ಡಾ. ವಿಠ್ಠಲ ಭಂಡಾರಿ ನೆನಪಿನ ಸಮಾಜವಿಜ್ಞಾನ ಅಧ್ಯಯನ ಕೇಂದ್ರ “ಪ್ರೀತಿಪದ” ಪ್ರಾರಂಭ

ಕಾರವಾರ :  ಪತ್ರಕರ್ತರು ಸಿದ್ದಮಾದರಿಯ ಸುದ್ಧಿಗಳನ್ನು ಬಿಟ್ಟು ನಿಜವಾದ ಸುದ್ಧಿಗಳನ್ನು ಹುಡುಕುವ ಕೆಲಸವನ್ನು ಮಾಡುತ್ತಿಲ್ಲ. ದೊಡ್ಡಪತ್ರಿಕೆಗಳು ಸಂಕಷ್ಟದಲ್ಲಿರುವಾಗಲೇ ಸಣ್ಣಪತ್ರಿಕೆಗಳು ಕುಸಿತವನ್ನು ಕಾಣುತ್ತಿವೆ. ಮನುಷ್ಯನ ಸಾಮರ್ಥ್ಯ ಸರಿಯಾಗಿ ಬಳಕೆಯಾಗುತ್ತಿಲ್ಲ. ಪರ್ತಕರ್ತರು ಸಮಾಜ ಮುಖಿಗಳಾಗದೆ, ವ್ಯವಸ್ಥೆಯ ಮೇಲಿನ ಸಿಟ್ಟನ್ನು ಬರೆಯಲಾಗದ ಸ್ಥಿತಿಯಲ್ಲಿದ್ದಾರೆ. ದುಷ್ಟ ವ್ಯವಸ್ಥೆಯ ವಿದುದ್ಧ ಪ್ರತಿರೋಧ ಇಲ್ಲದಿದ್ದರೆ ಸ್ವಾಸ್ಥ್ಯ ಸಮಾಜ ನಿರ್ಮಾಣವಾಗುವುದಿಲ್ಲ. ವಿಠ್ಠಲ ಭಂಡಾರಿಯಬವರು ಸಂವಿಧಾನ ಓದು ಕೃತಿಯನ್ನು ರಾಜ್ಯಾದಯಂತ ತಲೆಮೇಲೆ ಹೊತ್ತು ನಡೆದರು. ಎಲ್ಲರೂ ಸಮಾನತೆಗಾಗಿ ಮನುಷ್ಯರಾಗಿ ಕೆಲಸ ಮಾಡೋಣ ಎಂದು ಕರಾವಳಿ ಮುಂಜಾವು ದಿನಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಗಂಗಾಧರ ಹಿರೇಗುತ್ತಿಯವರು ಹೇಳಿದರು.

ಅವರು ಕನ್ನಡ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಡಮಕ್ಕಳ ವಿದ್ಯಾರ್ಥಿ ನಿಲಯಕ್ಕೆ ಅಕ್ಕಿ ಬೆಲ್ಲ ಆಹಾರಧಾನ್ಯ ನೀಡಿ “ಪ್ರೀತಿಪದ” (ಡಾ. ವಿಠ್ಠಲ ಭಂಡಾರಿ ನೆನಪಿನ ಸಮಾಜ ವಿಜ್ಞಾನ ಅಧ್ಯಯನ ಕೇಂದ್ರ)ವನ್ನು ಉದ್ಘಾಟಿಸಿ ಮಾತನಾಡುತ್ತಾ, ಪ್ರೀತಿ ಪದ ಭೂಮಿಗೆ ಸಂಬಂಧಿಸಿದ್ದು, ಪ್ರೀತಿ ಎಂಬುದು ಸಂವಹನದ ಭಾವ. ಭಾರತವು ಸ್ವಾತಂತ್ರ್ಯದ ಪೂರ್ವ ಮತ್ತು ನಂತರೂ ಅನಾತತೆಯ ಭಾವ ಅನುಭವಿಸುತ್ತಿದೆ. ಆರ್.ವಿ.ಭಂಡಾರಿಯವರು ನನ್ನ ಬದುಕಿನ ಹೀರೋ ಆಗಿದ್ದರು. ಆರ್.ವಿ.ಭಂಡಾರಿಯವರದ್ದು ಯಾರನ್ನೂ ವೈಯಕ್ತಿಕವಾಗಿ ನೋಯಿಸದ ಶ್ರೇಷ್ಠ ವ್ಯಕ್ತಿತ್ವ. ಮನುಷ್ಯ ಜನಾಂಗಕ್ಕೆ ಅನ್ಯಾಯವಾದಾಗ ಆರ್.ವಿ ಯವರು ತಕ್ಷಣ ಪ್ರತಿಕ್ರಿಯಿಸುತ್ತಿದ್ದರು. ಇದನ್ನ ನಂತರದ ದಿನಗಳಲ್ಲಿ ವಿಠ್ಠಲ ಭಂಡಾರಿಯವರು ಮುಂದುವರೆಸಿದರು. ಸ್ವಾತಂತ್ರ್ಯ ಭಾರತ ಬ್ರಿಟೀಷರ ನಂತರ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಕೇವಲ ರಸ್ತೆ, ಕಟ್ಟಡಗಳನ್ನೇ ಅಭಿಭಿವೃದ್ಧಿ ಎಂಬ ಭ್ರಮೆಯಲ್ಲಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.

ಅಭಿವೃದ್ಧಿ ಅರ್ಥಶಾಸ್ತ್ರ ವಿಶ್ಲೇಷಕರಾದ ಡಾ. ಚಂದ್ರ ಪೂಜಾರಿಯವರು ಮಾತನಾಡುತ್ತ, ಸ್ವಂತಕ್ಕೆ ಬದುಕಿದವರು ಉಸಿರಿರುವ ವರೆಗೆ ಬದುಕುತ್ತಾರೆ. ಪರರಿಗಾಗಿ ಬದುಕಿದವರು ಉಸಿರು ನಿಂತ ಮೇಲೂ ಬದುಕಿರುತ್ತಾರೆ. ವಿಜ್ಞಾನ ಮತ್ತು ಸಮಾಜ ವಿಜ್ಷಾನಗಳಲ್ಲಿ ಮನುಷ್ಯತ್ವವೇ ಇಲ್ಲದಂತಾಗಿದೆ. ಬಡಜನರ ಬಹುದೊಡ್ಡ ಆಸ್ತಿ ಎಂದರೆ ಪ್ರೀತಿ ಪ್ರೇಮ, ಸಹಬಾಳ್ವೆ. ಭಾರತದ 70 % ಜನ ಮೂರುಹೊತ್ತು ಊಟಕ್ಕೆ ಪರದಾಡುತ್ತಿದ್ದಾರೆ. ಸಂಖ್ಯೆಯೇ ಇವರ ಶಕ್ತಿ. ಅವರು ಒಟ್ಟಿಗೆ ಸೇರಬೇಕು. ಅದಕ್ಕಾಗಿ ಪ್ರೀತಿ ವಿಶ್ವಾಸ ಬೇಕು. ಕೋವಿಡ್ ನಂತರ 70% ರಷ್ಟು ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಅದೇ ಸಂದರ್ಭದಲ್ಲಿ ಬಿಲಿಯಾಧಿಪತಿಗಳ ಸಂಖ್ಯೆ 132 ರಿಂದ 140 ಕ್ಕೆ ಏರಿಕೆಯಾಗಿದೆ. ಬಡ ಜನ ಪ್ರತಿನಿತ್ಯ ಜಾತಿ ಧರ್ಮದ ಹೆಸರಿನಲ್ಲಿ ಕಿತ್ತಾಡುತ್ತಿದ್ದಾರೆ. ನಮ್ಮನ್ನು ಸೇರಿಸುವ, ಒಗ್ಗೂಡಿಸುವ ವಿಚಾರಗಳು ಬೇಕು. ಆದರೆ ನಮ್ಮಗಳ ನಡುವೆ ಪ್ರೀತಿಯ ಬದಲು ದ್ವೇಷವನ್ನು ತುಂಬಲಾಗುತ್ತಿದೆ. ನಂಬಿಕೆ ಬದಲು ಅಪನಂಬಿಕೆ ಮೂಡಿಸಲಾಗುತ್ತಿದೆ. ಇಂತಹ ರಾಜಕಾರಣವು ನಮ್ಮತನವನ್ನು ನಾಶಮಾಡುತ್ತಿದೆ. ಇದನ್ನು ಬದಲಾಯಿಸದಿದ್ದರೆ ಭಾರತಕ್ಕೆ ಉಳಿಗಾಲವಿಲ್ಲ. ಇದೇರೀತಿಯ ವಾತಾವರಣ ಶ್ರೀಲಂಕಾದಲ್ಲಿ ನಿರ್ಮಾಣವಾಗಿದ್ದು ಭಾರತ ಹಿಂದುತ್ವಕೆ ಆದ್ಯತೆ ನೀಡದರೆ ಶ್ರೀಲಂಕಾ ಬುದ್ಧತ್ವಕ್ಕೆ, ಭಾರತದಲ್ಲಿ ಮುಸ್ಲಿಮರನ್ನು ದ್ವೇಶಿಸಿದರೆ ಶ್ರೀಲಂಕಾದಲ್ಲಿ ತಮಿಳರನ್ನು ದ್ವೇಷಿಸುವ ವಾತಾವರಣವನ್ನು ನಿರ್ಮಾಣಮಾಡಿ ಇಡೀ ದೇಶವೇ ಆರ್ಥಿಕವಾಗಿ ದಿವಾಳಿಯಾಗಿದೆ. ಈಗ ಭಾರತದ ಬೆಳವಣಿಗೆಗಳನ್ನು ಗಮನಿಸಿದರೆ ನಾವೂ ಅದೇ ದಾರಿಯಲಿದ್ದೇವೆ ಎಂದರು.

ಭಾರತ ಜಾತಿ ಧರ್ಮಗಳ ಹೆಸರಿನಲ್ಲಿ ಒಡೆದುಹೋಗುತ್ತಿದೆ. ರಾಜಕೀಯ ಪಕ್ಷಗಳು ದೇಶಗಳು ಮುನ್ನಡೆಸುವ ಬದಲು ಹಿಮ್ಮುಖವಾಗಿ ತಳ್ಳುತ್ತಿವೆ. ಶಾಲಾ ಮಕ್ಕಳಿಗೆ ಮೊಟ್ಟೆ ಕೊಡಬಾರದು, ಅವರ ಆಹಾರದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಕೊಡಬಾರದು ಎಂಬ ಅತ್ಯಂತ ಅಪಾಯಕಾರಿ ಸಾಂಸ್ಕೃತಿಕ ರಾಜಕಾರಣ ದೇಶದಲ್ಲಿ ನಡೆಯುತ್ತಿದೆ. ಹಸುವಿನ ಹಾಲು ಉತ್ತಮವೋ ಎಮ್ಮೆಯ ಹಾಲು ಉತ್ತಮವೋ ಮಾಂಸಾಹಾರ ಉತ್ತಮವೋ ಸಸ್ಯಾಹಾರ ಉತ್ತಮವೋ ಎನ್ನುವ ಚರ್ಚೆ ಆರಂಭವಾಗಿದೆ. ಫೈಬರ್ ಮತ್ತು ಕ್ವಾಲೆಸ್ಟ್ರಾಲ್ ಅಂಶ ಬಿಟ್ಟರೆ ಸಸ್ಯಾಹಾರಕ್ಕಿಂತ ಮಾಂಸಾಹಾರವೇ ಉತ್ತಮವಾಗಿದ್ದು ಭಾರತದಲ್ಲಿ ಶೇ. 30 ರಷ್ಟು ಮಕ್ಕಳು ಅಪೌಷ್ಟಿಕತೆಯಿಂದಲೂ ಶೇ. 50 ರಷ್ಟು ಹೆಣ್ಣುಮಕ್ಕಳು ರಕ್ತ ಹೀನತೆಯಿಂದಲೂ ನರಳುತ್ತಿದ್ದಾರೆ. ಬ್ರಾಹ್ಮಣ್ಯ ಬೇರೆ ಬ್ರಾಹ್ಮಣರು ಬೇರೆ. ಬ್ರಾಹ್ಮಣ್ಯ ಒಂದು ವಿಚಾರ ಮತ್ತು ಸಿದ್ಧಾಂತ ಆದರೆ ಬ್ರಾಹ್ಮಣ ಎನ್ನುವುದು ಕೇವಲ ಒಂದು ಜಾತಿ. ಬ್ರಾಹ್ಮಣ್ಯ ಸಮಾನತೆ, ಲಿಂಗ ಸಮಾನತೆ, ಜಾತಿ ಸಮಾನತೆ ಇವುಗಳನ್ನು ಒಪ್ಪುವುದಿಲ್ಲ. ಬ್ರಾಹ್ಮಣ್ಯದ ವಿಚಾರದಿಂದ ಹೊರಗೆ ಬರದಿದ್ದರೆ ಭಾರತಕ್ಕೆ ಭವಿಷ್ಯವಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಬುಡಕಟ್ಟು ಜನರನ್ನು ಮುಖ್ಯವಾಹಿಗೆ ತರುವ ಕೆಲಸವನ್ನು ವಿಠ್ಠಲ ಮತ್ತು ಆತನ ಸಂಘಟನೆಗಳು ಮಾಡುತ್ತಾ ಬಂದಿವೆ. ಪ್ರಸ್ತುತ ಸಾಮಾಜಿಕ ನ್ಯಾಯದ ಕಲ್ಪನೆ ಬದಲಾಗಿದ್ದು ಇದುವರೆಗೂ ಯಾರೆಲ್ಲ ದಬ್ಬಾಳಿಕೆ ದೌರ್ಜನ್ಯ ನಡೆಸುತ್ತಿದ್ದರೋ ಅವರೇ ನ್ಯಾಯ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಿಳೆಯರು ಮೀಸಲಾತಿ ಕೇಳುತ್ತಿದ್ದರೂ ಈ ವಿಚಾರ ಸಂಸತ್ತಿನಲ್ಲಿ ಚರ್ಚೆಯಾಗುತ್ತಿಲ್ಲ. ಎಲ್ಲಕಡೆ ಅಧಿಕಾರ ಕೇಂದ್ರೀಕರಣವಾಗುತ್ತಿದ್ದು ಮಹಿಳೆಯರಿಗಿಂತ ಪುರುಷರಲ್ಲಿ ಅಲ್ಪಸಂಖ್ಯಾತರಿಗಿಂತ ಬಹುಸಂಖ್ಯಾತರಲ್ಲಿ ಬಡವರಿಗಿಂತ ಶ್ರೀಮಂತರಲ್ಲಿ ಹೆಚ್ಚಿಗಿದೆ.

ಹೊಸ ವಿಚಾರಗಳನ್ನು ಸೃಷ್ಟಿಸಲು ಸಂಶೋಧನೆಗಳ ಅಗತ್ಯವಿದೆ. ನಮ್ಮನ್ನು ಒಪ್ಪಿಸುವ ಕೆಲಸಗಳನ್ನು ವಿಷಾರಗಳು ಮಾಡುತ್ತವೆ. ಬ್ರಹ್ಮ ಸೃಷ್ಟಿಯ ಸಿದ್ಧಾಂತದ ಪ್ರತಿಪಾದಕರೇ ಈಗ ಅಧಿಕಾರ ನಡೆಸುತ್ತಿದ್ದಾರೆ. ಇದೇ ಸಾಂಸ್ಕೃತಿಕ ರಾಜಕಾರಣ. ಮಾಧ್ಯಮಗಳು ಸಿನೇಮಾಗಳು ಜನರಿಗೆ ಶಿಕ್ಷಣವನ್ನು ಕೊಡಬೇಕು. ಆದರೆ ಈ ಕ್ಷೇತ್ರಗಳು ತಮ್ಮ ಜವಾಬ್ದಾರಿಯನ್ನು ಸಂಪೂರ್ಣ ಮರೆತಂತಿವೆ. ಅಸಮಾನತೆಯನ್ನು ಪ್ರಶ್ನೆಮಾಡಿ ಸಮಾನತೆಯನ್ನು ಸೃಷ್ಟಿಸುವ ಕೆಲಸವನ್ನು ಸಂಶೋಧನೆಗಳು ಮಾಡಬೇಕು.

ಇಂದಿನ ಎಲ್ಲಾ ಸಮಸ್ಯೆಗಳಿಗೆ ಸರ್ಕಾರಗಳ ನೀತಿಗಳೇ ಕಾರಣ. ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಯಾವುದು ಜನಪರ ಯಾವುದು ಜನವಿರೋಧಿ ಎಂಬುದು ಮುಖ್ಯ ಚರ್ಚೆಯಾಗಬೇಕು. ಕರ್ನಾಟಕದಲ್ಲಿ ನಾರಾಯಣಗುರು ಬಸವಣ್ಣ, ಪೆರಿಯಾರ್, ಕುವೆಂಪು ಇವರ ವೈಚಾರಿಕತೆಯ ವಿಚಾರಗಳನ್ನು ಪಠ್ಯದಿಂದ ಕೈಬಿಟ್ಟಿರುವ ಕಾರಣವೇನೆಂದರೆ ಅವರು ಈ ಸಮಾಜದ ಸನಾತನ ಜಿಡ್ಡುವ್ಯಸ್ಥೆಯನ್ನು ಪ್ರಶ್ನಿಸಿದ್ದರು. ನಾರಾಯಣಗುರುಗಳು ಅಸಮಾನತೆ, ಅಸ್ಪೃಶ್ಯತೆ ವಿರುದ್ಧ ಹೋರಾಟ ಮಾಡಿದವರು. ಬಸವಣ್ಣನವರ ವಚನಗಳು ಅಸಮಾನತೆಯ ವಿರುದ್ಧ ಇವೆ. ಕುವೆಂಪುರವರು ಬರಹಗಳ ಮೂಲಕ ವೈಚಾರಿಕತೆ ಪ್ರತಿಪಾದಿಸಿದ್ದಾರೆ. ಪಸ್ತುತ ಎಲ್ಲವನ್ನೂ ನಿಷೇಧಿಸುವ ಸಾಂಸ್ಕೃತಿಕ ರಾಜಕಾರಣ ನಡೆಯುತ್ತಿದೆ. ಆಹಾರ, ಬಟ್ಟೆ, ಹೀಗೆ ಮತಾಂತರ ನಿಷೇಧ ಕಾಯದೆಯಲ್ಲಿ ಮದುವೆಯನ್ನೂ ಆಮಿಷಕ್ಕೆ ಸಮೀಕರಿಸಲಾಗಿದೆ. ಹಾಗೆ ನೋಡಿದರೆ ಸಮಾಜಿಕ ಕಟ್ಟುಪಾಡಿನ ವ್ಯವಸ್ಥೆಯು ಇಲ್ಲಿ ಸಹಮಾನವರನ್ನು ಮನುಷ್ಯನನ್ನಾಗಿ ನಡೆಸಿಕೊಳ್ಳದಿದ್ದಕ್ಕೆ ಮತಾಂತರದೆಡೆಗೆ ಮುಖಮಾಡಿದ್ದಾರೆ ಎಂದು ಕಿಡಿಕಾರಿದರು.

ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಕಿರಣ ಗಾಜನೂರು ಮಾತನಾಡಿ, ಭಾರತೀಯರಾದ ನಾವು ಅಪ್ರಜಾತಾಂತ್ರಿಕ ಯುದ್ಧವನ್ನು ಪ್ರಜಾತಾಂತ್ರಿಕವಾಗಿ ಎದುರಿಸುವ ಹಂತದಲ್ಲಿದ್ದೇವೆ. ಖಾಸಗಿಕರಣ ಸೃಷ್ಟಿಸಿರುವ ಉದ್ಯೋಗದ ಸ್ವರೂಪ ಅತ್ಯಂತ ಅಮಾನವೀಯವಾಗಿದ್ದು ಹೆಣ್ಣು ಮಕ್ಕಳೂ ಸೇರಿಸದಂತೆ ಯುವಕರನ್ನು ಹೆಚ್ಚು ಶೋಷಣೆಗೆ ಒಳಪಡಿಸಲಾಗುತ್ತಿದೆ. ಉತ್ತರ ಭಾರತ, ಈಶಾನ್ಯ ರಾಜ್ಯಗಳ ಯುವಜನರು ಉದ್ಯೋಗಗಳನ್ನು ಅರಸಿ ರಾಜ್ಯದ ಹೊಟೆಲ್ ಗಳಲ್ಲಿ ಅತ್ಯಂತ ಸಂಕಷ್ಟದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಸಮಾಜ ಮತ್ತು ಮುಂದಿನ ತಲೆಮಾರು ಎದುರಿಸುತ್ತಿರುವ ಸವಾಲುಗಳ ಕುರಿತು ಅಧ್ಯಯನ ಸಂಶೋಧನೆಗಳನ್ನು ನಡೆಸುವುದು ಪ್ರೀತಿಪದದ ಉದ್ದೇಶ. ಅಸಮಾನ ವ್ಯವಸ್ಥೆಯ ವಿರುದ್ಧ ಪ್ರಶ್ನೆಗಳನ್ನು ಎತ್ತಬಾರದೆನ್ನುವ ಮನಃಸ್ಥಿತಿಯು ನಿರ್ಮಾಣವಾಗುತ್ತಿದ್ದು ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪಕರುಗಳು ಸ್ವತಂತ್ರವಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಇದೆಲ್ಲದಕ್ಕೆ ಉತ್ತರವೆಂಬAತೆ ಜನಚಳುವಳಿಗಳು ಜನರ ಮಧ್ಯೆಯೇ ರೂಪುಗೊಳ್ಳಬೇಕು. ಸಮಾಜ ಜಾತ್ಯಾತೀತ ಸೌಹಾರ್ದ ಆಗಿಲ್ಲದಿದ್ದರೆ ಅಲ್ಲಿ ಪ್ರಜಾಪ್ರಭುತ್ವವೇ ಇರುವುದಿಲ್ಲ ಎಂಬುದನ್ನು ದೃಷ್ಟಾಂತಗಳ ಮೂಲಕ ತಿಳಿಸಿದರು.

ಅಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಬಿ.ಎನ್. ವಾಸರೆ: ಜನತೆಯನ್ನು ಸಂವಿಧಾನದಲ್ಲಿ ಸಾಕ್ಷರರನ್ನಾಗಿಸಲು ಜನರೆಡೆಗೆ “ಸಂವಿಧಾನ ಓದು” ಪುಸ್ತಕ ಹೊತ್ತೊಯ್ದ ವಿಠ್ಠಲ ಭಂಡಾರಿ ಎಂದು ಹಿರಿಯ ನ್ಯಾಯಮೂರ್ತಿ ಜಸ್ಟಿಸ್ ನಾಗಮೋಹನ ಹೇಳಿದ್ದರು. ವಿಠ್ಠಲ ಬಹುತ್ವವನ್ನು ನಂಬಿದವ. ಅವನ ಕನಸುಗಳನ್ನು ನನಸು ಮಾಡಿ ಆತನನ್ನು ಜೀವಂತವಾಗಿರಿಸಿಕೊಳ್ಳಬೇಕಾದ ತುರ್ತು ಅನಿವಾರ್ಯತೆ ಇದೆ. ಬರಹಗಾರರು ಬರೆಯುವಾಗ ಪ್ರಭುತ್ವದ ಮುಲಾಜಿಗೆ ಒಳಗಾಗುತ್ತಿದ್ದಾರೆ. ನೇರ ನಿಷ್ಟುರವಾಗಿ ಬರೆದು ಜಿಲ್ಲೆಯಲ್ಲಿ ಸಾಂಸ್ಕೃತಿಕ ಆಂದೋಲನವನ್ನು ಕಟ್ಟಿ ಮುನ್ನಡೆಸುವಲ್ಲಿ ವಿಠ್ಠಲರ ಪಾತ್ರ ದೊಡ್ಡದು. ಇದನ್ನು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿಯೊಂದಿಗೆ ನಾವು ಸಮಾನ ಮನಸ್ಕರು ಪ್ರೀತಿಪದ ಎಂಬ ಸಮಾಜವಿಜ್ಞಾನ ಅಧ್ಯಯನ ಕೇಂದ್ರವನ್ನು ಪ್ರಾರಂಭಿಸುತ್ತಿದ್ದೇವೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ರಾಮಾ ನಾಯ್ಕ ಸ್ವಾಗತಿಸಿದರು. ಯಮುನಾ ಗಾಂವ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣೇಶ ಭಿಷ್ಟಣ್ಣವರ್ ನಿರ್ವಹಿಸಿದರು. ಸಹಯಾನದ ಮ್ಯಾನೆಜಿಂಗ್ ಟ್ರಸ್ಟೀ ಮಾಧವಿ ಭಂಡಾರಿ, ಕಸಾಪ ಗೌರವ ಕಾರ್ಯದರ್ಶಿ ಜೊರ್ಜ ಫರ್ನಾಂಡೀಸ್, ಕಲ್ಲೂರು ಶಿಕ್ಷಣ ಸಂಸ್ಥೆಯ ಇಬ್ರಾಹಿಂ ಕಲ್ಲೂರು, ಜನಶಕ್ತಿ ಮೀಡಿಯಾದ ನವೀನ ಕುಮಾರ ಹಾಸನ ಶುಭಾಶಯಕೋರಿ ಮಾತನಾಡಿದರು. ಗಣೇಶ್ ರಾಠೋಡ ವಂದಿಸಿದರು. ಪ್ರಾರಂಭದಲ್ಲಿ ಡಾ. ಮಹೇಶ ಗೋಳಿಕಟ್ಟಿ, ಜಿಡಿ ಮನೋಜೆ, ಎಂ.ಎ. ಖತೀಬ್, ಅಲ್ತಾಫ್ ಶೇಖ್, ಎನ್.ಜಿ. ನಾಯ್ಕ, ಜಿ.ಡಿ. ಪಾಲೇಕರ್, ಮೋಹನ ಕಿಂದಳಕರ್ ಪುಸ್ತಕ ನೀಡಿ ಸ್ವಾಗತಿಸಿದರು.

Donate Janashakthi Media

Leave a Reply

Your email address will not be published. Required fields are marked *