ಕಾಡಾನೆ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಬ್ಲಾಕ್ ಕಾಂಗ್ರೆಸ್‌ನಿಂದ ತಮಟೆ ಚಳುವಳಿ

ಸಕಲೇಶಪುರ: ಕಾಡಾನೆ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟ್ಟಣದಲ್ಲಿ ಟಮಟೆ ಚಳುವಳಿ ನಡೆಸಲಾಯಿತು. ಪಟ್ಟಣದ ಸಕಲೇಶ್ವರಸ್ವಾಮಿ ದೇವಸ್ಥಾನದ ಆವರಣದಿಂದ ಮೆರವಣಿಗೆ ಹೊರಟ ಕಾಂಗ್ರೆಸ್ ಕಾರ್ಯಕರ್ತರು ಹಳೆ ಬಸ್‍ನಿಲ್ದಾಣದ ಸಮೀಪ ಕೆಲಸಮಯ ರಸ್ತೆ ತಡೆ ಮಾಡಿ ನಂತರ ಉಪವಿಭಾಗಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಹಾನುಬಾಳು ಭಾಸ್ಕರ್ ಮಾತನಾಡಿ, ಕೇಂದ್ರ ಸರ್ಕಾರ, ಮತ್ತು ರಾಜ್ಯ ಸರ್ಕಾರ, ಹಾಸನ ಜಿಲ್ಲಾ ಸಂಸದರು ಹಾಗೂ ಸ್ಥಳೀಯ ಶಾಸಕರು ಇಚ್ಚಾ ಶಕ್ತಿ ತೋರದ ಪರಿಣಾಮ ನಮ್ಮ ಭಾಗದಲ್ಲಿ ಕಾಡಾನೆಗಳ ಸಮಸ್ಯೆ ವಿಪರೀತವಾಗಿದ್ದು ಇದಕ್ಕೆ ಹೊಣೆಗಾರಿಕೆಯನ್ನು ನಮ್ಮ ಸಂಸದರು ಹಾಗೂ ಸ್ಥಳೀಯ ಶಾಸಕರು ಹೊರಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡ ಡಿಸಿ ಸಣ್ಣಸ್ವಾಮಿ ಮಾತನಾಡಿ ಸಕಲೇಶಪುರ-ಆಲೂರು ತಾಲ್ಲೂಕುಗಳಲ್ಲಿ ಕಾಡಾನೆಗಳ ನಿರಂತರ ದಾಳಿಯಿಂದ ಪ್ರತಿನಿತ್ಯ ಜನರು ಜೀವ ಭಯದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಡಾನೆಗಳ ಹಾವಳಿಯಿಂದಾಗಿ ಜನರು ಜೀವವನ್ನು ಹಾಗೂ ಬದುಕನ್ನು ಕೈಯ್ಯಲ್ಲಿ ಹಿಡಿದು ಬದುಕುವ ವಾತಾವರಣ ಸೃಷ್ಟಿಯಾಗಿದೆ. ರಾತ್ರಿ ಸಮಯದಲ್ಲಿ ಮಾತ್ರವಲ್ಲ, ಕಾಡಾನೆಗಳ ಭಯದಿಂದ ಹಗಲು ಹೊತ್ತಿನಲ್ಲಿಯೇ ಗ್ರಾಮಗಳ ರಸ್ತೆಗಳಲ್ಲಿ ನಡೆದಾಡುವುದಕ್ಕೆ, ವಾಹನಗಳಲ್ಲಿ ಓಡಾಡುವುದಕ್ಕೆ, ಮಕ್ಕಳನ್ನು ಶಾಲಾ-ಕಾಲೇಜುಗಳಿಗೆ ಕಳಿಸುವುದಕ್ಕೆ, ತೋಟ, ಗದ್ದೆಗಳಲ್ಲಿ ಕೆಲಸ ಮಾಡುವುದಕ್ಕೆ ಭಯವಾಗುತ್ತಿದೆ ಎಂದರು.

ಇದನ್ನೂ ಓದಿ : ಸಕಲೇಶಪುರ ತಾಲೂಕಿನಲ್ಲಿ ಕಾಡಾನೆ ದಾಳಿಗೆ ಮತ್ತೊಬ್ಬ ಅಮಾಯಕ ಬಲಿ

2003 ರಿಂದ ಸಕಲೇಶಪುರ ಹಾಗೂ ಆಲೂರು ತಾಲ್ಲೂಕುಗಳಲ್ಲಿ ಕಾಡಾನೆಗಳ ದಾಳಿಗೆ ಸಿಕ್ಕಿ 45ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ 70 ಕ್ಕೂ ಹೆಚ್ಚು ಮಂದಿ ಶಾಶ್ವತ ಅಂಗವಿಕಲರಾಗಿದ್ದಾರೆ ಕಾಫಿ ತೋಟಕ್ಕೆ ಕಾಡಾನೆ ನುಗ್ಗಿದರೆ ಕನಿಷ್ಟ 100 ಕ್ಕೂ ಹೆಚ್ಚು ಗಿಡಗಳು ಹಾನಿಯಾಗುತ್ತದೆ. ಸರ್ಕಾರ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುವ ಬದಲು ಕೇವಲ ಪರಿಹಾರ ಕೊಟ್ಟು ಸುಮ್ಮನಾಗುತ್ತಿದೆ ಎಂದ ಅವರು ಸ್ಥಳೀಯ ಶಾಸಕರು ವಿಧಾನಸೌಧದಲ್ಲಿ ಕಾಡಾನೆ ಸಮಸ್ಯೆ ವಿರುದ್ದ ಹೋರಾಟ ಮಾಡುವ ಬದಲು ಇಲ್ಲಿ ಬಂದು ಬೀದಿಯಲ್ಲಿ ಕೂರುತ್ತಾರೆ. ಕೇವಲ ನಾಟಕ ಮಾಡುವುದರಲ್ಲೆ ಶಾಸಕರು ಕಾಲಹರಣ ಮಾಡುತ್ತಿದ್ದು ಕಾರ್ಮಿಕರ ಜೀವದ ಜೊತೆಗೆ ಚೆಲ್ಲಾಟವಾಗುತ್ತಿದ್ದಾರೆ. ದೆಹಲಿಗೆ ನಿಯೋಗ ಕರೆದುಕೊಂಡು ಹೋಗುತ್ತೇವೆ ಎಂದು ಶಾಸಕರು ಸುಳ್ಳಾಡಿದ್ದು ಅವರು ಯಾವಾಗ ನಿಯೋಗವನ್ನು ಕರೆದುಕೊಂಡು ಹೋಗುತ್ತಾರೆಂದು ಕಾದು ನೋಡಬೇಕಾಗಿದೆ ಎಂದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಮುರಳಿ ಮೋಹನ್, ಬ್ಲಾಕ್ ಕಾಂಗ್ರೆಸ್ ತಾಲೂಕು ಕಾರ್ಯದರ್ಶಿ ಗೊದ್ದು ಲೋಕೇಶ್, ಪಕ್ಷದ ಮುಖಂಡರುಗಳಾದ ಲೋಹಿತ್ ಕೌಡಹಳ್ಳಿ, ಯಡೇಹಳ್ಳಿ ಮಂಜುನಾಥ್, ಮಸ್ತಾರೆ ಲೋಕೇಶ್, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸುನಂದಾ ನಾಗರಾಜ್, ಕಾಂಗ್ರೆಸ್ ಪರಶಿಷ್ಠ ಜಾತಿ ವಿಭಾಗದ ತಾಲೂಕು ಅಧ್ಯಕ್ಷ ದೊಡ್ಡಿರಯ್ಯ ಮುಂತಾದವರು ಹಾಜರಿದ್ದರು.

 

Donate Janashakthi Media

Leave a Reply

Your email address will not be published. Required fields are marked *