ಜ್ಞಾನದ ಪರಿಭಾಷೆ ಬಂಡವಾಳಶಾಯಿ ಸಮಾಜಕ್ಕೆ ಅನುಗುಣವಾಗಿದೆ.

ಭಾರತ ವಿದ್ಯಾರ್ಥಿ ಫೆಡರೇಷನ್ ನ ದಕ್ಷಿಣ ಭಾರತ ರಾಜ್ಯಗಳ ಅಧ್ಯಯನ ಶಿಬಿರದ ಜುಲೈ 31 ರಿಂದ ಆಗಸ್ಟ್ 3 ರವರೆಗೆ ಮೈಸೂರಿನ ನಂಜರಾಜ್ ಬಹಾದ್ದೂರ್ ಛತ್ರದಲ್ಲಿ ಯಶಸ್ವಿಯಾಗಿ ನಡೆಯಿತು. ಅಧ್ಯಯನ ಶಿಬಿರದ ಭಾಗವಾಗಿ ಆಗಸ್ಟ್ 1 ರ ಸಂಜೆ `ಶಿಕ್ಷಣದ ಇಂದಿನ ಸ್ಥಿತಿಗತಿ’ ಎನ್ನುವ ವಿಷಯ ಕುರಿತು ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು. ಆಕರ್ಷಕ ವಿದ್ಯಾರ್ಥಿ ಗಳ, ಬಹಿರಂಗ ಸಭೆ ನಡೆಯಿತು.

sfi

ಮೈಸೂರು ನಗರದ ಮೇಯರ್ ಸಂದೇಶ್ ಸ್ವಾಮಿ ವಿಚಾರ ಸಂಕಿರಣವನ್ನು ಉದ್ಘಾಟಿಸುತ್ತ ಪ್ರಸಕ್ತ ಶಿಕ್ಷಣ ಪದ್ಧತಿಯ ದೌರ್ಬಲ್ಯಗಳನ್ನು ವಿವರಿಸಿದರು. `ಉಳವರಿಗೆ ಶಿಕ್ಷಣ’ ಎನ್ನುವ ಸ್ಥಿತಿ ನಿಮರ್ಾಣವಾಗಿದ್ದು ಶಿಕ್ಷಣವನ್ನು ಹಂಬಲಿಸುವ ಬಡ, ಮಧ್ಯಮ ವರ್ಗದ ಮಕ್ಕಳು ಅಕ್ಷರವಂಚಿತರಾಗುತ್ತಿದ್ದಾರೆ ಎಂದರು. ನಮ್ಮ ದೇಶದ ಬೌದ್ಧಿಕ ಸಂಪನ್ಮೂಲವನ್ನು ಬಳಸದೇ ವಿದೇಶಿ ವಿಶ್ವ ವಿದ್ಯಾಲಯಗಳಿಗೆ ಅನುವು ಮಾಡಿಕೊಡುವ ಪ್ರಯತ್ನವನ್ನು ಅವರು ಖಂಡಿಸಿದರು. ಬ್ರಿಟಿಷರು ಬಿಟ್ಟುಹೋದ ಶಿಕ್ಷಣ ಪದ್ಧತಿಯನ್ನೇ ಮುಂದುವರೆಸುವ ಮೂಲಕ ಸರ್ಕಾರಗಳು ತಮ್ಮ ಗುಲಾಮೀ ಮನೋಧರ್ಮದಿಂದ ಹೊರಬಂದಿಲ್ಲ ಎನ್ನುವುದು ಸಾಬೀತಾಗಿದೆ ಎಂದು ಕಟುವಾಗಿ ಖಂಡಿಸಿದರು.
ಶಿಕ್ಷಣದ ಇಂದಿನ ಸ್ಥಿತಿಗತಿ ಎನ್ನುವ ವಿಷಯವನ್ನು ಮಂಡನೆ ಮಾಡಿದ ಕೇರಳ ಶೈಕ್ಷಣಿಕ ಪರಿಷತ್ತಿನ ಸದಸ್ಯರಾದ ಥಾಮಸ್ ಜೋಸೆಫ್ ತಮ್ಮ ಸರಳವಾದ ಹಾಗೆಯೇ ಸ್ಪಷ್ಟವಾದ ವಿಚಾರವನ್ನು ಪ್ರಸ್ತುತಪಡಿಸಿದರು. ಬದಲಾಗುತ್ತಿರುವ ಜ್ಞಾನದ ಪರಿಭಾಷೆ ಬಂಡವಾಳಶಾಹಿ ಸಮಾಜಕ್ಕೆ ಅನುಗುಣವಾಗಿಯೇ ಇದೆ ಎಂದರು. ರಾಷ್ಟ್ರೀಯ ಶಿಕ್ಷಣ ಆಯೋಗವು 2006 ರಲ್ಲಿ ಸರ್ಕಾರವು ತನ್ನ ಒಟ್ಟು ಆಂತರಿಕ ಉತ್ಪನ್ನದ ಶೇ.6 ರಷ್ಟನ್ನು ಶಿಕ್ಷಣಕ್ಕೆ ವೆಚ್ಚ ಮಾಡಬೇಕೆಂದು ಹೇಳಿತು. ಬಂಡವಾಳಶಾಹಿ ದೇಶಗಳಲ್ಲಿ ಶಿಕ್ಷಣಕ್ಕೆ ಜಿಡಿಪಿಯ ಶೇ.6ಕ್ಕೂ ಮಿಗಿಲಾಗಿ ವೆಚ್ಚ ಮಾಡಲಾಗುತ್ತದೆ. ಚುನಾವಣೆಯ ಸಂದರ್ಭದಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಶಿಕ್ಷಣಕ್ಕೆ ಹೆಚ್ಚಿನ ವೆಚ್ಚ ಮಾಡುವ ಭರವಸೆಯನ್ನೇನೋ ನೀಡುತ್ತವೆ. ಆದರೆ ಕಾರ್ಯಗತ ಮಾಡುವುದಿಲ್ಲ. ಶಿಕ್ಷಣ ರಂಗವೂ ಒತ್ತಾಯಿಸುವ ಹೆಚ್ಚಿನ ಹೂಡಿಕೆಯನ್ನು ಪೂರೈಸುವಲ್ಲಿ ಸರ್ಕಾರಗಳು ವಿಫಲವಾದಾಗ ಉಂಟಾಗುವ ಕೊರತೆಯನ್ನು ನೀಗಿಸಲೆಂದೇ ಖಾಸಗೀ ಮತ್ತು ವಿದೇಶಿ ಬಂಡವಾಳ ಪ್ರವೇಶ ಬಯಸುತ್ತದೆ.
ಸಾಮಾನ್ಯ ಜನತೆಗೆ ಈಗ ಶಿಕ್ಷಣ ಬಗ್ಗೆ ಎಲ್ಲಿಲ್ಲದ ಆಸಕ್ತಿ ಬಂದಿದೆ. ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಅವರು ವಿಪರೀತ ವೆಚ್ಚ ಮಾಡುತ್ತಿದ್ದಾರೆ. ತಮ್ಮ ಶಕ್ತಿಯನ್ನೂ ವ್ಯಯಿಸುತ್ತಿದ್ದಾರೆ. ಅವರ ಬದುಕಿನ ಅವಶ್ಯಕತೆಗಳ ಅನುಕ್ರಮಣಿಕೆಯಲ್ಲಿ ಶಿಕ್ಷಣ ಮೇಲಕ್ಕೇರುತ್ತಿದೆ.
ಜ್ಞಾನವನ್ನು ಸಂಪಾದಿಸಲು ಶಿಕ್ಷಣವು ಒಂದು ಮಾಧ್ಯಮವಾಗಿದೆ. ಜ್ಞಾನವೂ ಕೂಡ ಬೆಳಕಿನ ಜ್ಞಾನ (ವಿಚಾರ ಪ್ರಚೋದನೆಯ, ಉದ್ದೀಪನಗೊಳಿಸುವ) ಮತ್ತು ಅನ್ನದ ಜ್ಞಾನ (ಸಂಪಾದಿಸುವ) ಎಂದು ವಿಭಜಿತವಾಗಿದೆ. ಈಗ ವೈಚಾರಿಕೆಯ ಬೆಳಕಿಗಿಂತ ಸಂಪಾದನೆಯ ಜ್ಞಾನಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಇದೇ ಅರ್ಥದಲ್ಲಿ ಈಗ ಜ್ಞಾನ ಸಮಾಜ, ಜ್ಞಾನ ಮಾರುಕಟ್ಟೆ, ಜ್ಞಾನ ರಾಜಧಾನಿ ಎನ್ನುವ ಬಂಡವಾಳಶಾಹಿಯ ಅರ್ಥ ಪ್ರಣೀತ ಶಬ್ದಗಳು ಚಾಲನೆಯಲ್ಲಿವೆ. ಅರ್ಜಿಸಿದ ಜ್ಞಾನದ ಬಂಡವಾಳವು ಎಲ್ಲರಿಗೂ ಹಂಚಬಹುದಾಗಿದೆ. ಆದರೆ ಈಗ ಅದು ವೈಯಕ್ತಿಕ ಆಸ್ತಿಯಾಗಿದೆ. ಈ ಸಂದರ್ಭದಲ್ಲಿಯೇ ನಾವು ಜನಸಾಮಾನ್ಯರ ಪರವಾಗಿದ್ದೇವೆಯೇ ಅಥವಾ ಖಾಸಗಿಯವರ ಪರವೇ ಎನ್ನುವ ಪ್ರಶ್ನೆಗೆ ಒಡ್ಡಿಕೊಳ್ಳಬೇಕಾಗುತ್ತದೆ. ಕೊಥಾರಿ ಆಯೋಗವು ಎಲ್ಲರಿಗೂ ಕೈಗೆಟುಕುವ, ಸಾಮಾಜಿಕ ನ್ಯಾಯವನ್ನು ಒಳಗೊಂಡ ಗುಣಮಟ್ಟದ ಶಿಕ್ಷಣ ಬೇಕೆಂದು ಹೇಳುತ್ತಿದೆ. ಅತ್ಯುತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಬೇಕೆಂಬ ಹವಣಿಕೆಯಲ್ಲಿ ಸಾಮಾಜಿಕ ನ್ಯಾಯ ಮತ್ತು ಎಲ್ಲರಿಗೂ ಶಿಕ್ಷಣ ದೊರೆಯಬೇಕೆಂಬ ಇನ್ನೆರಡು ಗುರಿಗಳು ಮರೆಯಾಗುತ್ತಿವೆ. ಹೀಗಾಗಿ ಜನತೆಯ ಒಂದು ವಿಶಾಲವಾದ ಭಾಗ ಶಿಕ್ಷಣದಿಂದ ವಂಚಿತವಾಗುತ್ತಿದೆ.

sfi

1991 ರಲ್ಲಿ ಜಾಗತೀಕರಣ, ಉದಾರೀಕರಣ, ಖಾಸಗೀಕರಣ ನೀತಿಗಳು ಜಾರಿಗೆ ಬಂದ ನಂತರ ವೃತ್ತಿಪರ ಶಿಕ್ಷಣ ನೀಡುವ ಕಾಲೇಜುಗಳ ಸಂಖ್ಯೆಯಲ್ಲಿ ತೀವ್ರ ವೃದ್ಧಿಯಾಯಿತು. ತಾಂತ್ರಿಕ ಶಿಕ್ಷಣ ಸಂಸ್ಥೆಗಳು ನಾಯಿಕೊಡೆಗಳಂತೆ ತಲೆ ಎತ್ತಿದವು. ಸ್ವಯಂ ಆಡಳಿತದ, ವಿದ್ಯಾರ್ಥಿಗಳೇ ಕೋರ್ಸಿನ ವೆಚ್ಚವನ್ನು ಭರಿಸುವ, ವಿಶ್ವವಿದ್ಯಾಲಯಗಳು ಅಸ್ತಿತ್ವಕ್ಕೆ ಬಂದವು. ಈಗ ವಿದೇಶಿ ವಿಶ್ವವಿದ್ಯಾಲಯಗಳಿಗೆ ನೇರ ಅನುಮತಿ ನೀಡುವ ಮೂಲಕ ಶೈಕ್ಷಣಿಕ ಸಂದರ್ಭವನ್ನು ಶ್ರೀಮಂತರ ಪರವಾಗಿ ಬದಲಾಯಿಸಲಾಗಿದೆ. ಈಗ ಬೇಕಿರುವುದು ಎಲ್ಲವನ್ನೂ, ಎಲ್ಲರನ್ನೂ ಒಳಗೊಂಡ ಶಿಕ್ಷಣ. ಎಲ್ಲ ವಿದ್ಯಾರ್ಥಿಗಳ ವೈಯಕ್ತಿಕ ಸಾಧನೆಗೆ ಮೆಟ್ಟಿಲಾಗುವ ಶಿಕ್ಷಣ. ಈಗ ಚರ್ಚೆಯಾಗುತ್ತಿರುವ ಶಿಕ್ಷಣ ಹಕ್ಕಿನ ಮಸೂದೆಯು ಕೆಲ ಜನಪರ ಅಂಶಗಳನ್ನು ಒಳಗೊಂಡಿದೆ ಎನ್ನಲಾಗುತ್ತಿದ್ದರೂ ಒಟ್ಟಾರೆಯಾಗಿ ಉದ್ದೇಶಿತ ಶಿಕ್ಷಣದ ಕೇಂದ್ರೀಕರಣ ಮತ್ತು ವಾಣಿಜ್ಯೀಕರಣದ ಪ್ರಕ್ರಿಯೆಯನ್ನು ಮರೆಮಾಚುವ ಪ್ರಯತ್ನವೂ ಇದಾಗಿದೆ ಎಂದರು.
ಪ್ರೊ. ಶಿವರಾಮು ಕಾಡನಕುಪ್ಪೆ ಪ್ರಾಂಶುಪಾಲರು, ವಿದ್ಯಾವರ್ಧಕ ಕಾಲೇಜು, ಮೈಸೂರು ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಎಸ್ಎಫ್ಐ ಕೇಂದ್ರ ಸಮಿತಿ ಅಧ್ಯಕ್ಷರೂ, ಸಂಸತ್ ಸದಸ್ಯರೂ ಆದ ಪಿ.ಕೆ.ಬಿಜು ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದಚೆ ಶಿಬಿರಾರ್ಥಿಗಳಲ್ಲದೇ ಮೈಸೂರಿನ ಹಲವು ಅಧ್ಯಾಪಕರು, ಉಪನ್ಯಾಸಕರು, ನಾಗರೀಕರು, ವಿದ್ಯಾರ್ಥಿಗಳು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ. ನಾಲ್ಕ್ಕು ದಿನಗಳ ಅಧ್ಯಯನ ಶಿಬಿರದ ಹಿನ್ನಲೆಯಲ್ಲಿ ಜುಲೈ 31 ರಂದು ಮೈಸೂರಿನ ಪ್ರಮುಖ ಬೀದಿಗಳಲ್ಲಿ ಸಹಸ್ರಾರು ವಿದ್ಯಾರ್ಥಿಗಳ ಆಕರ್ಷಕ ಮೆರವಣಿಗೆ ನಡೆಯಿತು. ಉತ್ಸಾಹ, ಘೋಷಣೆ, ತಮಟೆ ಬಡಿತದ ಸದ್ದು ಮೈಸೂರು ನಗರದ ಜನರನ್ನು ಸೆಳೆಯಿತು.
ನಂತರ ದಸರಾ ವಸ್ತು ಪ್ರದರ್ಶನ ಮೈದಾನದಲ್ಲಿ ಬಹಿರಂಗಸಭೆ. ಎಸ್ಎಫ್ಐ ರಾಜ್ಯಾಧ್ಯಕ್ಷ ಹೆಚ್.ಆರ್.ನವೀನ್ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದವರು ಹಲವರು. ಎಸ್ಎಫ್ಐ ಮಾಜಿ ಅ.ಭಾ. ಅಧ್ಯಕ್ಷರು, ಹಾಲಿ ಸಿಪಿಐ(ಎಂ) ಪಾಲಿಟ್ ಬ್ಯೂರೋ ಸದಸ್ಯರಾದ ಸೀತಾರಾಮ ಯೆಚೂರಿ ಸಮಾರಂಭದಲ್ಲಿ ಮಾತನಾಡಿ ದೇಶದಲ್ಲಿ 100 ಕೇವಲ ಶೇ.9ರಷ್ಟು ವಿದ್ಯಾರ್ಥಿಗಳು ಮಾತ್ರವೇ ಉನ್ನತ ಶಿಕ್ಷಣ ಪ್ರವೇಶಿಸುತ್ತಾರೆ. ಯೂರೋಪ್ನಲ್ಲಿ ಇದು ಶೇ.28 ಇದೆ. ಭಾರತದಲ್ಲಿ ಈ ಸಂಖ್ಯೆ ಶೇ.25-30ಕ್ಕೇರಿದರೆ ಭಾರತ ಜ್ಞಾನ ಜಗತ್ತಿನ ನಾಯಕತ್ವ ವಹಿಸಬಹುದು. ಶಿಕ್ಷಣಕ್ಕೆ ಸರ್ಕಾರಗಳು ಶಿಕ್ಷಣದ ಹಕ್ಕು ಕೊಟ್ಟಿವೆ. ಆದರೆ ಅದು ಸಾಲದು-ಶಕ್ತಿಯನ್ನು ಕೊಡಬೇಕು. ರಾಜ್ಯಗಳಿಗೆ ಸಾಕಷ್ಟು ಸಂಪನ್ಮೂಲಗಳಿಲ್ಲ. ಕೇಂದ್ರ ಸರ್ಕಾರ ಜವಾಬ್ದಾರಿ ಹೊರಬೇಕು. ಆದರೆ ಕೇಂದ್ರ ಸರ್ಕಾರ ಜವಾಬ್ದಾರಿಯಿಂದ ಜಾರಿಕೊಳ್ಳುತ್ತಿದೆ. ವಿದೇಶಿ ವಿ.ವಿ.ಗಳಿಗೆ ಅವಕಾಶ ನೀಡುತ್ತಿದೆ. ವ್ಯಾಪಾರೀಕರಣ ದಿಂದ ಶಿಕ್ಷಣ ಹಣವಂತರಿಗೆ ಮಾತ್ರ ಎನ್ನುವಂತಾಗಿದೆ. ಶಿಕ್ಷಣ ಸಂಸ್ಥೆಗಳಿಗೆ ನಿಯಂತ್ರಣ ಬೇಕು. ಅದನ್ನು ಸರ್ಕಾರ ನಿಯಂತ್ರಿಸುವುದಲ್ಲ. ನಿಯಂತ್ರಣ ಪ್ರಾಧಿಕಾರ ಅಗತ್ಯ. ವಿದೇಶಿ ವಿ.ವಿ. ಇಲ್ಲಿಗೇ ಬಂದರೆ ಈಗ ಅಲ್ಲಿ ಹೋಗಿ ಓದುವ ಒಬ್ಬರ ಹಣದಲ್ಲಿ ಇಲ್ಲೇ 4 ಜನ ಓದಬಹುದೆನ್ನುತ್ತಾರೆ. ವಿದೇಶಿ ವಿ.ವಿ.ಬಂದರೂ ಕೂಡ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗಿಯೇ ಹೋಗುತ್ತಾರೆ.ಶಿಕ್ಷಣ ಸರಕಾಗಿದೆ. ಹಕ್ಕಾಗಿಲ್ಲ. ಬಡವರು- ಇನ್ನಷ್ಟು ಬಡವರೂ, ಶ್ರೀಮಂತರು ಶ್ರೀಮಂತರೂ ಆಗುತ್ತಿದ್ದಾರೆ. ಶ್ರೀಮಂತರಿಗೆ ತೆರಿಗೆ ವಿನಾಯಿತಿ ದೊರೆಯುತ್ತಾ ಹೋಗುತ್ತಿದೆ. ಜಗತ್ತಿನ ಅತಿ ಶ್ರೀಮಂತ ವ್ಯಕ್ತಿಗಳಲ್ಲಿ 3-4-5ನೇ ಅತಿ ಶ್ರೀಮಂತ ವ್ಯಕ್ತಿಗಳು ಭಾರತೀಯರು. ಆದರೆ ಸಂವಿಧಾನ ಅಂಗೀಕರಿಸಿ 50 ವರ್ಷ ಕಳೆದರೂ ಉಚಿತ, ಕಡ್ಡಾಯ ಪ್ರಾಥಮಿಕ ಶಿಕ್ಷಣ ಜಾರಿಯಾಗಿಲ್ಲ ಎಂದು ಯೆಚೂರಿ ಹೇಳಿದರು.
ಎಸ್ಎಫ್ಐನ ಅಖಿಲ ಭಾರತ ಅಧ್ಯಕ್ಷರಾದ ಪಿ.ಕೆ.ಬಿಜು ಅವರು ಮಾತನಾಡಿ ಕೃಷಿ ಬಿಕ್ಕಟ್ಟಿನಲ್ಲಿದೆ. ಈ ಸಂದರ್ಭದಲ್ಲಿ ಕೃಷಿಗೆ ಸರ್ಕಾರ ಸಹಾಯಧನ ಕಡಿತ ಮಾಡುತ್ತಿದೆ. ಹೀಗಾದರೆ ಗ್ರಾಮೀಣ ಜನರು ಮಕ್ಕಳನ್ನು ಶಾಲೆಗೆ ಹೇಗೆ ಕಳುಹಿಸುತ್ತಾರೆ ಎಂದು ಪ್ರಶ್ನಿಸಿದ ಅವರು ಶಿಕ್ಷಣದಲ್ಲಿ ಉದಾರೀಕರಣ ಜಾಗತೀಕರಣ ನೀತಿಗಳು. ಶಿಕ್ಷಣದಲ್ಲಿ ಸಾಮ್ರಾಜ್ಯ ಶಾಹಿ ಪ್ರೇರಿತ ನೀತಿಗಳನ್ನು ಹೇರಲಾಗುತ್ತಿದೆ. ಸಾಮ್ರಾಜ್ಯಶಾಹಿ ವಿರುದ್ಧ ಧೀಮಂತ ಹೋರಾಟ ನಡೆಸಿದ ಟಿಪ್ಪುವಿನ ಬದುಕಿನ ಸ್ಫೂತರ್ಿಯಿಂದ ಈ ನೀತಿಗಳ ವಿರುದ್ಧ ಹೋರಾಡುವುದಾಗಿ ಘೋಷಿಸಿದರು.
ಖ್ಯಾತ ರಂಗಕರ್ಮಿ, ನಿರ್ದೇಶಕರಾದ ಸಿ.ಬಸವಲಿಂಗಯ್ಯ ಮಾತನಾಡಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ರಾಜ್ಯದಲ್ಲಿ ಗಣಿ ಲೂಟಿ ನಡೆಯುತ್ತಿದೆ. ಅದಕ್ಕೂ ನಮಗೂ ಸಂಬಂಧವಿಲ್ಲ ಎಂಬಂತೆ ನಾವು ಇರಬಾರದು. ಅನ್ಯಾಯ ಪ್ರತಿಭಟಿಸಬೇಕು. ಶಿಕ್ಷಣ ಸೊಪ್ಪು, ಬದನೆಕಾಯಿಯಂತೆ ಬಿಕರಿ ಸಿಗುವಂತಾಗಬಾರದು ಎಂದರು. ವೇದಿಕೆಯಲ್ಲಿ ರಾಜ್ಯದ ಎಸ್ಎಫ್ಐ ಸಂಘಟನೆಯ ಸಂಸ್ಥಾಪಕ ಮುಖಂಡರಲ್ಲೊಬ್ಬರಾದ ಜಿ.ವಿ.ಶ್ರೀರಾಮ ರೆಡ್ಡಿ, ಎಸ್ಎಫ್ಐ ಅಖಿಲ ಭಾರತ ಮುಖಂಡರಾದ ಶಿವದಾಸನ್, ಕೆ.ಬಸವರಾಜು ಮುಂತಾದವರಿದ್ದರು. 0

Donate Janashakthi Media

Leave a Reply

Your email address will not be published. Required fields are marked *