ಸಾರಿಗೆ ಮುಷ್ಕರ – ಸೌಹಾರ್ದ ಪರಿಹಾರಕ್ಕೆ ಸಿಪಿಐ(ಎಂ) ಒತ್ತಾಯ

ಬೆಂಗಳೂರು : ರಾಜ್ಯ ರಸ್ತೆ ಸಾರಿಗೆ ನಿಗಮಗಳು ಮತ್ತು ಬೆಂಗಳೂರು ಮಹಾನಗರ ಸಾರಿಗೆ ನಿಗಮ ನೌಕರರು ಏಪ್ರಿಲ್ 7 ರಿಂದ ನಡೆಸುತ್ತಿರುವ ಮುಷ್ಕರದ ಬೇಡಿಕೆಗಳ ಈಡೇರಿಕೆಗೆ ಅಗತ್ಯ ಕ್ರಮವಹಿಸಿ ಸೌಹಾರ್ದ ಪರಿಹಾರಕ್ಕೆ ರಾಜ್ಯ ಬಿಜೆಪಿ ಸರ್ಕಾರ ಮುಂದಾಗಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಸಿಪಿಐ(ಎಂ), ಬೆಂಗಳೂರು ಉತ್ತರ ಹಾಗೂ ದಕ್ಷಿಣ ಜಿಲ್ಲಾ ಸಮಿತಿಗಳು ಒತ್ತಾಯಿಸಿವೆ.

ಸಾರಿಗೆ ನಿಗಮಗಳ ನೌಕರರು ತಮ್ಮ ಬೇಡಿಕೆಗಳ ಕುರಿತು ಈ ಹಿಂದೆ ನಡೆಸಿದ್ದ ಮುಷ್ಕರದ ವೇಳೆ ಅವರ ಬೇಡಿಕೆಗಳ ಪರಿಹಾರಕ್ಕೆ ಕ್ರಮವಹಿಸುವುದಾಗಿ ಭರವಸೆ ನೀಡಿದ್ದ ರಾಜ್ಯ ಬಿಜೆಪಿ ಸರ್ಕಾರವು 4 ತಿಂಗಳಾದರೂ ಬೇಡಿಕೆ ಈಡೇರಿಕೆಗೆ ಸೂಕ್ತ ಕ್ರಮವಹಿಸದಿದ್ದ ಕಾರಣ ನೌಕರರು ಮತ್ತೊಮ್ಮೆ ಮುಷ್ಕರಕ್ಕೆ ಮುಂದಾಗಿದ್ದಾರೆ.

ಇದನ್ನು ಓದಿ :ಸಾರಿಗೆ ನೌಕರರ ಮುಷ್ಕರ :‌ ಖಾಸಗಿ ಬಸ್‌ ಓಡಿಸಲು ಸಿದ್ಧತೆ – ಸವದಿ

ನೌಕರರ ಬೇಡಿಕೆಗಳ ಕುರಿತು ಸಹಾನುಭೂತಿಯಿಂದ ಮಾತುಕತೆ ಮೂಲಕ ಪರಿಹಾರೋಪಾಯವನ್ನು ಕಂಡುಕೊಳ್ಳಲು ರಾಜ್ಯ ಬಿಜೆಪಿ ಸರ್ಕಾರ ಮುಂದಾಗದಿದ್ದ ಕಾರಣ ರಾಜ್ಯದ ಜನತೆ ಸಾರಿಗೆ ಸಮಸ್ಯೆಯ ಸಂಕಷ್ಟವನ್ನು ಎದುರಿಸಬೇಕಾಗಿ ಬಂದಿದೆ. ಪರಿಹಾರದ ಮಾತುಕತೆಯ ಮಾರ್ಗವನ್ನು ಅನುಸರಿಸುವ ಬದಲು ರಾಜ್ಯ ಬಿಜೆಪಿ ಸರ್ಕಾರವು ನೌಕರರನ್ನು ಬೆದರಿಸುವ, ಅವರನ್ನು ಕ್ವಾಟ್ರಸ್ ಗಳಿಂದ ಖಾಲಿ ಮಾಡಿಸುವ ಮತ್ತು ಎಸ್ಮಾ ಜಾರಿಗೊಳಿಸುವ ಎಚ್ಚರಿಕೆ ನೀಡುತ್ತಿರುವುದು ರಾಜ್ಯ ಬಿಜೆಪಿ ಸರ್ಕಾರದ ನೌಕರ ವಿರೋಧಿ ಮನೋಭಾವನೆಯನ್ನು ತೋರುತ್ತದೆ ಎಂದು ಸಿಪಿಐ(ಎಂ) ಟೀಕಿಸಿದೆ.

ಇದನ್ನು ಓದಿ :ಸಾರಿಗೆ ನೌಕರರ ಮುಷ್ಕರ : ಸಾರ್ವಜನಿಕ ಸಾರಿಗೆ ಸ್ತಬ್ಧ

ಸಾರಿಗೆ ನೌಕರರ ಮುಷ್ಕರದ ನೆಪದಲ್ಲಿ ಖಾಸಗಿ ಬಸ್ ಗಳಿಗೆ ಸಾರಿಗೆ ನಿಗಮಗಳ ನಿಲ್ದಾಣದಿಂದಲೇ ಕಾರ್ಯಾಚರಣೆಗೆ ಅನುಮತಿಸುವ ಪರ್ಯಾಯದ ಮೂಲಕ ಸಾರಿಗೆ ನಿಗಮಗಳ ಖಾಸಗೀಕರಣಕ್ಕೆ ರಾಜ್ಯ ಬಿಜೆಪಿ ಸರ್ಕಾರವು ತಾಲೀಮು ನಡೆಸಿದೆ. ಬಿಜೆಪಿಯು ಮೂಲತಃ ಸಾರ್ವಜನಿಕ ಉದ್ದಿಮೆಗಳ ಹಾಗೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ವಿರುದ್ಧದ ತಾತ್ವಿಕ ನಿಲುಮೆಯನ್ನು ಹೊಂದಿದೆ. ಈಗಾಗಲೇ ಅದರ ಹಿರಿ, ಕಿರಿ ನಾಯಕರೆಲ್ಲಾ ಸಾರಿಗೆ ಸಂಸ್ಥೆಗಳ ಖಾಸಗೀಕರಣ ಪರ ವಕಾಲತ್ತು ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಷ್ಕರ ನಿರತ ನೌಕರರಿಗೆ ಬೆಂಬಲ ನೀಡಿರುವ ಸಿಪಿಐ(ಎಂ) ನೌಕರರು ತಮ್ಮ ಬೇಡಿಕೆಗಳ ಜೊತೆಯಲ್ಲೇ ಸಾರಿಗೆ ಸಂಸ್ಥೆಗಳ ಖಾಸಗೀಕರಣವನ್ನು ವಿರೋಧಿಸಿ ಹಿಮ್ಮೆಟ್ಟಿಸಬೇಕೆಂದು ಕೋರಿದೆ.

ಇದನ್ನು ಓದಿ : ಬೇಡಿಕೆ ಈಡೇರಿಕೆಗಾಗಿ ವಾರಪೂರ್ತಿ ಸಾರಿಗೆ ನೌಕರರ ವಿನೂತನ ಪ್ರತಿಭಟನೆ

ರಾಜ್ಯ ಬಿಜೆಪಿ ಸರ್ಕಾರವು ತನ್ನ ಹಠಮಾರಿ ಧೋರಣೆಯನ್ನು ಕೈಬಿಟ್ಟು ನೌಕರರ ಬೇಡಿಕೆ ಈಡೇರಿಕೆಗೆ ಅಗತ್ಯ ಕ್ರಮವಹಿಸದಿದ್ದಲ್ಲಿ ಮತ್ತು ಖಾಸಗೀ ಬಸ್ ಮಾಲೀಕರಿಗೆ ಅನುವುಗೊಳಿಸುವ ಪರ್ಯಾಯವನ್ನು ಕೈಬಿಡದಿದ್ದಲ್ಲಿ ಹಾಗೂ ನೌಕರರ ಮೇಲೆ ದಬ್ಬಾಳಿಕೆ ನಡೆಸುವ, ಎಸ್ಮಾ ಜಾರಿಗೊಳಿಸುವ ಕ್ರಮಕ್ಕೆ ಮುಂದಾದಲ್ಲಿ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಸಿಪಿಐ(ಎಂ) ಪಕ್ಷವು ರಾಜ್ಯ ಬಿಜೆಪಿ ಸರ್ಕಾರವನ್ನು ಎಚ್ಚರಿಸಿದೆ.

Donate Janashakthi Media

Leave a Reply

Your email address will not be published. Required fields are marked *