ಕನ್ನಡ ಚಿತ್ರರಂಗದ ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಬೆಳೆದು ಬಂದ ದಾರಿಯ ಮೆಲುಕು

ಕನ್ನಡ ಚಲನಚಿತ್ರದಲ್ಲಿ “ಅಪ್ಪು’ ಎಂದೇ ಖ್ಯಾತರಾಗಿದ್ದ ನಟ ಪುನೀತ್​ ರಾಜ್​ಕುಮಾರ್ ಇಂದು ನಿಧನರಾಗಿದ್ದಾರೆ. ಅವರಿಗೆ 46 ವರ್ಷ ವಯಸ್ಸಾಗಿತ್ತು. ಅವರ ನಿಧನಕ್ಕೆ ನಾಡಿನ ಜನತೆ ಹಾಗೂ ಅಭಿಮಾನಿಗಳು ಸಂತಾಪವನ್ನು ಸೂಚಿಸಿದ್ದಾರೆ.

ಪವರಸ್ಟಾರ್ ಪುನೀತ್ ರಾಜಕುಮಾರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಪ್ರಮುಖ ನಾಯಕನಟ. ಅಭಿಮಾನಿಗಳಿಂದ ಅಪ್ಪು ಎಂದೇ ಕರೆಯಿಸಿಕೊಳ್ಳುವ ಪುನೀತ್ ನಟನೆಯಲ್ಲದೇ ಹಿನ್ನಲೆ ಗಾಯಕರಾಗಿ ,ನಿರ್ಮಾಪಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಬಾಲ ನಟನಾಗಿ ಚಿತ್ರರಂಗ ಪಾದಾರ್ಪಣೆ ಮಾಡಿದ ಪುನಿತ್  ಸುಮಾರು ನಾಲ್ಕು ದಶಕಗಳ ತಮ್ಮ ಸಿನಿಜೀವನದಲ್ಲಿ ಬಾಲ ಕಲಾವಿದನಾಗಿ 14 ಮತ್ತು ನಾಯಕನಾಗಿ 25 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಅಭಿನಯಕ್ಕೆ ಹಿರಿಯರು, ಯುವಕರು, ಕಿರಿಯರು ಹೀಗೆ ಎಲ್ಲರೂ ಕುಟುಂಬ ಸಮೇತರಾಗಿ ನೋಡುವ ಅಭಿನಯವಾಗಿರುತ್ತಿತ್ತು.

1975, ಮಾರ್ಚ್ 17 ರಂದು ಚೆನ್ನೈನ ಕಲ್ಯಾಣಿ ಆಸ್ಪತ್ರೆಯಲ್ಲಿ ವರನಟ ಡಾ.ರಾಜಕುಮಾರ್ ಮತ್ತು ಪಾರ್ವತಮ್ಮರವರ ಕಿರಿಯ ಪುತ್ರನಾಗಿ ಜನಿಸಿದರು.
ಇವರ ಹಿರಿಯ ಸಹೋದರರಾದ ಶಿವರಾಜಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಕೂಡ ಕನ್ನಡ ಚಿತ್ರರಂಗದ ಯಶಸ್ವಿ ನಾಯಕನಟರು.

ಇವರು ರಾಜ್ ದಂಪತಿಗಳ ಕಿರಿಯ ಮಗುವಾಗಿದ್ದರಿಂದ ಬಹು ಅಕ್ಕರೆಯಲ್ಲಿ ಬೆಳೆದರು. ಪುನೀತ್ ಮತ್ತು ಸಹೋದರಿ ಪೂರ್ಣಿಮಾರನ್ನು,ರಾಜ್ ತಮ್ಮ ಬಹುತೇಕ ಚಿತ್ರಗಳ ಶೂಟಿಂಗ್‌ಗೆ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಹೀಗಾಗಿ ಬಾಲ್ಯದಿಂದಲೇ ಕಲೆಯ ಜೊತೆಗಿನ ನಂಟು ಆರಂಭವಾಯಿತು.

ಪುನೀತ್ ಆರು ತಿಂಗಳು ಮಗುವಿದ್ದಾಗ 1976 ರಲ್ಲಿ ತೆರೆಕಂಡ ಪ್ರೇಮದ ಕಾಣಿಕೆ’ ಚಿತ್ರದ ಮೂಲಕ ತೆರೆಯ ಮೇಲೆ ಕಾಣಿಸಿಕೊಂಡರು. ನಂತರ ಬಂದ ಸನಾದಿ ಅಪ್ಪಣ್ಣ’,ತಾಯಿಗೆ ತಕ್ಕ ಮಗ’,ವಸಂತ ಗೀತ’,ಭೂಮಿಗೆ ಬಂದ ಭಗವಂತ’,ಭಾಗ್ಯವಂತರು’ ಮುಂತಾದ ಚಿತ್ರಗಳಲ್ಲಿ ನಟಿಸಿ ತಮ್ಮ ಅಭಿನಯ ಪ್ರೌಡಿಮೆ ಮೆರೆದರು.

ಭಾಗ್ಯವಂತ ಚಿತ್ರದ ಬಾನ ದಾರಿಯಲ್ಲಿ ಸೂರ್ಯ’, ಚಲಿಸುವ ಮೋಡಗಳು ಚಿತ್ರದ ಕಾಣದಂತೆ ಮಾಯವಾದನೋ’,ಯಾರಿವನು ಚಿತ್ರದ ಕಣ್ಣಿಗೆ ಕಾಣುವ ದೇವರು’ ಮುಂತಾದ ಗೀತೆಗಳನ್ನು ಹಾಡಿ ಹಿನ್ನೆಲೆ ಗಾಯಕರಾಗಿಯೂ ಪ್ರಶಂಸೆ ಪಡೆದರು. ಚಲಿಸುವ ಮೋಡಗಳು’ ಮತ್ತು ಎರಡು ನಕ್ಷತ್ರಗಳು’ ಚಿತ್ರದ ಅಭಿನಯಕ್ಕಾಗಿ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದರು.

ಬಾಲಕಲಾವಿದನಾಗಿ ಪುನೀತ್ ಅಭಿನಯಿಸಿದ ಉತ್ಕೃಷ್ಟ ಚಿತ್ರ ಬೆಟ್ಟದ ಹೂ’. 1984 ರಲ್ಲಿ ತೆರೆಕಂಡ ಎನ್ ಲಕ್ಷ್ಮಿ ನಾರಾಯಣ ನಿರ್ದೇಶನದ ಈ ಚಿತ್ರದಲ್ಲಿ ಪುನೀತ್ ಬಾಲಕ ರಾಮು ಆಗಿ ನಟಿಸಿದರು. ಶಾಲೆಗೆ ಹೋಗುವ ಬಡ ಬಾಲಕನೊಬ್ಬನ ತಳಮಳಗಳನ್ನು ಚಿತ್ರ ಚೆನ್ನಾಗಿ ಬಿಂಬಿಸಿತು. ಈ ಚಿತ್ರ ಇಂಗ್ಲೀಷ್ ಕಾದಂಬರಿ ವಾಟ್ ದೆನ್ ರಾಮನ್’ ಆಧಾರಿತವಾಗಿತ್ತು. ಈ ಚಿತ್ರದ ಅಭಿನಯಕ್ಕಾಗಿ ಪುನೀತ್‌ಗೆ ರಾಷ್ಟ್ರ ಪ್ರಶಸ್ತಿ ದೊರೆಯಿತು.
2002 ರಲ್ಲಿ ತೆರೆಕಂಡ ಪುರಿ ಜಗನ್ನಾಥ ನಿರ್ದೇಶನದ ಅಪ್ಪು’ ಚಿತ್ರದಿಂದ ನಾಯಕನಟನಾಗಿ ಕನ್ನಡ ಚಿತ್ರರಂಗದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದರು. ಈ ಚಿತ್ರ ಅದ್ಧೂರಿ ಯಶಸ್ಸು ಕಂಡಿತು. ನಂತರ ತೆರೆಗೆ ಬಂದ ಅಭಿ,ವೀರ ಕನ್ನಡಿಗ,ಮೌರ್ಯ,ಆಕಾಶ್ ,ನಮ್ಮ ಬಸವ, ಅಜಯ್ ಮುಂತಾದ ಚಿತ್ರಗಳು ಬಾಕ್ಸಾಫೀಸಿನಲ್ಲಿ ಒಳ್ಳೆ ದಾಖಲೆ ಮಾಡಿ ಅದ್ದೂರಿ ಪ್ರದರ್ಶನ ಕಂಡವು.

ಇವರು ನಾಯಕನಾಗಿ ನಟಿಸಿದ ಮೊದಲ ಹತ್ತು ಚಿತ್ರಗಳು ಶತದಿನ ಪೂರೈಸಿದ್ದು ದಾಖಲೆ.ನಾಯಕನಾಗಿ ಎರಡು ರಾಜ್ಯ ಪ್ರಶಸ್ತಿ, ನಾಲ್ಕು ಫಿಲ್ಮಫೇರ್,ಎರಡು ಸೈಮಾ ಹೀಗೆ ಹತ್ತು ಹಲವು ಪ್ರಶಸ್ತಿ ಪಡೆದಿದ್ದಾರೆ.
ಗಾಯಕನಾಗಿ ಸುಮಾರು ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಡಿರುವ ಪುನೀತ್, ಗಾಯನದಿಂದ ಬರುವ ಸಂಪೂರ್ಣ ಹಣವನ್ನು ಸಮಾಜಸೇವೆಗೆ ವಿನಿಯೋಗಿಸುತ್ತಾರೆ.ಕಿರುತೆರೆಯಲ್ಲಿ ನಿರೂಪಕರಾಗಿ ಕನ್ನಡದ ಕೋಟ್ಯಾಧಿಪತಿಯ ಎರಡು ಸೀಸನ್‌ಗಳನ್ನು ಮತ್ತು ಫ್ಯಾಮಿಲಿ ಪವರ್ ಎಂಬ ರಿಯಾಲಿಟಿ ಶೋಗಳನ್ನು ನಿರೂಪಿಸಿದ್ದಾರೆ. ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದ ಮೊಟ್ಟಮೊದಲ ಅತಿಥಿಯಾಗಿ ಭಾಗವಹಿಸಿದ್ದು ವಿಶೇಷ.

ಚಿತ್ರ ನಿರ್ಮಾಪಕರಾಗಿ ಕವುಲುದಾರಿ’, ಮಯಾಬಜಾರ್’ ಎಂಬ ಚಿತ್ರಗಳನ್ನು ತಮ್ಮ ಹೋಮ್ ಬ್ಯಾನರ್‌ನಲ್ಲಿಯೇ ನಿರ್ಮಸಿರುವ ಪುನೀತ್ ತಮ್ಮ ಪ್ರೋಡಕ್ಸನ್ ಹೌಸ್ ಮೂಲಕ ಕಿರುತೆರೆ ಧಾರಾವಾಹಿ ಕೂಡ ನಿರ್ಮಿಸಿದ್ದಾರೆ. ತಾಯಿಯ ನೆನಪಿನಲ್ಲಿ ಪಿ.ಅರ್.ಕೆ ‘ ಆಡಿಯೋ ಕಂಪನಿಯೊಂದನ್ನು ಸ್ಥಾಪಿಸಿದ್ದಾರೆ.

ಮೈಸೂರಿನ ಶಕ್ತಿ ಧಾಮ ಆಶ್ರಮದ ಮೂಲಕ ಸಮಾಜ ಸೇವೆಯಲ್ಲಿ ತೊಡಗಿರುವ ಪುನೀತ್ ಬೆಂಗಳೂರು ಪ್ರೀಮೀಯರ್ ಪುಟ್‌ಬಾಲ್ ತಂಡದ ಒಡೆತನವನ್ನು ಹೊಂದಿದ್ದಾರೆ.ಕರ್ನಾಟಕ ಸರ್ಕಾರದ ನಂದಿನಿ ಹಾಲು ಉತ್ಪನ್ನಗಳು ಮತ್ತು LED ಬಲ್ಬ್‌ಗಳ ರಾಯಭಾರಿಯಾಗಿ ಕೂಡ ಪ್ರಸ್ತುತರು. ಒಂದು ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರಾಯಭಾರಿಯಾಗಿದ್ದರು.

1999 ರಲ್ಲಿ ಚಿಕ್ಕಮಗಳೂರಿನವರಾದ ಅಶ್ವಿನಿಯವರನ್ನು ಕೈಹಿಡಿದರು.ಈ ದಂಪತಿಗಳಿಗೆ ಧೃತಿ ಮತ್ತು ವಂದಿತಾ ಎಂಬ ಪುತ್ರಿಯರಿದ್ದಾರೆ.

ಬದುಕಿದ್ದಾಗ ಒಳ್ಳೆಯ ಮನುಷ್ಯ, ಉತ್ತಮ ನಟ ಎನಿಸಿಕೊಂಡಿದ್ದು ಮಾತ್ರವಲ್ಲದೆ ಸಾವಿನಲ್ಲಿಯೂ ಪುನೀತ್ ರಾಜ್ ಕುಮಾರ್ ಸಾರ್ಥಕತೆ ಮೆರೆದಿದ್ದಾರೆ. ಅವರ ಕಣ್ಣುಗಳನ್ನು ದಾನ ಮಾಡಲು ಕುಟುಂಬ ನಿರ್ಧರಿಸಿದೆ. ತಂದೆ ರಾಜ್ ಕುಮಾರ್ ರಂತೆ ಅಪ್ಪು ಕಣ್ಣುಗಳನ್ನು ದಾನ ಮಾಡಿದ್ದಾರೆ. ನಾರಾಯಣಾ ನೇತ್ರಾಲಯಕ್ಕೆ ಕಣ್ಣು ದಾನ ಮಾಡಲಾಗಿದೆ. ಇಬ್ಬರು ಅಂದರಿಗೆ ಪುನೀತ್ ಕಣ್ಣಾಗಿದ್ದಾರೆ.

ಈ ಕೋವಿಡ್ ಅವಧಿಯಲ್ಲಿ ಚಿರಂಜೀವಿ ಸರ್ಜಾ, ಬುಲೆಟ್ ಪ್ರಕಾಶ್, ಸಂಚಾರಿ ವಿಜಯ್, ಪುನೀತ್ ರಾಜ್ ಕುಮಾರಂತಹ ಪ್ರತಿಭಾವಂತ ನಟರನ್ನು ಕಳೆದುಕೊಂಡಿದೆ. ಪ್ರತಿಭಾವಂತ್ ನಟ ಪುನೀತ್ ಇಟ್ಟುಕೊಂಡಿದ್ದ ಗುರಿ, ಆಶಯಗಳನ್ನು ಅವರ ಕುಟುಂಬ ಹಾಗೂ ಅಭಿಮಾನಿಗಳು ಈಡೇರಿಸಲಿ.

 

Donate Janashakthi Media

Leave a Reply

Your email address will not be published. Required fields are marked *