ಉತ್ತರಾಖಂಡ: ಅಣೆಕಟ್ಟೆಗಾಗಿ ಸ್ಥಳಾಂತರಗೊಂಡ ಲೋಹರಿ ನಿವಾಸಿಗಳು ಸ್ಥಿತಿ ಚಿಂತಾಜನಕ

ವರದಿ: ಅಯಸ್ಕಾಂತ್‌ ದಾಸ್‌
ಕೃಪೆ: ನ್ಯೂಸ್‌ಕ್ಲಿಕ್‌.ಇನ್‌

  • ಜಲವಿದ್ಯುತ್‌ ಯೋಜನೆಗಾಗಿ ಭೂ-ವಸತಿ ಕಳೆದುಕೊಂಡ ಲೋಹರಿ ಗ್ರಾಮಸ್ಥರು
  • 71 ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ವಿಫಲವಾದ ಉತ್ತರಖಂಡ ಸರ್ಕಾರ
  • ಹಲವು ವರ್ಷಗಳಿಂದ ವಸತಿ ಶಾಲೆಗಳಲ್ಲಿ ವಾಸಿಸುತ್ತಿರುವ ನಿರಾಶ್ರಿತರರು

ನವದೆಹಲಿ:  ಜಲವಿದ್ಯುತ್ ಯೋಜನೆಗಾಗಿ ಸ್ಥಳಾಂತರಗೊಂಡರೂ ಲೋಹರಿ ಗ್ರಾಮಸ್ಥರನ್ನು ಪುನರ್ವಸತಿ ಮಾಡಲು ಉತ್ತರಾಖಂಡ ಸರ್ಕಾರ ವಿಫಲವಾಗಿದೆ; 48 ಗಂಟೆಗಳ ಸೂಚನೆಯ ನಂತರ ಏಪ್ರಿಲ್ 11ರಂದು 64 ಕುಟುಂಬಗಳನ್ನು ಅವರ ಮನೆಗಳಿಂದ ಬಲವಂತವಾಗಿ ಹೊರಹಾಕಲಾಯಿತು.

ಉತ್ತರಾಖಂಡದಲ್ಲಿ ನಿರ್ಮಾಣ ಹಂತದಲ್ಲಿರುವ ಜಲವಿದ್ಯುತ್ ಯೋಜನೆಯ ಜಲಾಶಯದಲ್ಲಿ ಇಡೀ ಗ್ರಾಮ ಮುಳುಗಡೆಯಾದ ಒಂದು ತಿಂಗಳ ನಂತರ, ಸುಮಾರು 64 ನಿರಾಶ್ರಿತ ಕುಟುಂಬಗಳು ಪುನರ್ವಸತಿಗಾಗಿ ತಾತ್ಕಾಲಿಕ ವಸತಿಗಳಲ್ಲಿ ವಾಸಿಸುತ್ತಿವೆ. ಸ್ಥಳಾಂತರಗೊಂಡ ಜನರು ಮತ್ತು ಆಡಳಿತದ ನಡುವಿನ ಮುಖಾಮುಖಿಯಿಂದಾಗಿ ಅವರ ಪುನರ್ವಸತಿ ಕುರಿತು ಅಂತಿಮ ನಿರ್ಧಾರವು ಅಸ್ಪಷ್ಟವಾಗಿದ್ದರೂ ಸಹ, ಈ ಹಲವಾರು ಕುಟುಂಬಗಳು ಮುಳುಗಡೆಯಾದ ಗ್ರಾಮದ ಸಮೀಪವಿರುವ ಸರ್ಕಾರಿ ಶಾಲಾ ಕಟ್ಟಡದಲ್ಲಿ ವಾಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಏಪ್ರಿಲ್ 11 ರಂದು, ವ್ಯಾಸಿ ಜಲವಿದ್ಯುತ್ ಯೋಜನೆಯ ಜಲಾಶಯದ ವ್ಯಾಪ್ತಿಯಲ್ಲಿ ಬರುವ ಹಳ್ಳಿಯ ಜನವಸತಿ ಪ್ರದೇಶಕ್ಕೆ ನೀರು ಬಿಡುವ ಗಂಟೆಗಳ ಮೊದಲು, ಡೆಹ್ರಾಡೂನ್ ಜಿಲ್ಲೆಯ ಲೋಹರಿಯ ಸಂಪೂರ್ಣ ಜನಸಂಖ್ಯೆಯನ್ನು ಪೊಲೀಸರು ಮತ್ತು ಆಡಳಿತವು ಅವರ ಮನೆಗಳಿಂದ ಹೊರಹಾಕಲಾಯಿತು. ಯಮುನಾ ನದಿಗೆ ಅಡ್ಡಲಾಗಿ 120 ಮೆಗಾ ವ್ಯಾಟ್ (ಎಂಡಬ್ಲ್ಯೂ) ಯೋಜನೆಯು 50 ವರ್ಷಗಳಿಂದ ಪೈಪ್‌ಲೈನ್‌ ನಲ್ಲಿದ್ದರೂ, ಲೋಹರಿ ಗ್ರಾಮದ ಜನರನ್ನು ಕೇವಲ 48 ಗಂಟೆಗಳ ನೋಟಿಸ್‌ ನೀಡುವ ಮೂಲಕ ಹೊರಹಾಕಲಾಯಿತು.

ಅವರಿಗೆ ಒದಗಿಸಲಾದ ಏಕೈಕ ಶಾಶ್ವತ ಪರ್ಯಾಯ ಪುನರ್ವಸತಿ ಆಯ್ಕೆಯು ಕೂಡ ತೀವ್ರ ವಿರೋಧವನ್ನು ಎದುರಿಸಿದೆ. ಸ್ಥಳಾಂತರಗೊಂಡ ಜನರು ಪ್ರಸ್ತಾವಿತ ವಾಸಸ್ಥಳ ತುಂಬಾ ಚಿಕ್ಕದಾಗಿದೆ ಎಂಬ ಕಾರಣಕ್ಕಾಗಿ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ. ಆದರೆ ಈ ಪ್ರದೇಶವು ಲೋಹರಿಯಿಂದ ಬಹಳ ದೂರದಲ್ಲಿದೆ ಎಂಬ ಕಾರಣದಿಂದಾಗಿ ಜನಸಂಖ್ಯೆಯ ಒಂದು ಭಾಗ ಇನ್ನೂ ಕೃಷಿಭೂಮಿಗಳನ್ನು ಹೊಂದಿದೆ. ಅಲ್ಲದೆ, ಜಲವಿದ್ಯುತ್ ಯೋಜನೆಗೆ ತಾವು ಕಳೆದುಕೊಂಡ ಭೂಮಿಗೆ ಸಮಾನವಾದ ಭೂಮಿಯನ್ನು ಒದಗಿಸುವ ಭರವಸೆಯನ್ನು ರಾಜ್ಯ ಸರ್ಕಾರ ನಿರಂತರವಾಗಿ ನಿರಾಕರಿಸುತ್ತಿವೆ ಎಂದು ನಿರಾಶ್ರಿತ ಜನರ ಆರೋಪವಾಗಿದೆ.

“ನಮ್ಮ ಅವಿಭಕ್ತ ಕುಟುಂಬವು 28 ಸದಸ್ಯರನ್ನು ಒಳಗೊಂಡಿದೆ. ನಾವು ಕೃಷಿಕ ಸಮುದಾಯದವರು, ನಾವು ದನಕರುಗಳನ್ನು ಹೊಂದಿದ್ದೇವೆ. 25 ಚದರ ಮೀಟರ್‌ ಗಳಷ್ಟು ವಿಸ್ತೀರ್ಣದಲ್ಲಿ ನಿರ್ಮಿಸಲಾದ ಮನೆಯಲ್ಲಿ ನಮ್ಮ ಇಷ್ಟು ಮಂದಿ ವಾಸಿಸಲು ಸಾಧ್ಯವೆಂದು ಆಡಳಿತವು ಹೇಗೆ ನಿರೀಕ್ಷಿಸುತ್ತದೆ? ಎಂದು ರಮೇಶ್ ಚೌಹಾಣ್ (50) ಕೇಳಿದರು, ಅವರ ಕುಟುಂಬವು ಏಪ್ರಿಲ್ 11 ರಿಂದ ಸರ್ಕಾರಿ ಶಾಲೆಯಲ್ಲಿ ವಾಸಿಸುತ್ತಿದೆ.

ಪುನರ್ವಸತಿ ಪ್ಯಾಕೇಜಿನ ಭಾಗವಾಗಿ, ಆಡಳಿತವು ಲೋಹರಿ ಗ್ರಾಮದಿಂದ ಸರಿಸುಮಾರು 42 ಕಿಲೋಮೀಟರ್ ದೂರದಲ್ಲಿರುವ ಯಮುನಾ ನದಿಯ ಪ್ರವಾಹ ಪ್ರದೇಶದಲ್ಲಿನ ತಗ್ಗು ಪ್ರದೇಶವಾದ ಧೋಯಿರಾ ಖಾದರ್‌ ನಲ್ಲಿ 7.4 ಹೆಕ್ಟೇರ್ ಭೂಮಿಯನ್ನು ಗುರುತಿಸಿದೆ. ಇಂದಿರಾ ಆವಾಸ್ ಯೋಜನೆಯ ನಿಬಂಧನೆಗಳ ಅಡಿಯಲ್ಲಿ ಧೋರ ಖಾದರ್‌ ನಲ್ಲಿ ಪ್ರತಿ ಕುಟುಂಬಕ್ಕೆ 25 ಚದರ ಮೀಟರ್ ವಸತಿ ಘಟಕಗಳ ನಿರ್ಮಾಣಕ್ಕಾಗಿ ಪ್ರತಿ ಕುಟುಂಬಕ್ಕೆ 1.61 ಲಕ್ಷ ರೂ. ಎಂದು ನಿಗದಿ ಪಡಿಸಿದೆ “ನಮ್ಮ ಪೂರ್ವಜರ ಮನೆ, ಪ್ರಾಂಗಣ ಮತ್ತು ನಮ್ಮ ಜಾನುವಾರುಗಳಿಗೆ ಶೆಡ್ ಸೇರಿದಂತೆ, ಈಗ ಎಲ್ಲಾ ಮುಳುಗಿಹೋಗಿದೆ. ಇದು 6,000 ಚದರ ಮೀಟರ್‌ ಗಿಂತಲೂ ಹೆಚ್ಚು ಪ್ರದೇಶದಲ್ಲಿ ಹರಡಿತ್ತು. ಇಂದಿರಾ ಆವಾಸ್ ಯೋಜನೆಯಡಿ ಭರವಸೆ ನೀಡಿದ ಮನೆಗಳಿಗೆ ನಾವು ಸ್ಥಳಾಂತರಗೊಂಡರೂ, ನಾವು ನಮ್ಮ ಜಾನುವಾರುಗಳಿಗೆ ಎಲ್ಲಿ ವಸತಿ ಕಲ್ಪಿಸಲು ಸಾಧ್ಯ.  ಅದಲ್ಲದೆ, 40 ಕಿ.ಮೀ.ಗೂ ಹೆಚ್ಚು ದೂರದಲ್ಲಿ ನಮ್ಮ ಕೃಷಿ ಭೂಮಿಯನ್ನು ನಾವು ನೋಡಿಕೊಳ್ಳಬೇಕೆಂದು ಆಡಳಿತವು ಹೇಗೆ ನಿರೀಕ್ಷಿಸುತ್ತದೆ? ಎಂದು ಪುನರ್ವಸತಿದಾರರ ಅಳಲು.

ನಿರಾಶ್ರಿತ ಕುಟುಂಬಗಳಿಗೆ, ಜಿಲ್ಲಾಡಳಿತವು ಈಗಾಗಲೇ ತಿಂಗಳಿಗೆ 3,000 ರೂ.ನಂತೆ ಲೆಕ್ಕಹಾಕಿದ ಒಂದು ವರ್ಷದ ಅವಧಿಗೆ ಮನೆ ಬಾಡಿಗೆಗೆ ತಗಲುವ ವೆಚ್ಚಕ್ಕೆ ತಲಾ 36,000 ರೂ.ಗಳನ್ನು ಮುಂಗಡವಾಗಿ ಪಾವತಿಸಿದೆ.

“ಸದ್ಯದ ಸಂದರ್ಭದಲ್ಲಿ ಕೇವಲ ರೂ 3,000 ದರದಲ್ಲಿ ಬಾಡಿಗೆ ಮನೆಯನ್ನು ಎಲ್ಲಿ ಸಿಗುತ್ತದೆ? ಹೀಗಾಗಿ ನಾವು ತಾತ್ಕಾಲಿಕ ಸರ್ಕಾರಿ ವಸತಿ ಗೃಹಗಳಲ್ಲಿ ವಾಸಿಸುವ ಅನಿವಾರ್ಯತೆ ಎದುರಾಗಿದೆ. ಸರ್ಕಾರಿ ಶಾಲೆ ಹೊರತುಪಡಿಸಿ ಈ ಹಿಂದೆ ಕೂಲಿಕಾರ್ಮಿಕರಿಗೆ ನಿರ್ಮಿಸಿದ ಗುಡಿಸಲುಗಳಲ್ಲಿಯೂ ವಾಸಮಾಡುತ್ತಿದ್ದಾರೆ. ಈ ವಸತಿಗಳಲ್ಲಿ ಹಳೆಯ ಶೌಚಾಲಯಗಳಲ್ಲಿಯೂ ಟಿನ್ ಕವರ್‌ಗಳು ಮತ್ತು ಟಾರ್ಪಾಲಿನ್‌ಗಳನ್ನು ಇರಿಸಿದ್ದಾರೆ. ಮಹಿಳೆಯರು, ವೃದ್ಧರು, ಮಕ್ಕಳು ಸಹ ಈ ಶೌಚಾಲಯಗಳನ್ನು ಬಳಸಬೇಕು. ಇದಲ್ಲದೆ, ರಾತ್ರಿಯಲ್ಲಿ ಈ ಸ್ಥಳಗಳಲ್ಲಿ ನಮಗೆ ಸುರಕ್ಷಿತವಲ್ಲ. ಏಪ್ರಿಲ್ 11 ರಂದು ಆಡಳಿತವು ದೊಡ್ಡ ಪೊಲೀಸ್ ಪಡೆಯೊಂದಿಗೆ ಆಗಮಿಸಿದ್ದರಿಂದ, ನಮ್ಮ ಮನೆಗಳನ್ನು ಬಿಡುವುದನ್ನು ಬಿಟ್ಟು ನಮಗೆ ಬೇರೆ ದಾರಿ ಇರಲಿಲ್ಲ” ಎಂದು ಲೋಹರಿಯ ರೈತ 53 ವರ್ಷದ ಯಶಪಾಲ್ ತೋಮರ್ ಹೇಳಿದರು.

“ಕೃಷಿ ಕಾರ್ಮಿಕರ ಅನುಕೂಲಕ್ಕಾಗಿ ಪ್ರತ್ಯೇಕ ಯೋಜನೆಯಡಿಯಲ್ಲಿ 750 ದಿನಗಳವರೆಗೆ ಉದ್ಯೋಗದ ಬದಲಾಗಿ ಎಲ್ಲಾ 71 ಕುಟುಂಬಗಳಿಗೆ ತಲಾ 1.68 ಲಕ್ಷ ರೂ.ಗಳನ್ನು ನೀಡುವುದಾಗಿ ಭರವಸೆ ನೀಡಲಾಗಿದೆ. ಆಡಳಿತವು ತನ್ನ ವಿಲೇವಾರಿಯಲ್ಲಿ ಸಾಕಷ್ಟು ಖಾಲಿ ಭೂಮಿ ಹೊಂದಿಲ್ಲ. ನಿರಾಶ್ರಿತ ಕುಟುಂಬಗಳು ಮುಳುಗಡೆ ಗ್ರಾಮಕ್ಕೆ ಸಮೀಪವಿರುವ ಸ್ಥಳಕ್ಕೆ ಸ್ಥಳಾಂತರಿಸಲು ಬಯಸುತ್ತವೆ. ಆದರೆ ಗ್ರಾಮಸ್ಥರ ಸುರಕ್ಷತೆಯ ದೃಷ್ಟಿಯಿಂದ ಭೂವೈಜ್ಞಾನಿಕ ತಜ್ಞರು ವಾಸಿಸಲು ಯೋಗ್ಯವಲ್ಲವೆಂದು ತಿಳಿಸಿದ್ದಾರೆ ಎಂದು ಎಂದು ಡೆಹ್ರಾಡೂನ್ ಜಿಲ್ಲಾಡಳಿತದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2013ರಲ್ಲಿ ಲೋಹರಿಯಲ್ಲಿ ಜಿಲ್ಲಾಡಳಿತವು ನಡೆಸಿದ ಮನೆಗಳ ಸಮೀಕ್ಷೆಯಲ್ಲಿ 71 ಸ್ಥಳಾಂತರಗೊಂಡ ಕುಟುಂಬಗಳನ್ನು ಗುರುತಿಸಲಾಗಿದೆ. ಕೆಲವು ಕುಟುಂಬಗಳದಲ್ಲಿ ಕೌಟುಂಬಿಕ ಬದಲಾವಣೆಗಳಿಂದಾಗಿ ಈ ಸಂಖ್ಯೆ ಈಗ 64 ಕ್ಕೆ ಇಳಿದಿದೆ ಎಂದು ಹಿರಿಯ ಆಡಳಿತ ಅಧಿಕಾರಿ ಹೇಳುತ್ತಿದ್ದಾರೆ. ಮತ್ತೊಂದೆಡೆ, ಕಳೆದ ಒಂಬತ್ತು ವರ್ಷಗಳಲ್ಲಿ ಕುಟುಂಬಗಳ ಸಂಖ್ಯೆ 71 ಮೀರಿ ಬೆಳೆದಿದೆ ಎಂದು ಸ್ಥಳೀಯರ ವಾದವಾಗಿದೆ.

ಯೋಜನೆಯಿಂದ ಸ್ಥಳಾಂತರಗೊಂಡ ಜನಸಂಖ್ಯೆಯ ಹೊಸ ಸಮೀಕ್ಷೆಯ ನಂತರ ಹೆಚ್ಚುವರಿ ಕುಟುಂಬಗಳಿಗೆ ಪರಿಹಾರ ಮತ್ತು ಇತರ ಸೌಲಭ್ಯಗಳನ್ನು ವಿಸ್ತರಿಸುವ ಪ್ರಕ್ರಿಯೆಯು ಏಕಕಾಲದಲ್ಲಿ ನಡೆಯಬೇಕು. ಇದನ್ನು ಜಿಲ್ಲಾ ಮಟ್ಟದಲ್ಲಿ ಕೈಗೊಳ್ಳಬೇಕು. ಇವೆಲ್ಲದಕ್ಕೂ ಸರ್ಕಾರವು ಅನುಮತಿಯನ್ನು ನೀಡಬೇಕಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

Donate Janashakthi Media

Leave a Reply

Your email address will not be published. Required fields are marked *