತ ಹೆಚ್ಚು ಬರುತ್ತದೆ ಎಂದು ವರದಿಯು ತಿಳಿಸಿದೆ.
ನಿರ್ದಿಷ್ಟ ಬೂತ್ ನಲ್ಲಿ 60 ಜನರು ಕನಿಷ್ಠ 2024ರವರೆಗೆ ಅಲ್ಲಿ ವಾಸಿಸುತ್ತಿದ್ದರೆ, ಅವರಲ್ಲಿ ಹೆಚ್ಚಿನವರು ಮತ ಚಲಾಯಿಸಿದ್ದಾರೆ. ಈಗ 50 ಜನರನ್ನು ಅಳಿಸಿದ್ದರೆ, ಅಲ್ಲಿದ್ದ ಎಲ್ಲರೂ ಮತ ಚಲಾಯಿಸಿದ್ದಾರೆ ಎಂದರ್ಥ. ಇದು ಸಾಮೂಹಿಕ ಅಳಿಸುವಿಕೆಯ ಸ್ಪಷ್ಟ ಸೂಚನೆಯಾಗಿದೆ ಎಂಬುದನ್ನು ಚುನಾವಣೆಗಾಗಿ ಕೆಲಸ ಮಾಡಿದ ಅಧಿಕಾರಿಗಳೇ ಒಪ್ಪಿಕೊಳ್ಳುವ ಬಗ್ಗೆ ಇಂಡಿಯನ್ ಎಕ್ಸ್ಪ್ರೆಸ್ ವರದಿಯು ತಿಳಿಸಿದೆ.
ತನಿಖೆಯಲ್ಲಿ ಸುಮಾರು 500 ಬೂತ್ಗಳಲ್ಲಿ ಹೆಚ್ಚಿನ ಅಳಿಸುವಿಕೆ ಕಂಡುಬಂದಿದೆ. ಸುಮಾರು 50% ಅಥವಾ ಅದಕ್ಕಿಂತ ಹೆಚ್ಚಿನ ಬೂತ್ಗಳಲ್ಲಿ ಸಂಖ್ಯೆಗಳು 100ಕ್ಕೆ ಹತ್ತಿರದಲ್ಲಿವೆ ಅಥವಾ 100ಕ್ಕಿಂತ ಹೆಚ್ಚಿವೆ ಎಂಬುದು ಪತ್ತೆಯಾಗಿದೆ. ಇದೆಲ್ಲವೂ ಅರ್ಹ ಮತದಾರರ ವ್ಯಾಪಕ ಸಾಮೂಹಿಕ ಅಳಿಸುವಿಕೆಯಾಗಿದೆ ಎಂದು ವರದಿಯು ತಿಳಿಸಿದೆ.
ಕೆಲವು ಬೂತ್ಗಳಲ್ಲಿ ಕೆಲವರು ಸ್ಥಳಾಂತರಗೊಂಡಿರುವುದು ನಿಜವಾದರೂ, ಅದು ಮಧ್ಯಂತರ ಅವಧಿಯಲ್ಲಿ ಸಂಭವಿಸಿದೆ. ತನಿಖೆಗೆ ಒಳಪಡಿಸಲಾದ 500 ಬೂತ್ಗಳಲ್ಲಿ ಹೆಚ್ಚಿನ ಸಂಖ್ಯೆಯ ಅಳಿಸುವಿಕೆಗಳಿವೆ.
ವರದಿ ಪ್ರಕಾರ, ಚೆನ್ನೈನಲ್ಲಿ ಮಾತ್ರ ಎಸ್ಐಆರ್ ಪ್ರಕ್ರಿಯೆಯಲ್ಲಿ 14.2 ಲಕ್ಷ ಮತದಾರರನ್ನು ಅಳಿಸಲಾಗಿದೆ. ಇದು ಎಸ್ಐಆರ್ ಗೆ ಮುಂಚಿನ ಮತದಾರರಲ್ಲಿ ಸುಮಾರು 35.6% ರಷ್ಟಿದೆ. ಇದು ರಾಜ್ಯದಲ್ಲಿ ಅತಿ ಹೆಚ್ಚು ಅಳಿಸುವಿಕೆ ನಡೆದಿರುವ ಜಿಲ್ಲೆಯಾಗಿದೆ.
ಎಸ್ಐಆರ್ ಗಿಂತ ಮೊದಲು ಚೆನ್ನೈನಲ್ಲಿದ್ದ 40 ಲಕ್ಷ ಮತದಾರರಲ್ಲಿ ಕೇವಲ 25.7 ಲಕ್ಷ ಜನರು ಮಾತ್ರ ಕರಡು ಪಟ್ಟಿಯಲ್ಲಿ ಉಳಿದಿದ್ದಾರೆ. ರಾಮನಾಥಪುರಂ, ಚೆಂಗಲ್ಪಟ್ಟು, ತಿರುಪ್ಪೂರು ಮತ್ತು ಕೊಯಮತ್ತೂರಿನಲ್ಲಿ ಅಳಿಸಲಾದ ಮತದಾರರ ಪಾಲು 20% ರಿಂದ 25% ರಷ್ಟಿತ್ತು. ಅರಿಯಲೂರಿನಲ್ಲಿ ಇದು ಅತ್ಯಂತ ಕಡಿಮೆ, ಅಂದರೆ ಕೇವಲ 4.6% ಮತದಾರರ ಹೆಸರುಗಳನ್ನು ಅಳಿಸಲಾಗಿದೆ.
ಮಧುರೈ ಮತ್ತು ಧರ್ಮಪುರಿಯಲ್ಲಿ 7% ಕ್ಕಿಂತ ಕಡಿಮೆ ಮತದಾರರ ಹೆಸರುಗಳನ್ನು ಅಳಿಸಲಾಗಿದೆ. ತಮಿಳುನಾಡಿನಲ್ಲಿನ ಅಳಿಸುವಿಕೆ ಪ್ರಮಾಣ ಅಭೂತಪೂರ್ವ ಮತ್ತು ಆಘಾತಕಾರಿಯಾಗಿದೆ ಎಂದು ರಾಜಕೀಯ ವಿಶ್ಲೇಷಕ ಮತ್ತು ಸ್ವರಾಜ್ ಅಭಿಯಾನದ ಸಂಸ್ಥಾಪಕ ಯೋಗೇಂದ್ರ ಯಾದವ್ ಹೇಳಿದ್ದಾರೆ.
ಇದನ್ನೂ ನೋಡಿ: “ರೈತ–ಕಾರ್ಮಿಕ–ಕೂಲಿಕಾರರ ಮುಷ್ಕರ | ಕೆಲಸ ಸ್ಥಗಿತ, ಬೀದಿಗಿಳಿಯಲಿದ್ದಾರೆ ದುಡಿಯುವ ಜನ” | Janashakthi Media
