ಹಿಟ್ಲರ್ ಫ್ಯಾಸಿಸಂನಿಂದ ಮಾನವ ಕುಲವನ್ನು ಉಳಿಸಿದ ಮಹಾನ್‍ ವಿಜಯಕ್ಕೆ 80 ವರ್ಷಗಳು

ವೇದರಾಜ ಎನ್‌ ಕೆ
ಮೇ 9, 1945. ಜರ್ಮನಿಯ ರಾಜಧಾನಿ ಬರ್ಲಿನ್‍ನ ರೈಖ್‍ಸ್ಟಾಗ್(ಸಂಸತ್‍ ಭವನ) ಮೇಲೆ ಸೋವಿಯತ್‍ ಒಕ್ಕೂಟದ ಕೆಂಪು ಸೇನೆಯ ಇಬ್ಬರು ಸದಸ್ಯರು ಹಾರಿಸಿದ ಕೆಂಬಾವುಟ ಹೆಮ್ಮಯಿಂದ ಹಾರಾಡಿದ ಐತಿಹಾಸಿಕ ದಿನ. ಈಗಲೂ ಭೂಮಿಯ ಮೇಲಿನ ಅತ್ಯಂತ ಹೇಯ ಮತ್ತು ಕ್ರೂರ ವ್ಯವಸ್ಥೆಯನ್ನು ಪ್ರತಿನಿಧಿಸಿದ್ದ ಹಿಟ್ಲರನ ‘ಮೂರನೇ ರೈಖ್‍’ನ ಆಡಳಿತದ ಅಂತ್ಯಕ್ಕೆ ಸಾಕ್ಷಿಯಾಗಿ ಅಜರಾಮರವಾಗಿರುವ ಚಿತ್ರವಿದು. ಎರಡನೇ ಮಹಾಯುದ್ದದಲ್ಲಿ ಬರ್ಲಿನ್‍ನತ್ತ ಮುನ್ನಡೆದ ಸೈನಿಕರ ನೇತೃತ್ವ ವಹಿಸಿದ್ದ ಸೋವಿಯತ್‍ ಕೆಂಪು ಸೇನೆಯ ವಿಭಾಗದೊಂದಿಗೆ ಅಂದು ಇಡೀ ಜಗತ್ತು ಸೇರಿಕೊಂಡು ಹಿಟ್ಲರ್ ಮೇಲೆ ಸಾಧಿಸಿದ ಚಾರಿತ್ರಿಕ ವಿಜಯವನ್ನು ಒಂದು ಉತ್ಸವವಾಗಿ ಆಚರಿಸಿತು. ಫ್ಯಾಸಿಸಂ

ಹಿಟ್ಲರನ ಪ್ರಬಲ ‘ವೆಹ್ರ್ ಮಾಕ್ಟ್’, ಅಂದರೆ ‘ಯುದ್ಧಯಂತ್ರ’ದ ಆ ವೇಳೆಗೆ ಅಳಿದುಳಿದ ಭಾಗ ಎರಡನೇ ಮಹಾಯುದ್ಧದ ‘ಮಿತ್ರಕೂಟ’(ಅಲೈಡ್‍ ಪವರ್ಸ್)ನ ಜಂಟಿ ಸೇನಾಧಿಪತ್ಯದ ಹಾಗೂ ಸೋವಿಯತ್‍ ಸೇನಾಧಿಕಾರಿಗಳ ಎದುರು ಶರಣಾಗತಿಯ ದಸ್ತಾವೇಜಿಗೆ ಸಹಿ ಹಾಕಿತು. ಎರಡನೇ ಮಹಾಯುದ್ಧ ಕೊನೆಗೊಂಡಿತು.

ಕೆಂಪುಸೇನೆ , ಕೆಲವು ದಿನಗಳ ಹಿಂದೆಯೇ ಬರ್ಲಿನ್‍ ನಗರ ಪ್ರವೇಶಿಸಿತ್ತು. ಸುಮಾರು ಮೂರು ವರ್ಷಗಳ ಹಿಂದೆ ಆಗ ಸೋವಿಯೆತ್‍ ಒಕ್ಕೂಟದ ಪ್ರಮುಖ ಕೈಗಾರಿಕಾ ನಗರವಾಗಿದ್ದ ಸ್ಟಾಲಿನ್‍ಗ್ರಾಡ್ (ಈಗ ವೋಲ್ಗಾಗ್ರಾಡ್‍)ನಲ್ಲಿ ಆರು ತಿಂಗಳ ಕಾಲ (ಜುಲೈ 1942-ಫೆಬ್ರುವರಿ 1943) ಕೆಂಪು ಸೇನೆ ಮತ್ತು ಹಿಟ್ಲರನ 6ನೇ ಸೇನೆ ನಡುವೆ ನಡೆದ ಭೀಷಣ ಕಾಳಗ, ನಂತರ ಎರಡನೇ ಮಹಾಯುದ್ಧದ ದಿಕ್ಕನ್ನೇ ಬದಲಿಸಿತು. ಫ್ಯಾಸಿಸಂ

ಇದನ್ನೂ ಓದಿ: ರಜೆಯಲ್ಲಿರುವ ಸಿಬ್ಬಂದಿಯನ್ನು ವಾಪಸ್ ಕರೆಸಿ: ಅಮಿತ್‌ ಶಾ ಸೂಚನೆ

“ವೋಲ್ಗಾ(ನದಿಯ) ಆಚೆ ನೆಲೆ ಇಲ್ಲ” ಎಂದು ಸ್ಟಾಲಿನ್‍ ನೀಡಿದ ಕರೆಗೆ ಓಗೊಟ್ಟ ಆ ನಗರವಾಸಿಗಳು ಪ್ರತಿಯೊಬ್ಬರೂ ಕೈಗೆ ಸಿಕ್ಕ ಹಾರೆ, ಪಿಕಾಸಿ, ಆಯುಧವಾಗಬಲ್ಲ ಮನೆಬಳಕೆಯ ವಸ್ತುಗಳನ್ನೇ ಹಿಡಿದುಕೊಂಡು ಹಿಟ್ಲರ್ ಸೇನೆಯೊಂದಿಗೆ ಬೀದಿ ಕಾಳಗಕ್ಕೆ ಇಳಿದರು. 6ನೇ ಜರ್ಮನ್ ಪಡೆ ಸಂಪೂರ್ಣ ನಾಶವಾಯಿತು. ಅದುವರೆಗೆ ಪೂರ್ವ ಯುರೋಪಿನಲ್ಲಿ ಜಯದ ಮೇಲೆ ಜಯ ಗಳಿಸುತ್ತ ಬಂದಿದ್ದ ಹಿಟ್ಲರ್‍ ಪಡೆ ಅವಾಕ್ಕಾಯಿತು. ಬೇರೆಡೆಗಳಿಂದ ತನ್ನ ಪಡೆಗಳನ್ನು ಅಲ್ಲಿಗೆ ಕಳಿಸಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಹಿಂದೆ ಸರಿಯಲೇ ಬೇಕಾಯಿತು. ಇದು ಜಗತ್ತಿನ ಮಿಲಿಟರಿ ಇತಿಹಾಸದಲ್ಲೇ ಅತ್ಯಂತ ದೊಡ್ಡ ‘ನಗರ ಕಾಳಗ’ ಎಂದು ದಾಖಲಾಗಿದೆಯಂತೆ. ಫ್ಯಾಸಿಸಂ

ಹಿಂದೆ ಸರಿಯುತ್ತ ಗೋಡೆಗಳ ಮೇಲೆ “ ಮಾಸ್ಕೋಗೆ ವಿದಾಯ, ನಾವು ಬರ್ಲಿನ್‍ಗೆ ಹಿಂದಿರುಗುತ್ತಿದ್ದೇವೆ” ಎಂದು ಹಿಟ್ಲರ್ ಸೈನಿಕರು ಬರೆದು ಹೋದರಂತೆ. ಅದರ ಕೆಳಗೇ ಕೆಂಪು ಸೈನಿಕರು “ನಾವು ಬರ್ಲಿನ್‍ ವರೆಗೂ ಬರುತ್ತೇವೆ” ಎಂದು ಬರೆದು ಅವರನ್ನು ಬೆನ್ನಟ್ಟಿ ನಿಜವಾಗಿಯೂ ಬರ್ಲಿನ್‍ ವರೆಗೂ ಬಂದೇ ಬಿಟ್ಟಿದ್ದರು.
ಆ ವೇಳೆಗೆ ಹಿಟ್ಲರ್‍ ಮತ್ತು ಆತನ ಹೊಸ ಪ್ರೇಯಸಿ ಇವಾ ಬ್ರೌನ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಹಿಟ್ಲರನ ಹೆಣವನ್ನು “ಛಾನ್ಸ್ ಲರ್”( ಅಲ್ಲಿನ ರಾಷ್ಟ್ರಾಧ್ಯಕ್ಷರ) ನಿವಾಸದ ಹೂದೋಟದಲ್ಲಿ ಸುಡಲಾಗಿತ್ತು. ಒತ್ತಡ ತಾಳಲಾರದೆ ಬರ್ಲಿನ್‍ನಲ್ಲಿ ಜರ್ಮನ್‍ ಸೇನೆ ಕೆಂಪು ಸೇನೆಗೆ ಬೇಷರತ್ತಾಗಿ ಶರಣಾಯಿತು. ಮೇ 7ರಂದು ರೈಮ್ಸ್ ನಗರದಲ್ಲಿ ಪ್ರಾಥಮಿಕ ದಸ್ತಾವೇಜಿಗೆ ಸಹಿ ಹಾಕಿತು. ಫ್ಯಾಸಿಸಂ

ಆದರೆ ಜರ್ಮನ್‍ ಸೇನಾಪಡೆಗಳು ಅಲೈಡ್‍ ಪವರ್ಸ್‍ ಮತ್ತು ಸೋವಿಯೆತ್‍ ಸೇನಾಧಿಪತ್ಯದ ಜಂಟಿ ಮುಖಂಡರೆದುರು ವಿಧ್ಯುಕ್ತವಾಗಿ ಶರಣಾಗಬೇಕು ಎಂದು ಕೆಂಪು ಸೇನೆ ಆಗ್ರಹಿಸಿತು. ಏಕೆಂದರೆ ಫ್ಯಾಸಿಸ್ಟ್ ಜರ್ಮನಿಯೊಂದಿಗೆ ಪ್ರತ್ಯೇಕ ಶಾಂತಿ ಸಂಧಿ ಮಾಡಿಕೊಳ್ಳಬಾರದು ಎಂದು ಸೋವಿಯೆತ್‍ ಒಕ್ಕೂಟ ಮತ್ತು ಆಂಗ್ಲೊ-ಅಮೆರಿಕನ್‍ ಶಕ್ತಿಗಳ ನಡುವೆ ಒಪ್ಪಂದವಾಗಿತ್ತು. ಈ ಪ್ರಕಾರ ಮೇ 8, 1945ರ ಮಧ್ಯರಾತ್ರಿಗೆ ಶರಣಾಗತಿಯ ಪ್ರಕ್ರಿಯೆ ವಿಧ್ಯುಕ್ತವಾಗಿ ಆರಂಭವಾಯಿತು, ಜರ್ಮನ್‍ ಸೇನೆಯ ಶರಣಾಗತಿಯ ದಸ್ತಾವೇಜಿಗೆ ಸಹಿ ಬಿತ್ತು. ಜರ್ಮನ್‍ ಸೇನೆಯ ಪರವಾಗಿ ಫೀಲ್ಡ್ ಮಾರ್ಷಲ್‍ ವಿಲ್ಹೆಲ್ಮ್ ಕೈಟಲ್ , ಸೋವಿಯೆತ್ ಕೆಂಪು ಸೇನೆಯ ಪರವಾಗಿ ಮಾರ್ಷಲ್‍ ಜಿಯೊರ್ಜಿ ಝುಕೊವ್ ಮತ್ತು ಮಿತ್ರಶಕ್ತಿಗಳು (ಅಲೈಡ್‍ ಪವರ್ಸ್) ಪರವಾಗಿ ಏರ್‍ ಚೀಫ್ ಮಾರ್ಷಲ್‍ ಅರ್ಥರ್‍ ಟೆಡ್ಡರ್ ಸಹಿಹಾಕಿದರು. ಫ್ಯಾಸಿಸಂ

ಮಾಸ್ಕೋದಲ್ಲಿ ವಿಜಯೋತ್ಸವ

ಮೇ 9, 1945 ರಂದು ಮಾಸ್ಕೋದಿಂದ ಸ್ಟಾಲಿನ್‍ ರವರ ‘ವಿಜಯ ಭಾಷಣ’ ಪ್ರಸಾರವಾಯಿತು. ಸೋವಿಯೆತ ಒಕ್ಕೂಟದಲ್ಲಿ ಎರಡನೇ ಮಹಾಯುದ್ಧವನ್ನು “ಮಹಾನ್‍ ದೇಶಪ್ರೇಮಿ ಯುದ್ಧ” ಎಂದು ಕರೆಯಲಾಗುತ್ತಿತ್ತು. “ಸಂಗಾತಿಗಳೇ, ಮಹಾನ್‍ ದೇಶಪ್ರೇಮಿ ಯುದ್ಧ ನಮ್ಮ ಸಂಪೂರ್ಣ ವಿಜಯದೊಂದಿಗೆ ಕೊನೆಗೊಂಡಿದೆ. ಯುರೋಪಿನಲ್ಲಿ ಯುದ್ಧದ ಅವಧಿ ಕೊನೆಗೊಂಡಿದೆ. ಶಾಂತಿಯುತ ಅಭಿವೃದ್ಧಿಯ ಅವಧಿ ಆರಂಭವಾಗಿದೆ” ಎಂದು ಸ್ಟಾಲಿನ್ ತಮ್ಮ ವಿಜಯ ಭಾಷಣದಲ್ಲಿ ಸಾರಿದರು. ಎರಡನೇ ಮಹಾಯುದ್ಧ ಕೊನೆಗೊಂಡಿತು. ಈಗ ವಿಶ್ವಾದ್ಯಂತ ಇದನ್ನು ಪ್ರತಿವರ್ಷ ನೆನಪಿಸಿಕೊಳ್ಳಲಾಗುತ್ತಿದೆ. ಹಿಂದೆ ಸೋವಿಯೆತ್‍ ಒಕ್ಕೂಟದಲ್ಲಿ ಮೇ 9ನ್ನು ‘ವಿಜಯ ದಿನ’ವಾಗಿ ಆಚರಿಸಲಾಗುತ್ತಿತ್ತು. ವಿಘಟನೆಯ ನಂತರವೂ ರಷ್ಯನ್‍ ಒಕ್ಕೂಟ ಮತ್ತು ಸೋವಿಯೆತ್‍ ಒಕ್ಕೂಟದ ಭಾಗವಾಗಿದ್ದ ಹಲವು ದೇಶಗಳಲ್ಲಿ ಈ ಆಚರಣೆ ಮುಂದುವರೆದಿದೆ. ಯುರೋಪಿನಲ್ಲಿ ಮೇ 8ನ್ನು ವಿ.ಇ. ದಿನ (ಯುರೋಪಿನಲ್ಲಿ ವಿಜಯ) ಎಂದೂ ಮೇ9 ನ್ನು ‘ಯುರೋಪ್‍ ದಿನ’ ಎಂದೂ ಆಚರಿಸಲಾಗುತ್ತಿದೆ. ಫ್ಯಾಸಿಸಂ

ಎರಡನೇ ಮಹಾಯುದ್ಧದಲ್ಲಿ 2.03 ಕೋಟಿ ಸೈನಿಕರು ಮಡಿದರು. 3.5 ಕೋಟಿ ಸೈನಿಕರು ಗಾಯಗೊಂಡರು. ನಾಜಿಗಳ ಆಕ್ರಮಣಕ್ಕೆ ಒಳಗಾದ ಸೋವಿಯೆತ್‍ ಒಕ್ಕೂಟ ಅತ್ಯಂತ ಹೆಚ್ಚು ಜೀವಹಾನಿಯನ್ನು ಅನುಭವಿಸಿತು. 2.3 ಕೋಟಿ ಜನರು ಸತ್ತರು. ಪೋಲಂಡಿನ 60 ಲಕ್ಷ, ಯುಗೊಸ್ಲಾವಿಯಾದ 17ಲಕ್ಷ ಮಂದಿ ಜೀವ ಕಳಕೊಂಡರು.
ಫ್ರಾನ್ಸಿನಲ್ಲಿ 6ಲಕ್ಷ, ಅಮೆರಿಕದಲ್ಲಿ 4.5 ಲಕ್ಷ ಮತ್ತು ಬ್ರಿಟನ್ನಿನಲ್ಲಿ 3.75 ಲಕ್ಷ ಸೈನಿಕರು ಹತರಾದರು. ಜರ್ಮನಿ 60 ಲಕ್ಷ ಜನರನ್ನು ಕಳಕೊಂಡಿತು. ಹಿಟ್ಲರನ ಯಾತನಾ ಶಿಬಿರಗಳಲ್ಲಿ 80 ಲಕ್ಷ ಮಂದಿ ಅಮಾನುಷ ಸಾವು ಕಂಡರು. ಇದು ಎರಡನೇ ಮಹಾಯುದ್ಧಕ್ಕೆ ಕಾರಣವಾದ ಫ್ಯಾಸಿಸಂನ ನಿಜ ಮುಖ. ಜಗತ್ತಿನಾದ್ಯಂತ ಪ್ರಜಾಪ್ರಭುತ್ವದ ಉಳಿವಿಗೆ ಜಗತ್ತು ತೆರಬೇಕಾಗಿ ಬಂದ ಬೆಲೆ. ಹಿಟ್ಲರ್ ಜರ್ಮನಿಯ ಸೋಲಿನಿಂದ ಅಂದು, ಮತ್ತು ನಂತರವೂ ಜಗತ್ತಿನಾದ್ಯಂತ ಹರ್ಷಾಚರಣೆ ನಡೆಯಲು ಇದೇ ಕಾರಣ. ಫ್ಯಾಸಿಸಂ

ಹಿಟ್ಲರ್ ಜರ್ಮನಿಯ ಸೋಲು ಸನ್ನಿಹಿತವಾಗುತ್ತಿರುವಂತೆ ಕುಖ್ಯಾತ ಔಶ್‍ ವಿಟ್ಝ ಯಾತನಾಶಿಬಿರದಿಂದ ವಿಮೋಚನೆಗೊಳ್ಳುತ್ತಿರುವ ಕೈದಿಗಳೊಂದಿಗೆ ಸೋವಿಯತ್‍ ವೈದ್ಯರು ಮತ್ತು ರೆಡ್‍ಕ್ರಾಸ್ ಪ್ರತಿನಿಧಿಗಳು, ಜನವರಿ 1945

ಇದನ್ನೂ ನೋಡಿ: english gramer Janashakthi Media

Donate Janashakthi Media

Leave a Reply

Your email address will not be published. Required fields are marked *