ದೃಶ್ಯ ಮಾಧ್ಯಮಗಳು ಸುದ್ದಿ ರೋಚಕತೆಯ ಸ್ಪರ್ಧೆಗೆ ಇಳಿದಿವೆ: ಸರ್ವೋಚ್ಚ ನ್ಯಾಯಾಲಯ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ದೃಶ್ಯ ಮಾಧ್ಯಮಗಳು ತಮ್ಮ ವಾಹಿನಿಯ ಟಿಆರ್‌ಪಿಗಾಗಿ ಸ್ಪರ್ಧೆಗೆ ಇಳಿದಿದ್ದು, ರೋಚಕತೆಯ ಈಡಾಗಿದೆ. ಅಲ್ಲದೆ, ಸಮಾಜವನ್ನು ಇಬ್ಭಾಗ ಮಾಡುತ್ತಿವೆ. ದ್ವೇಷ ಭಾಷಣ ಬಿತ್ತುವ ಅಜೆಂಡಾಗಳಲ್ಲಿ ಟಿ.ವಿ ನಿರೂಪಕರೂ ಭಾಗಿಯಾಗಿರುವುದು ಅಚ್ಚರಿ ಉಂಟುಮಾಡಿದೆ ಎಂದು ಸರ್ವೋಚ್ಚ ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.

ದ್ವೇಷ ಭಾಷೆ ಪ್ರಕರಣಗಳ ಕುರಿತು ಕ್ರಮ ಕೈಗೊಳ್ಳುವಂತೆ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ ಎಂ ಜೋಸೆಫ್‌ ಮತ್ತು ನ್ಯಾಯಮೂರ್ತಿ ಬಿ ವಿ ನಾಗರತ್ನ ಅವರನ್ನೊಳಗೊಂಡ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ಇದನ್ನು ಓದಿ: ದ್ವೇಷ ಭಾಷಣ ಮತ್ತು ಹಿಂಸಾಚಾರದ ನಡುವಿನ ಕೊಂಡಿಯನ್ನು ಗುರುತಿಸಿದ ಸುಪ್ರಿಂ ಕೋರ್ಟ್ ಟಿಪ್ಪಣಿಗಳು

ವಾಸ್ತವವಾಗಿ ಸುದ್ದಿ ವಾಹಿನಿಗಳು ಪ್ರತಿಸ್ಪರ್ಧೆಗಿಳಿದಿವೆ. ಅವುಗಳು ರೂಚಕತೆಗೊಳಿಸಲು ಸದಾ ಮುಂದಾಗಿದ್ದಾರೆ. ಇದನ್ನು ಹೇಗೆ ನಿಯಂತ್ರಿಸುವಿರಿ? ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಮುಖ್ಯ. ಸ್ವಾತಂತ್ರ್ಯದ ಸಮಸ್ಯೆ ಏನೆಂದರೆ ಅದು ವೀಕ್ಷಕರಿಗೆ ಸಂಬಂಧಿಸಿರುವುದು. ಜನರಿಗೆ ವಾಹಿನಿಗಳ ಕಾರ್ಯಸೂಚಿ ಅರಿವಾಗಬಲ್ಲದೇ ಎಂಬ ಪ್ರಶ್ನೆಯೂ ಇದೆ. ತಮ್ಮ ಹೂಡಿಕೆದಾರರ ಮೂಗಿನ ನೇರಕ್ಕೆ ನಡೆಯುತ್ತಿದ್ದು, ಭಾರತದಲ್ಲಿ ವಿಭಜನೆ ಉಂಟು ಮಾಡುತ್ತಿವೆ ಎಂದು ನ್ಯಾ. ಜೋಸೆಫ್‌ ವಿಚಾರಣೆ ಸಂದರ್ಭದಲ್ಲಿ ತಿಳಿಸಿದರು.

ದೇಶದಲ್ಲಿ ದ್ವೇಷ ಭಾಷಣವು ಅತ್ಯಂತ ಅಪಾಯಕಾರಿಯಾದದ್ದು, ಮುಕ್ತ ಮತ್ತು ಸಮತೋಲಿತ ವರದಿ ಬಿತ್ತರಿಸುವ ಮಾಧ್ಯಮಗಳು ಬೇಕಾಗಿವೆ. ಮುದ್ರಣ ಮಾಧ್ಯಮಗಳಂತೆ ದೃಶ್ಯ ಮಾಧ್ಯಮಗಳಿಗೆ ‘ಪ್ರೆಸ್‌ ಕೌನ್ಸಿಲ್‌ ಆಫ್‌ ಇಂಡಿಯಾ’ ಏಕಿಲ್ಲ ಎಂದು ನ್ಯಾಯಪೀಠ ಪ್ರಶ್ನಿಸಿತು.

ಕೇಂದ್ರ ಸರ್ಕಾರದ ಪರ ಹಾಜರಿದ್ದ ಹಿರಿಯ ವಕೀಲ ಕೆ ಎಂ ನಟರಾಜ್‌, ದ್ವೇಷ ಭಾಷಣ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರವು ಅಪರಾಧ ದಂಡ ಪ್ರಕ್ರಿಯಾ ಸಂಹಿತೆಗೆ (ಸಿಆರ್‌ಪಿಸಿ) ಸಮಗ್ರ ತಿದ್ದುಪಡಿಗಳನ್ನು ತರುವ ಯೋಜನೆಯನ್ನು ಹೊಂದಿದೆ ಎಂದರು.

ಇದನ್ನು ಓದಿ: ದ್ವೇಷ ಭಾಷಣಗಳನ್ನು ಮುಖ್ಯವಾಹಿನಿಗೆ ತಂದವರು ತಪ್ಪಿಸಿಕೊಳ್ಳಲು ಬಿಡಬೇಕೇ?

ವಿಚಾರಣೆ ಹಂತದಲ್ಲಿ ಸುದ್ದಿ ಪ್ರಸಾರ ಗುಣಮಟ್ಟ ಪ್ರಾಧಿಕಾರ ಪರವಾಗಿ ಹಾಜರಿದ್ದ ವಕೀಲರನ್ನು ನ್ಯಾಯಪೀಠ ದುರದೃಷ್ಟಕರವೆಂದರೆ ನೀವು ಏನನ್ನೂ ಮಾಡುತ್ತಿಲ್ಲ” ಎಂದಿತು. ಇದಕ್ಕೆ ಎನ್‌ಬಿಎಸ್‌ಎ ಪರ ವಕೀಲರು “ಸುದರ್ಶನ್‌ ಟಿವಿ ಮತ್ತು ರಿಪಬ್ಲಿಕ್‌ ಟಿವಿಯು ನಮ್ಮ ನೆಟ್‌ವರ್ಕ್‌ ಭಾಗವಾಗಿಲ್ಲ. ಹೀಗಾಗಿ, ಅವರು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ನಮ್ಮ ಸಂಹಿತೆಯನ್ನು ಕಾರ್ಯಕ್ರಮದ ಸಂಹಿತೆಯ ಭಾಗವಾಗಿಸಬೇಕು. ಆಗ ಮಾತ್ರ ಇದು ಎಲ್ಲರಿಗೂ ಅನ್ವಯವಾಗುತ್ತದೆ” ಎಂದರು.

ಟಿವಿ ಕಾರ್ಯಕ್ರಮಗಳ ಭಾಗವಾದ ಸುದ್ದಿ ನಿರೂಪಕರೇ ಸಮಸ್ಯೆಯಾದರೆ ಏನು ಮಾಡುವುದು. ಎನ್‌ಬಿಎಸ್‌ಎ ಪಕ್ಷಪಾತಿಯಾಗಬಾರದು. ಏಕಮುಖ ಕಾರ್ಯಕ್ರಮ ಪ್ರಸಾರ ಮಾಡಬಾರದು‌ ಎಂದು ತಿಳಿಸಿರುವ ನ್ಯಾಯಪೀಠ, ಸುದ್ದಿ ನಿರೂಪಕರಿಗೆ ದಂಡ ವಿಧಿಸುವಂತಾದರೆ, ತಾವು ದಂಡ ತೆರಬೇಕಾಗುತ್ತದೆ ಎಂಬ ಅರಿವು ಅವರಿಗೆ ಆಗುತ್ತದೆ. ಸುದ್ದಿ ನಿರೂಪಕರನ್ನು ಸುದ್ದಿ ಪ್ರಸಾರದಿಂದ ಹೊರಗಿಡುವ ಬಗ್ಗೆಯೂ ಆಲೋಚಿಸಬಹುದು ಎಂದು ಪೀಠ ಹೇಳಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *