ಚಿತ್ರದುರ್ಗ: ನೆಲದ ಮೇಲೆ ಬಿದ್ದು ಹೊರಳಾಡುತ್ತಾ, ಹೆತ್ತವರು, ಸಂಬಂಧಿಕರಿಗೆ ಕೈ ಮುಗಿದು ಬೇಡಿಕೊಳ್ಳುತ್ತಾ, ಮದುವೆ ಮಾಡಬೇಡಿ ಎಂದು ಅಂಗಲಾಚುತ್ತಿದ್ದ 13 ವರ್ಷದ ಬಾಲಕಿಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿದೆ.
ಆಟ, ಪಾಠ ಅಂತ ಇದ್ದ ಬಾಲಕಿಗೆ ಇದ್ದಕಿದ್ದ ಹಾಗೆ ಮನೆಯವರೆಲ್ಲ ಮದುವೆ ಮಾಡಿಸಲು ಮುಂದಾಗಿದ್ದರು. ಆಕೆಗೆ ಮೊದಲು ವಿಷಯ ತಿಳಿಯದೆ, ಮದುವೆಯ ದಿನ ಬಂದಾಗ ಖಡಾಕಂಡಿತವಾಗಿ ಬಾಲಕಿ ವಿರೋಧಿಸಿದ್ದಾಳೆ. ಮನೆಯವರು, ಸಂಬಂಧಿಕರು ಸೇರಿ ಆಕೆಯನ್ನು ಆಕೆಯ ಮಾವನ ಜೊತೆ ಮದುವೆ ಮಾಡಿಸಲು ಮುಂದಾಗಿದ್ದರು. 12 ಕ್ಕೂ ಹೆಚ್ಚು ಜನ ಆಕೆಗೆ ಹೊಡೆದು, ಬಡಿದು ಬಲವಂತವಾಗಿ ತಾಳಿ ಕಟ್ಟಿಸಲು ಮುಂದಾದ್ರೂ ಬಾಲಕಿಯ ಗಟ್ಟಿ ನಿರ್ಧಾರದಿಂದ ಆಕೆ ಮದುವೆಯಿಂದ ತಪ್ಪಿಸಿಕೊಂಡಿದ್ದಾಳೆ.
ನೆರೆಮನೆಯವರು ಆಕೆಯನ್ನು ರಕ್ಷಿಸಲು ಬಂದಾಗ್ಲೂ ಅವಕಾಶ ಕೊಡದ ಹೆತ್ತವರು, ಮದುವೆಗೆ ಪೀಡಿಸುತ್ತಿದ್ದರು. ಆಕೆ ಬಿದ್ದು ಹೊರಳಾಡುತ್ತಾ ಮನವಿ ಮಾಡಿಕೊಲ್ಳುತ್ತಿದ್ದಿದ್ದನ್ನು ವಿಡಿಯೋ ಮಾಡಿ ಪೊಲೀಸ್ ಠಾಣೆಗೆ ಕಳಿಸಿದ್ದಾರೆ. ಜೂನ್ 4 ರಂದು ಹುಡುಗಿ ತನ್ನ ಮದುವೆಯನ್ನು ನಿಲ್ಲಿಸುವಂತೆ ಬೇಡಿಕೊಳ್ಳುವ ವೀಡಿಯೊ ಕೂಡಾ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು. ವಿರೋಧದ ನಡುವೆಯೂ ವರ ತಾಳಿ ಕಟ್ಟಲು ಮುಂದಾದಾಗ, ಬಾಲಕಿ ತಪ್ಪಿಸಿಕೊಂಡು ಮನೆಯಿಂದ ಹೊರಗೆ ಓಡಿಹೋದಳು.
ಇದನ್ನೂ ಓದಿ: ರಾಜ್ಯದಲ್ಲಿ ಜೂನ್ 11ರಿಂದ ಭಾರಿ ಮಳೆ: ಹವಾಮಾನ ಇಲಾಖೆ
ವಿಡಿಯೋ ನೋಡಿದ ಚಳ್ಳಕೆರೆಯ ಪೊಲೀಸರು ಮತ್ತು ಮಕ್ಕಳ ಕಲ್ಯಾಣ ಸಮಿತಿ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಆಕೆಯನ್ನು ರಕ್ಷಿಸಿದರು. ಚಿತ್ರದುರ್ಗ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಸಿ ಸವಿತಾ ಅವರು ಈ ವಿಷಯದ ಬಗ್ಗೆ ಮಾತನಾಡಿ, ನಾವು ತಕ್ಷಣ ಸ್ಥಳಕ್ಕೆ ಧಾವಿಸಿ ಮಗುವನ್ನು ರಕ್ಷಿಸಿದ್ದೇವೆ. ಆಕೆ ಈಗ ಬಾಲ ಮಂದಿರದಲ್ಲಿದ್ದಾಳೆ. ಮಕ್ಕಳ ಕಲ್ಯಾಣ ಸಮಿತಿ ಹುಡುಗಿಯೊಂದಿಗೆ ಮಾತನಾಡುತ್ತದೆ. ಸಲಹೆಗಾರರು ಆಕೆಗೆ ಸಮಾಧಾನ ಹೇಳುತ್ತಾರೆ. ಹುಡುಗಿಯ ಹೇಳಿಕೆ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ.
ಆಕೆ ತನ್ನ ಗ್ರಾಮಕ್ಕೆ ಹಿಂತಿರುಗಿ ತನ್ನ ಹೆತ್ತವರೊಂದಿಗೆ ಇರಲು ಒಪ್ಪಿದರೆ, ನಾವು ಆಕೆಯನ್ನು ಕಳುಹಿಸುತ್ತೇವೆ. ಇಲ್ಲದಿದ್ದರೆ, ಆಕೆ ಬಾಲ ಮಂದಿರದಲ್ಲಿಯೇ ಇದ್ದು, ಅಲ್ಲಿಂದಲೇ ಶಾಲೆಗೆ ಹೋಗುತ್ತಾಳೆ ಎಂದಿದ್ದಾರೆ. ಅಧಿಕಾರಿಯ ಪ್ರಕಾರ, ಹುಡುಗಿ ಓದಿನಲ್ಲಿ ಮತ್ತು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾಳೆ. ಆಕೆ ತನ್ನ ಶಿಕ್ಷಣವನ್ನು ಮುಂದುವರಿಸಲು ಇಷ್ಟಪಡುತ್ತಾಳೆ ಎಂದಿದ್ದಾರೆ.
ಇದನ್ನೂ ನೋಡಿ: ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ | ವಿಶ್ಲೇಷಣೆ – ಅಹಮದ್ ಹಗರೆ Janashakthi Media