ಈ ಸರ್ಕಾರ ನ್ಯಾಯಯುತ ಆಳ್ವಿಕೆ ನೀಡುತ್ತದೆಯೇ ?

ಜನಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿ ಕೆಲವು ಜನವಿರೋಧಿ ಕಾಯ್ದೆಗಳನ್ನೂ ರದ್ದುಪಡಿಸಬೇಕಿದೆ

ಮೂಲ : ಮೇಜರ್‌ ಜನರಲ್‌ ಎಸ್‌ ಜಿ ಒಂಬತ್ಕೆರೆ (ನಿವೃತ್ತ)

Will This Govt deliver – ಡೆಕ್ಕನ್‌ ಹೆರಾಲ್ಡ್‌ 24 ಮೇ 2023 ಕನ್ನಡಕ್ಕೆ :  ನಾ ದಿವಾಕರ

                                                                                                                                                                                                

ಕರ್ನಾಟಕ ವಿಧಾನಸಭೆ ಚುನಾವಣೆಗಳಲ್ಲಿ ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚಿನ, ಶೇ 73.19% ರಷ್ಟು ಮತದಾನವಾಗಿದೆ. 224 ಸದಸ್ಯ ಬಲದ ವಿಧಾನಸಭೆಯಲ್ಲಿ 135 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್, ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರ್ಕಾರ ರಚಿಸಿದೆ. ಕಾಂಗ್ರೆಸ್ ತನ್ನ ಚುನಾವಣಾ ಪ್ರಚಾರದ ಸಮಯದಲ್ಲಿ, ಕನ್ನಡಿಗರನ್ನೇ ಪ್ರಚಾರದ ಕಣಕ್ಕಿಳಿಸಿತ್ತು ಮತ್ತು ವಿಶೇಷವಾಗಿ ತಳಮಟ್ಟದ ಸಾಮಾಜಿಕ-ಆರ್ಥಿಕ ನೆಲೆಯಲ್ಲಿ ಜನತೆಗೆ ಸ್ಪಂದಿಸುವಂತಹ ಹೇಳಿಕೆಗಳು ಮತ್ತು ಭರವಸೆಗಳನ್ನು ನೀಡಿತ್ತು. ಬಹುಮುಖ್ಯವಾಗಿ ರೈತರು, ಕಾರ್ಮಿಕರು, ಅಲ್ಪಸಂಖ್ಯಾತರು ಮತ್ತು ದಲಿತರೊಂದಿಗೆ ಗುರುತಿಸಿಕೊಂಡಿತ್ತು. ಬಿಜೆಪಿಯ ಚುನಾವಣಾ ಪ್ರಚಾರ ಇದಕ್ಕೆ ವ್ಯತಿರಿಕ್ತವಾಗಿತ್ತು, ಬಿಜೆಪಿ ತನ್ನ ಪ್ರಚಾರ ಕಾರ್ಯದಲ್ಲಿ ಬಳಸಿಕೊಂಡಿದ್ದ ಕನ್ನಡೇತರರಾದ ನರೇಂದ್ರ ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ್, ಜೆ.ಪಿ.ನಡ್ಡಾ ಅವರು ಬಿಜೆಪಿಯ ಸ್ಥಳೀಯರನ್ನು ಪರಿಣಾಮಕಾರಿಯಾಗಿ ಹಿಂಬದಿಗೆ ತಳ್ಳಿದ್ದರು. ಅವರು ಜನರ ಸಮಸ್ಯೆಗಳ ಬಗ್ಗೆ ಮಾತನಾಡುವುದಕ್ಕಿಂತಲೂ ಹೆಚ್ಚಾಗಿ ಸಮಾಜದ ಮೇಲ್ವರ್ಗಕ್ಕೆ ಪ್ರಯೋಜನವಾಗುವಂತಹ,  ವಿಮಾನ ನಿಲ್ದಾಣಗಳು ಮತ್ತು ಎಕ್ಸ್‌ಪ್ರೆಸ್‌ವೇ ಮುಂತಾದ ಮೂಲ ಸೌಕರ್ಯಗಳ ಬಗ್ಗೆ  ಮಾತನಾಡಿದರು, ಬಿಜೆಪಿಯ ಪ್ರಚಾರ ವೈಖರಿಯು ನಕಾರಾತ್ಮಕತೆ ಮತ್ತು ಆತ್ಮರತಿಯಿಂದ ಕೂಡಿದ್ದುದರಿಂದ ಕರ್ನಾಟಕದ ಜನರನ್ನು ಆಕರ್ಷಿಲು ಸಾಧ್ಯವಾಗಲಿಲ್ಲ.

ಬಸವರಾಜ ಬೊಮ್ಮಾಯಿ ಸರ್ಕಾರವು ಕೆಲವು ಶಾಸನಗಳನ್ನು ಜಾರಿಗೆ ತರುವುದನ್ನೂ ಸೇರಿದಂತೆ ಹಿಂದೂ-ಮುಸ್ಲಿಂ ವಿಭಜನೆಗೆ ಒತ್ತು ನೀಡಿರುವುದು ಮತ್ತು ಕೇಂದ್ರ ಸರ್ಕಾರದ ಹಿಂದಿ-ಹಿಂದುತ್ವವನ್ನು ಉತ್ತೇಜಿಸಿದ್ದು ಜನಸಾಮಾನ್ಯರಲ್ಲಿ ಅಸಮಾಧಾನ ಹೆಚ್ಚಾಗಿದೆ ಎಂದು ಅಧ್ಯಯನಗಳು ಹೇಳುತ್ತವೆ.  “ಜೈ ಭಜರಂಗ ಬಲಿ” ಎಂದು ಘೋಷಣೆ ಕೂಗಿ ಬಿಜೆಪಿಗೆ ಮತ ಚಲಾಯಿಸುವಂತೆ ಮೋದಿ ನೀಡಿದ ಪ್ರಚೋದನೆ ಬಿಜೆಪಿಯ ಲೆಕ್ಕಾಚಾರಗಳು ತಲೆಕೆಳಗಾಗಲು ಕಾರಣವಾಗಿದೆ. ಆದರೆ ಬಿಜೆಪಿಯ ಸೋಲಿಗೆ ಇನ್ನೂ ಹಲವು ಕಾರಣಗಳನ್ನು ಗುರುತಿಸಬಹುದು.

2023 ರ ಕರ್ನಾಟಕ ಚುನಾವಣೆಯ ಫಲಿತಾಂಶವು 2024ಕ್ಕೆ ದಿಕ್ಸೂಚಿಯಾಗುತ್ತದೆ ಎಂದು  ಪ್ರಧಾನಿ ಮೋದಿ ತಮ್ಮ ಚುನಾವಣಾ ಪ್ರಚಾರದ ಸಮಯದಲ್ಲಿ ಮಾತನಾಡಿರುವುದು ವರದಿಯಾಗಿದೆ. ತಮ್ಮ ಪಕ್ಷದ ಭರ್ಜರಿ ಗೆಲುವಿನ ನಂತರ ಅವರ ಹೇಳಿಕೆಯನ್ನು ಕೆಲವು ಕಾಂಗ್ರೆಸ್ ಬೆಂಬಲಿಗರು ಸಂತೋಷದಿಂದ ನೆನಪಿಸಿಕೊಳ್ಳುತ್ತಿದ್ದಾರೆ.  ಮಿಜೋರಾಂ, ಛತ್ತೀಸ್ಗಢ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣ (ಎಲ್ಲವೂ 2023 ರ ನವೆಂಬರ್-ಡಿಸೆಂಬರ್‌ನಲ್ಲಿ) ಮತ್ತು ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಮತ್ತು ಸಿಕ್ಕಿಂ (2024 ರಲ್ಲಿ, ಲೋಕಸಭಾ ಚುನಾವಣೆಗೆ ಮೊದಲು ಅಥವಾ ಅದರೊಂದಿಗೆ) ರಾಜ್ಯ ಚುನಾವಣೆಗಳ ಮೇಲೆ ಕರ್ನಾಟಕದ 2023ರ ಫಲಿತಾಂಶಗಳು ಹೇಗೆ ಪ್ರಭಾವ ಬೀರುತ್ತವೆ ಎನ್ನುವುದು ಚರ್ಚೆಗೊಳಗಾಗಬೇಕಿದೆ. 2023ರ ಕರ್ನಾಟಕದ ಮತ್ತು ಒಂಬತ್ತು ರಾಜ್ಯಗಳ ಚುನಾವಣೆಗಳು 2024 ರ ಲೋಕಸಭಾ ಚುನಾವಣೆಯಲ್ಲಿ ಮತದಾನದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎನ್ನುವುದನ್ನು ಪರಾಮರ್ಶಿಸಬೇಕಿದೆ. ಮತದಾರರು ರಾಜ್ಯ ಚುನಾವಣೆಯಲ್ಲಿ ಒಂದು ಪಕ್ಷಕ್ಕೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಮತ್ತೊಂದು ಪಕ್ಷಕ್ಕೆ ಮತ ಚಲಾಯಿಸುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ. ಕರ್ನಾಟಕ ಮತ್ತು ಇತರ ರಾಜ್ಯಗಳು ಅಥವಾ ಕೇಂದ್ರದಲ್ಲಿನ ಹಿಂದಿನ ಕಾಂಗ್ರೆಸ್ ಸರ್ಕಾರಗಳು ಅಧಿಕಾರದ ದುರುಪಯೋಗದಿಂದ ಮುಕ್ತವಾಗಿರಲಿಲ್ಲ ಎಂಬುದನ್ನು ನಾವು ಮರೆಯುವಂತಿಲ್ಲ. ಆದರೂ ಅವು ಬಹುಶಃ ಬಿಜೆಪಿ ಸರ್ಕಾರದಂತೆ ಶೇ 40ರ ಮಟ್ಟವನ್ನು ತಲುಪಲಿಲ್ಲ ಎನ್ನುವುದು ವಾಸ್ತವ.

ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯಿಂದ  ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಲಾಭವಾಗಿದೆ ಎಂದು ತೋರುತ್ತದೆ, ಅದರ ಸಮಯದಲ್ಲಿ ಮತ್ತು ಆನಂತರ, ರಾಹುಲ್‌ ಗಾಂಧಿ ಯಶಸ್ವಿಯಾಗಿ ತಮ್ಮ “ಪಪ್ಪು” ಇಮೇಜ್ ಅನ್ನು ತೊರೆದು ರಾಷ್ಟ್ರೀಯ ಮನ್ನಣೆಯನ್ನು ಗಳಿಸಿದರು. ಅವರನ್ನು ಸಂಸತ್ತಿನಿಂದ ಉಚ್ಚಾಟಿಸಿದ ಬಿಜೆಪಿ ಬಹುಶಃ ಅವರ ಮತ್ತು ಕಾಂಗ್ರೆಸ್ ಪರವಾಗಿ ಕಾರ್ಯನಿರ್ವಹಿಸಿತು ಎನಿಸುತ್ತದೆ. ಏಕೆಂದರೆ ಹೆಚ್ಚಿನ ಸಂಖ್ಯೆಯ ಮತದಾರರು ಏನೇ ಆಗಿದ್ದರೂ,  ಮೂರ್ಖರೇನು ಆಗಿರುವುದಿಲ್ಲ. ರಾಹುಲ್‌ ಗಾಂಧಿ ನರೇಂದ್ರ ಮೋದಿಗೆ ವಿಶ್ವಾಸಾರ್ಹ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮುವ ಲಕ್ಷಣಗಳೂ ನಿಚ್ಚಳವಾಗಿವೆ. ಭಾರತ್‌ ಜೋಡೋ ಯಾತ್ರೆಯ ಮಾರ್ಗದಲ್ಲಿದ್ದ ಕರ್ನಾಟಕದ ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹೆಚ್ಚಿನ ಮತಗಳನ್ನು ಗಳಿಸಿರುವುದಕ್ಕೆ ರಾಹುಲ್ ಗಾಂಧಿಯವರ ಪ್ರಭಾವವೇ ಕಾರಣ ಎನ್ನಲಾಗುತ್ತಿದೆ.

ಇದಲ್ಲದೆ, 24 ವರ್ಷಗಳ ನಂತರ, ಮಲ್ಲಿಕಾರ್ಜುನ ಖರ್ಗೆ ಅವರಲ್ಲಿ ಕಾಂಗ್ರೆಸ್ ಪಕ್ಷವು ಗಾಂಧಿ ಕುಟುಂಬದಿಂದ ಹೊರಗಿನ ಚುನಾಯಿತ ಅಧ್ಯಕ್ಷರನ್ನು ಹೊಂದಿದೆ. ಖರ್ಗೆ ಅವರು ತಮ್ಮ ಸುದೀರ್ಘ ಅನುಭವ ಮತ್ತು ಕರ್ನಾಟಕದಲ್ಲಿ ಅವರ ಪ್ರಶ್ನಾತೀತ ರಾಜಕೀಯ ಸ್ಥಾನಮಾನವನ್ನು 2023 ರ ಕರ್ನಾಟಕ ಫಲಿತಾಂಶದಲ್ಲಿ ಪ್ರತಿಫಲಿಸುವಂತೆ ಮಾಡಿದ್ದಾರೆ. ಇದರಲ್ಲಿ ಗಾಂಧಿ ಕುಟುಂಬವನ್ನು ಪರಿಣಾಮಕಾರಿಯಾಗಿ ಮುಖ್ಯ ವೇದಿಕೆಗಳಿಂದ ದೂರವಿಡಲಾಯಿತು. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲು ಪೈಪೋಟಿ ನಡೆಸುತ್ತಿದ್ದ ಸೂಕ್ಷ್ಮ ಸಮರ್ಪಕವಾಗಿ ಬಗೆಹರಿಸುವಲ್ಲಿ ಖರ್ಗೆ ಯಶಸ್ವಿಯಾಗಿದ್ದಾರೆ.

ರಾಷ್ಟ್ರೀಯ ಚಿತ್ರಣ

ಮನಮೋಹನ್ ಸಿಂಗ್ ಅವರ ಯುಪಿಎ ಸರ್ಕಾರವು ಆರ್ಥಿಕ ಬೆಳವಣಿಗೆಯನ್ನು ಕೇಂದ್ರೀಕರಿಸಿ 12 ನೇ ಪಂಚವಾರ್ಷಿಕ ಯೋಜನೆಯನ್ನು ರೂಪಿಸಿತು ಮತ್ತು ಬಡತನ ನಿರ್ಮೂಲನೆಯನ್ನು ಕೈಬಿಟ್ಟಿತು, ಇದು ಹಿಂದಿನ ಎಲ್ಲಾ ಯೋಜನೆಗಳ ಮುಂದುವರೆದ ಭಾಗವಾಗಿತ್ತು. ಮನಮೋಹನ್ ಸಿಂಗ್ ಅವರು ಹಣಕಾಸು ಸಚಿವರಾಗಿದ್ದಾಗ, 1991 ರ ಸುಧಾರಣೆಗಳೊಂದಿಗೆ ಭಾರತೀಯ ನೀತಿ ನಿರೂಪಣೆಯಲ್ಲಿ ‘ಟ್ರಿಕಲ್-ಡೌನ್ ಅರ್ಥಶಾಸ್ತ್ರ’ವನ್ನು ಪರಿಚಯಿಸಿದರು. 1991ರ ಆರ್ಥಿಕ ಸುಧಾರಣೆಗಳ ನಂತರ ಸತತ ಕೇಂದ್ರ ಸರ್ಕಾರಗಳ ಕಾನೂನುಗಳು ಮತ್ತು ಆಡಳಿತ ನೀತಿಗಳು ಕಾರ್ಪೊರೇಟ್ ಪರವಾಗಿವೆ ಮತ್ತು ಉದ್ಯೋಗ ಖಾತರಿ ಯೋಜನೆ (MNREGA) ಮತ್ತು ಮಾಹಿತಿ ಹಕ್ಕು ಕಾಯ್ದೆಗಳನ್ನು ಹೊರತುಪಡಿಸಿ, ಸಾಮಾಜಿಕ-ಆರ್ಥಿಕ ಪಿರಮಿಡ್ಡಿನ ಕೆಳಭಾಗದಲ್ಲಿರುವ ಜನರ ವಿರುದ್ಧ ಹೊರೆಯಾಗಿವೆ. ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರವನ್ನು ‘ಯುಪಿಎ ಪ್ಲಸ್ ಗೋವು ‘ ಎಂದು ಅರುಣ್ ಶೌರಿ ಬಣ್ಣಿಸಿದ್ದು, ಯುಪಿಎ ಮತ್ತು ಎನ್‌ಡಿಯ ಒಂದೇ ರೀತಿಯ ಆರ್ಥಿಕ ನೀತಿಗಳು ಮತ್ತು ಆಡಳಿತದ ವೈಫಲ್ಯಗಳನ್ನು ಹೊಂದಿವೆ ಎಂಬ ವಾಸ್ತವವನ್ನು ಬಹಿರಂಗಪಡಿಸಿದೆ.

ಕಳೆದ ಹಲವು ವರ್ಷಗಳಲ್ಲಿ, ರಾಜ್ಯ ಮತ್ತು ಕೇಂದ್ರ ಶಾಸಕಾಂಗಗಳ ಒಳಗೆ ಮತ್ತು ಹೊರಗಿನ ಎಲ್ಲಾ ರಾಜಕೀಯ ಪಕ್ಷಗಳ ಚುನಾಯಿತ ಪ್ರತಿನಿಧಿಗಳ ರಾಜಕೀಯ ಸಂಸ್ಕೃತಿ ಮತ್ತು ನಡವಳಿಕೆ ಹದಗೆಟ್ಟಿದೆ. ಸೋಮನಾಥ್ ಚಟರ್ಜಿ ಬಹುಶಃ ಬಾಧ್ಯತೆ ಹಾಗೂ ವಿಶ್ವಾಸಾರ್ಹತೆಯೊಂದಿಗೆ ಸದನ ಕಲಾಪಗಳನ್ನು ನಿರ್ವಹಿಸಿದ ಕೊನೆಯ ಲೋಕಸಭಾ ಸ್ಪೀಕರ್ (2004-2009) ಎಂದು ಹೇಳಬಹುದು. ರಾಜ್ಯ ವಿಧಾನಸಭೆಯ ಸ್ಪೀಕರ್ ಅನ್ನು ಚಟರ್ಜಿ ಸಾಮರ್ಥ್ಯಕ್ಕೆ ಹೋಲಿಕೆ ಮಾಡಿ ಗುರುತಿಸುವುದು ಕಷ್ಟವಾಗಬಹುದು. ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ಶಾಸಕರ ಖರೀದಿ ಮತ್ತು ಮಾರಾಟ ಮತ್ತು ಬಹುತೇಕ ಶಾಸಕಾಂಗಗಳ ನಿಷ್ಕ್ರಿಯತೆಯೊಂದಿಗೆ “ರೆಸಾರ್ಟ್ ರಾಜಕೀಯ” ಜನರನ್ನು ಎಚ್ಚರಿಸಿದೆ ಮತ್ತು  ಜನರಲ್ಲಿ ಜುಗುಪ್ಸೆ ಮೂಡಿಸಿದೆ. ಇವೆಲ್ಲವೂ ಕರ್ನಾಟಕದ ಜನರು ಆಯ್ಕೆ ಮಾಡಿದ ಹೊಸ ಸರ್ಕಾರಕ್ಕೆ ಪಾರದರ್ಶಕತೆ ಮತ್ತು ಉತ್ತರದಾಯಿತ್ವದೊಂದಿಗೆ ಆಡಳಿತ ನಡೆಸಲು ಮತ್ತು ತನ್ನ ಗಮನವನ್ನು ಜನಾಧಾರಿತ ನೀತಿಗಳು ಮತ್ತು ಕ್ರಮಗಳತ್ತ ಹರಿಸಿ  ಮತ್ತು ಕಾಂಗ್ರೆಸ್‌ ಪಕ್ಷದ  ಕಾರ್ಪೊರೇಟ್ ಪರ ನೀತಿಯಿಂದ ದೂರವಿರಿಸಲು ಒಂದು ಅವಕಾಶವನ್ನು ಒದಗಿಸುತ್ತದೆ.

ಕಾಂಗ್ರೆಸ್‌ ಪಕ್ಷದ ಮುಂದಿರುವ ದಾರಿ

ಅನ್ನ ಸೂರು ಮತ್ತು ಬಟ್ಟೆ ಹಾಗೂ ಉದ್ಯೋಗ ಸೃಷ್ಟಿ, ಇದರೊಟ್ಟಿಗೆ ಯುವಕರು, ಮಹಿಳೆಯರು ಮತ್ತು ತೃತೀಯ ಲಿಂಗಿಗಳಿಗೆ ಅನುಕೂಲವಾಗುವ ಕಾರ್ಯಕ್ರಮಗಳತ್ತ ಸಿದ್ದರಾಮಯ್ಯ ಸರ್ಕಾರ ಗಮನ ಹರಿಸಬೇಕಿದೆ.

ಬೀದಿ ಬದಿ ವ್ಯಾಪಾರಿಗಳ (ಜೀವನೋಪಾಯದ ರಕ್ಷಣೆ ಮತ್ತು ಬೀದಿ ಬದಿ ವ್ಯಾಪಾರಿಗಳ ನಿಯಂತ್ರಣ) ಕಾಯ್ದೆ, 2014 ಯಂತಹ ಜನಸ್ನೇಹಿ ಶಾಸನಗಳನ್ನು ಪ್ರಾಮಾಣಿಕವಾಗಿ ಜಾರಿಗೆ ತರುವ ಮೂಲಕ ಇದು ತನ್ನ ನಗರ ಮತದಾರರ ಸ್ಥಿತಿಗತಿಗಳನ್ನು ಉತ್ತಮಪಡಿಸಬಹುದು. ಜನರ ಮೂಲಭೂತ ಹಕ್ಕುಗಳು ಅಥವಾ ಸಾಂಸ್ಕೃತಿಕ ಅಭಿವ್ಯಕ್ತಿಯನ್ನು ಸಂಕುಚಿತಗೊಳಿಸುವ ಇತ್ತೀಚಿನ ಶಾಸನಗಳು, ನಿಯಮಗಳು, ಅಧಿಸೂಚನೆಗಳು ಮತ್ತು ಆದೇಶಗಳನ್ನು ವಿಮರ್ಶಾತ್ಮಕವಾಗಿ ಮರುಪರಿಶೀಲಿಸುವ ಮೂಲಕ ಕಾಂಗ್ರೆಸ್ ಇವುಗಳ ಸಾಂವಿಧಾನಿಕತೆಯನ್ನು ಪರಿಹರಿಸಬೇಕು ಮತ್ತು ವಿಧಾನಸಭೆಯಲ್ಲಿ ಚರ್ಚೆಯ ನಂತರ ಅವುಗಳನ್ನು ರದ್ದುಗೊಳಿಸಬೇಕು ಅಥವಾ ತಿದ್ದುಪಡಿ ಮಾಡಬೇಕು.

ದ್ವೇಷ ಭಾಷಣ ಮಾಡುವ ಅಥವಾ ಹಿಂಸಾಚಾರವನ್ನು ಪ್ರಚೋದಿಸುವ ಶಾಸಕರ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳಲು ಕಾರ್ಯವಿಧಾನವನ್ನು ರೂಪಿಸಲು ಸರ್ಕಾರವು ಶಾಸಕಾಂಗ ಹಕ್ಕುಬಾಧ್ಯತಾ ಸಮಿತಿಗೆ ಅಧಿಕಾರ ನೀಡಬೇಕು. ಶಾಂತಿಯುತ ಪ್ರತಿಭಟನೆಗಳನ್ನು ನಡೆಸುವ ಜನರ ಮೂಲಭೂತ ಹಕ್ಕನ್ನು ಮೊಟಕುಗೊಳಿಸುವ “ ಪ್ರತಿಭಟನೆಗಳು, ಪ್ರದರ್ಶನಗಳು ಮತ್ತು ಪ್ರತಿಭಟನಾ ಮೆರವಣಿಗೆಗಳ (ಬೆಂಗಳೂರು ನಗರ) ಪರವಾನಗಿ ಮತ್ತು ನಿಯಂತ್ರಣ (ಬೆಂಗಳೂರು ನಗರ) ಆದೇಶ, 2021”ದ ವಿರುದ್ಧ ಕರ್ನಾಟಕ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬೇಕು. ಹೊಸ ಕಾಂಗ್ರೆಸ್ ಸರ್ಕಾರವು ತನ್ನ ಚುನಾವಣಾ ಭರವಸೆಗಳನ್ನು ಹೇಗೆ ಈಡೇರಿಸುತ್ತದೆ ಎಂಬುದನ್ನು ನೋಡಲು ಮತ ಚಲಾಯಿಸಿದ ಸುಮಾರು 43% ಮತದಾರರು ಮತ್ತು ಇತರ ಕಾರಣಗಳಿಗಾಗಿ ಉಳಿದ ಮತದಾರರು ಅದನ್ನು ಗಮನಿಸುತ್ತಿರುತ್ತಾರೆ. ಹೀಗಾಗಿ ಕಾಂಗ್ರೆಸ್‌ ಪಕ್ಷವು ಹಿತಕರ ಬಹುಮತ ಹೊಂದಿದ್ದರೂ ಬಲವಾದ ವಿರೋಧವನ್ನೂ ಎದುರಿಸುತ್ತಿದೆ.

ಸಂವಿಧಾನವು ಆಲೋಚನೆ, ಅಭಿವ್ಯಕ್ತಿ, ಶ್ರದ್ಧೆ, ನಂಬಿಕೆ ಮತ್ತು ಆರಾಧನೆಯ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ, ಆದರೆ ಜನತೆಯ ಕನಸುಗಳನ್ನು ಉಲ್ಲೇಖಿಸುವುದಿಲ್ಲ. ಕರ್ನಾಟಕ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ಸರ್ಕಾರದಿಂದ ಆರಂಭವಾಗಿ ಇಂದಿನ ಕಾಂಗ್ರೆಸ್-ಹೊಸ ಆಡಳಿತವು ಜನಸಾಮಾನ್ಯರ ನಡುವೆ ಭ್ರಾತೃತ್ವವನ್ನು ಖಾತರಿಪಡಿಸುತ್ತದೆ ಹಾಗೂ ಇದರಿಂದ ‘ನ್ಯಾಯ, ಸ್ವಾತಂತ್ರ್ಯ ಮತ್ತು ಸಮಾನತೆ’ ಸಾಕಾರಗೊಳ್ಳುತ್ತದೆ ಎಂದು ಕನಸು ಕಾಣುವವರು ಅಪಾರ ಸಂಖ್ಯೆಯಲ್ಲಿದ್ದಾರೆ. 2023ರ ಕರ್ನಾಟಕದ ಚುನಾವಣೆಗಳು ಭಾರತದ ಅತ್ಯಂತ ಹಳೆಯ ಪಕ್ಷಕ್ಕೆ  ಭವಿಷ್ಯದ ಭಾರತಕ್ಕೆ ಒಂದು ಪ್ರಮುಖ ದಿಕ್ಸೂಚಿಯಾಗಬಹುದು.

-೦-೦-೦-೦-

 

 

Donate Janashakthi Media

Leave a Reply

Your email address will not be published. Required fields are marked *