ಉಕ್ರೇನಿನಲ್ಲಿ ಯುದ್ಧದ ಅಪಾಯ ?

– ವಸಂತರಾಜ ಎನ್.ಕೆ

ಉಕ್ರೇನಿನಲ್ಲಿ ರಶ್ಯಾ ಪಡೆಗಳನ್ನು ಜಮಾಯಿಸಿದೆ, ಉಕ್ರೇನ್ ವಶಪಡಿಸಿಕೊಳ್ಳಲು ರಶ್ಯಾ ಹವಣಿಸುತ್ತಿದೆ ಎಂದು ಅಮೆರಿಕದ ಸರಕಾರ ಮತ್ತು ಮಾಧ್ಯಮಗಳು ಹುಯಿಲೆಬ್ಬಿಸುತ್ತಿವೆ. ರಶ್ಯಾ ಆಕ್ರಾಮಕ ನೀತಿಗಳನ್ನು ಅನುಸರಿಸುತ್ತಿದೆ ಎಂದು ಆಪಾದಿಸುತ್ತಾ ಅಮೆರಿಕ ಸಹ ಯುದ್ಧ ನೌಕೆ, ಪಡೆಗಳು, ಶಸ್ತ್ರಾಸ್ತ್ರ ಗಳನ್ನು ಉಕ್ರೇನಿಗೆ ಸಾಗಿಸುತ್ತಿದೆ. ರಶ್ಯಾ ಉಕ್ರೇನನ್ನು ಆಕ್ರಮಿಸಿದರೆ ಅದಕ್ಕೆ ತಕ್ಕ ಬುದ್ಧಿ ಕಲಿಸಲಾಗುವುದು ಎಂಬ ಬೆದರಿಕೆಯನ್ನು ಸಹ ಅಮೆರಿಕ ಹಾಕಿದೆ. ಜರ್ಮನ್ ಏಕೀಕರಣ ಒಪ್ಪಂದದಲ್ಲಿ ಕೊಟ್ಟ ಮಾತಿಗೆ ತಪ್ಪಿ ಪೂರ್ವ ಯುರೋಪಿನಲ್ಲಿ ನಾಟೋ ಕೂಟವನ್ನು ವಿಸ್ತರಿಸಲಾಗಿದೆ. ಉಕ್ರೇನ್ ಎಂದೂ ನಾಟೋ ಮಿಲಿಟರಿ ಕೂಟ ಸೇರುವುದಿಲ್ಲ ಎಂಬುದರ ಬಗ್ಗೆ ನಾಟೋ ಮತ್ತು ಉಕ್ರೇನ್ ರಶ್ಯಾಕ್ಕೆ ಖಾತ್ರಿ ಕೊಡಬೇಕು. ಎಂಬುದು ರಶ್ಯನ್ ಆಗ್ರಹ. ಈ ನಡುವೆ ಯುದ್ಧದ ಅಪಾಯ ತಪ್ಪಿಸಲು ಮಾತುಕತೆಗಳೂ ನಡೆದಿವೆ. ಈಗಿನ ಸಮಸ್ಯೆ ಏನು? ಇದು ಹೇಗೆ ಉದ್ಭವವಾಯಿತು? ಇದಕ್ಕೇನು ಪರಿಹಾರ ? ಎಂದು ತಿಳಿಯಬೇಕಾದರೆ ಹಲವು ದಶಕಗಳ ಹಿಂದಿನ ಚಾರಿತ್ರಿಕ ಅನುಭವಕ್ಕೆ ಹೋಗಬೇಕು.

ಉಕ್ರೇನಿನಲ್ಲಿ ರಶ್ಯಾ ಪಡೆಗಳನ್ನು ಜಮಾಯಿಸಿದೆ, ರಶ್ಯಾ ಉಕ್ರೇನ್ ವಶಪಡಿಸಿಕೊಳ್ಳಲು ಹವಣಿಸುತ್ತಿದೆ ಎಂದು ಅಮೆರಿಕದ ಸರಕಾರ ಮತ್ತು ಮಾಧ್ಯಮಗಳು ಹುಯಿಲೆಬ್ಬಿಸುತ್ತಿವೆ. ಯುರೋಪಿನ ಕೆಲವು ಸರಕಾರಗಳು ಮತ್ತು ಮಾಧ್ಯಮಗಳೂ ಇದಕ್ಕೆ ಸಾಥ್ ನೀಡುತ್ತಿವೆ. ರಶ್ಯಾ ಆಕ್ರಾಮಕ ನೀತಿಗಳನ್ನು ಅನುಸರಿಸುತ್ತಿದೆ ಎಂದು ಆಪಾದಿಸುತ್ತಾ ಅಮೆರಿಕ ಸಹ ಯುದ್ಧ ನೌಕೆ, ಪಡೆಗಳು, ಶಸ್ತ್ರಾಸ್ತ್ರ ಗಳನ್ನು ಉಕ್ರೇನಿಗೆ ಸಾಗಿಸುತ್ತಿದೆ. ರಶ್ಯಾ ಉಕ್ರೇನನ್ನು ಆಕ್ರಮಿಸಿದರೆ ಅದಕ್ಕೆ ತಕ್ಕ ಬುದ್ಧಿ ಕಲಿಸಲಾಗುವುದು ಎಂಬ ಬೆದರಿಕೆಯನ್ನು ಸಹ ಅಮೆರಿಕ ಹಾಕಿದೆ. ಜರ್ಮನ್ ಏಕೀಕರಣ ಒಪ್ಪಂದದಲ್ಲಿ ಕೊಟ್ಟ ಮಾತಿಗೆ ತಪ್ಪಿ ಪೂರ್ವ ಯುರೋಪಿನಲ್ಲಿ ನಾಟೋ ಕೂಟವನ್ನು ವಿಸ್ತರಿಸಲಾಗಿದೆ. ಉಕ್ರೇನ್ ಎಂದೂ ನಾಟೋ ಮಿಲಿಟರಿ ಕೂಟ ಸೇರುವುದಿಲ್ಲ ಎಂಬುದರ ಬಗ್ಗೆ ನಾಟೋ ಮತ್ತು ಉಕ್ರೇನ್ ರಶ್ಯಾಕ್ಕೆ ಖಾತ್ರಿ ಕೊಡಬೇಕು. ಎಂಬುದು ರಶ್ಯನ್ ಆಗ್ರಹ. ಈ ನಡುವೆ ಯುದ್ಧದ ಅಪಾಯ ತಪ್ಪಿಸಲು ಮಾತುಕತೆಗಳೂ ನಡೆದಿವೆ. ಅಧ್ಯಕ್ಷ ಬಿಡೆನ್ ಮತ್ತು ಪುಟಿನ್ ನಡುವೆ ಜಿನಿವಾದಲ್ಲಿ ಮಾತುಕತೆಗಳು ನಡೆದಿವೆ. ಎರಡೂ ದೇಶಗಳ ವಿದೇಶಾಂಗ ಸಚಿವರುಗಳು ಮಾತನಾಡಿದ್ದಾರೆ. ಸದ್ಯ “ನಾರ್ಮಂಡಿ ಥರದ” (ಫ್ರಾ ನ್ಸ್, ಜರ್ಮನಿ, ಉಕ್ರೇನ್, ರಶ್ಯಾ) ಉನ್ನತ ಅಧಿಕಾರಿಗಳ ಮಾತುಕತೆ ನಡೆಯುತ್ತಿದೆ. ಜಿನಿವಾ ಮಾತುಕತೆಗಳಲ್ಲಿ ನಿರ್ಧರಿಸಿದಂತೆ ಪ್ರತಿ ಪಕ್ಷ ಸಮಸ್ಯೆ ಪರಿಹಾರಕ್ಕೆ ಏನನ್ನು ಸೂಚಿಸುತ್ತದೆ ಎಂಬ ಲಿಖಿತ ಸೂಚನೆಗಳ ವಿನಿಮಯ, ಅದರ ಮೇಲೆ ಆಂತರಿಕ ಚರ್ಚೆ, ಉತ್ತರ ಇತ್ಯಾದಿ ಪ್ರತಿಕ್ರಿಯೆ ನಡೆಯುತ್ತಿದೆ. ಈಗಿನ ಸಮಸ್ಯೆ ಏನು? ಇದು ಹೇಗೆ ಉದ್ಭವವಾಯಿತು? ಇದಕ್ಕೇನು ಪರಿಹಾರ ? ಎಂದು ತಿಳಿಯಬೇಕಾದರೆ ಹಲವು ದಶಕಗಳ ಹಿಂದಿನ ಚಾರಿತ್ರಿಕ ಅನುಭವಕ್ಕೆ ಹೋಗಬೇಕು.

ಉಕ್ರೇನ್ ಸಮಸ್ಯೆ ಹಿನ್ನೆಲೆ

ಉಕ್ರೇನ್ ಮಧ್ಯಕಾಲದಲ್ಲಿ ಹಲವು (ಆಸ್ಟ್ರೊ-ಹಂಗರಿಯನ್, ಒಟ್ಟೊಮಾನ್ ಇತ್ಯಾದಿ) ಸಾಮ್ರಾಜ್ಯಗಳ ಭಾಗವಾಗಿದ್ದು ಕೊನೆಗೆ ರಶ್ಯನ್ ಝಾರ್ ನ ಸಾಮ್ರಾಜ್ಯದ ಭಾಗವಾಗಿತ್ತು. ಅಕ್ಟೋಬರ್ ಮಹಾಕ್ರಾಂತಿಯ ಭಾಗವಾಗಿ ಝಾರ್ ಶಾಹಿಯಿಂದ ವಿಮೋಚನೆ ಹೊಂದಿ ಸ್ವತಂತ್ರ ಸೋವಿಯೆಟ್ ಸಮಾಜವಾದಿ ಗಣತಂತ್ರವಾಗಿತ್ತು. 1922ರಲ್ಲಿ ಅಂದರೆ ಸರಿಯಾಗಿ ನೂರು ವರ್ಷಗಳ ಹಿಂದೆ ರಶ್ಯನ್ ಮತ್ತು ಇತರ ಸಮಾಜವಾದಿ ಗಣತಂತ್ರಗಳ ಜತೆ ಸೇರಿ “ಸೋವಿಯೆಟ್ ಸಮಾಜವಾದಿ ಗಣತಂತ್ರಗಳ ಒಕ್ಕೂಟ” (ಯು.ಎಸ್.ಎಸ್.ಆರ್ ಅಥವಾ ಸಂಕ್ಷಿಪ್ತವಾಗಿ ಸೋವಿಯೆಟ್ ಯೂನಿಯನ್) ಸ್ಥಾಪಿಸಿಕೊಂಡಿತ್ತು. ಸೋವಿಯೆಟ್ ಯೂನಿಯನ್ ರಚನೆಯಾದಾಗ ಸೋವಿಯೆಟ್ ಗಣತಂತ್ರಗಳು ನಿರ್ದಿಷ್ಟ ರಾಷ್ಟ್ರೀಯತೆಯ ಆಧಾರದ ಮೇಲೆ ರಚಿಸಲಾಗಿದ್ದವು. ಸಹಜವಾಗಿಯೇ ನೆರೆಯ ಗಣತಂತ್ರಗಳ ರಾಷ್ಟ್ರೀಯತೆಗಳು ಕೆಲವು ಗಡಿ ಪ್ರದೇಶಗಳಲ್ಲಿ ದೊಡ್ಡ ಅಲ್ಪಸಂಖ್ಯಾೇತ ರಾಷ್ಟ್ರೀಯತೆಗಳಾಗಿರುತ್ತವೆ. ಸೋವಿಯೆಟ್ ಒಕ್ಕೂಟದ ಹಲವು ದಶಕಗಳ ಅಗಾಧ ಬೆಳವಣಿಗೆಗಳ ಭಾಗವಾಗಿ ವಿವಿಧ ರಾಷ್ಟ್ರೀಯತೆಯ ಜನ ಪರಸ್ಪರ ವಲಸೆ ಸಹ ಹೋಗಿದ್ದರು. ಹೀಗೆ ಯಾವುದೇ ಗಣತಂತ್ರದಲ್ಲಿ ಒಂದು ಬಹುಸಂಖ್ಯಾತ ಮತ್ತು ಹಲವು ಅಲ್ಪಸಂಖ್ಯಾತ ರಾಷ್ಟ್ರೀಯತೆಗಳು ಇರುವುದು ಸಾಮಾನ್ಯವಾಗಿತ್ತು. ವಿಘಟನೆಯ ನಂತರ ಸ್ವತಂತ್ರವಾದ ಗಣತಂತ್ರಗಳೂ ಅದನ್ನೆ ಗಡಿಗಳಾಗಿ ಇಟ್ಟುಕೊಂಡದ್ದರಿಂದ ಈ ಪರಿಸ್ಥಿತಿ ಮುಂದುವರೆದಿತ್ತು. ಉಕ್ರೇನಿನ ಪಶ್ಚಿದಮ ಭಾಗದಲ್ಲಿ ಉಕ್ರೇನಿ ರಾಷ್ಟ್ರೀಯತೆಯ ಜನ ಇದ್ದರೆ, ರಶ್ಯನ್ ಭಾಗದೊಂದಿಗೆ ಹತ್ತಿರದ ಸಂಪರ್ಕ ಮತ್ತು ಶತಮಾನಗಳ ಕೊಡು-ಕೊಳ್ಳುವಿಕೆ ಹೊಂದಿದ್ದ ಪೂರ್ವ ಭಾಗದಲ್ಲಿ ರಶ್ಯೇನ್ ರಾಷ್ಟ್ರೀಯತೆಯ ಜನ ಬಹುಸಂಖ್ಯೆಯಲ್ಲಿದ್ದರು.

1991ರಲ್ಲಿ ನಡೆದ ಸೋವಿಯೆಟ್ ಒಕ್ಕೂಟದ ವಿಘಟನೆಯ ಹಿಂದೆ, ಕೆಲವು ಆಂತರಿಕ ಪ್ರಕ್ರಿಯೆಗಳ ಜತೆ ಅವುಗಳನ್ನು ಉತ್ತೇಜಿಸಲು ಪ್ರಚೋದಿಸಲು ಕಾರಣವಾದ ಅಮೆರಿಕನ್ ಸಾಮ್ರಾಜ್ಯಶಾಹಿಯ ಕರಾಮತ್ತುಗಳೂ ಇದ್ದವು. ಮೊದಲು ಯುರೋಪಿಯನ್ ಮತ್ತು ಆ ಮೇಲೆ ಯುರೋಪಿಯನ್-ಅಮೆರಿಕನ್ ಸಾಮ್ರಾಜ್ಯಶಾಹಿಯ ಕೂಟವು, ಸೋವಿಯೆಟ್ ಯೂನಿಯನಿನ ಜನ್ಮದಿಂದ ಆರಂಭಿಸಿ ಅದರ ವಿಘಟನೆಗೆ ಪ್ರಯತ್ನಗಳನ್ನು ನಡೆಸುತ್ತಲೇ ಇದ್ದವು. ಇದು ಉಕ್ರೇನ್ ಕುರಿತೂ ನಿಜವಾಗಿತ್ತು. ಇದರಲ್ಲಿ ಸೋವಿಯೆಟ್ ಒಕ್ಕೂಟದ ಕುರಿತು ರೇಡಿಯೊ ಲಿಬರ್ಟಿಯ ಸತತ ಅಪಪ್ರಚಾರಗಳು ಅದರ ಮುಖ್ಯ ಅಸ್ತ್ರಗಳಾಗಿದ್ದವು. ಝಾರ್ ಶಾಹಿಯಡಿಯಲ್ಲಿ ಧೀರ್ಘ ದಮನಕ್ಕೆ ಒಳಗಾಗಿದ್ದ ಅಲ್ಪಸಂಖ್ಯಾತ ರಾ಼ಷ್ಟ್ರೀಯತಾ ಭಾವನೆಗಳನ್ನು ಬಡಿದೆಬ್ಬಿಸುವುದು, ಉಕ್ರೇನಿಯನ್-ರಶ್ಯದನ್ ರ ನಡುವೆ ಸಂಘರ್ಷದ ವಾತಾವರಣ ಸೃಷ್ಟಿಸಲು ಪ್ರಯತ್ನಿಸುವುದು, ನಾಜಿ-ಬೆಂಬಲಿಗರು ಸೇರಿದಂತೆ ಸೋವಿಯೆಟ್-ವಿರೋಧಿ ರಾಜಕೀಯ ವಿರೋಧಿಗಳ ಮೇಲೆ ಸೋವಿಯೆಟ್ ಸರಕಾರದ ಕ್ರಮಗಳನ್ನು ಉಕ್ರೇನಿಯನ್ ರಾಷ್ಟ್ರೀಯತೆಯನ್ನು ರಶ್ಯನರು ದಮನಿಸುತ್ತಿದ್ದಾರೆಂದು ಬಿಂಬಿಸುವುದು, ಇಂತಹ ಕೆಲವು ರಾಜಕೀಯ ವಿರೋಧಿಗಳನ್ನು ಬಳಸಿ ಬುಡಮೇಲು ಕೃತ್ಯಗಳನ್ನು ನಡೆಸುವುದು – ಇತ್ಯಾದಿ ಅದರ ತಂತ್ರವಾಗಿತ್ತು. 1980ರ ದಶಕದ ಕೊನೆಯಲ್ಲಿ ಸೋವಿಯೆಟ್ ಒಕ್ಕೂಟದೊಳಗೆ ಎದ್ದ ತುಮುಲವನ್ನು ಪೂರ್ಣವಾಗಿ ಬಳಸಿಕೊಂಡು ಈ ಬುಡಮೇಲು ಕೃತ್ಯಗಳು ಮುಂದುವರೆದವು. ಸೋವಿಯೆಟ್ ವಿಘಟನೆಯ ನಂತರವೂ ಈ ಚಟುವಟಿಕೆಗಳೂ ಇನ್ನಷ್ಟು ರಭಸದಿಂದ ನಡೆದವು.

ಗೋರ್ಬಚೆವ್ ಪ್ರಮಾದಗಳು ಮೂಲಕಾರಣ

ಗೋರ್ಬಚೆವ್ 1980ರ ದಶಕದ ಕೊನೆಯಲ್ಲಿ ಅಮೆರಿಕನ್ ಸಾಮ್ರಾಜ್ಯಶಾಹಿ ಮತ್ತು ನಾಟೋ ಕೂಟದ ಜತೆ ಶಾಂತಿ ಸ್ಥಾಪಿಸಲು “ಶಾಂತಿ ಅಭಿಯಾನ”ದ ಏಕಪಕ್ಷೀಯ ಕ್ರಮಗಳ ಭರದಲ್ಲೋ, ಸಾಮ್ರಾಜ್ಯಶಾಹಿಯ ಒತ್ತಡದಲ್ಲೋ ಎರಡು ಪ್ರಮುಖ ಕ್ರಮಗಳನ್ನು ಘೋಷಿಸಿದರು. ಇವೆರಡೂ ಉಕ್ರೇನಿನ ಇಂದಿನ ಸಮಸ್ಯೆಗಳ ಮೂಲ. ಒಂದು ಪೂರ್ವ ಯುರೋಪಿನ ಮತ್ತು ಸೋವಿಯೆಟ್ ಒಕ್ಕೂಟದ ಸಮಾಜವಾದಿ ದೇಶಗಳ ಜಂಟಿ ಶಾಂತಿ- ಭದ್ರತೆಗಳಿಗೆ ಬದ್ಧವಾಗಿದ್ದ “ವಾರ್ಸಾ ಒಪ್ಪಂದ” ಮಿಲಿಟರಿ ಕೂಟವನ್ನು ಏಕಪಕ್ಷೀಯವಾಗಿ ಬರ್ಖಾಸ್ತು ಮಾಡಿದ್ದು. ಈ ಕ್ರಮದ ಮತ್ತು ಇದರ ನಂತರ ಪಶ್ಚಿಮ ಯುರೋಪಿನ ಜನರ ಒತ್ತಡದ ಫಲವಾಗಿ ನಾಟೋ ಮಿಲಿಟರಿ ಕೂಟ ಸಹ ಬರ್ಖಾಸ್ತು ಮಾಡಬೇಕಾಗುತ್ತದೆ ಎಂಬುದು ಅವರ ನಿರೀಕ್ಷೆಯಾಗಿತ್ತು. ಸಮಾಜವಾದಿ ದೇಶಗಳಲ್ಲಿ ಮತ್ತು ಜಾಗತಿಕ ಶಾಂತಿ ಚಳುವಳಿಯಲ್ಲೂ, ನಾಟೋ ಮಿಲಿಟರಿ ಕೂಟದ ಬರ್ಖಾಸ್ತು ಬಗ್ಗೆ ಗಟ್ಟಿ ಭರವಸೆಯಿಲ್ಲದೆ “ವಾರ್ಸಾ ಒಪ್ಪಂದ” ಬರ್ಖಾಸ್ತು ಶರಣಾಗತಿಯ ಕ್ರಮವಾಗುತ್ತದೆ ಎಂಬ ಸಂದೇಹ ಈ ಕ್ರಮಕ್ಕೆ ವ್ಯಕ್ತವಾಗಿದ್ದವು.
ಎರಡನೆಯದು ಜರ್ಮನಿಯ ಏಕೀಕರಣಕ್ಕೆ ಒಪ್ಪಿಕೊಂಡದ್ದು. ಈ ಒಪ್ಪಂದಕ್ಕೆ ಸಹಿ ಮಾಡುವ ಮೊದಲು ಅಮೆರಿಕನ್ ವಿದೇಶಾಂಗ ಸಚಿವ ಬೇಕರ್ ನಾಟೋ ಕೂಟ ಮತ್ತು ಅದರ ಪಡೆಗಳು ಈಗಿನ ‘ಗಡಿ ದಾಟಿ ಒಂದು ಇಂಚು’ ಸಹ ಮುಂದೆ ಬರುವುದಿಲ್ಲವೆಂದು ಗಟ್ಟಿ ಭರವಸೆ ನೀಡಿದ್ದರು ಎನ್ನಲಾಗಿದೆ. ಆಗ ಪಶ್ಚಿಮ ಜರ್ಮನಿಯ ಛಾನ್ಸಲರ್ ಆಗಿದ್ದ ಕೊಹ್ಲ್ ಈ ಮಾತುಕತೆಗಳಲ್ಲಿ, ಏಕೀಕೃತ ಜರ್ಮನಿ ಸಹ ತನ್ನ ಭಧ್ರತೆ ಕುರಿತು (ಪೂರ್ವ ಜರ್ಮನಿ ಸೇರಿದಂತೆ) ಎಲ್ಲರ ಅಭಿಪ್ರಾಯ ತೆಗೆದುಕೊಳ್ಳುವುದರಿಂದ ‘ನಾಟೋ’ ಬಿಡುವ ಸಾಧ್ಯತೆಯಿದೆ ಎಂದಿದ್ದರಂತೆ. ಗೊರ್ಬಚೇವ್ ಅವರನ್ನು ನಾಟೋ ನಾಯಕರು ಮಂಕುಗೊಳಿಸಿದ್ದರೋ, ಗೋರ್ಬಚೇವ್ ಸಮಾಜವಾದಿ ದೇಶಗಳ ಎಲ್ಲ ನಾಯಕರ ಜನರ ಕಣ್ಣಿಗೆ ಮಣ್ಣೆರಚಿದರೋ, ಒಟ್ಟಿನಲ್ಲಿ ಇವೆರಡು ಭರವಸೆಗಳು ಹುಸಿಯಾಗಿ, ಇಂದಿನ ಉಕ್ರೇನಿಯನ್ ಸಮಸ್ಯೆಗೆ ಕಾರಣವಾಗಿವೆ.

ಮೇಲಿನ ಭರವಸೆಗಳಿಗೆ ವಿರುದ್ಧವಾಗಿ ಯು.ಎಸ್ ಮತ್ತು ನಾಟೋ ಸೋವಿಯೆಟ್ ಒಕ್ಕೂಟದ ವಿಘಟನೆಯ ನಂತರ ಎಲ್ಲ ಪೂರ್ವ ಯುರೋಪಿನ್ ಮತ್ತು ಮಾಜಿ ಸೋವಿಯೆಟ್ ದೇಶಗಳಲ್ಲಿ ತಮಗೆ ಪರವಾದ ಸರಕಾರವನ್ನು ಅಧಿಕಾರಕ್ಕೆ ತರಲು ನೇರ ರಾಜಕೀಯ ಮಧ್ಯಪ್ರವೇಶ ಮಾಡತೊಡಗಿತು. ಅದಕ್ಕೆ ಭಾರೀ ಹಣ ಖರ್ಚು ಮಾಡಿ ಹಲವು ಸಂಘಟನೆಗಳನ್ನು ವ್ಯಕ್ತಿಗಳನ್ನು ಎತ್ತಿಕಟ್ಟಲಾರಂಭಿಸಿದವು. ಚುನಾವಣೆಗಳಲ್ಲಿ ತಮಗೆ ಪರವಾದವರು ಗೆಲ್ಲದಾಗ ಅಂತಹ ಚುನಾವಣೆ ಬೋಗಸ್ ಎಂದು ಜಾಗತಿಕ ಅಪಪ್ರಚಾರ ನಡೆಸಿದವು. ತಾವು ಬೆಳೆಸಿದ್ದ ಎಲ್ಲ ಬುಡಮೇಲು ಪರಿಕರಗಳನ್ನು ಬಳಸಿ ‘ಬಣ್ಣ ಬಣ್ಣದ (ಕ್ಷಿಪ್ರ) ಕ್ರಾಂತಿ’ಗಳನ್ನು ಸಂಘಟಿಸಿದವು. ಈ ತಂತ್ರ ಪೂರ್ವ ಯುರೋಪಿನಲ್ಲಿ ಮೊದಲು ಫಲ ಕೊಟ್ಟಿತು. ಬಲಪಂಥ ಅಧಿಕಾರಕ್ಕೆ ಬಂದ ದೇಶಗಳಲ್ಲಿ ಐ.ಎಂ.ಎಫ್/ವಿಶ್ವ ಬ್ಯಾಂಕ್ ಸಾಲದ, ಯುರೋ ಕೂಟದಲ್ಲಿ ಸೇರಿಸಿಕೊಳ್ಳುವ ಆಸೆ ತೋರಿಸಿ ನಾಟೋ ಕೂಟ ಕ್ಕೆ ಸೇರುವುದು ಅಜೆಂಡಾಕ್ಕೆ ಬರುವಂತೆ ಮಾಡಿದವು. ಕಳೆದ ಮೂರು ದಶಕಗಳಲ್ಲಿ 14 ದೇಶಗಳನ್ನು ( ಸರ್ಬಿಯಾ ಬಿಟ್ಟು ಎಲ್ಲ ಪೂರ್ವ ಯುರೋಪಿನ ಮಾಜಿ ಸಮಾಜವಾದಿ ಬಣದ ದೇಶಗಳು ಮತ್ತು ಮೂರು ಮಾಜಿ ಸೋವಿಯೆಟ್ ದೇಶಗಳು) ನಾಟೋ ಗೆ ಸೇರಿಸಿಕೊಳ್ಳಲಾಗಿದೆ. ಈ ದೇಶಗಳಲ್ಲಿ ನಾಟೋ ಪಡೆಗಳು ಅಣ್ವಸ್ತ್ರ ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಸ್ಥಾಪಿಸಲಾಗಿದೆ. ಇವೆಲ್ಲವೂ ರಶ್ಯಾದ ಪಶ್ಚಿಮ ಗಡಿಯಲ್ಲಿದ್ದು ರಶ್ಯಾಸವನ್ನು ಸುತ್ತುವರೆಯುವ ಯು,ಎಸ್ ಯೋಜನೆಯ ಭಾಗವಾಗಿದೆ ಎಂಬುದು ರಶ್ಯಾದ ವಾಸ್ತವಿಕ ಆತಂಕ.

ನಾಟೋದಲ್ಲೂ ತಳಮಳ

ಉಕ್ರೇನಿನಲ್ಲಿ ಯು.ಎಸ್ ಕೈಗೊಂಬೆ ಸರಕಾರ ಸ್ಥಾಪಿಸಿ ಈ ಸುತ್ತುವರೆಯವಿಕೆಯನ್ನು ಪೂರ್ಣಗೊಳಿಸುವ ಹುನ್ನಾರವನ್ನು ಮೊದಲಿನಿಂದಲೂ ಮಾಡಿದೆ. ಇದಕ್ಕಾಗಿ ಹಿಂದೆ ಸೂಚಿಸಿದ ಹಾಗೆ ಹಲವು ಪ್ರಯತ್ನಗಳನ್ನು ನಡೆಸಿತ್ತು. ಉಕ್ರೇನ್ ಮತ್ತು ರಶ್ಯಾ ನಡುವೆ ಘನಿಷ್ಟ ಸಂಬಂಧವಿದ್ದು 2014 ರ ವರೆಗೆ ಅವರಿಗೆ ಕೈಗೊಂಬೆ ಸರಕಾರ ಸ್ಥಾಪಿಸುವುದು ಸಾಧ್ಯನವಾಗಲಿಲ್ಲ. ಕೊನೆಗೂ ಆಗ ಉಕ್ರೇನಿನ ಚುನಾಯಿತ ಅಧ್ಯಕಕ್ಷನಾಗಿದ್ದ ಯಾಕುನೆವಿಚ್ ಅವರ ಸರಕಾರವನ್ನು ಕ್ಷಿಪ್ರಕ್ರಾಂತಿ ಮೂಲಕ ಉರುಳಿಸಿ ಬಲಪಂಥೀಯ ಉಗ್ರರಾಷ್ಟ್ರವಾದಿಗಳು ಮತ್ತು ನವ-ನಾಜಿ ಗುಂಪುಗಳನ್ನು ಅಧಿಕಾರಕ್ಕೆ ತರಲಾಯಿತು. ಆ ಅವಧಿಯಲ್ಲಿ ರಶ್ಯನ್ ಅಲ್ಪಸಂಖ್ಯಾಯತರ, ಅವರ ಹಕ್ಕುಗಳ ಮೇಲೆ ತೀವ್ರ ದಾಳಿಗಳು ನಡೆದವು. ಕಮ್ಯುನಿಸ್ಟ್ ಮತ್ತಿತರ ಪ್ರಜಾಸತ್ತಾತ್ಮಕ ವಿರೋಧ ಪಕ್ಷಗಳನ್ನು ದಮನ ಮಾಡಲಾಯಿತು. ರಶ್ಯನ್ ಅಲ್ಪಸಂಖ್ಯಾ್ತರು ದಾಳಿ ತಡೆಯಲಾರದೆ ರಶ್ಯ ಕಡೆ ನಿರಾಶ್ರಿತರಾಗಿ ಓಡಲು ಆರಂಭಿಸಿದರು. ಈ ಕಾರಣ ಮುಂದಿಟ್ಟು ರಶ್ಯನ್ ಪಡೆಗಳು ಕ್ರಿಮಿಯ ವನ್ನು ‘ವಿಮೋಚನೆ’ಗೊಳಿಸಿದವು. ದೊಂಬಾಸ್ ಪ್ರದೇಶದಲ್ಲಿ ಸ್ಥಳೀಯ ರಶ್ಯನ್ ಗೆರಿಲ್ಲಾ ಪಡೆಗಳ ಉಕ್ರೇನ್ ಸೈನ್ಯದ ವಿರುದ್ಧದ ಹೋರಾಟದಲ್ಲಿ ನೆರವು ನೀಡಿದವು.
ಆ ನಂತರ ಮಿನ್ಸ್ಕ್ ಒಪ್ಪಂದದಂತೆ ಕದನ ನಿಲುಗಡೆಯಾಯಿತು. 2019ರಲ್ಲಿ ಈ ಸರಕಾರ ಬಿದ್ದು ಹೋಗಿ ಝೆಲೆನ್ಸ್ಕಿ ಸರಕಾರ ಬಂದಿದ್ದು ಅದು ರಶ್ಯ ಮತ್ತು ನಾಟೋ ನಡುವೆ ಸಮಜಾಯಿಷಿ ನೀತಿಗೆ ಪ್ರಯತ್ನಿಸುತ್ತಿದೆ. ಆದರೆ ಯು.ಎಸ್ ಮಿಲಿಟರಿ ಸೇರಿದಂತೆ ಎಲ್ಲ ವಿಷಯಗಳಲ್ಲಿ ಹಿಂದಿನ ಸರಕಾರ ನೇಮಿಸಿದ ಸಲಹೆಗಾರರ ರೂಪದಲ್ಲಿ ಮೂಗು ತೂರಿಸುತ್ತಿದೆ. ಉಕ್ರೇನ್ ನಾಟೋದ ಭಾಗವಾಗಿ ಅತ್ಯಾಧುನಿಕ ಕ್ಷಿಪಣಿಗಳನ್ನು ರಶ್ಯಾ ಗಡಿಗಳಲ್ಲಿ ಸ್ಥಾಪಿಸಿದರೆ, ಮಾಸ್ಕೋ ವನ್ನು ಕ್ಷಿಪಣಿಗಳು ಕೇವಲ 5 ನಿಮಿಷದಲ್ಲಿ ಮುಟ್ಟಬಹುದು. ಇಷ್ಟು ಕಡಿಮೆ ಸಮಯದಲ್ಲಿ ಯಾವುದೇ ಪ್ರತಿದಾಳಿ ಅಥವಾ ರಕ್ಷಣೆ ಸಾಧ್ಯವಿಲ್ಲ. ಹಾಗಾಗಿ ಇದು ದೇಶದ ಭದ್ರತೆಯ ಪ್ರಶ್ನೆ. ಇದನ್ನು ಆಗಗೊಡುವುದಿಲ್ಲವೆಂಬುದು ರಶ್ಯಾದ ದೃಢ ನಿರ್ಧಾರ.

ಉಕ್ರೇನನ್ನು ಏನ ಕೇನ ಪ್ರಕಾರೇಣ ನಾಟೊ ಗೆ ಸೇರಿಸಿಕೊಳ್ಳುವ ಯು.ಎಸ್ ನ ಧೋರಣೆ ಪ್ರಮುಖ ಯುರೋ ದೇಶಗಳಾದ ಜರ್ಮನಿ, ಫ್ರಾನ್ಸ್ ಗಳಿಗೆ ಇಷ್ಟವಿಲ್ಲ. ರಶ್ಯದ ನಾರ್ಡ್ -1 ಗ್ಯಾಸ್ ಮೇಲೆ ಜರ್ಮನಿ ಮತ್ತು ಕೆಲವು ದೇಶಗಳು ನಿರ್ಣಾಯಕವಾಗಿ ಅವಲಂಬಿಸಿದ್ದು ರಶ್ಯ ದ ವಿರುದ್ಧ ತೀರಾ ಅತಿರೇಕ ಮಾಡಿದರೆ ಗ್ಯಾಸ್ ನಿಲ್ಲಿಸಬಹುದೆಂಬ ಆತಂಕವಿದೆ. ಅದರ ಬದಲು ತಾನು ಗ್ಯಾಸ್ ಪೂರೈಸುತ್ತೇನೆ ಎಂದು ಯು.ಎಸ್ ಹೇಳುತ್ತದೆ. ಆದರೆ ಅದು ಬಹಳ ದುಬಾರಿಯೆಂದು ಯುರೋ ದೇಶಗಳಿಗೆ ಗೊತ್ತಿದೆ. ನಾರ್ಡ್ -1 ಗ್ಯಾಸ್ ಪೈಪ್ ಲೈನ್ ಉಕ್ರೇನಿನ ಮೂಲಕ ಹೋಗುತ್ತಿದ್ದು, ಉಕ್ರೇನಿಗೆ ಇದರಿಂದ ಬಹಳ ಆದಾಯವಿದೆ. ಆದರೆ ಯು.ಎಸ್ ಉಕ್ರೇನಿನ ಈ ಆಯಕಟ್ಟಿನ ಪಾತ್ರ ದುರ್ಬಳಕೆ ಮಾಡಿ ನಾರ್ಡ್ -1 ಗ್ಯಾಸ್ ನಿಲ್ಲಿಸಲು ಹವಣಿಸುತ್ತಿದೆ. ಇದು ಉಕ್ರೇನ್ ಸೇರಿದಂತೆ ಯುರೋ ದೇಶಗಳಿಗೆ ಇಷ್ಟವಿಲ್ಲ.
ಯು.ಎಸ್ ನ ಈ ಹುನ್ನಾರವನ್ನು ಅರಿತ ರಶ್ಯಾ ನಾರ್ಡ್ -2 ಗ್ಯಾಸ್ ಪೈಪ್ ಲೈನ್ ಪ್ರಾಜೆಕ್ಟನ್ನು (ಉಕ್ರೇನ್ ಹಾದಿ ಬಿಟ್ಟು) ಸಾಗರ ಹಾದಿಗಳ ಮೂಲಕ ಮುಗಿಸಿದ್ದು, ಪೂರೈಕೆಗೆ ರೆಡಿ ಮಾಡುತ್ತಿದೆ. ಜರ್ಮನಿಯ ತಾಂತ್ರಿಕ ಚೆಕ್-ಅಪ್ ಮತ್ತು ಸರ್ಟಿಫಕೇಶನ್ ಮಾತ್ರ ಬಾಕಿಯಿದೆ. ಇದೂ ಯು.ಎಸ್ ಮತ್ತು ಯುರೋ ದೇಶಗಳ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ. ಯು.ಎಸ್ ಮಿಲಿಟರಿ (ವಿಶೇಷವಾಗಿ ಅಣ್ವಸ್ತ್ರಗಳ) ಭದ್ರತೆಯ ‘ಕೊಡೆ’ಯನ್ನು ಅವು ಬಿಟ್ಟುಕೊಡಲು ಸಿದ್ಧವಿಲ್ಲದಿದ್ದರೂ, ಉಕ್ರೇನಿನಲ್ಲಿ ರಶ್ಯಾವನ್ನು ಯುದ್ಧಕ್ಕೆ ಪ್ರಚೋದಿಸಬಲ್ಲ ಯು.ಎಸ್ ನ ಅತಿರೇಕಗಳಿಗೆ ಅವುಗಳ ಬೆಂಬಲವಿಲ್ಲ. ವಿಶೇಷವಾಗಿ ಫ್ರಾನ್ಸ್, ಜರ್ಮನಿ ಅದನ್ನು ಬಲವಾಗಿ ಪ್ರತಿರೋಧಿಸುತ್ತಿವೆ.

ಮುಂದೇನು?

ಉಕ್ರೇನಿನ ರಾಜಕೀಯ, ಮಿಲಿಟರಿ ಸಾರ್ವಭೌಮತೆ ಮತ್ತೆ ಸ್ಥಾಪಿಸಬೇಕು. ಅಲ್ಲಿರುವ ವಿದೇಶಿ ಪಡೆಗಳು, ಸಲಹೆಗಾರರು ಅಲ್ಲಿಂದ ಕಾಲ್ತೆಗೆಯಬೇಕು. ಉಕ್ರೇನ್ ಎಂದೂ ನಾಟೋ ಮಿಲಿಟರಿ ಕೂಟ ಸೇರುವುದಿಲ್ಲ ಎಂಬುದರ ಬಗ್ಗೆ ನಾಟೋ ಮತ್ತು ಉಕ್ರೇನ್ ರಶ್ಯಾಕ್ಕೆ ಖಾತ್ರಿ ಕೊಡಬೇಕು. ರಶ್ಯನ್ ಅಲ್ಪಸಂಖ್ಯಾತರ ಹಕ್ಕುಗಳ ಸ್ಥಾಪನೆಯಾಗಬೇಕು. ಇಲ್ಲದಿದ್ದರೆ ಉಕ್ರೇನಿನ ರಶ್ಯನ್ ಅಲ್ಪಸಂಖ್ಯಾತರ ರಕ್ಷಣೆಗಾಗಿ ಮಿಲಿಟರಿ ಮಧ್ಯಪ್ರವೇಶ ಅಗತ್ಯವಾದರೆ ಅದನ್ನು ಮಾಡಿಯೇ ತೀರುತ್ತೇನೆಂದು ಬೆದರಿಕೆ ಹಾಕಿದೆ.
ಯು.ಎಸ್ ಅಧ್ಯಕ್ಷ ಬಿಡೆನ್ ಉಕ್ರೇನ್ ಕುರಿತು ಉಗ್ರ ದೋರಣೆ ತಾಳಿರುವುದಕ್ಕೆ ದೇಶೀಯ ರಾಜಕೀಯ ಕಾರಣಗಳೂ ಇವೆ. ಕೊವಿದ್ ನಿಯಂತ್ರಣದಲ್ಲಿ, ಪರಿಹಾರ ಕ್ರಮಗಳಲ್ಲಿ ಮತ್ತು ಆರ್ಥಿಕ ಪರಿಸ್ಥಿತಿಯ ನಿರ್ವಹಣೆಯಲ್ಲಿ ವೈಫಲ್ಯದಿಂದ ಜನಾಕ್ರೋಶ ಹೆಚ್ಚುತ್ತಿರುವುದರಿಂದ, ವಿದೇಶದಲ್ಲಿ ಮಿಲಿಟರಿ ಬಲ ತೋರಿಸುವ ತುರ್ತು ಅಗತ್ಯ ಅವರಿಗಿದೆ. ರಶ್ಯಾವನ್ನು ಹಿಂದೆ ಅಘ್ಘಾನಿಸ್ತಾನದಲ್ಲಿ ಮಾಡಿದಂತೆ ಗೆಲ್ಲಲಾಗದ ಯುದ್ಧದಲ್ಲಿ ಸಿಲುಕಿಸಿ ಪುಟಿನ್ ಮುಂದೆ ಅಧಿಕಾರಕ್ಕೆ ಬರದಂತೆ ಮಾಡುವ ‘ದುರಾಲೋಚನೆ’ಯೂ ಇದೆ ಎನ್ನಲಾಗಿದೆ. ಚೀನಾ-ರಶ್ಯಾ ವ್ಯೂಹಾತ್ಮಕ ಐಕ್ಯತೆಯೂ ಯು.ಎಸ್ ನಿದ್ದೆಗೆಡಿಸುತ್ತಿದೆ. ರಶ್ಯಾದಲ್ಲಿ ಇನ್ನೊಬ್ಬ ‘ಯೆಲ್ಸಿನ್’ ನನ್ನು ಅಧ್ಯಕ್ಷ ಮಾಡಲು ಸಾಧ್ಯವಾದರೆ, ಚೀನಾ ವನ್ನು ಮಟ್ಟ ಹಾಕುವುದು ಸುಲಭವಾದೀತು ಎಂಬ ‘ದುರಾಲೋಚನೆ’ಯೂ ಇದೆ ಎನ್ನಲಾಗಿದೆ.
ಉಕ್ರೇನ್ ಬಿಕ್ಕಟ್ಟು ಸೃಷ್ಟಿಸುವುದರಲ್ಲಿ ಯು.ಎಸ್ ದುರುದ್ಧೇಶವನ್ನು, ಉಕ್ರೇನ್ ಮತ್ತು ನಾಟೋ ದೇಶಗಳ ಶಾಂತಿಪ್ರಿಯ ಜನತೆ ವಿರೋಧಿಸಬೇಕು. 2015ರಲ್ಲಿ ಮಾಡಿಕೊಂಡ ಮಿನ್ಸ್ಕ್ ಒಪ್ಪಂದದ ಜಾರಿ ಎಲ್ಲಾ ಪಕ್ಷಗಳು ಮಾಡಬೇಕು. ಅದೊಂದೇ ಇದಕ್ಕೆ ಪರಿಹಾರ.

Donate Janashakthi Media

Leave a Reply

Your email address will not be published. Required fields are marked *