ಬಾಕಿ ವೇತನ ಪಾವತಿಗೆ ಒತ್ತಾಯ

ಕಲಬುರ್ಗಿ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಸತಿ ನಿಲಯಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರ 8-9 ತಿಂಗಳ ಬಾಕಿ ವೇತನ ಪಾವತಿಸಲು ಮತ್ತು ಅಧಿಕಾರಿಗಳು ನೌಕರರಿಗೆ ನೀಡುತ್ತಿರುವ ಕಿರುಕುಳ ತಪ್ಪಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಎದರುಗಡೆ ಇಂದು ಧರಣಿ ಸತ್ಯಾಗ್ರಹ ನಡೆಸಲಾಯಿತು.

ಜಿಲ್ಲೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಡಿಯಲ್ಲಿರುವ ಎಲ್ಲ ವಸತಿ ನಿಲಯಗಳಿಗೆ ಮ್ಯಾನ್‌ ಪವರ್ ಏಜೆನ್ಸಿಯವರು ಸರ್ಕಾರದ ಆದೇಶದಿಂದ ಪ್ರತಿ ತಿಂಗಳು ನಿಗದಿತ ವೇತನ ಪಾವತಿಸುವ ಬದಲು ಒಂದು ಸಾವಿರ ರೂಪಾಯಿ ಕಡಿಮೆ ವೇತನ ಪಾವತಿಸುತ್ತಿದ್ದಾರೆ. ಇಪಿಎಫ್‌ ಮತ್ತು ಇಎಸ್‌ಐ ಕಂತಿನ ಹಣವನ್ನು ತಿಂಗಳು ಸರಿಯಾಗಿ ಕಟ್ಟುತ್ತಿಲ್ಲ. ಅಲ್ಲದೇ, ನಾಲ್ಕೈದು ತಿಂಗಳಿಂದ ವೇತನ ಪಾವತಿಸದೇ ಇರುವುದರಿಂದ ನೌಕರರು ಅತ್ಯಂತ ಸಂಕಷ್ಟದಲ್ಲಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿರುವ ಮೊರಾರ್ಜಿ ದೇಸಾಯಿ ಮತ್ತು ಇಂದಿರಾ ಗಾಂಧಿ, ಡಾ.ಬಿ.ಆರ್. ಅಂಬೇಡ್ಕರ್, ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯಗಳ ಹೊರಗುತ್ತಿಗೆ ನೌಕರರಿಗೆ ಮತ್ತೊಂದು ಮ್ಯಾನ್‌ ಪವರ್ ಏಜೆನ್ಸಿಯು ನೌಕರರಿಗೆ ಬಹಳಷ್ಟು ವಿಳಂಬವಾಗಿ ವೇತನ ಪಾವತಿಸಲಾಗುತ್ತದೆ. ಕಿತ್ತೂರು ರಾಣಿ ಚನ್ನಮ್ಮ, ಎನ್‌.ಎನ್‌. ತಾಂಡಾ ನಿಡಗುಂದಾ ಮೊರಾರ್ಜಿ ದೇಸಾಯಿ, ಚಿತ್ತಾಪುರ ಮೊರಾರ್ಜಿ ದೇಸಾತಯಿ ಶಾಲೆ, ಗುಂಡಗುರ್ತಿ, ಅಡಕಿ ಈ ವಸತಿ ನಿಲಯಗಳಲ್ಲಿ ದುಡಿಯುತ್ತಿರುವ ನೌಕರರಿಗೆ 3–4 ತಿಂಗಳ ವೇತನ ಪಾವತಿಸದೇ ಅಲೆದಾಡಿಸುತ್ತಿದ್ದಾರೆ ಎಂದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮೊರಾರ್ಜಿ ದೇಸಾಯಿ, ದಂಡೋತಿ ಮತ್ತು ಯಳವಾರ ವಸತಿ ನಿಲಯಗಳಲ್ಲಿ 2021ರ ಜೂನ್, ಜುಲೈ, ಆಗಸ್ಟ್ ತಿಂಗಳಲ್ಲಿ ಕೋವಿಡ್ ಸಂದರ್ಭದಲ್ಲಿ ವಸತಿ ನಿಲಯ ರಜೆಯಿದ್ದರೂ ಎಲ್ಲಾ ಹೊರಗುತ್ತಿಗೆ ನೌಕರರಿಗೆ ಶಾಲಾ ಆವರಣದಲ್ಲಿ ಹುಲ್ಲು ತೆಗೆಯುವುದು, ಗಿಡ ಹಚ್ಚುವುದು, ಕಾಂಪೌಂಡ್ ಸ್ವಚ್ಛತೆಯ ಕೆಲಸ ಹಚ್ಚಿದ್ದಾರೆ. ಆದರೆ, ಈ ಕೆಲಸಕ್ಕೆ ವೇತನ ಪಾವತಿಸಿಲ್ಲ.

ಬಿಸಿಎಂ ಇಲಾಖೆಯಲ್ಲಿ 2020–21ನೇ ಸಾಲಿನ ವಸತಿ ನಿಲಯಗಳಲ್ಲಿ ಸೇವೆ ಸಲ್ಲಿಸಿದ ಹೊರಗುತ್ತಿಗೆ ನೌಕರರಿಗೆ ಏಳೆಂಟು ತಿಂಗಳ ಬಾಕಿ ವೇತನವನ್ನು ಇಲ್ಲಿಯವರೆಗೂ ಪಾವತಿಸಿಲ್ಲ. ಅಲ್ಲದೇ, 10, 12 ವರ್ಷಗಳಿಂದ ಸೇವೆ ಸಲ್ಲಿಸಿದ ನೌಕರರನ್ನು ಕೆಲಸದಿಂದ ತೆಗೆದು ಹಾಕಿ ನಾಲ್ಕೈದು ವರ್ಷ ಸೇವೆ ಸಲ್ಲಿಸಿದವರಿಗೆ ಮತ್ತು ಹೊಸದಾಗಿ ಕೆಲಸಕ್ಕೆ ಸೇರಿಸಿಕೊಂಡು ಹತ್ತಾರು ವರ್ಷಗಳಿಂದ ಅತ್ಯಂತ ಕಡಿಮೆ ವೇತನದಲ್ಲಿ ದುಡಿದ ನೌಕರರಿಗೆ ಅನ್ಯಾಯ ಮಾಡಿದ್ದಾರೆ. ಹೀಗಾಗಿ, ಹೆಚ್ಚು ವರ್ಷ ಸೇವೆ ಸಲ್ಲಿಸಿದ ನೌಕರರಿಗೆ ಆದ್ಯತೆ ಕೊಟ್ಟು ಸೇವೆಯಲ್ಲಿ ಮುಂದುವರಿಸಬೇಕೆಂದು ಆಗ್ರಹಿಸಲಾಗಿದೆ. ಈ ಬಗ್ಗೆ ಬಿಸಿಎಂ ಜಿಲ್ಲಾ ಅಧಿಕಾರಿಗೆ ಮಾಹಿತಿ ಕೇಳಿ ಅರ್ಜಿ ಸಲ್ಲಿಸಿದರೂ ಮಾಹಿತಿ ನೀಡಿಲ್ಲ ಎಂದು ಆರೋಪಿಸಿದರು.

ಸಂಘದ ಜಿಲ್ಲಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಸಹ ಕಾರ್ಯದರ್ಶಿ ಮಲ್ಲಮ್ಮ ಕೋಡ್ಲಿ, ಸಿದ್ದರಾಮ ಹರವಾಳ, ಫಾತಿಮಾಬೇಗಂ, ಬಾಬು ಹೊಸಮನಿ, ಎಂ.ಬಿ.ಸಜ್ಜನ್ ಸೇರಿದಂತೆ ಮತ್ತಿತರರು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *