ದ್ವೇಷ ಹುಟ್ಟಿಸುವ ಉದ್ದೇಶದಿಂದ  ವಕ್ಪ್ ಬೋರ್ಡ್ (ತಿದ್ದುಪಡಿ) ಮಸೂದೆ

-ಸಿ. ಸಿದ್ದಯ್ಯ

ವಕ್ಫ್ ಬೋರ್ಡ್ (ತಿದ್ದುಪಡಿ) ಮಸೂದೆಯು ವಿವಿಧತೆಯಲ್ಲಿ ಏಕತೆಯ ವಿರುದ್ಧ ಮಾತ್ರವಲ್ಲದೆ ಸಂವಿಧಾನದ ಭರವಸೆಯಂತೆ ಧರ್ಮದ ಹಕ್ಕಿನ ವಿರುದ್ಧವೂ ಆಗಿದೆ. ಇದು ಸಂವಿಧಾನದ 25, 26, 27, 28, 29, 30ನೇ ವಿಧಿಗಳಿಗೆ ವಿರುದ್ಧವಾಗಿದೆ. ಭೂಮಿ ರಾಜ್ಯ ಪಟ್ಟಿಗೆ ಸೇರಿದೆ. ಆದರೆ, ಕೇಂದ್ರವು ಈ ಮಸೂದೆಯನ್ನು ಮಂಡಿಸುವ ಮೂಲಕ ಒಕ್ಕೂಟ ವ್ಯವಸ್ಥೆಯ ಮೇಲೆ ದಾಳಿ ಮಾಡಿದೆ. ಬಿಜೆಪಿಯ ಏಕೈಕ ಕೆಲಸವೆಂದರೆ ಹಿಂದೂಗಳು ಮತ್ತು ಮುಸ್ಲಿಮರನ್ನು ವಿಭಜಿಸುವುದು ಮತ್ತು ಸಂವಿಧಾನವು ಮುಸ್ಲಿಮರಿಗೆ ನೀಡಿರುವ ಹಕ್ಕುಗಳನ್ನು ಕಸಿದುಕೊಳ್ಳುವುದು. ದ್ವೇಷ 

ಕೇಂದ್ರ ಸರಕಾರ ಲೋಕಸಭೆಯಲ್ಲಿ ಆಗಸ್ಟ್ 8, 2024 ರಂದು, ವಕ್ಫ್ ಬೋರ್ಡ್ (ತಿದ್ದುಪಡಿ) ಮಸೂದೆ ಹಾಗೂ ಮುಸ್ಲಿಂ ವಕ್ಫ್ (ರದ್ದತಿ) ವಿಧೇಯಕಗಳನ್ನು ತರಲು ಮುಂದಾಗಿದ್ದು ಒಂದು ಅತಿರೇಕದ ನಡೆ. ಇದು ಮುಸ್ಲಿಮರ ವಿರುದ್ಧ ವಿಷ ಉಗುಳುವ ಹಾಗೂ ಜನರ ನಡುವೆ ದ್ವೇಷ ಹುಟ್ಟಿಸುವ ಉದ್ದೇಶದಿಂದ ಕೂಡಿದೆ. ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ ಕಳುಹಿಸಿದರೂ ಅದು ತಾತ್ಕಾಲಿಕ ಸಮಾಧಾನವಷ್ಟೇ. ಈ ಮಸೂದೆಯು ವಿವಿಧತೆಯಲ್ಲಿ ಏಕತೆಯ ವಿರುದ್ಧ ಮಾತ್ರವಲ್ಲದೆ ಸಂವಿಧಾನದ ಭರವಸೆಯಂತೆ ಧರ್ಮದ ಹಕ್ಕಿನ ವಿರುದ್ಧವೂ ಆಗಿದೆ. ದ್ವೇಷ 

ಇದು ಸಂವಿಧಾನದ 25, 26, 27, 28, 29, 30ನೇ ವಿಧಿಗಳಿಗೆ ವಿರುದ್ಧವಾಗಿದೆ. ಭೂಮಿ ರಾಜ್ಯ ಪಟ್ಟಿಗೆ ಸೇರಿದೆ. ಆದರೆ, ಕೇಂದ್ರವು ಈ ಮಸೂದೆಯನ್ನು ಮಂಡಿಸುವ ಮೂಲಕ ಒಕ್ಕೂಟ ವ್ಯವಸ್ಥೆಯ ಮೇಲೆ ದಾಳಿ ಮಾಡಿದೆ. ಈ ಮಸೂದೆಯ ಮೂಲಕ ಮುಸ್ಲಿಮೇತರರನ್ನೂ ವಕ್ಫ್ ಆಡಳಿತ ಮಂಡಳಿಯ ಸದಸ್ಯರನ್ನಾಗಿ ಮಾಡಲಾಗುತ್ತಿದೆ. ಇದನ್ನು ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ನೇರ ದಾಳಿ ಎಂದು ಪರಿಗಣಿಸಬೇಕು. ಸಂಸತ್ತಿನಲ್ಲಿ ಮತ್ತು ಸಂಸತ್ತಿನ ಹೊರಗೆ ಮತ್ತು ಜಾತ್ಯತೀತ ಪ್ರಜಾಸತ್ತಾತ್ಮಕ ಶಕ್ತಿಗಳ ವಿಶಾಲ ಏಕತೆ ಮತ್ತು ಚಳುವಳಿಯೊಂದಿಗೆ ಸಾರ್ವಜನಿಕ ವಲಯದಲ್ಲಿ ದ್ವೇಷಪೂರಿತ ಮತ್ತು ಸಂವಿಧಾನ ವಿರೋಧಿ ವಕ್ಫ್ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಕೇಂದ್ರವು ಹಿಂಪಡೆಯುವುದು ಅವಶ್ಯಕ. ದ್ವೇಷ 

ಇದನ್ನೂ ಓದಿ: ಬಿಡಿಎ ಕಾಂಪ್ಲೆಕ್ಸ್ ಗಳ ಖಾಸಗೀಕರಣಕ್ಕೆ ಸರ್ಕಾರ ನಿರ್ಧಾರ; 20 ಸಾವಿರ ಕೋಟಿ ಆಸ್ತಿ ಖಾಸಗಿಗೆ!

ವಕ್ಫ್ ಆಸ್ತಿ

ಮುಸ್ಲೀಮರು ತಮ್ಮ ದೇವರ ಹೆಸರಿನಲ್ಲಿ ಧಾರ್ಮಿಕ ಉದ್ದೇಶಗಳಿಗಾಗಿ ಸಮರ್ಪಿಸುವ ಸ್ಥಿರ ಮತ್ತು ಚರ ಆಸ್ತಿಗಳನ್ನು ವಕ್ಫ್ ಆಸ್ತಿ ಎನ್ನುತ್ತಾರೆ. ವಕ್ಫ್ ಆಸ್ತಿಯನ್ನು ಯಾರಿಗೂ ಮಾರುವಂತಿಲ್ಲ ಅಥವಾ ವರ್ಗಾಯಿಸುವಂತಿಲ್ಲ. ವಕ್ಫ್‌ನಿಂದ ಬರುವ ಆದಾಯವನ್ನು ಸಾಮಾನ್ಯವಾಗಿ ಶಿಕ್ಷಣ ಸಂಸ್ಥೆಗಳು, ಸ್ಮಶಾನಗಳು, ಮಸೀದಿಗಳು, ಆಶ್ರಯ ಮನೆಗಳು ಇತ್ಯಾದಿಗಳ ನಿರ್ವಹಣೆಗೆ ಬಳಸಲಾಗುತ್ತದೆ. ವಕ್ಫ್  ಆಸ್ತಿಗಳನ್ನು ನಿರ್ವಹಿಸಲು ಸರ್ಕಾರಗಳು ನಾಮನಿರ್ದೇಶನ ಮಾಡಿದ ಸದಸ್ಯರನ್ನು ಹೊಂದಿರುವ ಶಾಸನಬದ್ಧವಾದ ಸಂಸ್ಥೆ ವಕ್ಫ್ ಬೋರ್ಡ್. ಬೋರ್ಡ್  ಪ್ರತಿ ಆಸ್ತಿಗೆ ಒಬ್ಬ ಕಸ್ಟೋಡಿಯನ್ ಅನ್ನು ನೇಮಿಸುತ್ತದೆ. ಅದರಿಂದ ಬರುವ ಆದಾಯವನ್ನು ಉದ್ದೇಶಿತ ಉದ್ದೇಶಗಳಿಗಾಗಿ ಬಳಸಿಕೊಳ್ಳಲಾಗಿದೆ ಎಂದು ಇದು ಖಚಿತಪಡಿಸುತ್ತದೆ. 1964 ರಲ್ಲಿ ಸ್ಥಾಪಿತವಾದ ಕೇಂದ್ರೀಯ ವಕ್ಫ್ ಕೌನ್ಸಿಲ್ ದೇಶದೆಲ್ಲೆಡೆ ಇರುವ ರಾಜ್ಯ ಮಟ್ಟದ ವಕ್ಫ್ ಮಂಡಳಿಗಳನ್ನು ಮೇಲ್ವಿಚಾರಣೆ ಮಾಡುತ್ತದೆ. ಸಲಹೆ ಮತ್ತು ಸೂಚನೆಗಳನ್ನು ನೀಡುತ್ತದೆ.

ವಕ್ಫ್ ಕಾಯಿದೆಯ ಪ್ರಕಾರ, ಒಂದು ಆಸ್ತಿಯನ್ನು ‘ವಕ್ಫ್ ಆಸ್ತಿ’ ಎಂದು ಗುರುತಿಸುವ ಅಧಿಕಾರವನ್ನು ವಕ್ಫ್ ಬೋರ್ಡ್  ಗೆ ಒದಗಿಲಾಗಿದೆ. ಒಂದು ಆಸ್ತಿಯನ್ನು ವಕ್ಫ್ ಎಂದು ಪರಿಗಣಿಸಬೇಕೇ ಅಥವಾ ಬೇಡವೇ ಎಂಬ ವಿವಾದ ಉದ್ಭವಿಸಿದಾಗ, ಕಾಯಿದೆಯ ಸೆಕ್ಷನ್ 6 ರ ಅಡಿಯಲ್ಲಿ ಟ್ರಿಬ್ಯುನಲ್  ನಿರ್ಣಯವೇ ಅಂತಿಮವಾಗಿರುತ್ತದೆ. ಒಂದು ಆಸ್ತಿ ವಕ್ಫ್ ಆಸ್ತಿಯೇ ?, ಅಥವಾ ಸರ್ಕಾರಿ ಭೂಮಿಯೇ? ಎನ್ನುವುದನ್ನು ಜಿಲ್ಲಾಧಿಕಾರಿ ನಿರ್ಧರಿಸುತ್ತಾರೆ ಎಂದು ತಿದ್ದುಪಡಿ ವಿಧೇಯಕದಲ್ಲಿ ಪ್ರತಿಪಾದಿಸಲಾಗಿದೆ. ಹೀಗಾಗಿ, ವಕ್ಫ್ ಆಸ್ತಿಗಳ ಮೇಲೆ ಪ್ರಭುತ್ವದ ನಿಯಂತ್ರಣವನ್ನು ಸ್ಥಾಪಿಸಲಾಗಿದೆ. ಅದು ವರ್ಗಾವಣೆಗೆ ಕಾರಣವಾಗಬಹುದು. ವಕ್ಫ್ ಕಾಯಿದೆಯಲ್ಲಿನ ಮೂಲಭೂತ ಅಂಶಗಳ ಮೇಲೆ ದಾಳಿ ಮಾಡುತ್ತದೆ ಎಂದು ಈ ತಿದ್ದುಪಡಿ ಮಸೂದೆಯನ್ನು ಮುಸ್ಲಿಮರು ಮತ್ತು ಜಾತ್ಯತೀತ ಶಕ್ತಿಗಳು ವಿರೋಧಿಸುತ್ತಿವೆ.

ಕೇಂದ್ರ ಮಂತ್ರಿ ಕಿರಣ್ ರಿಜಿಜು ಮಸೂದೆಯನ್ನು ಮಂಡಿಸುವ ಸಂದರ್ಭದಲ್ಲಿ, ಇದು ವಕ್ಫ್ ಬೋರ್ಡ್ ಕಾಯ್ದೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಎಂದು ಹೇಳಿದ್ದಾರೆ. ಈ ರೀತಿ ಹೇಳುವ ಮೂಲಕ  ಸಂಸತ್ತು ಮತ್ತು ದೇಶವನ್ನು ಹಾದಿ ತಪ್ಪಿಸುತ್ತಿದ್ದಾರೆ! ಇವೆಲ್ಲವೂ  ದ್ವೇಷ ಸೃಷ್ಟಿಗಾಗಿ! ಸಮೀಪದಲ್ಲೇ ನಡೆಯಲಿರುವ  ಹರ್ಯಾಣ ಮತ್ತು ಮಹಾರಾಷ್ಟ್ರ ಚುನಾವಣೆಯಲ್ಲಿ ಜನರಲ್ಲಿ ಧಾರ್ಮಿಕ ಒಡಕು ತಂದು ರಾಜಕೀಯ ಲಾಭ ಪಡೆಯಲು ಮಾಡಿದ ಒಂದು ಪ್ರಯತ್ನ ಎಂಬ ಮಾತು ವಾಸ್ತವದಿಂದ ದೂರವಿಲ್ಲ. ಬಿಜೆಪಿಯ ಏಕೈಕ ಕೆಲಸವೆಂದರೆ ಹಿಂದೂಗಳು ಮತ್ತು ಮುಸ್ಲಿಮರನ್ನು ವಿಭಜಿಸುವುದು ಮತ್ತು ಸಂವಿಧಾನವು ಮುಸ್ಲಿಮರಿಗೆ ನೀಡಿರುವ ಹಕ್ಕುಗಳನ್ನು ಕಸಿದುಕೊಳ್ಳುವುದು.

ಪ್ರತಿಪಕ್ಷಗಳ ಪ್ರತಿಭಟನೆ ;

ವಿಧೇಯಕಗಳನ್ನು ಮಂಡಿಸಲು ಸಚಿವರು ಸಿದ್ಧತೆ ನಡೆಸುತ್ತಿದ್ದಂತೆಯೇ ಪ್ರತಿಪಕ್ಷಗಳ ಪ್ರತಿಭಟನೆ ಆರಂಭವಾಯಿತು. ಆಯಾ ಪಕ್ಷಗಳ ಮುಖಂಡರು ತಿದ್ದುಪಡಿ ವಿಧೇಯಕವನ್ನು ಸಾರಾಸಗಟಾಗಿ ಖಂಡಿಸಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಆಡಳಿತ ಪಕ್ಷಕ್ಕೆ ಅದನ್ನು ಮಂಡಿಸಲು ಸಾಧ್ಯವಾಗಲಿಲ್ಲ. ಮಸೂದೆಯನ್ನು ‘ಇಂಡಿಯಾ’ ವೇದಿಕೆಯಲ್ಲಿನ ಎಲ್ಲಾ ಪಕ್ಷಗಳು ಒಕ್ಕೊರಳಿನಿಂದ ವಿರೋಧಿಸಿದವು. ವೈಸಿಪಿ ಸಂಸದರು ಮಾತನಾಡುತ್ತ ಸಮಾಲೋಚನೆಯಿಲ್ಲದೆ ಈ ಮಸೂದೆಯನ್ನು ಮಂಡಿಸುವುದನ್ನು  ನಾವು ವಿರೋಧಿಸುತ್ತೇವೆ ಎಂದು ಹೇಳಿದರು. ತಿದ್ದುಪಡಿ ಮಸೂದೆಯನ್ನು ಆ ಪಕ್ಷ ವಿರೋಧಿಸುತ್ತದೆಯೇ ಅಥವಾ ಸರ್ಕಾರಕ್ಕೆ ಭವಿಷ್ಯದಲ್ಲಿ ಒಪ್ಪಿಗೆ ನೀಡಲಿದೆಯೇ ಎಂಬುದು ಸ್ಪಷ್ಟವಾಗಬೇಕಿದೆ.

ಎನ್‌ಡಿಎ ಮಿತ್ರಪಕ್ಷಗಳಾದ ಜೆಡಿ(ಯು) ಮತ್ತು ಟಿಡಿಪಿ ಲೋಕಸಭೆಯಲ್ಲಿ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಬೆಂಬಲಿಸಿದ್ದು, ಇದು ವಕ್ಫ್ ಮಂಡಳಿಯ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆಯನ್ನು ತರುವ ಗುರಿಯನ್ನು ಹೊಂದಿದೆಯೇ ಹೊರತು ಮಸೀದಿಗಳ ಚಾಲನೆಯಲ್ಲಿ ಹಸ್ತಕ್ಷೇಪ ಮಾಡುವ ಪ್ರಯತ್ನವಲ್ಲ ಎಂದು ಹೇಳಿವೆ. ಎನ್.ಡಿ.ಎ. ಕೂಟದ ಜೆಡಿಎಸ್  ಪಕ್ಷ ತನ್ನ ನಿಲುವನ್ನು ಸ್ಪಷ್ಟಪಡಿಸಿದ ಬಗ್ಗೆ ವರದಿಯಾಗಿಲ್ಲ. ಜೆಡಿಎಸ್, ತೆಲುಗು ದೇಶಂ ಪಕ್ಷಗಳು ಈ ಮಸೂದೆಯನ್ನು ಬೆಂಬಲಿಸುವುದೆಂದರೆ,  ಅವುಗಳ ಜಾತ್ಯತೀತ ತತ್ವಕ್ಕೆ ದ್ರೋಹ ಬಗೆದಂತಾಗುತ್ತದೆ.

ಬಿಜೆಪಿ ಈಗ ಮುಸ್ಲಿಮರ ಮೇಲೆ ದಾಳಿ ನಡೆಸುತ್ತಿದೆ. ನಂತರ ಕ್ರಿಶ್ಚಿಯನ್ನರು, ನಂತರ ಜೈನರು, ಸಿಖ್ಖರು, ಪಾರ್ಸಿಗಳು …. ಹೀಗೆ  ಅಲ್ಪಸಂಖ್ಯಾತರ ಮೇಲೆ ದಾಳಿ ಮಾಡುತ್ತಾ ಹೋಗಲು ನೋಡುತ್ತಿದ್ದಾರೆ. ಆದಾಗ್ಯೂ, ಇಂತಹ ದ್ವೇಷಪೂರಿತ ಮತ್ತು ವಿಭಜಕ ರಾಜಕೀಯವನ್ನು ಭಾರತದ ಜನರು  ಎಂದಿಗೂ ಬೆಂಬಲಿಸುವುದಿಲ್ಲ. ರಾಷ್ಟ್ರೀಯ ಏಕತೆ, ಸಮಗ್ರತೆ ಮತ್ತು ಧಾರ್ಮಿಕ ಸಾಮರಸ್ಯವನ್ನು ಕಾಪಾಡಿಕೊಳ್ಳುತ್ತಾರೆ. ಅದಕ್ಕಾಗಿ ಆಳುವವರ ಕುತಂತ್ರಗಳನ್ನು ಜಾಗರೂಕತೆಯಿಂದ ಎದುರಿಸಬೇಕಿದೆ.

“ವಿಭಜಕ ರಾಜಕೀಯ” ಎಂದ ಸಿಪಿಐ(ಎಂ)

ಸಿಪಿಐ(ಎಂ) ಸಂಸದ ಅಮ್ರಾ ರಾಮ್, ಬಿಜೆಪಿ “ವಿಭಜಕ ರಾಜಕೀಯ” ಮಾಡುತ್ತದೆ ಮತ್ತು ವಕ್ಫ್ ಬೋರ್ಡ್‌ಗಳನ್ನು ಬಲಪಡಿಸುವ ಬದಲು ಅವರು ಅದರಲ್ಲಿ ಹಸ್ತಕ್ಷೇಪ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ. “ಅಲ್ಪಸಂಖ್ಯಾತರಿಗೆ ಶಿಕ್ಷಣ ಮತ್ತು ಉದ್ಯೋಗವನ್ನು ಒದಗಿಸುವ ಬದಲು, ಯಾವಾಗಲೂ ಅವರ ಹಕ್ಕುಗಳ ಮೇಲೆ ಬಿಜೆಪಿಯವರು ದಾಳಿ ಮಾಡುತ್ತಾರೆ … ಅವರು ಈ ವಿಭಜನೆಯ ವಾಕ್ಚಾತುರ್ಯವನ್ನು ಮುಂದುವರೆಸಿದರೆ, ನಾವು ಅವರಿಗೆ 2024 ರಲ್ಲಿ ಟ್ರೇಲರ್ ಅನ್ನು ತೋರಿಸಿದ್ದೇವೆ ಮತ್ತು ಈಗ ಅವರಿಗೆ ಪೂರ್ತಿ ಸಿನಿಮಾವನ್ನು ತೋರಿಸುತ್ತೇವೆ” ಎಂದು ಅವರು ಹೇಳಿದ್ದಾರೆ.

ಮತ್ತೊಬ್ಬ ಸಿಪಿಐ(ಎಂ) ಸಂಸದ ಸುದಾಮ ಪ್ರಸಾದ್, “ನೀವು ನಿರುದ್ಯೋಗವನ್ನು ಎದುರಿಸಲು ಮಸೂದೆಯನ್ನು ಏಕೆ ತರಬಾರದು? ಮಂದಿರ-ಮಸೀದಿ ಮತ್ತು ಹಿಂದೂಸ್ತಾನ್-ಪಾಕಿಸ್ತಾನ್ ಇಂತಹ ವಿಭಜಕ ಕಾರ್ಯಸೂಚಿಗಳನ್ನು ಮಾತ್ರ ಸದಾಕಾಲ ನೋಡುತ್ತಿದ್ದೀರಿ” ಎಂದು ಟೀಕಿಸಿದ್ದಾರೆ.

ಇದನ್ನೂ ನೋಡಿ: ವಚನಾನುಭವ – 07| ಕಲ್ಲು ದೇವರು ದೇವರಲ್ಲ ಮಣ್ಣು ದೇವರು ದೇವರಲ್ಲ|ಬಾಲಸಂಗಯ್ಯ Janashakthi Media

Donate Janashakthi Media

Leave a Reply

Your email address will not be published. Required fields are marked *