ನೊಬೆಲ್ ಪುರಸ್ಕೃತ ಮೊಹಮದ್ ಯೂನಸ್ ಬಾಂಗ್ಲಾದೇಶದ ನೂತನ ಪ್ರಧಾನಿ?

ಢಾಕಾ : ನೋಬೆಲ್ ಪ್ರಶಸ್ತಿ ವಿಜೇತ ಮೊಹಮದ್ ಯೂನಸ್ ಅವರನ್ನು ಬಾಂಗ್ಲಾದೇಶದ ಹಂಗಾಮಿ ಪ್ರಧಾನಿ ಆಯ್ಕೆ ನೇಮಕಗೊಳ್ಳುವ ಸಾಧ್ಯತೆ ಇದೆ.

ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಬಾಂಗ್ಲಾದೇಶದಲ್ಲಿ ಇದೀಗ ಮೀಸಲು ವಿವಾದ ಭುಗಿಲೆದ್ದಿದ್ದು, ಹಿಂಸಾಚಾರದ ಹಿನ್ನೆಲೆಯಲ್ಲಿ 5 ಬಾರಿಯ ಪ್ರಧಾನಿ ಶೇಖ್ ಹಸೀನಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿದ್ದಾರೆ.

ಬಾಂಗ್ಲಾದೇಶದಲ್ಲಿ ನಡೆದ ಕ್ಷಿಪ್ರ ಬೆಳವಣಿಗೆ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಸೇನೆ ಮಧ್ಯಂತರ ಸರ್ಕಾರ ರಚನೆಗೆ ಮುಂದಾಗಿದ್ದು, ಪ್ರತಿಪಕ್ಷಗಳು ಹಾಗೂ ಸಂಘಟನೆಗಳ ಮುಖಂಡರ ಜೊತೆ ಮಾತುಕತೆ ನಡೆಸುತ್ತಿದೆ.

ಇದೇ ಪ್ರತಿಭಟನೆಯ ನಾಯಕರು ಮಧ್ಯಂತರ ಸರ್ಕಾರದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳುವಂತೆ ಮೊಹಮದ್ ಯೂನಸ್ ಅವರಿಗೆ ಮನವಿ ಮಾಡಿಕೊಳ್ಳುತ್ತಿದೆ.

ಮೊಹಮದ್ ಯೂನಸ್ ಬಡವರ ಬ್ಯಾಂಕರ್ ಎಂದೇ ಖ್ಯಾತರಾಗಿದ್ದಾರೆ. ಅವರ ಸೇವೆಯನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿ 2006ರಲ್ಲಿ ನೋಬೆಲ್ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿತ್ತು.

ಆದಿವಾಸಿಗಳು ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ಕಡುಬಡವರಿಗೆ ಬದುಕು ಕಟ್ಟಿಕೊಳ್ಳಲು ಅತ್ಯಂತ ಕಡಿಮೆ ಬಡ್ಡಿ ದರ ಅಥವಾ ಬಡ್ಡಿ ರಹಿತ ಸಾಲ ನೀಡುವ ಮೂಲಕ ಲಕ್ಷಾಂತರ ಕುಟುಂಬಗಳಿಗೆ ನೆರವು ನೀಡುವ ಮೂಲಕ ಬಡವರಲ್ಲಿ ಬಡವರ ಪಾಲಿಗೆ ಬ್ಯಾಂಕರ್ ಎಂದೇ 84 ವರ್ಷದ ಯೂನಸ್ ಖ್ಯಾತಿ ಪಡೆದಿದ್ದಾರೆ.

ಅತ್ಯಂತ ಕಡಿಮೆ ಮೊತ್ತದ ಸಾಲ ನೀಡುವ ಗ್ರಾಮೀಣ ಬ್ಯಾಂಕ್ ಸ್ಥಾಪನೆ ಮಾಡಿದ್ದ ಮೊಹಮದ್ ಯೂನಸ್ ಬಡವರಿಗೆ ಸಾಲ ನೀಡುವ ಮೂಲಕ ದೇಶದ ಆರ್ಥಿಕತೆ ಕುಸಿಯದಂತೆ ನೋಡಿಕೊಂಡಿದ್ದರು. ಇವರ ಸಾಲದ ವ್ಯವಸ್ಥೆಯನ್ನು ಅಭಿವೃದ್ದಿ ಹೊಂದಿದ್ದ ದೊಡ್ಡ ದೇಶಗಳು ಕೂಡ ಪಾಲಿಸಲು ಆರಂಭಿಸಿದ್ದವು.

ಮಾನವರಾಗಿ ಹುಟ್ಟಿದ ಮೇಲೆ ಬಡತನದಿಂದ ಹಸಿವು ಮತ್ತು ಬಡತನದಿಂದ ಸಾಯಬಾರದು ಎಂದು ನೋಬೆಲ್ ಪ್ರಶಸ್ತಿ ಸ್ವೀಕರಿಸುವ ವೇಳೆ ಯೂನಸ್ ಭಾಷಣ ಮಾಡಿದ್ದರು. ಆದರೆ ಪ್ರಧಾನಿಯಾಗಿದ್ದ ಶೇಖ್ ಹಸೀನಾ ಇವರನ್ನು ಬಡವರ ರಕ್ತ ಹೀರುವ ವ್ಯಕ್ತಿ ಎಂದು ಟೀಕಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *