ಬಳ್ಳಾರಿ : ಈಚೆಗೆ ಬಳ್ಳಾರಿ ಜಿಲ್ಲೆಯಲ್ಲಿ ಕೈಗೊಂಡ ಪ್ರವಾಸದ ವೇಳೆ ವಾಣಿಜ್ಯ ಮತ್ತು ಕೈಗಾರಿಕೆ (ಸಿ ಆ್ಯಂಡ್ ಐ) (ಗಣಿ) ಇಲಾಖೆಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಖಾಸಗಿ ಉದ್ದಿಮೆ ಜಿಂದಾಲ್ನಲ್ಲಿ ವಾಸ್ತವ್ಯ ಹೂಡಿದ್ದನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ವಿರೋಧಿಸಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಯ ಜಿಲ್ಲಾ ಘಟಕ ಮಂಗಳವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಒತ್ತಾಯಿಸಿದೆ.
ಇದನ್ನೂ ಓದಿ : ಬೆಂಗಳೂರು ಶಿಕ್ಷಕರ ಕ್ಷೇತ್ರದ ಅಂತಿಮ ಮತದಾರರ ಪಟ್ಟಿ ಪ್ರಕಟ
ಸುಪ್ರೀಂ ಕೋರ್ಟ್ನಲ್ಲಿ ಈ ಸಂಬಂಧ ಮಧ್ಯಂತರ ಅರ್ಜಿ ಸಲ್ಲಿಸಿರುವ ಜಿಂದಾಲ್ ಕಂಪನಿಯು ಸರ್ಕಾರದ ವಿವಿಧ ಇಲಾಖೆಗಳನ್ನು ಪ್ರತಿವಾದಿಯಾಗಿ ಮಾಡಿದೆ. ಸಿ ಆ್ಯಂಡ್ ಐ ಕಾರ್ಯದರ್ಶಿಯಾಗಿರುವ ರೋಹಿಣಿ ಅವರನ್ನೂ ಜಿಂದಾಲ್ ಪ್ರತಿವಾದಿಯಾಗಿ ಮಾಡಿದೆ. ‘ಜಿಂದಾಲ್ ಕಂಪನಿಯು ಉಕ್ಕು ಉತ್ಪಾದನೆ ಜೊತೆಗೆ, ಈಚೆಗೆ 4 ಗಣಿಗಳನ್ನು ಹರಾಜಿನಲ್ಲಿ ಖರೀದಿಸಿದೆ. ಹರಾಜು ಪ್ರಕ್ರಿಯೆ ವೇಳೆ ಸರ್ಕಾರ ಸುಪ್ರೀಂ ಕೋರ್ಟ್ನ ಆದೇಶಗಳನ್ನು ಉಲ್ಲಂಘಿಸಿದೆ ಕೇಂದ್ರದ ಕೇಂದ್ರದ ಉನ್ನತಾಧಿಕಾರಿಗಳ ಸಮಿತಿಯು ಸುಪ್ರೀಂ ಕೋರ್ಟ್ಗೆ ವರದಿ ನೀಡಿದೆ. ಇಂಥ ಸಂದರ್ಭದಲ್ಲಿ ಅವರು ಜಿಂದಾಲ್ನ ಅತಿಥ್ಯ ಪಡಿದಿರುವುದು ಆಕ್ಷೇಪಾರ್ಹ. ಅವರ ನಡೆ ಅನುಮಾನಕ್ಕೆ ಕಾರಣವಾಗಿದೆ. ಸರ್ಕಾರದ ಉನ್ನತ ಅಧಿಕಾರಿಗೆ ಈ ಸರಳ ಸಂಗತಿಯು ಅರ್ಥವಾಗದಿರುವುದು ಶಂಕೆ ಮೂಡಿಸಿದೆ’ ಎಂದು ಸಂಘಟನೆ ಹೇಳಿದೆ.
‘ಮುಖ್ಯಮಂತ್ರಿಯಿಂದ ಹಿಡಿದು ಕಾರ್ಮಿಕ ಸಚಿವರು, ಉಸ್ತುವಾರಿಗಳು, ಸಂಸದರು ಮತ್ತು ಸರ್ಕಾರದ ಇತರರು ಬಳ್ಳಾರಿಗೆ ಬಂದರೆ ಜಿಂದಾಲ್ನಲ್ಲಿ ಆತಿಥ್ಯ ಸ್ವೀಕರಿಸುತ್ತಾರೆ. ಇದು ನಾಚಿಕೆಗೇಡು. ಜಿಂದಾಲ್ ಅವರ ಮರ್ಜಿಯಲ್ಲಿ ಸರ್ಕಾರ, ಜನಪ್ರತಿನಿಧಿಗಳು ಇದ್ದಾರೆ ಎಂಬ ಸಂದೇಶ ನೀಡುವುದು ಖಂಡನೀಯ. ಇನ್ನು ಮೇಲಾದರೂ ಅದನ್ನು ನಿಲ್ಲಿಸಬೇಕು’ ಎಂದು ಆಗ್ರಹಿಸಿದೆ.
ಇದನ್ನೂ ನೋಡಿ : ಕುವೆಂಪು ಜನ್ಮ ದಿನ | “ಬನ್ನಿ ಬನ್ನಿ ಲೋಕಗುರುಗಳೆಲ್ಲ ಬನ್ನಿ” ಹಾಡು : ಎಚ್.ವಿ. ನಟರಾಜ Janashakthi Media
