ಅತ್ಯಾಚಾರ ಯತ್ನ ಪ್ರಕರಣ : ಬಿಜೆಪಿ ಅಧ್ಯಕ್ಷ ಸೇರಿದಂತೆ 14 ಮಂದಿಗೆ ಶಿಕ್ಷೆ ಪ್ರಕಟ

ಸುಳ್ಯ: 2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಅಂದಿನ ಜಿ.ಪಂ. ಚುನಾವಣೆಗೆ ಸ್ಪರ್ಧಿಸಿದ್ದ ಕಾಂಗ್ರೆಸಿನ ಸರಸ್ವತಿ ಕಾಮತ್ ಅವರ ಮೇಲೆ ನಡೆಸಲಾದ ಹಲ್ಲೆ ಮತ್ತು ಅತ್ಯಾಚಾರ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿ.ಪಂ ಸದಸ್ಯ, ಸುಳ್ಯ ತಾಲ್ಲೂಕ ಸಮಿತಿ ಹಾಲಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಮತ್ತು ತಂಡಕ್ಕೆ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.

ಈ ಬಗ್ಗೆ ಜೆ.ಎಂ.ಎಫ್.ಸಿ. ನ್ಯಾಯಾಲಯ ಸೋಮವಾರ ಸಂಜೆ ತೀರ್ಪು ಪ್ರಕಟಿಸಿದೆ. ಸುಳ್ಯ ಜೆ.ಎಂ.ಎಫ್.ಸಿ. ಹಿರಿಯ ಸಿವಿಲ್ ನ್ಯಾಯಾಧೀಶ ಸೋಮಶೇಖರ್ ಎ., ಆರೋಪಿಗಳ ವಿರುದ್ಧದ ಪ್ರಕರಣ ಸಾಬೀತಾಗಿದ್ದು ಇದೆಲ್ಲವನ್ನೂ ಸಂಕ್ಷಿಪ್ತಗೊಳಿಸಿ 14 ಮಂದಿಗೆ 2 ವರ್ಷಗಳ ಜೈಲು ಶಿಕ್ಷೆ ಹಾಗೂ 1. 12 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.

2014ರ ಲೋಕಸಭಾ ಚುನಾವಣೆಯ ಸಂದರ್ಭ ಅಂದು ಜಿಪಂ ಸದಸ್ಯೆಯಾಗಿದ್ದ ಸರಸ್ವತಿ ಕಾಮತ್ ಅವರು ನೆಲ್ಲೂರು ಕೆಮ್ರಾಜೆಯಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದ ವೇಳೆ ಬಿಜೆಪಿ ಹರೀಶ್ ಕಂಜಿಪಿಲಿ ಮತ್ತು ಹರೀಶ್, ಈಶ್ವರಪ್ಪ ಗೌಡ, ರವಿಚಂದ್ರ, ಸವಿನ್ ಕೆ.ಬಿ., ದಿವಾಕರ ನಾಯಕ್, ದಿನೇಶ್ ಚೆಮ್ನೂರು, ರಾಮಚಂದ್ರ ಹರ್ಲಡ್ಕ, ಷಣ್ಮುಖ, ಧನಂಜಯ, ಬಾಲಕೃಷ್ಣ ಕಂಜಿಪಿಲಿ, ಮನೋಹರ್, ದೀಪಕ್ ಎಲಿಮಲೆ, ಮನೋಜ್ ಎಂ.ಕೆ., ವಿಕಾಸ್ ಯಾನೆ ವಿಶ್ವನಾಥ ಎಂಬವರನ್ನೊಳಗೊಂಡ 14 ಮಂದಿಯ ತಂಡ ಗುಂಪು ಅವರ ಮೇಲೆ ಹಲ್ಲೆ ನಡೆಸಿ ಮತ್ತು ಾತ್ಯಾಚಾರಕ್ಕೆ ಯತ್ನಿಸಿದ ಆರೋಪ ಎದುರಿಸುತ್ತಿದ್ದರು. ಈ ಬಗ್ಗೆ ಸರಸ್ವತಿ ಕಾಮತ್ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಈ ದೂರಿನ ಬಗ್ಗೆ ವಿಚಾರಣೆ ನಡೆಸಿದ ಆಗಿನ ದ.ಕ. ಜಿಲ್ಲಾ ಎಸ್ಪಿ ರವಿ ಬಿ.ಎಸ್. ಅವರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ನ್ಯಾಯಾಲಯದ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಈ ಬಗ್ಗೆ ನಮಗೆ ಅಧಿಕೃತ ಆದೇಶ ಪ್ರತಿ ದೊರೆತ ಬಳಿಕ ಮೇಲ್ಮನವಿ ಸಲ್ಲಿಸುತ್ತೇವೆ ಎಂದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *