ನಾರಾಯಣಾಚಾರ್ ಆಚಾರ್ಯ ಮೃತದೇಹ ಪತ್ತೆ  

  • ನಾಲ್ಕು ಮೃತದೇಹ ಸಿಗೋವರೆಗೂ ಕಾರ್ಯಾಚರಣೆ ನಿಲ್ಲಿಸಲ್ಲ: ಸಚಿವ ಸೋಮಣ್ಣ

ಮಡಿಕೇರಿ: ಸತತ ಆರು ದಿನಗಳ ನಂತರ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದ ಕಾರ್ಯಾಚರಣೆಯಲ್ಲಿ ಪ್ರಪಾತದಲ್ಲಿ ಮತ್ತೊಂದು ಮೃತದೇಹ ಪತ್ತೆಯಾಗಿದೆ.  ಮಣ್ಣಿನಡಿ ಸಿಲುಕಿದ್ದ ಮತ್ತೊಂದು ಮೃತ ದೇಹ ಪತ್ತೆಯಾಗಿದ್ದು, ನಾರಾಯಣಾಚಾರ್ ಆಚಾರ್ಯ ಮೃತದೇಹ ಎಂದು ಗುರುತಿಸಲಾಗಿದೆ. ಕಂದಕದ ಕೆಳಗಿರುವ ಸಿಬ್ಬಂದಿ ಈ ಬಗ್ಗೆ ಮಾಹಿತಿ ನೀಡಿದ್ದು, ಸ್ಥಳಿಯ ಸರ್ಕಲ್    ಇನ್ಸ್ಪೆಕ್ಟರ್  ಇನ್ಸ್‍ಪೆಕ್ಟರ್ ನಾರಾಯಣಾಚಾರ್ ಆಚಾರ್ಯ ಮೃತದೇಹ ಎಂದು ಗುರುತು ಪತ್ತೆ ಮಾಡಿದ್ದಾರೆ.

ನಾರಾಯಣಾಚಾರ್ ಆಚಾರ್ಯ ಮೃತದೇಹ ಮನೆಯಿಂದ ಅರ್ಧ ಕಿ.ಮೀ ದೂರಕ್ಕೆ ಕೊಚ್ಚಿಕೊಂಡು ಹೋಗಿತ್ತು. ಹೀಗಾಗಿ ಪ್ರಪಾತದಲ್ಲಿ ಶವ ಪತ್ತೆಯಾಗಿದೆ. ಸಿಬ್ಬಂದಿ ಮೃತದೇಹ ಹೊರತೆಗೆದು ಮೇಲಕ್ಕೆ ತರುತ್ತಿದ್ದಾರೆ. ಇತ್ತ ಆಪರೇಷನ್ ಬ್ರಹ್ಮಗಿರಿ ನಡೆಯುತ್ತಿರುವ ಸ್ಥಳದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಇದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.

60 ಅಡಿ ಆಳದಲ್ಲಿ ಅರ್ಚಕರ ಎರಡು ಕಾರು ಪತ್ತೆ

ತಲಕಾವೇರಿಯ ಬ್ರಹ್ಮಗಿರಿಯಲ್ಲಿ ಬೆಟ್ಟ ಕುಸಿದು ಕಣ್ಮರೆಯಾಗಿದ್ದವರಿಗೆ ಎನ್‌ಡಿಆರ್‌ಎಫ್ ತಂಡ ತೀವ್ರ ಶೋಧ ನಡೆಸುತ್ತಿದೆ. ಇದೀಗ ಕಣ್ಮರೆಯಾದ ಪ್ರಧಾನ ಅರ್ಚಕರಾದ ನಾರಾಯಣ ಆಚಾರ್ ಅವರು ಬಳಸುತ್ತಿದ್ದ ಎರಡು ಕಾರುಗಳು ಪತ್ತೆಯಾಗಿವೆ. ಕಳೆದ ನಾಲ್ಕು ದಿನಗಳಿಂದ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್‌, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೆಳಗ್ಗೆಯಿಂದಲೇ ಕಣ್ಮರೆಯಾದವರಿಗೆ ತೀವ್ರವಾದ ಹುಡುಕಾಟವನ್ನು ಪ್ರಾರಂಭಿಸಿದ್ದಾರೆ. ಈ ವೇಳೆ ನಾರಾಯಣ ಆಚಾರ್ ಬಳಸುತ್ತಿದ್ದ ರೆನಾಲ್ಟ್ ಡಸ್ಟರ್ ಹಾಗೂ ಮತ್ತೊಂದು ಓಮ್ನಿ ಎರಡು ಕಾರುಗಳು ಪತ್ತೆಯಾಗಿವೆ.

ಎರಡು ಕಾರುಗಳು ಸಂಪೂರ್ಣ ನುಜ್ಜು-ಗುಜ್ಜಾಗಿವೆ. ನಾರಾಯಣ ಆಚಾರ್ ಶೆಡ್‍ನಲ್ಲಿ ಇದ್ದ ಎರಡು ಕಾರುಗಳು ಇಂದು ಕಾರ್ಯಾಚರಣೆ ವೇಳೆ ಪತ್ತೆಯಾಗಿದೆ. ಜೊತೆಗೆ ಅರ್ಚಕರಿಗೆ ಸೇರಿದ ವಸ್ತುಗಳು ಪತ್ತೆಯಾಗುತ್ತಿವೆ. ಆದರೆ ಇನ್ನೂ ನಾರಾಯಣ ಆಚಾರ್ ಹಾಗೂ ಉಳಿದ ನಾಲ್ವರ ಮೃತದೇಹ ಪತ್ತೆಯಾಗಿಲ್ಲ.

ಈಗಾಗಲೇ ಘಟನಾ ಸ್ಥಳದಲ್ಲಿ ಜೆಸಿಬಿ ಹಾಗೂ ಹಿಟಾಚಿಗಳು ತೀವ್ರ ಶೋಧ ನಡೆಸುತ್ತಿವೆ. ಒಟ್ಟು 60 ಸಿಬ್ಬಂದಿ ಉಳಿದ ನಾಲ್ವರ ಕುರುಹುಗಾಗಿ ಶೋಧ ಮಾಡುತ್ತಿದ್ದಾರೆ. ಅನಂದ್ ತೀರ್ಥ ಅವರ ಮೃತದೇಹವನ್ನು ಇಂದು ಅಂತ್ಯಕ್ರಿಯೆ ಮಾಡುವ ಸಾಧ್ಯತೆ ಇದೆ.

ನಾಲ್ಕು ಮೃತದೇಹ ಸಿಗೋವರೆಗೂ ಕಾರ್ಯಾಚರಣೆ ನಿಲ್ಲಿಸಲ್ಲ: ಸಚಿವ ಸೋಮಣ್ಣ

ಕೊಡಗಿನ ಭಾಗಮಂಡಲ ಬ್ರಹ್ಮಗಿರಿ ಬೆಟ್ಟದಲ್ಲಿ ನಡೆಯುತ್ತಿರುವ ಆಪರೇಷನ್ ಬ್ರಹ್ಮಗಿರಿ ಕಾರ್ಯಾಚರಣೆ ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ. ಮಣ್ಣಿನಲ್ಲಿ ಹೂತು ಹೋಗಿರುವ ನಾಲ್ಕು ಮೃತದೇಹಗಳು ಸಿಗುವವರೆಗೂ ಕಾರ್ಯಚರಣೆ ಮಾಡುತ್ತೀವಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ವಿ.ಸೋಮಣ್ಣ ಅವರು, ಬೆಟ್ಟ ಕುಸಿತವಾದ ನಂತರ ಸರ್ಕಾರ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದೆ. ಒಬ್ಬರ ಮೃತದೇಹ ಸಿಕ್ಕಿದ ಮೇಲೆ ಮೂರು ದಿನಗಳಿಂದ ಎನ್‍ಡಿಎಫ್‍ಆರ್ ತಂಡ, ಪೊಲೀಸ್, ಅಗ್ನಿಶಾಮಕ ದಳದವರು ಸೇರಿ ನಿರಂತರವಾಗಿ ಕಾರ್ಯಾಚರಣೆ ಮಾಡುತ್ತಿದೆ. ಅರ್ಚಕರ ಮನೆಯ ಮಂಚ, ಕುರ್ಚಿಗಳು 60 ಅಡಿಯ ಆಳದಲ್ಲಿ ಬಿದ್ದಿವೆ. ಈಗ ಆ ಪ್ರದೇಶದಲ್ಲೂ ಹುಡುಕಾಟ ಮಾಡುತ್ತಿದ್ದೀವಿ ಎಂದರು.

ಮಣ್ಣಿನಲ್ಲಿ ಹೂತು ಹೋಗಿರುವ ನಾಲ್ಕು ಮೃತ ದೇಹಗಳು ಸಿಗುವವರೆಗೂ ಕಾರ್ಯಚರಣೆ ಮಾಡುತ್ತೀವಿ. ಸ್ಥಳಕ್ಕೆ ಶ್ವಾನ ದಳವನ್ನು ಕರೆಸಲಾಗಿದೆ. ಆದರೆ ಮಳೆ ಬರುತ್ತಿರುವುದರಿಂದ ವಾಸನೆ ಕಂಡು ಹಿಡಿಯಲು ಸಾಧ್ಯವಾಗುತ್ತಿಲ್ಲ. ಯಾವ ಯಾವ ರೀತಿ ಶೋಧಕಾರ್ಯ ಮಾಡಬೇಕೋ ಎಲ್ಲವನ್ನು ಸರ್ಕಾರ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಕಾರ್ಯಾಚರಣೆ ನಿಲ್ಲಿಸುವ ತೀರ್ಮಾನಕ್ಕೆ ಬರುವುದಿಲ್ಲ ಎಂದು ಸೋಮಣ್ಣ ಸ್ಪಷ್ಟಪಡಿಸಿದರು.

ಪೂಜೆ ನಿಂತಿರುವ ತಲಕಾವೇರಿಯಲ್ಲಿ ಇವತ್ತು ಅಥವಾ ನಾಳೆಯಿಂದ ಪೂಜೆ ಆರಂಭ ಮಾಡುತ್ತೀವಿ. ಮೃತದೇಹ ಸಿಗುವವರೆಗೂ ಪೂಜೆ ಬೇಡ ಎಂಬ ತೀರ್ಮಾನ ಮಾಡಿಲ್ಲ. ನಾಳೆಯೊಳಗೆ ಪೂಜೆ ಶುರು ಮಾಡುತ್ತೀವಿ ಎಂದು ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *