ಯುವ ಪೀಳಿಗೆಯ ದಿಕ್ಕು ತಪ್ಪಿಸುತ್ತಿರುವ ಕೋಮು ಧೃವೀಕರಣ

ಎರಡು ಮತೀಯ ಶಕ್ತಿಗಳ ಮೇಲಾಟದಲ್ಲಿ ಯುವಪೀಳಿಗೆ ಸಂಯಮ ಕಳೆದುಕೊಳ್ಳುತ್ತಿದೆ

ನಾ ದಿವಾಕರ

ಕೋಮುವಾದಿ ರಾಜಕಾರಣಕ್ಕೆ ಭಾರತದಲ್ಲಿ ಶತಮಾನದ ಇತಿಹಾಸವಿದೆ. ಹಾಗೆಯೇ ರಾಜಕೀಯ ಕೋಮು ಧೃವೀಕರಣಕ್ಕೆ ದಶಕಗಳ ಇತಿಹಾಸವಿದೆ. ಭಾರತದ ಬಹುತ್ವ ಸಂಸ್ಕೃತಿಗೆ ಸವಾಲಾಗಿಯೇ ಪರಿಣಮಿಸಿರುವ ಏಕಸಂಸ್ಕೃತಿಯ ಪ್ರತಿಪಾದಕರು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಸ್ಥಾಪಿಸಲು ಪಣತೊಟ್ಟಿರುವುದರಿಂದ ಅನ್ಯ ಮತೀಯ ಜನಾಂಗಗಳು ಈ ಧೃವೀಕರಣದ ಕೇಂದ್ರ ಬಿಂದು ಆಗಿರುತ್ತವೆ. ಕಳೆದ ಮೂರು ದಶಕಗಳಲ್ಲಿ ಸಾಂಸ್ಕೃತಿಕ ರಾಜಕಾರಣ ತನ್ನದೇ ಆದ ಸ್ಪಷ್ಟ ರೂಪ ಪಡೆಯುತ್ತಿದ್ದು ಹಿಂದುತ್ವ ರಾಜಕಾರಣದ ಮುನ್ನಡೆಗೆ ಫಲವತ್ತಾದ ಭೂಮಿಕೆಯೂ ಸಿದ್ಧವಾಗುತ್ತಿದೆ. ಈ ನಡುವೆಯೇ ಅಪಾಯಕ್ಕೊಳಗಾಗಿರುವುದು ಈ ದೇಶದ ಬಹುಸಂಸ್ಕೃತಿ ನೆಲೆಗಳು ಮತ್ತು ಈ ಬಹುತ್ವ ನೆಲೆಗಳ ವಾರಸುದಾರರು. ಈಗಾಗಲೇ ಶತಮಾನಗಳ ಜಾತಿ ದೌರ್ಜನ್ಯ ಮತ್ತು ತಾರತಮ್ಯಗಳಿಂದ ಜರ್ಜರಿತವಾಗಿರುವ ಭಾರತೀಯ ಸಮಾಜವನ್ನು ಜನಾಂಗೀಯ ನೆಲೆಯಲ್ಲಿ ಮತ್ತಷ್ಟು ವಿಘಟನೆಗೊಳಪಡಿಸುವ ಪ್ರಯತ್ನಗಳು ನಮ್ಮ ಸುತ್ತಲಿನ ಸಮಾಜವನ್ನು ದ್ವೇಷ, ಆಕ್ರೋಶ, ಅಸೂಯೆ ಮತ್ತು ಶತ್ರುತ್ವದ ಕೂಪವನ್ನಾಗಿ ಮಾಡುತ್ತಿದೆ.

ಕಳೆದ ಹಲವು ದಿನಗಳಿಂದ ಕರ್ನಾಟಕದಲ್ಲಿ, ಮಧ್ಯಪ್ರದೇಶದಲ್ಲಿ, ದೆಹಲಿಯಲ್ಲಿ ಒಡಿಷಾದಲ್ಲಿ ನಡೆಯುತ್ತಿರುವ ಪ್ರಕ್ಷುಬ್ಧತೆ ಭಾರತವನ್ನು ಸಾಮಾಜಿಕ ಅರಾಜಕತೆಯತ್ತ ಕೊಂಡೊಯ್ಯುವಂತಿದೆ. ಕೋಮುವಾದಿ ಶಕ್ತಿಗಳು ತಮ್ಮ ಅಸ್ತಿತ್ವವನ್ನು ರಕ್ಷಿಸಿಕೊಳ್ಳಲು, ತಾವು ನಂಬುವ ಮತ್ತು ಪೋಷಿಸುವ ಒಂದು ಧಾರ್ಮಿಕ ನಂಬಿಕೆ ಮತ್ತು ಸಾಂಸ್ಥಿಕ ಅಸ್ಮಿತೆಗಳನ್ನು ಸಮರ್ಥಿಸಿಕೊಳ್ಳಲು ಕೋಮುವಾದಿಗಳು ಸದಾ ಮತ್ತೊಂದು ಕೋಮಿನ ವಿರುದ್ಧ ಕತ್ತಿ ಮಸೆಯುತ್ತಲೇ ಇರುತ್ತವೆ. ಒಂದು ಪ್ರೇಮ ವಿವಾಹ, ಒಂದು ಸಣ್ಣ ಮೆರವಣಿಗೆ, ಒಂದು ಪೂಜೆ ಅಥವಾ ಒಂದು ಪೂಜಾಸ್ಥಳದ ಗೋಡೆಯ ಮೇಲಿನ ಬರಹ ಈ ವಿಚ್ಚಿದ್ರಕಾರಿ ಶಕ್ತಿಗಳಲ್ಲಿರುವ ಕಿಚ್ಚನ್ನು ಹೊತ್ತಿಸಿ ಇಡೀ ಸಮುದಾಯಗಳನ್ನು ಆವರಿಸಿಬಿಡುತ್ತದೆ. ಬಡತನ, ನಿರುದ್ಯೋಗ, ಬೆಲೆ ಏರಿಕೆ, ವಸತಿಹೀನತೆ, ದುಬಾರಿ ಶಿಕ್ಷಣ, ಅಪೌಷ್ಟಿಕತೆ, ಅನಾರೋಗ್ಯ, ಅಶುಚಿತ್ವ, ಶಿಶುಮರಣ, ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ, ಜಾತಿ ದೌರ್ಜನ್ಯ, ಅಸ್ಪೃಶ್ಯತೆ ಈ ಎಲ್ಲ ಸಮಸ್ಯೆಗಳ ವಿರುದ್ಧ ಹೋರಾಡಲು ಸಜ್ಜಾಗಬೇಕಿರುವ ಒಂದು ಇಡೀ ಯುವ ಪೀಳಿಗೆ ಇಂದು ಹಿಜಾಬ್‌, ಹಲಾಲ್‌, ಜಟ್ಕಾ, ರಾಮನವಮಿ, ಹನುಮಜಯಂತಿ ಮುಂತಾದ ವಿವಾದಗಳಿಗೆ ಸ್ಪಂದಿಸುತ್ತಾ ತನ್ನೊಳಗಿನ ಅಪಾರ ಶಕ್ತಿಯನ್ನು ವ್ಯರ್ಥ ಮಾಡುತ್ತಿದೆ.

“ಧಾರ್ಮಿಕ ಭಾವನೆಗಳಿಗೆ ಧಕ್ಕೆ ! ” ಈ ಮೂರು ಪದಗಳು ಭಾರತದ ನೂರಾರು ಯುವ ಜೀವಗಳಿಗೆ ಮಾರಕವಾಗಿ ಪರಿಣಮಿಸಿವೆ. ಯಾವುದೋ ಒಬ್ಬ ತಿಳಿಗೇಡಿಯ ಸಾಮಾಜಿಕ ತಾಣದ ಪೋಸ್ಟ್‌ ಒಂದು ಇಡೀ ಸಮುದಾಯದೊಳಗಿನ ಕಿಚ್ಚನ್ನು ಭುಗಿಲೇಳಿಸುವ ಮಟ್ಟಕ್ಕೆ ನಮ್ಮ ನಡುವಿನ ಯುವ ಪೀಳಿಗೆ ದುರ್ಬಲವಾಗಿದೆ. ಈ ದೌರ್ಬಲ್ಯವೇ ಹಿಂದೂ ಮತೀಯವಾದಿಗಳಿಗೆ, ಮುಸ್ಲಿಂ ಮತಾಂಧ ಸಂಘಟನೆಗಳಿಗೆ ಬಂಡವಾಳವಾಗುತ್ತದೆ. ಹಿಂದೂ, ಇಸ್ಲಾಂ ಅಥವಾ ಇತರ ಯಾವುದೇ ಧಾರ್ಮಿಕ ನೆಲೆಗಳಾದರೂ ಒಬ್ಬ ವ್ಯಕ್ತಿಯ ಒಂದು ಕ್ಷುಲ್ಲಕ ಅಭಿವ್ಯಕ್ತಿಯಿಂದ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುವಷ್ಟು ದುರ್ಬಲವಲ್ಲ ಎನ್ನುವುದನ್ನು ಇತಿಹಾಸ ನಿರೂಪಿಸಿದೆ.  ಆದರೆ ಈ ರೀತಿಯ ಕ್ಷುಲ್ಲಕ ಘಟನೆಗಳೇ ಕೋಮು ದಳ್ಳುರಿಯನ್ನು ಹೆಚ್ಚಿಸಿ ನೂರಾರು ಅಮಾಯಕರ ಆಸ್ತಿಪಾಸ್ತಿಗಳ ನಷ್ಟಕ್ಕೆ, ಹತ್ತಾರು ಯುವಕರ ಸಾವಿಗೆ ಕಾರಣವಾಗುತ್ತದೆ ಎನ್ನುವುದನ್ನೂ ಸಮಕಾಲೀನ ಭಾರತೀಯ ಇತಿಹಾಸ ನಿರೂಪಿಸಿದೆ. ಯಾವುದೇ ಜನಸಮುದಾಯಗಳ ಧಾರ್ಮಿಕ ಅಥವಾ ಸಾಮುದಾಯಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಕೃತ್ಯವನ್ನು ಶಿಕ್ಷೆಗೊಳಪಡಿಸಲು ಒಂದು ಕಾನೂನು ವ್ಯವಸ್ಥೆ ಇದೆ ಎನ್ನುವ ಪರಿಜ್ಞಾನವೇ ಇಲ್ಲದಂತೆ ಕಾನೂನು ಕೈಗೆತ್ತಿಕೊಳ್ಳುವ ಬೃಹತ್‌ ಕಾವಲುಪಡೆಗಳನ್ನೇ ಮತೀಯ ಶಕ್ತಿಗಳು, ಮತಾಂಧ ಸಂಘಟನೆಗಳು ಸೃಷ್ಟಿಸಿವೆ.

ಈ ಹಾದಿ ತಪ್ಪಿದ ಯುವ ಪೀಳಿಗೆ  ಯಾವ ಧರ್ಮವನ್ನು ರಕ್ಷಿಸಲು ಸೆಣಸಾಡುತ್ತಿದೆ ? ಯಾರ ಧರ್ಮದ ಸಂರಕ್ಷಣೆಗಾಗಿ ಹೋರಾಡುತ್ತಿದೆ ? ಬಹುಶಃ ಈ ಪ್ರಶ್ನೆಗೆ ಆ ಯುವಕರ ನಡುವೆಯೇ ಉತ್ತರ ದೊರಕಲಾರದು. ಸಮಾಜದ ತಳಮಟ್ಟದಲ್ಲಿ ತಮ್ಮದೇ ಆದ ನಿತ್ಯ ಬದುಕಿನ ಬವಣೆಯೊಂದಿಗೆ ಜೀವನೋಪಾಯದ ಮಾರ್ಗಗಳ ಶೋಧದಲ್ಲಿರುವ ಜನರನ್ನು ಸಮೂಹ ಸನ್ನಿಗೊಳಪಡಿಸಿ ತಮ್ಮ ಸಾಂಸ್ಥಿಕ ಅಸ್ತಿತ್ವವನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಮತೀಯವಾದಿ ಸಂಘಟನೆಗಳು ಸುಭದ್ರ ಬುನಾದಿಯೊಂದಿಗೆ ನೆಲೆ ಕಂಡುಕೊಂಡಿವೆ. ಈ ಸಾಂಸ್ಥಿಕ ನೆಲೆಗಳನ್ನು ನಿಯಂತ್ರಿಸುವ ನೈತಿಕ ಹೊಣೆಗಾರಿಕೆ ಸರ್ಕಾರಗಳ ಮೇಲಿರುತ್ತದೆ. ದುರಂತ ಎಂದರೆ ಚುನಾಯಿತ ಸರ್ಕಾರಗಳು ತಮ್ಮ ಸಾಂವಿಧಾನಿಕ ಜವಾಬ್ದಾರಿಯನ್ನೂ ಮರೆತು ಮತೀಯ ಪಡೆಗಳನ್ನು ಸಮರ್ಥಿಸುತ್ತಲೋ, ಖಂಡಿಸುತ್ತಲೋ ಕಾಲ ಕಳೆಯುತ್ತವೆ. ಹುಬ್ಬಳ್ಳಿಯ ಘಟನೆಗೆ ಕಾರಣರಾದವರು ಕಲ್ಲು ತೂರಿದ ಅಮಾಯಕ ಹುಡುಗರಷ್ಟೇ ಅಲ್ಲ. ಅಥವಾ ಪ್ರಚೋದನಕಾರಿ ಪೋಸ್ಟ್‌ ಹಾಕಿದ್ದ ಯುವಕ ಮಾತ್ರ ಅಲ್ಲ. ಈ ಯುವಕರ ಹಿಂದೆ ಒಂದು ಸಾಂಘಿಕ ಶಕ್ತಿ ಇದೆ. ತಮ್ಮ ನಿತ್ಯ ಬದುಕಿನಲ್ಲಿ ಯಾವುದೇ ವ್ಯಕ್ತಿಯೂ ಧಾರ್ಮಿಕ ಭಾವನೆಗಳ ಬಗ್ಗೆ ಚಿಂತಿತನಾಗುವುದಿಲ್ಲ. ಅಥವಾ ಧಾರ್ಮಿಕ ಆಚರಣೆಗಳಲ್ಲಿ ಉಂಟಾಗುವ ವ್ಯತ್ಯಯಗಳು ವ್ಯಕ್ತಿಗತವಾಗಿ ಯಾರನ್ನೂ ಬಾಧಿಸುವುದೂ ಇಲ್ಲ.

ಈ ʼಧಾರ್ಮಿಕ ಭಾವನೆಗಳಿಗೆ ʼ ಒಂದು ಸಾಂಸ್ಥಿಕ ಸ್ವರೂಪ ನೀಡಿ, ಕಾಣದ ಕೈಗಳಿಂದ ನಿಯಂತ್ರಿಸಲ್ಪಡುವ ಈ ಸಾಂಸ್ಥಿಕ ಅಸ್ತಿತ್ವವನ್ನು ಸಂರಕ್ಷಿಸಲು ಸಮಾಜದ ಒಳಗಿನಿಂದಲೇ ಒಂದು ಸಂಘಟನಾತ್ಮಕ ಶಕ್ತಿಯನ್ನು ರೂಪಿಸಿ, ತಮ್ಮ ನಿಯಂತ್ರಣಾಧಿಕಾರವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಕಾವಲುಪಡೆಗಳನ್ನು ಸೃಷ್ಟಿಸುವ ಒಂದು ವ್ಯವಸ್ಥಿತ ಸಂಚು ಇಲ್ಲಿ ಕಾಣುತ್ತದೆ. ಜಾತಿ ಮತಗಳ ಅಸ್ಮಿತೆಗಳ ಚೌಕಟ್ಟಿನಲ್ಲಿ ನಿರ್ಬಂಧಿಸಲ್ಪಡುವ ಯುವ ಪೀಳಿಗೆಯ ಮನಸುಗಳನ್ನು ಸಮನ್ವಯದ ಬದುಕಿಗೆ ಹೊಂದಿಕೊಳ್ಳುವಂತೆ ಮಾಡಬೇಕಾದ ಈ ಸಾಂಸ್ಥಿಕ ನೆಲೆಗಳು, ಅಧಿಕಾರ ರಾಜಕಾರಣದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಇದೇ ಯುವ ಪಡೆಗಳನ್ನು ಹಿಂಸಾತ್ಮಕ ಮಾರ್ಗಗಳಿಗೆ ಪ್ರಚೋದಿಸುತ್ತವೆ. ಹುಬ್ಬಳ್ಳಿಯಲ್ಲಿ ಪ್ರಚೋದನಕಾರಿ ಪೋಸ್ಟ್‌ ಒಂದನ್ನು ಸಾಮಾಜಿಕ ತಾಣದಲ್ಲಿ ಹರಡುವ ಯುವಕ, ಇದರಿಂದ ಕೆರಳಿ ಸಮಾಜದಲ್ಲಿ ಕ್ಷೋಭೆ ಉಂಟುಮಾಡುವ ಪುಂಡ ಪಡೆಗಳು, ದೆಹಲಿಯ ಜಹಂಗೀರ್‌ಪುರಿಯಲ್ಲಿ ಹನುಮ ಜಯಂತಿಯ ಮೆರವಣಿಗೆಯ ಮೇಲೆ ಕಲ್ಲೆಸೆಯುವ ಯುವಕರು ಈ ಎಲ್ಲರೂ ಇಂತಹ ಒಂದು ಅಗೋಚರ ಸಾಂಸ್ಥಿಕ ನೆಲೆಗಳಿಂದ ನಿಯಂತ್ರಿಸಲ್ಪಡುತ್ತಾರೆ. ತಮ್ಮ ಬದುಕನ್ನು ಸುಧಾರಿಸುವ ನಿಟ್ಟಿನಲ್ಲಿ ನಿಷ್ಪ್ರಯೋಜಕವಾದ ಚಟುವಟಿಕೆಗಳಿಗೆ ಈ ಯುವಕರು ಬಲಿಯಾಗುತ್ತಾರೆ. ಈ ಒಂದು ಪೀಳಿಗೆಯಲ್ಲಿ ಸೃಷ್ಟಿಸಲಾಗುವ ಭಾವಾವೇಶ, ಉನ್ಮಾದ, ಅಂಧಾಭಿಮಾನ ಮತ್ತು ಹಿಂಸಾತ್ಮಕ ಧೋರಣೆ, ಯಾವುದೋ ಅಗೋಚರ ಶಕ್ತಿಯೊಂದನ್ನು ರಕ್ಷಿಸುತ್ತದೆ. ಈ ಅಗೋಚರ ಶಕ್ತಿಗಳೇ ಸಾಮಾಜಿಕ ಕ್ಷೋಭೆ ಮತ್ತು ಸಾಮುದಾಯಿಕ ವಿಘಟನೆಯ ಫಲಾನುಭವಿಗಳಾಗಿರುತ್ತವೆ. ಯುವ ಮನಸುಗಳಲ್ಲಿ ಅನ್ಯಮತ ದ್ವೇಷ, ಜಾತಿ ಶ್ರೇಷ್ಠತೆ,  ಪುರುಷ ಪ್ರಧಾನ ಅಹಮಿಕೆ, ಸಾಮಾಜಿಕ ಮೇಲರಿಮೆ ಮತ್ತು ಮತಭೇದದ ಬೀಜಗಳನ್ನು ಬಿತ್ತುವ ಮೂಲಕ, ಸಮಾಜದಲ್ಲಿ ಶಾಶ್ವತ ಬಿರುಕುಗಳನ್ನು ಸೃಷ್ಟಿಸುವುದರಲ್ಲಿ ಈ ಫಲಾನುಭವಿ ಸಂಘಟನೆಗಳು, ಸಂಸ್ಥೆಗಳು ಯಶಸ್ವಿಯಾಗುತ್ತವೆ.

ಈ ಸಾಂಸ್ಥಿಕ ನೆಲೆಗಳು ಅಧಿಕಾರ ರಾಜಕಾರಣದಲ್ಲಿ ತಮ್ಮ ಅಸ್ತಿತ್ವವನ್ನು ಗುರುತಿಸಿಕೊಳ್ಳಲಾರಂಭಿಸಿದಾಗ ಇಡೀ ರಾಜಕೀಯ ಕ್ಷೇತ್ರವೇ ಕಲುಷಿತವಾಗಿಬಿಡುತ್ತದೆ. ಭಾರತ ಇಂತಹ ಒಂದು ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ನೆರವಾಗಬೇಕಿದ್ದ ಬಹುಸಾಂಸ್ಕೃತಿಕ ನೆಲೆಗಳಲ್ಲಿ ಇದ್ದಂತಹ ಒಳಬಿರುಕುಗಳನ್ನೇ ಬಳಸಿಕೊಂಡ ಹಿಂದುತ್ವ ರಾಜಕಾರಣ ಭಾರತದ ಯುವ ಪೀಳಿಗೆಯನ್ನು ವಿಭಿನ್ನ ಮಾರ್ಗದಲ್ಲಿ ಕೊಂಡೊಯ್ದಿದೆ. ಬಹುತ್ವ ಸಂಸ್ಕೃತಿಯನ್ನು ಕಾಪಾಡಬೇಕಿದ್ದ ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಗಳು ತಮ್ಮೊಳಗಿನ ವಿಘಟನೆಯ ಕಾರಣದಿಂದಾಗಿಯೇ ಇಂದು ಹಿಂದೂ ಮತ್ತು ಮುಸ್ಲಿಂ ಮತೀಯವಾದಕ್ಕೆ ಬಲಿಯಾಗುತ್ತಿವೆ. ಯುವ ಜನಾಂಗದಲ್ಲಿ ಇರುವ ಉತ್ಸಾಹ ಮತ್ತು ಸ್ಪೂರ್ತಿಯನ್ನು ಸಮಾಜಮುಖಿ ಮಾರ್ಗದಲ್ಲಿ ಬಳಸಿಕೊಂಡು ಒಂದು ಸೌಹಾರ್ದಯುತ ಸಮಾಜವನ್ನು ಕಟ್ಟಲು ಮುಂದಾಗಬೇಕಾದ ಹೊತ್ತಿನಲ್ಲಿ, ಹಿಂದೂ ಮತ್ತು ಮುಸ್ಲಿಂ ಸಂಘಟನೆಗಳು ಈ ಯುವ ಮನಸುಗಳಲ್ಲಿ ಧಾರ್ಮಿಕ ಉನ್ಮಾದವನ್ನು ಹೆಚ್ಚಿಸುವ ಮೂಲಕ ತಮ್ಮ ಸಾಂಸ್ಥಿಕ ನೆಲೆಗಳನ್ನು ವಿಸ್ತರಿಸಿಕೊಳ್ಳುತ್ತಿವೆ.

ತಾವು ಅನುಸರಿಸುವ, ಅನುಕರಿಸುವ ಮತ್ತು ಆಚರಿಸುವ ಧರ್ಮ ಮತ್ತು ಮತೀಯ ಆಚರಣೆಗಳ ಮೂಲ ಸ್ವರೂಪವನ್ನೂ ಅರಿಯದ ಯುವ ಪೀಳಿಗೆ, ಮತಾಂಧ ನಾಯಕರ ಅಣತಿಯಂತೆ ನಡೆಯುತ್ತಿರುವುದರಿಂದಲೇ ಹುಬ್ಬಳ್ಳಿ, ಜಹಂಗೀರಪುರ ಸಂಭವಿಸುತ್ತದೆ. ಅಥವಾ ಕೇರಳದಲ್ಲಿ ನಡೆಯುತ್ತಿರುವಂತಹ ಹತ್ಯಾಸರಣಿಗೆ ಕಾರಣವಾಗುತ್ತವೆ. ಎಡಪಕ್ಷಗಳು ಅಧಿಕಾರದಲ್ಲಿರುವ ಕೇರಳದಲ್ಲೂ ಸಹ ಎಸ್‌ಡಿಪಿಐ ಮತ್ತು ಆರೆಸ್ಸೆಸ್‌ ನಡುವಿನ ಸಂಘರ್ಷದಲ್ಲಿ ಅಮಾಯಕರು ಬಲಿಯಾಗುತ್ತಿದ್ದಾರೆ. ಇದನ್ನು ಸಾಂಸ್ಕೃತಿಕ ಸಂಘರ್ಷ ಎನ್ನುವುದಕ್ಕಿಂತಲೂ ಮತಾಂಧ ಸಂಘಟನೆಗಳ ನಡುವಿನ ಅಸ್ತಿತ್ವದ ಸಂಘರ್ಷ ಎಂದು ಪರಿಗಣಿಸಿದರೆ, ಮತಾಂಧತೆಯ ಒಳಸುಳಿಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ತಾವು ಹಿಂಸಾತ್ಮಕ ಮಾರ್ಗವನ್ನು ಅನುಸರಿಸುವುದಿಲ್ಲ ಎಂದು ಶಪಥ ಮಾಡುವ ಮತೀಯ ಸಂಘಟನೆಗಳು ಕೇರಳದಲ್ಲಿ ನಡೆದಂತಹ ಹತ್ಯೆಗಳು ಸಂಭವಿಸಿದಾಗ, ನೇಪಥ್ಯಕ್ಕೆ ಸರಿಯುತ್ತವೆ. ಹುಬ್ಬಳ್ಳಿಯಂತಹ ಘಟನೆಗಳು ಸಂಭವಿಸಿದಾಗ ಅದನ್ನು ಕಿಡಿಗೇಡಿಗಳ ಕೃತ್ಯ ಎಂದು ಬಣ್ಣಿಸಿ ಸುಮ್ಮನಾಗುತ್ತವೆ. ಸರ್ಕಾರದ ದೃಷ್ಟಿಯಲ್ಲಿ ಇಂತಹ ಘಟನೆಗಳು ಕೇವಲ ಕಾನೂನು ಸುವ್ಯವಸ್ಥೆಯ ಪ್ರಶ್ನೆಯಾಗಿಯೇ ಉಳಿಯುವುದರಿಂದ, ಅಗೋಚರ ಸಾಂಘಿಕ ನೆಲೆಗಳು ತಮ್ಮ ಭದ್ರಕೋಟೆಗಳಲ್ಲಿ ಸುರಕ್ಷಿತವಾಗಿ ಉಳಿಯುವುದು ಸಾಧ್ಯವಾಗುತ್ತದೆ.

ಆಡಳಿತಾರೂಢ ರಾಜಕೀಯ ಪಕ್ಷಗಳಿಗೆ ಸಮಾಜದ ನಾಡಿ ಮಿಡಿತ ಅರ್ಥವಾಗುವಂತಿದ್ದರೆ, ಈ ರೀತಿಯ ಕ್ಷೋಭೆಯ ಮೂಲ ಕಾರಣಗಳನ್ನು ಶೋಧಿಸಿ, ನಿಯಂತ್ರಿಸುವುದು ಕಷ್ಟವಾಗಲಿಕ್ಕಿಲ್ಲ. ದುರಂತ ಎಂದರೆ ಭಾರತದ ಪ್ರಜಾತಂತ್ರ ವ್ಯವಸ್ಥೆ ಇಂದು ಮತೀಯ ರಾಜಕಾರಣದ ನೆಲೆಯಾಗಿದೆ. ಸಂವಿಧಾನವನ್ನು ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಪ್ರತಿನಿಧಿಸಬೇಕಾದ ಜನಪ್ರತಿನಿಧಿಗಳು ಹಿಂದೂ ಅಥವಾ ಮುಸ್ಲಿಂ ಮತಾಂಧ ಸಂಘಟನೆಗಳ ವಕ್ತಾರರಂತೆ ವರ್ತಿಸುವುದು ಸಾಮಾನ್ಯವಾಗಿಹೋಗಿದೆ. ತಮ್ಮ ರಾಜಕೀಯ ಭೂಮಿಕೆಯ ವಿಸ್ತರಣೆಗಾಗಿ ಮತೀಯ ನೆಲೆಗಳನ್ನು ಬಳಸಿಕೊಳ್ಳುತ್ತಿರುವ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಮುಂತಾದ ಪಕ್ಷಗಳು ಸಾಮಾಜಿಕ ಸಮನ್ವಯಕ್ಕಿಂತಲೂ ಹೆಚ್ಚಿನ ಪ್ರಾಶಸ್ತ್ಯವನ್ನು ಸಾಮುದಾಯಿಕ ಅಸ್ಮಿತೆಗಳಿಗೆ ನೀಡುತ್ತಿರುವುದರಿಂದಲೇ ಓಲೈಕೆ ರಾಜಕಾರಣ, ತುಷ್ಟೀಕರಣ ಮುಂತಾದ ಪದಗಳು ಅರ್ಥಹೀನವಾಗುತ್ತಿವೆ. ಜಾತಿ, ಮತ ಮತ್ತು ಧಾರ್ಮಿಕ ಅಸ್ಮಿತೆಗಳನ್ನು ಅವಲಂಬಿಸದೆ ಹೋದರೆ ಈ ಮೂರೂ ಪಕ್ಷಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತವೆ. ಅಧಿಕಾರ ರಾಜಕಾರಣಕ್ಕೆ ನೆರವಾಗುವ ಕಾರ್ಪೋರೇಟ್‌ ಮಾರುಕಟ್ಟೆಯ ಶಕ್ತಿಗಳನ್ನು ಓಲೈಸುತ್ತಲೇ ತಮ್ಮ ಈ ಅಸ್ತಿತ್ವವನ್ನು ವಿಸ್ತರಿಸಿಕೊಳ್ಳಲು ಹವಣಿಸುತ್ತಿರುವ ಮೂರೂ ರಾಜಕೀಯ ಪಕ್ಷಗಳು, ಯುವ ಪೀಳಿಗೆಗೆ ಒಂದು ಮೌಲ್ಯಯುತವಾದ ರಾಜಕೀಯ ವಾತಾವರಣವನ್ನು ನಿರ್ಮಿಸಲು ಸಾಧ್ಯವಾಗದಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಇಂದು ಯುವ ಪೀಳಿಗೆಯಲ್ಲಿ ಹಲವು ರೀತಿಯ ಕನಸುಗಳಿವೆ. ಈ ಕನಸುಗಳು ರೆಕ್ಕೆ ಪುಕ್ಕವಿಲ್ಲದೆ ಯಾವ ದಿಕ್ಕಿನಲ್ಲಿ ಬೇಕಾದರೂ ಸಂಚರಿಸುತ್ತವೆ. ಸ್ವಾತಂತ್ರ್ಯ ಮತ್ತು ಸ್ವೇಚ್ಚಾಚಾರದ ನಡುವಿನ ಸೂಕ್ಷ್ಮ ವ್ಯತ್ಯಾಸವನ್ನು ಗ್ರಹಿಸುವ ಸಾಮರ್ಥ್ಯವನ್ನೂ ಕಳೆದುಕೊಂಡಿರುವ ಈ ಯುವ ಪೀಳಿಗೆಗೆ ಭಾರತದ ಬಹುಸಾಂಸ್ಕೃತಿಕ ನೆಲೆಗಳಲ್ಲಿ ಮುಕ್ತ ಅವಕಾಶ ನೀಡುವುದು,. ಪ್ರಜಾಪ್ರಭುತ್ವದ ಮೌಲ್ಯಗಳಲ್ಲಿ ನಂಬಿಕೆ ಉಂಟುಮಾಡುವಂತಹ ಒಂದು ಸೌಹಾರ್ದ ವಾತಾವರಣವನ್ನು ನಿರ್ಮಿಸುವುದು ಸಮಾಜದ ನೈತಿಕ ಜವಾಬ್ದಾರಿಯಾಗಿದೆ. ಈ ಜವಾಬ್ದಾರಿಯನ್ನು ನಿರ್ವಹಿಸುವ ನೈತಿಕತೆಯನ್ನು, ಮೌಲ್ಯಯುತ ಅರ್ಹತೆಯನ್ನು ಪ್ರಧಾನ ರಾಜಕೀಯ ಪಕ್ಷಗಳು ಕಳೆದುಕೊಂಡಿವೆ. ಮಾರುಕಟ್ಟೆಯ ಪ್ರಲೋಭನೆಗೊಳಗಾಗಿ ತಮ್ಮ ಸ್ವಂತಿಕೆಯನ್ನೇ ಕಳೆದುಕೊಂಡಿರುವ ಮಾಧ್ಯಮಗಳು ಅಧಿಕಾರ ರಾಜಕಾರಣದ ಬಾಲಂಗೋಚಿಗಳಾಗಿರುವುದರಿಂದ ತಮ್ಮ ಸಾಮಾಜಿಕ ಜವಾಬ್ದಾರಿಯಿಂದ ವಿಮುಖವಾಗಿವೆ. ಸಮಾಜದಲ್ಲಿ ಸಂಭವಿಸುವ ಕ್ಷೋಭೆಯನ್ನು ಮತ್ತಷ್ಟು ತೀಕ್ಷ್ಣಗೊಳಿಸುವ ರೀತಿಯಲ್ಲಿ ಸುದ್ದಿಗಳನ್ನು ಬಿತ್ತರಿಸುವ ವಿದ್ಯುನ್ಮಾನ ಸುದ್ದಿಮನೆಗಳು ಮತ್ತು ಅದರ ನಿರೂಪಕರು, ಯಾವುದೋ ಒಂದು ಪಕ್ಷದ ಸೈದ್ಧಾಂತಿಕ ನೆಲೆಗಳಲ್ಲಿ ಅಥವಾ ಮತೀಯ ಸಾಂಸ್ಥಿಕ ನೆಲೆಗಳಲ್ಲಿ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳುತ್ತಿರುವುದರಿಂದ, ಯುವ ಪೀಳಿಗೆಯನ್ನು ಸರಿದಾರಿಗೆ ತರುವ ನೈತಿಕತೆಯನ್ನು ಕಳೆದುಕೊಂಡಿವೆ. ಸುದ್ದಿಮನೆಗಳು ನಡೆಸುವ ಚರ್ಚೆಗಳು ಮತ್ತು ಚರ್ಚೆಗೆ ಆಹ್ವಾನಿಸಲಾಗುವ ವ್ಯಕ್ತಿಗಳನ್ನು ಗಮನಿಸಿದಾಗ, ಕೆಲವು ಅಪವಾದಗಳನ್ನು ಹೊರತುಪಡಿಸಿ, ಇಡೀ ಮಾಧ್ಯಮ ವಲಯ ನೈತಿಕವಾಗಿ ಅವನತಿ ಹೊಂದಿರುವುದು ಸ್ಪಷ್ಟವಾಗುತ್ತದೆ.

ಇಂತಹ ವಿಷಮ ಸನ್ನಿವೇಶದಲ್ಲಿ ದಿಕ್ಕುತಪ್ಪಿದಂತೆ ಕಾಣುತ್ತಿರುವ ಯುವ ಪೀಳಿಗೆಗೆ ಸರಿದಾರಿಯನ್ನು ತೋರುವುದಾದರೂ ಯಾರು ? ತೋರುವುದಾದರೂ ಹೇಗೆ? ರಾಮಭಕ್ತರ ಮೇಲೆ, ಹನುಮ ಆರಾಧಕರ ಮೇಲೆ ಕಲ್ಲೆಸೆಯುವ ಮುಸ್ಲಿಂ ಯುವಕರು, ಮಸೀದಿಯ ಮೇಲೆ ಕಲ್ಲೆಸೆಯುವ ಹಿಂದೂ ಹುಡುಗರು, ಸಾಮಾಜಿಕ ತಾಣದ ಒಂದು ಸಾಧಾರಣ ಪೋಸ್ಟ್‌ನಿಂದ ಉನ್ಮಾದಕ್ಕೊಳಗಾಗುವ ಯುವ ಪೀಳಿಗೆ, ಲೇಖನಿ ಕುಂಚ ಹಿಡಿಯುವ ಕೈಗಳಲ್ಲಿ ಲಾಂಗು ಮಚ್ಚು ತಲವಾರು ಪಿಸ್ತೂಲುಗಳನ್ನು ಹಿಡಿಯುವ ಯುವ ಜನಾಂಗ ಇವರಾರೂ ವಸ್ತುಶಃ ದಿಕ್ಕುತಪ್ಪಿದವರಲ್ಲ. ದಿಕ್ಕುಗಾಣದವರು. ಏಕೆಂದರೆ ಈ ಯುವ ಪೀಳಿಗೆ ಯಾವ ದಿಕ್ಕಿನಲ್ಲಿ ಹೋದರೆ ಒಂದು ಸೌಹಾರ್ದಯುತ ಬದುಕು ಸಾಧ್ಯ ಎಂದು ತೋರಿಸಬೇಕಾದ ಪ್ರಜ್ಞಾವಂತ ಮನಸುಗಳು ಇಂದು ಹಿತವಲಯಗಳಲ್ಲಿ ಅಡಗಿ ಕುಳಿತಿವೆ. ವಾಮ ಮಾರ್ಗಗಳಿಗೆ ಪ್ರಚೋದಿಸುವ ಕಾಣದ ಕೈಗಳು ಈ ಯುವಜನಾಂಗದಲ್ಲಿ ಪ್ರೀತಿ, ವಾತ್ಸಲ್ಯ, ಭ್ರಾತೃತ್ವದ ಬದಲು ದ್ವೇಷ, ಅಸೂಯೆ, ಮತ್ಸರಗಳನ್ನು ಬೆಳೆಸುತ್ತಿವೆ. ಜಾತಿ, ಮತ, ಧಾರ್ಮಿಕ ಉನ್ನಾದಕ್ಕೊಳಗಾಗಿರುವ ಯುವ ಜನಾಂಗ ತನ್ನ ವಿವೇಕ ಮತ್ತು ವಿವೇಚನೆ ಕಳೆದುಕೊಳ್ಳುವುದು ಸ್ವಾಭಾವಿಕ.

ಆಳುವ ವರ್ಗಗಳು ಉದ್ದೇಶಪೂರ್ವಕವಾಗಿಯೇ, ತಮ್ಮ ಸ್ವಾರ್ಥ ಸಾಧನೆಗಾಗಿ ವಿವೇಕರಹಿತವಾಗಿ ವರ್ತಿಸುತ್ತವೆ. ಆಡಳಿತ ವ್ಯವಸ್ಥೆಯನ್ನು ನಿರ್ವಹಿಸುವ ಸಂಸ್ಥೆಗಳು ವಿವೇಚನೆ ಇಲ್ಲದೆ ಸರ್ಕಾರದ ಆದೇಶಗಳನ್ನು ಪಾಲಿಸುತ್ತವೆ. ಈ ಹೊತ್ತಿನಲ್ಲಿ ಜಾಗೃತವಾಗಬೇಕಾದ್ದು ನಾಗರಿಕ ಪ್ರಜ್ಞೆ .  ಸಾಮಾಜಿಕ ಕಾಳಜಿ ಮತ್ತು ಕಳಕಳಿ, ಮಾನವೀಯ ಮೌಲ್ಯಗಳನ್ನು ಜೀವಂತವಾಗಿರಿಸಲು ಶ್ರಮಿಸಬೇಕಾದ್ದು ನಮ್ಮ ಸಮಾಜ. ಈ ಸಮಾಜ ಪ್ರತಿಬಾರಿ ಎಡವಿದಾಗಲೂ ವಿಧ್ವಂಸಕ ಶಕ್ತಿಗಳು, ವಿಭಜಕ ಶಕ್ತಿಗಳು ವಿಜೃಂಭಿಸುತ್ತವೆ.  ಇಂತಹ ಒಂದು ಸಂದಿಗ್ಧತೆಗೆ ಕರ್ನಾಟಕ, ಭಾರತ ಸಾಕ್ಷಿಯಾಗುತ್ತಿದೆ. ಜಹಂಗೀರಪುರದಿಂದ ಹುಬ್ಬಳ್ಳಿಯವರೆಗೆ ಇದು ಢಾಳಾಗಿ ಕಾಣುತ್ತಿದೆ. ಪ್ರಗತಿಪರ ಎಂದು ಬೆನ್ನುತಟ್ಟಿಕೊಳ್ಳುವ ಸಂಘಟನೆಗಳು, ಎಡಪಂಥೀಯ ಚಳುವಳಿಗಳು, ಮಹಿಳಾ ಸಮೂಹಗಳು, ಶೋಷಿತ ತಳಸಮುದಾಯಗಳನ್ನು ಪ್ರತಿನಿಧಿಸುವ ದಲಿತ ಸಂಘಟನೆಗಳು ಈ ನೈತಿಕ ಜವಾಬ್ದಾರಿಯನ್ನು ಹೆಗಲೇರಿಸಿಕೊಳ್ಳುವ ಕಾಲ ಸನ್ನಿಹಿತವಾಗಿದೆ. ಇಡೀ ಯುವ ಜನಾಂಗ ನಮ್ಮತ್ತ ನೋಡುತ್ತಿದೆ. ನಾವು ಅವರತ್ತ ಹೋಗುತ್ತಿದ್ದೇವೆಯೇ ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳೋಣ.

Donate Janashakthi Media

Leave a Reply

Your email address will not be published. Required fields are marked *