ಕಷ್ಟ ಸಹಿಸಿಕೊಂಡು ಮೈತ್ರಿ ಸರ್ಕಾರದಲ್ಲಿ ಕೆಲಸ ಮಾಡಿದ್ದೇನೆ: ಎಚ್‌ಡಿಕೆ

 

  • ಕಾಂಗ್ರೆಸ್‍ ಶಾಸಕರೊಬ್ಬರು ಇಸ್ಪೀಟ್‍ ಎಲೆಗಳಂತೆ ಪತ್ರಗಳನ್ನು ಎಸೆದಿದ್ದರು

 

ಬೆಂಗಳೂರು: ಕಾಂಗ್ರೆಸ್‌ ಜೊತೆಗಿನ ಸರಕಾರದ ವೇಳೆ ಕಚೇರಿಗೆ ತಡವಾಗಿ ಹೋಗಿದ್ದಕ್ಕೆ ಕಾಂಗ್ರೆಸ್‌ ಶಾಸಕರೊಬ್ಬರು ಮುನಿಸಿ ಕೊಂಡಿದ್ದರು. ಅಷ್ಟು ಕಷ್ಟ ಪಟ್ಟು ಸಹಿಸಿಕೊಂಡು ಮೈತ್ರಿ ಸರಕಾರದಲ್ಲಿ ಕೆಲಸ ಮಾಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ರಾಜರಾಜೇಶ್ವರಿ ನಗರ ವ್ಯಾಪ್ತಿಯ ಲಕ್ಷ್ಮೀದೇವಿ ವಾರ್ಡ್‌ನಲ್ಲಿ ಜೆಡಿಎಸ್‌ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ಕೃಷ್ಣಾದಲ್ಲಿ ಜನರ ಸಮಸ್ಯೆ ಆಲಿಸಿ, ನನ್ನ ಕಚೇರಿಗೆ ಹೋಗಿದ್ದೆ. ಆಗ ನನ್ನ ಕಚೇರಿಗೆ ಬಂದ ಕಾಂಗ್ರೆಸ್‌ ಶಾಸಕರೊಬ್ಬರು ನಿಮಗೆ ಎಷ್ಟು ಹೊತ್ತು ಕಾಯೋದು ಎಂದು ಅವರು ತಂದಿದ್ದ 10-12 ಪತ್ರಗಳನ್ನು ಇಸ್ಪೀಟ್ ಎಲೆಯಂತೆ ಬಿಸಾಡಿದ ಘಟನೆಯನ್ನು ನೆನಪಿಸಿಕೊಂಡರು. ಕಾಂಗ್ರೆಸ್‍ ಶಾಸಕರಿಗೆ ಬೇಕಾಗಿದ್ದು ತಮ್ಮ ಸ್ವಂತ ಲಾಭ. ಜನ ಕಲ್ಯಾಣವಲ್ಲ ಎಂಬುದನ್ನು ಎಚ್ಡಿಕೆ ಬಿಚ್ಚಿಟ್ಟರು.

ಕಾಂಗ್ರೆಸ್ಸಿಗರು ನೀಡಿದ ಕಿರುಕುಳದ ನಡುವೆಯೂ ರೈತರ ಹಿತ ಕಾಯಲು 25 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದೆ. ಒಬ್ಬ ಮುಖ್ಯಮಂತ್ರಿ ಸಾರ್ವಜನಿಕವಾಗಿ ಕಣ್ಣೀರು ಹಾಕಿದ್ದರೆ ಅದು ನಾನು ಮಾತ್ರ. ಅಂತಹ ಸ್ಥಿತಿಯಲ್ಲಿ ಕಾಂಗ್ರೆಸ್‌ನವರು ನನ್ನನ್ನು ಇಟ್ಟಿದ್ದರು. ಇನ್ನು, ಮೋದಿ ಎಚ್‌ಎಎಲ್‌ನ್ನು ಮಾರುವುದಕ್ಕೆ ಹೊರಟಿದ್ದಾರೆ. ಅದಾನಿಗೆ 6 ವಿಮಾನ ನಿಲ್ದಾಣಗಳನ್ನು ನೀಡಿದ್ದಾರೆ. ಮುಖೇಶ್‌ ಅಂಬಾನಿ ಆದಾಯ ಗಂಟೆಗೆ 94 ಕೋಟಿ ರೂ. ಇದೆಯಂತೆ. ಅವರ ಸಲಹೆಯನ್ನು ತೆಗೆದುಕೊಂಡು ಪ್ರತಿ ಕುಟುಂಬಕ್ಕೂ ದಿನಕ್ಕೆ ನೂರು ರೂಪಾಯಿ ಬರುವಂತೆ ಮಾಡಬಹುದಲ್ಲ ಎಂದು ಹೇಳಿದರು.

ಬೆಂಗಳೂರು ನಗರದ ಅಭಿವೃದ್ಧಿಗೆ ದುಡ್ಡು ತಂದವರು ಯಾರೋ, ಹೆಸರು ಮಾಡ್ಕೊಂಡಿದ್ದು ಯಾರೋ, ಐಟಿ ಸೆಕ್ಟರ್ ಗೆ ಹೊಸ ಆಯಾಮವನ್ನ ನೀಡಿದ್ದು ದೇವೇಗೌಡರು, ದೇವೇಗೌಡ ಸ್ಕೀಮ್ ಅಂತ ದಕ್ಷಿಣ ಆಫ್ರಿಕಾದಲ್ಲಿ ಆಕ್ಸಲರೆಟೆಡ್‌ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾರೆ. 1988ರಲ್ಲಿ ನಂದಿನಿ‌ ಬಡಾವಣೆಯನ್ನು ಒಡಿಬೇಕು ಎಂಬ ಆದೇಶ ಬಂದಾಗ ನಿಮ್ಮ ನೆರವಿಗೆ ಬಂದಿದ್ದು ದೇವೇಗೌಡರು ಎಂದ ಮಾಜಿ ಸಿಎಂ ಬೆಂಗಳೂರಲ್ಲಿ ಮೆಟ್ರೋ ಪ್ರಾರಂಭ ಮಾಡಿದ್ದು ನಾನು ಎಂದರು.

ಜೆಡಿಎಸ್‌ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಮಾತನಾಡಿ, ಈ ಕ್ಷೇತ್ರದ ಮನೆ ಮಗ ನಾನು. ಹನುಮಂತರಾಯಪ್ಪ ಒಬ್ಬ ಒಕ್ಕಲಿಗನಿಗೆ ಒಳಿತನ್ನು ಮಾಡಿಲ್ಲ. ಅವರು ಒಬ್ಬ ಸಮಯ ಸಾಧಕ. ಕಾಂಗ್ರೆಸ್‌ನವರು ಜಾತಿ ರಾಜಕೀಯ ಮಾಡುತ್ತಿದ್ದಾರೆ. ಇವತ್ತು ಕೊರೊನಾದಿಂದ ಜನ ಬೀದಿಯಲ್ಲೇ ಸಾಯುತ್ತಿದ್ದಾರೆ. ಕುಮಾರಣ್ಣನವರು ಅಧಿಕಾರದಲ್ಲಿದ್ದಿದ್ರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಳವಳ್ಳಿ ಶಾಸಕ ಅನ್ನದಾನಿ, ಪರಿಷತ್‌ ಸದಸ್ಯ ರಮೇಶ್‌ ಗೌಡ, ಬೆಂಗಳೂರು ನಗರ ಜೆಡಿಎಸ್‌ ಘಟಕದ ಅಧ್ಯಕ್ಷ ಆರ್‌.ಪ್ರಕಾಶ್‌, ಆರ್‌ಆರ್‌ ನಗರದ ಜೆಡಿಎಸ್‌ ಅಧ್ಯಕ್ಷ ಆರ್‌.ಚನ್ನಕೇಶವಮೂರ್ತಿ ಮತ್ತು ಅನೇಕ ಮುಖಂಡರು ಇದ್ದರು.

 

Donate Janashakthi Media

Leave a Reply

Your email address will not be published. Required fields are marked *