ತುಮಕೂರು: ವಿಪಕ್ಷದವರಿಗೆ ವಿರೋಧ ಮಾಡುವುದಕ್ಕೆ ಬೇರೆ ವಿಚಾರ ಇಲ್ಲ. ವಾಚ್ ಬಗ್ಗೆ, ಯಾರಾದರೂ ಊಟಕ್ಕೆ ಹೋದರೂ ಆರೋಪ ಮಾಡುತ್ತಾರೆ. ಅದರ ಬದಲು ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ಹರಿಸಲಿ ಅಂತ ಮನವಿ ಮಾಡುತ್ತೇನೆ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ತುಮಕೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 2028ರ ವಿಧಾನಸಭಾ ಚುನಾವಣೆಗೆ ನಾನು ಸ್ವರ್ಧೆ ಮಾಡಲ್ಲ. ಸಚಿವ ಸ್ಥಾನಕ್ಕೆ ಬೇಡಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿ, ನನ್ನ ಪರವಾಗಿ ಹೋರಾಟ ಮಾಡುವವರಿಗೆ ನಾನು ಚಿರಋಣಿ. ನನಗೆ ಅಧಿಕಾರದ ದಾಹ ಇಲ್ಲ. ನಾನು ಮೊದಲೇ ಹೇಳಿದ್ದೇನೆ, ಡಿ.ಕೆ.ಶಿವಕುಮಾರ್ ಸಿಎಂ ಆದರೆ ಅವರ ಸಂಪುಟದಲ್ಲಿ ಸಚಿವ ಆಗುವುದಿಲ್ಲ. ಮತ್ತೆ ಅದನ್ನೇ ಹೇಳುತ್ತೇನೆ. ಯಾರೆಲ್ಲಾ ನನ್ನ ಪರವಾಗಿ ಅಭಿಪ್ರಾಯ ಹಾಗೂ ವಿಶ್ವಾಸ ವ್ಯಕ್ತಪಡಿಸುತ್ತಾರೆಯೋ ಅವರಿಗೆ ಆಭಾರಿಯಾಗಿದ್ದೇನೆ. ನಾನು ಯಾವತ್ತೂ ಅಧಿಕಾರ ಹುಡುಕಿ ಹೋದವನಲ್ಲ. ಅಧಿಕಾರ ಬೇಕು ಅಂತ ಸಂಪೂರ್ಣ ಅಪೇಕ್ಷೆ ಪಡುವವನೂ ಅಲ್ಲ ಎಂದರು.
ಇದನ್ನೂ ಓದಿ : ಹುಬ್ಬಳ್ಳಿ | ಪರ್ಯಾಯ ರಾಜಕಾರಣಕ್ಕಾಗಿ ಡಿಸೆಂಬರ್ 21ರಂದು ಬೆಂಗಳೂರಿನಲ್ಲಿ ‘ಜನದನಿ ರ್ಯಾಲಿ’ ಆಯೋಜನೆ – ಕೆ. ಮಹಾಂತೇಶ
ನಾನು ಸಚಿವನಾಗಿದ್ದಾಗ ಜಾರಿ ಮಾಡಿದ್ದ ಅಮೆಂಡ್ಮೆಂಟ್ ಜಾರಿಯಾದರೆ ಸಹಕಾರಿ ಕ್ಷೇತ್ರದಲ್ಲಿ ಕ್ರಾಂತಿಯಾಗುತ್ತದೆ. ಸೊಸೈಟಿಗಳಲ್ಲೂ ನಾನು ಮೀಸಲಾತಿ ವ್ಯವಸ್ಥೆ ಜಾರಿ ಮಾಡಿದ್ದೇನೆ. ಇಂತಹ ಹಲವು ಕ್ರಾಂತಿಕಾರಿ ಬದಲಾವಣೆ ತಂದಿದ್ದೇನೆ. ಅಧಿಕಾರ ಬಂದರೆ ಏನೆಲ್ಲಾ ಮಾಡಬಹುದು ಎಂಬುದನ್ನು ತೋರಿಸಿ ಕೊಟ್ಟಿದ್ದೇನೆ. ಡಿಕೆಶಿ ಸಚಿವ ಸಂಪುಟದಲ್ಲಿ ನನಗೆ ಸ್ಥಾನ ಬೇಡವೇ ಬೇಡ. ನನಗೆ ಸಾಕು, ಇನ್ನೊಬ್ಬರಿಗೆ ಅವಕಾಶ ಕೊಡಲಿ ಎಂದು ಹೇಳಿದರು.
ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಕೊಲೆ ವಿಚಾರವಾಗಿ ಮಾತನಾಡಿ, ಹಿಂಸೆ ಯಾವತ್ತೂ ಕಠಿಣವಾದುದು. ಇಂತಹ ದಾಳಿಗಳು ಯಾವುದೇ ಪಕ್ಷದ ಮೇಲೆ ನಡೆಯಬಾರದು. ಇಂತಹ ಕೃತ್ಯಗಳು ಒಪ್ಪುವಂತಹದ್ದಲ್ಲ ಎಂದು ಖಂಡಿಸಿದರು.
ಇಂಡಿಗೋ ವಿಮಾನ ಹಾರಾಟ ಸ್ಥಗಿತ ಕುರಿತು ಮಾತನಾಡಿ, ಇಂಡಿಗೋ ವಿಚಾರವಾಗಿ ಮೋದಿಯವರನ್ನು ಮಾತ್ರ ಬ್ಲೇಮ್ ಮಾಡಬಾರದು. ಬೇರೆ ಆಡಳಿತ ವರ್ಗದವರನ್ನೂ ಮಾಡಬೇಕು. 8 ಗಂಟೆ ಕೆಲಸದ ಬದಲು, 12 ಗಂಟೆ ಕೆಲಸ ಮಾಡಿಸಿದ್ದಾರೆ. 200 ಜನ ಪೈಲಟ್ಗಳ ಕೊರತೆ ಇದೆ. ಹಾಗಾಗಿ ಸಮಸ್ಯೆ ಉಂಟಾಗಿದೆ ಎಂದರು.
ನ್ಯಾಷನಲ್ ಹೆರಾಲ್ಡ್ ಪ್ರಕರಣ ಸಂಬಂಧ ಡಿಕೆ ಬ್ರದರ್ಸ್ಗೆ ನೋಟಿಸ್ ಕುರಿತು ಪ್ರತಿಕ್ರಿಯಿಸಿ, ಆ ವಿಚಾರ ನನಗೂ ಗೊತ್ತಾಗಿದೆ. ಯಾಕೆ ನೋಟಿಸ್ ಕೊಟ್ಟಿದ್ದಾರೆ ಎಂಬ ಮಾಹಿತಿ ನನಗೂ ಇಲ್ಲ. ನೋಟಿಸ್ ಕೊಟ್ಟ ತಕ್ಷಣ ನ್ಯಾಷನಲ್ ಹೆರಾಲ್ಡ್ ಸಂಬಂಧ ಅಂತ ಹೇಳಲು ಆಗಲ್ಲ. ಅವರದ್ದು 128 ಇವೆ, ಅದರಲ್ಲಿ ಯಾವುದಕ್ಕೆ ಕೊಟ್ಟಿದ್ದಾರೆಂದು ಯಾರಿಗೆ ಗೊತ್ತು ಎಂದು ಹೇಳಿದರು.
ಇದನ್ನೂ ನೋಡಿ : ಚುನಾವಣಾ ಆಯೋಗ RSSನ ಶಾಖೆಯೆ? ಕ್ಲಿಪ್ಟನ್ ಡಿ ರೊಜಾರಿಯೋ Janashakthi Media
